|| ಉರುಕ್ರಮಾಂತರ್ಗತ ಶ್ರೀ ದಾಮೋದರಾಯ ನಮಃ ||
ಶ್ರೀಕೃಷ್ಣನನ್ನು ನೆನೆದರೆ ಕಷ್ಟ ಒಂದಿಷ್ಟಿಲ್ಲ. ಹೌದು ಆತನ ನೆನಪೇ ಮಧುರ, ಅಮರ, ತುಂಟನಾಗಿ, ಪ್ರೇಮಿಯಾಗಿ ರಕ್ಕಸರ ಪಾಲಿಗೆ ಯಮನಾಗಿ ಭಕ್ತರ ಪಾಲಿಗೆ ಆರಾಧ್ಯದೈವನಾಗಿ, ಕಾವ್ಯ ಪ್ರಿಯರಿಗೆ ವರದಾನವಾಗಿ, ಭಕ್ತರ ಪಾಲಿಗೆ ರಕ್ಷಕನಾಗಿ ಭೂಮಂಡಲದ ಅಧಿಪತಿಯಾದವನೇ ಶ್ರೀಕೃಷ್ಣ. ಭಕ್ತ ಕನಕ, ಪುರಂದರ, ಮೀರಾ, ಕಬೀರ ಮುಂತಾದ ಕವಿವರ್ಯರ ನಾಲಿಗೆಯಲ್ಲಿ ಪುಂಖಾನುಪುಂಖವಾಗಿ ಕಾವ್ಯಧಾರೆಯನ್ನು ಹರಿಸಿ ವಿಶ್ವದೆಲ್ಲೆಡೆ ಕೃಷ್ಣನಾಮ ಸ್ಮರಣೆ ಮನೆಮಾತಾಗುವಂತಾದದ್ದು ಇಂದಿನ ಪೀಳಿಗೆಗೆ ವರದಾನವೇ ಸರಿ.
`ಕೃಷ್ಣಾ ನೀ ಬೇಗನೇ ಬಾರೋ - ಎಂಬ ಹಾಡಿಗೆ ತಲೆದೂಗದ ಕನ್ನಡಿಗನಾರು? ಕಾಲಲಂದುಗೆಗೆಜ್ಜೆ, ನೀಲದಬಾವುಲಿ, ಕಾಶಿಪೀತಾಂಬರ, ಕೊಳಲು, ಪೂಸಿದ ಶ್ರೀಗಂಧ- ತಾಯಿಗೆ ಬಾಯಲ್ಲಿ ಜಗವನ್ನೇ ತೋರಿದ ಜಗದೋದ್ಧಾರನ ಹೃದ್ಯವಾದ ವರ್ಣನೆ ವ್ಯಾಸರಾಜರದ್ದು. ದಾಸಸಾಹಿತ್ಯದ ಟಿಪಿಕಲ್ ಎನ್ನಿಸುವ ಕೃಷ್ಣವರ್ಣನೆಗೆ ಮೇಲ್ಪಂಕ್ತಿಯಂಥದ್ದು. ನಾಡು ಕಂಡ ಶ್ರೇಷ್ಠ ಅನುಭಾವಿಗಳಲ್ಲೊಬ್ಬರಾದ ವ್ಯಾಸರಾಜರು ದಾಸಸಾಹಿತ್ಯಕ್ಕೆ ನೇರವಾಗಿ ಪರೋಕ್ಷವಾಗಿ ನೀಡಿದ ಕೊಡುಗೆ ಬಲು ದೊಡ್ಡದು.
ಪುರಂದರದಾಸರದ್ದು ಇದೇ ಜಾಡು. ಕೃಷ್ಣನ ತುಂಟಾಟಗಳನ್ನು ವರ್ಣಿಸಿ ಗೋಪಿಯರು ಯಶೋದೆಗೆ ದೂರು ಹೇಳುವ ಪರಿ. ಅಬ್ಬಬ್ಬಾ, ಎಷ್ಟೆಷ್ಟೊಂದು ತಂಟೆಗಳು, ಚಾಡಿಗಳು ಬೇರೆ ಯಾವ ತಾಯಿಯೋ ಆಗಿದ್ದರೆ ತಲೆ ಚಿಟ್ಟು ಹಿಡಿದಿರುತ್ತಿತ್ತೇನೋ, ಆದರೆ ಈಕೆ ಯಶೋದೆ! ಹೋಗಲಿ ದಿನವೆಲ್ಲ ಕುಣಿದವನು ರಾತ್ರಿ ಸುಮ್ಮನೆ ಮಲಗುತ್ತಾನೆಯೇ- ಊಹೂಂ. ಅಳು ಅಳು ಒಂದೇ ಸಮನೆ ಅಳು - ನೀರೊಳು ಮುಳುಗಿ ಮೈ ಒರೆಸೆಂದಳುತ್ತಾನೆ; ಮೇರುವಪ್ಪೊತ್ತು ಮೈಭಾರವೆಂದಳುತ್ತಾನೆ; ಧರಣಿ ಕೋರೆಯೊಳಿಟ್ಟು ದವಡೆನೊಂದಳುತ್ತಾನೆ; ದುರುಳ ಹಿರಣ್ಯಕನ ಕರುಳ ಕಂಡಳುತ್ತಾನೆ; ಬೆತ್ತಲೆ ನಿಂತವನು ಎತ್ತಿಕೋ ಎಂದಳುತ್ತಾನೆ -ಎಷ್ಟೆಷ್ಟು ಪರಿ !
ಕನಕದಾಸರದ್ದು ಹೆಚ್ಚು ಆಧ್ಯಾತ್ಮದೃಷ್ಟಿ ಕೃಷ್ಣನ ಮಹಿಮಾವರ್ಣನೆ, ಅದರಲ್ಲೂ ಬಾಲಲೀಲೆವರ್ಣನೆ ಕಡಿಮೆಯೆಂದೇ ಹೇಳಬೇಕು. ಇರುವ ಕೆಲವು ಹಾಡುಗಳೂ ಗಂಭೀರ. ಕೆಲವೊಮ್ಮೆ ಹಾಸ್ಯಮಿಶ್ರಿತ ಇಲ್ಲಿ ನೋಡಿ. ಕೃಷ್ಣನ ಮೇಲೆ ಬಾಲೆಯೊಬ್ಬಳು ದೂರು ತಂದಿದ್ದಾಳೆ- ಎಂಥ ಟವಳಿಗಾರ ನಮ್ಮ ಗೋಪಮ್ಮ ಎಂದು ವರ್ಣಿಸತೊಡಗುತ್ತಾಳೆ. ಹಣ ಕೊಡುತ್ತೇನೆಂದು ನಂಬಿಸಿ ಕರೆತಂದನಂತೆ, ಹಣವೆಲ್ಲೆಂದರೆ, `ಎಲ್ಲಿ ಹಣವೇ? ಇಲ್ಲಣವೇ? ಚಲ್ಲಣವೇ? ಕುದುರೆಯ ಬೊಕ್ಕಣವೇ? ಹೋಗ್' ಎನ್ನುತ್ತಾನಂತೆ. ಬುಗುಡಿ ಕೊಡುವೆನೆಂದು ಬೆಡಗಿನಿಂದ ತಂದವನು, ಬುಗುಡಿ ಕೇಳಿದರೆ `ಎಲ್ಲಿ ಬುಗುಡಿ? ಎಲ್ಲಿ ಧಗಡಿ? ಪಾಂಡವರಾಡೋ ಪಗಡಿ? ಮೂಗೊಳಗಿನ ನೆಗಡಿ? ಹೋಗ್ ಎನ್ನುವನಂತೆ. ಶುದ್ಧ ದೇಸೀ ಸೊಗಡು ಕನಕದಾಸರದ್ದು.
ಇನ್ನು ವಾದಿರಾಜರದ್ದು ಹೃದ್ಯವಾದ ಲಯಗಾರಿಕೆ - ಪದಗಳ, ಭಾಷೆಯ, ಭಾವದ, ಮತ್ತು ಅನೇಕ ವೇಳೆ ದೇವಳಗಳಲ್ಲಿ ನಡೆಯುವ ಹಲವು ಪೂಜಾಕೈಂಕರ್ಯಗಳ ಲಯವನ್ನೂ ಸೊಗಸಾಗಿ ಹಿಡಿದಿರುವುದರಲ್ಲಿ ಎತ್ತಿದ ಕೈ ಉದಾಹರಣೆಗೆ `ರಂಗಾ ಉತ್ತುಂಗಾ ನರಸಿಂಗ ಬೇಗ ಬಾರೋ; ಗಂಗೇಯ ಪಡೆದಪಾಂಡು ರಂಗ ಬೇಗ ಬಾರೋ; `ಅಯ್ಯಾ ವಿಜಯ್ಯಾ ಸಹಾಯ್ಯ ಬೇಗ ಬಾರೋ; ಜೀಯಾ ಫಣಿಶಯ್ಯಾ ಹಯವದನ ಬೇಗ ಬಾರೋ' (ಬೇಗಬಾರೋ)ಈ ರೀತಿ ಸಾಲುಗಳು ಉತ್ಸವ ಮೂರ್ತಿಯನ್ನು ವೈಹಾಳಿಯಲ್ಲಿ ಕೊಂಡೊಯ್ಯುವ ಅಡ್ಡಗಾಲಿನ ನಡಿಗೆಯ ಲಯಕ್ಕೆ ತಕ್ಕಂತಿಲ್ಲವೇ? ಇದರ ಲಯದ ಸೊಬಗನ್ನು ಹಾಡಿ - ಕೇಳಿಯಷ್ಟೇ ಸವಿಯಲು ಸಾಧ್ಯ.
ರಂಗ-ಕೃಷ್ಣ-ವಿಠಲ ಈ ಮೂರು ರೂಪಗಳು ಇಡೀ ದಾಸಸಾಹಿತ್ಯದ ಜೀವರೇಖೆಗಳೆಂದರೆ ತಪ್ಪಾಗಲಾರದು. ಈ ಕೊಂಡಾಟದ ವೈವಿಧ್ಯ ವಿಸ್ತಾರವನ್ನು ಪದಗಳಲ್ಲಿ ಹಿಡಿದಿಡಲು ಸಾಧ್ಯವೇ? ಹಲವು ದಾಸಪ್ರಮುಖರಲ್ಲಿ ಯಾರನ್ನು ಬಿಡಲು ಸಾಧ್ಯ? ಶ್ರೀಪಾದರಾಜರು, ವಿಜಯದಾಸರು, ಗೋಪಾಲದಾಸರು, ಜಗನ್ನಾಥದಾಸರು, ಮಹಿಪತಿದಾಸರು, ಪ್ರಸನ್ನವೆಂಕಟದಾಸರು, ಗೋಕಾವಿ ಅನಂತಾದ್ರೀಶರು, ಹರಪನಹಳ್ಳಿ ಭೀಮವ್ವ, ಇತ್ತೀಚಿನ ಪ್ರಸನ್ನತೀರ್ಥರು- ಎಲ್ಲರಿಗೂ ಕೃಷ್ಣನೊಂದು ಸ್ಫೂರ್ತಿಯ ಸೆಲೆ, ಅದೇ ನಮ್ಮ ಸಂಪತ್ತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ