ವಿವಿ ಕಾಲೇಜಿನಲ್ಲಿ 'ವ್ಯಸನ ಮುಕ್ತ ದಿನಾಚರಣೆ' ಕಾರ್ಯಕ್ರಮ
ಮಂಗಳೂರು: ಮಾದಕದ್ರವ್ಯ ಸೇವನೆಯ ಸಮಸ್ಯೆ ಹೊಸತಲ್ಲದಿರಬಹುದು. ಆದರೆ ಅದೀಗ ಗಂಭೀರ ಸಮಸ್ಯೆಯಾಗಿರುವುದಂತೂ ಸತ್ಯ. ಪ್ರತಿಗಂಟೆಗೆ ಸರಾಸರಿ ಇಬ್ಬರು ಡ್ರಗ್ಸ್ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಅದರಲ್ಲೂ ಹೆಚ್ಚಿನವರು 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಎಂಬುದು ಗಮನಾರ್ಹ, ಎಂದು ರೋಶನಿನಿಲಯ ಕಾಲೇಜಿನ ಅಪರಾಧಶಾಸ್ತ್ರ ವಿಭಾಗದ ಇರ್ಫಾಆಯೇಷಾ ಅಭಿಪ್ರಾಯಪಟ್ಟರು.
ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆಯ ಪ್ರಯುಕ್ತ, ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರಾಷ್ಟ್ರೀಯ ಸೇವಾಯೋಜನೆ, ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗ ಹಾಗೂ ಹಿಂದಿ ವಿಭಾಗಗಳ ಸಹಯೋಗದಲ್ಲಿ ಡಾ. ಶಿವರಾಮಕಾರಂತ ಸಭಾಭವನದಲ್ಲಿ ಗುರುವಾರ ಆಯೋಜಿಸಲಾಗಿದ್ದ 'ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, “ಖಿನ್ನತೆ, ತಿರಸ್ಕಾರ, ಎಲ್ಲರಿಗಿಂತ ಬಲಶಾಲಿಯಾಗಬೇಕೆಂಬ ಭ್ರಮೆ ಹೀಗೆ ವಿವಿದ ಕಾರಣಗಳಿಗಾಗಿ ವ್ಯಕ್ತಿ ಮಾದಕದ್ರವ್ಯ ಸೇವಿಸುತ್ತಾನೆ. ಅರಿವಿಗೆ ಬರುವ ಮೊದಲೇ ಅದರ ದಾಸನಾಗುತ್ತಾನೆ. ಮಾದಕ ವ್ಯಸನಿ, ಕ್ಷಣಿಕ ಸುಖಕ್ಕಾಗಿ ಏನು ಮಾಡಲೂ ಹೇಸುವುದಿಲ್ಲ. ತಾನು ನಾಶವಾಗುವುದಲ್ಲದೆ ಅವನು ಸಮಾಜಕ್ಕೂ ಅಪಾಯಕಾರಿಯಾಗುತ್ತಾನೆ,” ಎಂದರು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲೆ ಡಾ. ಅನಸೂಯ ರೈ, ವಿವಿ ಕಾಲೇಜಿನ ವಿದ್ಯಾರ್ಥಿಗಳು ಇನ್ನೂ ಮಾದಕದ್ರವ್ಯದ ಚಟಕ್ಕೆ ಬಲಿಯಾಗದಿರುವುದು ಸಂತೋಷದ ಸಂಗತಿ. ಆದರೆ ವಿದ್ಯಾವಂತರಾದ ಅವರಿಗೆ ಡ್ರಗ್ಸ್ನ ಅಪಾಯದ ಬಗ್ಗೆ ಜಾಗೃತಿ ಮೂಡಿಸುವ ಜವಾಬ್ದಾರಿಯಿದೆ, ಎಂದರು. ಸ್ನಾತಕೋತ್ತರ ಹಿಂದಿ ವಿಭಾಗದ ಸಂಯೋಜಕಿ ಡಾ. ನಾಗರತ್ನ ಎನ್ ರಾವ್ ಅತಿಥಿಗಳನ್ನು ಸ್ವಾಗತಿಸಿದರು. ಇತಿಹಾಸ ಮತ್ತು ಪುರಾತತ್ವಶಾಸ್ತ್ರ ವಿಭಾಗದ ಸಂಯೋಜಕಿ ಡಾ. ಮೀನಾಕ್ಷಿ ಎಂ. ಎಂ ಧನ್ಯವಾದ ಸಮರ್ಪಿಸಿದರು. ಎನ್ಎನ್ಎಸ್ ಕಾರ್ಯಕ್ರಮ ಅಧಿಕಾರಿ ಡಾ. ಗಾಯತ್ರಿ ಎನ್ ಮೊದಲಾದವರು ವೇದಿಕೆಯಲ್ಲಿದ್ದರು.
ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಶಮಾ ಐಎನ್ಎಂ ಕಾರ್ಯಕ್ರಮ ನಿರೂಪಿಸಿದರು. ವಿವಿಧ ವಿಭಾಗಗಳ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡ್ರಗ್ಸ್ ಸೇವನೆ ವಿರುದ್ಧ ಎಲ್ಲರೂ ಪ್ರತಿಜ್ಞೆ ತೆಗೆದುಕೊಳ್ಳುವುದರೊಂದಿಗೆ ವಿರುದ್ಧ ಕಾರ್ಯಕ್ರಮ ಕೊನೆಗೊಂಡಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ