ಉಜಿರೆ: ಎಂಟು ಶತಮಾನಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಾಡಿನ ಪವಿತ್ರ ಸರ್ವಧರ್ಮ ಸಮನ್ವಯ ಕೇಂದ್ರವಾದ ಧರ್ಮಸ್ಥಳ ಸತ್ಯ, ಧರ್ಮ, ನ್ಯಾಯ, ನೀತಿ ನೆಲೆನಿಂತ ಪುಣ್ಯಸ್ಥಳ.
ಸೌಜನ್ಯ ಕೊಲೆ ಪ್ರಕರಣದ ಆರೋಪಿಯ ಪತ್ತೆಯಾಗಿ ಆತನಿಗೆ ಕಠಿಣ ಶಿಕ್ಷೆ ವಿಧಿಸಬೇಕು. ನ್ಯಾಯ ಒದಗಿಸಬೇಕು ಎಂಬುದು ಎಲ್ಲರ ಆಗ್ರಹವಾಗಿದೆ. ಆದರೆ ಇದರ ನೆಪದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಎಂಬ ರೌಡಿಶೀಟರ್ ಇದೇ ಜೂನ್ ತಿಂಗಳ 17 ರಿಂದ ಸಾರ್ವಜನಿಕ ಸಭೆ, ಪತ್ರಿಕಾ ಗೋಷ್ಠಿ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸಮಾಜದ ಏಕತೆ ಮತ್ತು ಸಮಗ್ರತೆಗೆ ಭಂಗ ಉಂಟು ಮಾಡುತ್ತಾ, ಧರ್ಮಸ್ಥಳದ ಬಗ್ಯೆ ಅವಹೇಳನಕಾರಿ ಸುಳ್ಳು ವದಂತಿಗಳನ್ನು ಪಸರಿಸುತ್ತಿರುವುದು ಖೇದಕರವಾಗಿದೆ ಎಂದು ಧರ್ಮಸ್ಥಳದ ಗ್ರಾಮಸ್ಥರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಶ್ರೀನಿವಾಸ ರಾವ್ ಧರ್ಮಸ್ಥಳ, ಸಂದೀಪ್ ರೈ, ಛಾಯಾ, ಶಾಂಭವಿ ರೈ, ವಕೀಲ ಕೇಶವ ಬೆಳಾಲು, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಭಾಕರ ಪೂಜಾರಿ, ದಿವಾಕರ ರಾವ್, ವಾಹನ ಚಾಲಕರು ಮತ್ತು ಮಾಲಕರ ಸಂಘದ ಅಧ್ಯಕ್ಷ ವಿಠಲ ಶೆಟ್ಟಿ ಮೊದಲಾದವರು ಮಾತನಾಡಿ, ಮಹೇಶ್ ಶೆಟ್ಟಿ ತಿಮರೋಡಿ ವರ್ತನೆಯನ್ನು ಖಂಡಿಸಿದರು. ಧರ್ಮಸ್ಥಳದ ರಕ್ಷಣೆಗೆ ಯಾವುದೇ ತ್ಯಾಗಕ್ಕೂ ಸಿದ್ಧ, ಪ್ರಾಣ ತ್ಯಾಗಕ್ಕೂ ಬದ್ಧರು ಎಂದು ಗ್ರಾಮಸ್ಥರು ದೃಢಸಂಕಲ್ಪ ಮಾಡಿದರು.
ಇದೇ 25 ರಿಂದ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಆತನ ಹಿಂಬಾಲಕರು ಧರ್ಮಸ್ಥಳಕ್ಕೆ ಗುಂಪಾಗಿ ಬಂದು ಕ್ಷೇತ್ರದ ಪಾವಿತ್ಯ್ರ ಕ್ಕೆ ಧಕ್ಕೆ ಉಂಟುಮಾಡುವ ಸಂಚು ರೂಪಿಸುತ್ತಿರುವುದಾಗಿ ತಿಳಿದು ಬಂದಿದೆ.
ಧರ್ಮಸ್ಥಳದ ಪಾವಿತ್ಯ್ರ ರಕ್ಷಣೆಗೆ ಪ್ರಾಣತ್ಯಾಗಕ್ಕೂ ಸಿದ್ಧರಾಗಿದ್ದೇವೆ ಎಂದು ಗ್ರಾಮಸ್ಥರು ದೃಢಸಂಕಲ್ಪ ಪ್ರಕಟಿಸಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಧರ್ಮಸ್ಥಳ, ನ್ಯಾಯಾಲಯ, ಸರ್ಕಾರ, ಸಂವಿಧಾನ, ಪೊಲೀಸ್ ಇಲಾಖೆ, ಸಿ.ಬಿ.ಐ. ಬಗ್ಗೆ ಸದಾ ಅವಹೇಳನ ಮಾಡುತ್ತಾ ಸಾಮಾಜಿಕ ಶಾಂತಿ-ಸಾಮರಸ್ಯಕ್ಕೆ ಭಂಗ ತರುವ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಅನುಯಾಯಿಗಳ ಮೇಲೆ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಗ್ರಾಮಸ್ಥರು ಧರ್ಮಸ್ಥಳ ಗ್ರಾಮ ಪಂಚಾಯಿತಿ ಮತ್ತು ಪೊಲೀಸ್ ಠಾಣೆ ಮೂಲಕ ಜಿಲ್ಲಾಧಿಕಾರಿಗಳು, ರಾಜ್ಯ ಸರ್ಕಾರ, ಗೃಹ ಸಚಿವರು ಮತ್ತು ಎಸ್.ಪಿ. ಗೆ ಮನವಿ ಸಲ್ಲಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ