ಸಂತೋಷ ಮತ್ತು ಸಮೃದ್ಧಿಗಾಗಿ ಕುಟುಂಬ ಯೋಜನೆಯು ನಮ್ಮ ಆಯ್ಕೆಯಾಗಿರಲಿ

Upayuktha
0

ವಿಶ್ವ ಜನಸಂಖ್ಯಾ ದಿನಾಚರಣೆ: ಜನಸಂಖ್ಯೆ ಹೊರೆಯಾಗಿರದೆ ಸಂಪನ್ಮೂಲವಾಗಲಿ



ಪ್ರತಿಯೊಬ್ಬರಿಗೂ ಸುಸ್ಥಿರ ಭವಿಷ್ಯ

ವಿಶ್ವ ಜನಸಂಖ್ಯಾ ದಿನವು ಕ್ಷಣ ಕ್ಷಣಕ್ಕೂ ಏರುಗತಿಯಲ್ಲಿರುವ ಜಾಗತಿಕ ಜನಸಂಖ್ಯೆಗೆ ಸಂಬಂಧಿಸಿದ ಪ್ರಚಲಿತ ಸಮಸ್ಯೆಗಳನ್ನು ಮುಂದಿಡುವುದರ ಮೇಲೆ ಕೇಂದ್ರೀಕರಿಸುತ್ತದೆ. ಪ್ರಪಂಚದ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳಿಂದ ಆರ್ಥಿಕ ಬಿಕ್ಕಟ್ಟಿನವರೆಗೆ ವಿಶ್ವ ಜನಸಂಖ್ಯಾ ದಿನವು ಜನರ ಜೀವನವನ್ನು ಬದಲಾಯಿಸುವಲ್ಲಿ ಮತ್ತು ಅವರನ್ನು ಉತ್ತಮಗೊಳಿಸುವಲ್ಲಿ ಪ್ರಜ್ಞಾಪೂರ್ವಕ ಪ್ರಯತ್ನಗಳನ್ನು ಮಾಡಲು ಜ್ಞಾಪನೆಯಾಗಿದೆ. ವಿಶ್ವಸಂಸ್ಥೆಯು ಪ್ರತಿಯೊಬ್ಬ ವ್ಯಕ್ತಿಯು ಭರವಸೆಗಳು, ಸಾಮರ್ಥ್ಯ ಮತ್ತು ಅವಕಾಶಗಳ ಸಂಪೂರ್ಣ ಭವಿಷ್ಯವನ್ನು ಹೊಂದಿರುವ ಜಗತ್ತನ್ನು ರಚಿಸುವ ಉದ್ದೇಶದಿಂದ ದಿನವನ್ನು ಆಚರಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಇದು ಸುಸ್ಥಿರ ಅಭಿವೃದ್ಧಿಯ ಗುರಿ (2030) ಯ ಮೂಲಕ ಪ್ರತಿಯೊಬ್ಬರಿಗೂ ಸುಸ್ಥಿರ ಭವಿಷ್ಯವನ್ನು ರಚಿಸುವ ಗುರಿಯನ್ನು ಹೊಂದಿದೆ.


ವಿಶ್ವ ಜನಸಂಖ್ಯಾ ದಿನ(2023)ದ ಘೋಷವಾಕ್ಯ 

ಪ್ರಪಂಚದ ಅನಂತ ಸಾಧ್ಯತೆಗಳನ್ನು ಅನಾವರಣ ಮಾಡಲು ಮಹಿಳೆಯರು ಮತ್ತು ಹುಡುಗಿಯರ ಧ್ವನಿಯನ್ನು ಉನ್ನತೀಕರಿಸುವುದು (Unleashing the power of gender Equality: Uplifting the voices of women and girls to unlock our world's infinite possibilities) ವಿಶ್ವಜನಸಂಖ್ಯಾ ದಿನಾಚರಣೆಯ ಈ ವರ್ಷದ ಘೋಷವಾಕ್ಯ. ಜನಸಂಖ್ಯೆಯ ತ್ವರಿತ ಬೆಳವಣಿಗೆಯ  ಸಂದರ್ಭದಲ್ಲಿ ಲಿಂಗ ಸಮಾನತೆ, ಮಹಿಳಾ ಸಬಲೀಕರಣ ಮತ್ತು ಹೆಣ್ಣುಮಕ್ಕಳಿಗೆ ಉತ್ತಮ ಭವಿಷ್ಯ ಮೊದಲಾದ ಉದಯೋನ್ಮುಖ ಸವಾಲುಗಳನ್ನು ನಮಗೆ ನೆನಪಿಸುವ ಆಶಯ ಹೊಂದಿದೆ.


ವಿಶ್ವದ ಜನಸಂಖ್ಯೆ 805 ಕೋಟಿ

ವಿಶ್ವ ಜನಸಂಖ್ಯೆಯು 1987 ಜುಲೈ 11 ರಂದು 500 ಕೋಟಿಯ ಗಡಿಯನ್ನು ತಲುಪಿತು. ಜಾಗತಿಕವಾಗಿ ಜನಸಂಖ್ಯೆ ಏರುತ್ತಿರುವ ವೇಗ ಗಮನಿಸಿ ವಿಶ್ವಸಂಸ್ಥೆ 1987ರಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಗೆ ಮುನ್ನುಡಿ ಬರೆಯಿತು. ಜನಸಂಖ್ಯೆಯ ಕುರಿತಾದ ಸಮಸ್ಯೆಗಳ ಅರಿವನ್ನು ಮೂಡಿಸಲು ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಆಡಳಿತ ಮಂಡಳಿಯು 1989ರ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲು ಕರೆ ನೀಡಿತು.


ವಿಶ್ವದ ಪ್ರಸ್ತುತ (2023)ಜನಸಂಖ್ಯೆಯು 805 ಕೋಟಿ (8,045,311,447) ಆಗಿದೆ, ಇದು 2022 ರಿಂದ 0.88% ಹೆಚ್ಚಳವಾಗಿದೆ. 2022 ರಲ್ಲಿ ವಿಶ್ವದ ಜನಸಂಖ್ಯೆಯು 797 ಕೋಟಿ (7,975,105,156) ಆಗಿತ್ತು, ಇದು 2021 ರಿಂದ 0.83% ಹೆಚ್ಚಳವಾಗಿದೆ.


ಆರೋಗ್ಯದಲ್ಲಿನ ಪ್ರಗತಿಯು ಜೀವಿತಾವಧಿಯನ್ನು ವಿಸ್ತರಿಸಿದೆ. ಈ ನಿಟ್ಟಿನಲ್ಲಿ ಈ ಸಾಲಿನ ವಿಶ್ವ ಜನಸಂಖ್ಯಾ ದಿನಾಚರಣೆಯ ಘೋಷವಾಕ್ಯವು ಎಲ್ಲಾ 8 ಬಿಲಿಯನ್ ಜನರು ಚೇತರಿಸಿಕೊಳ್ಳುವ ಭವಿಷ್ಯದ ಕಡೆಗೆ ಗಮನ ನೀಡುತ್ತದೆ. ಅವಕಾಶಗಳನ್ನು ಬಳಸಿಕೊಂಡು ಹಕ್ಕುಗಳು ಹಾಗೂ ಆಯ್ಕೆಗಳನ್ನು ಖಾತರಿಪಡಿಸುವತ್ತ ಆದ್ಯತೆ ನೀಡುತ್ತದೆ.


ಪ್ರತಿ ಕ್ಷಣ ಮೂರು ವ್ಯಕ್ತಿಗಳ ಸೇರ್ಪಡೆ

ಇಂದು ಜಾಗತಿಕವಾಗಿ ಪ್ರತೀ ಕ್ಷಣಕ್ಕೆ 5 ಶಿಶುಗಳು ಜನಿಸುತ್ತವೆ ಹಾಗೂ ಪ್ರತಿ ಕ್ಷಣಕ್ಕೆ 2 ಜನ ಸಾವನ್ನಪ್ಪುತ್ತಿದ್ದಾರೆ. ಅಂದರೆ ಪ್ರತಿ ಕ್ಷಣದಲ್ಲಿ 3 ವ್ಯಕ್ತಿಗಳ ಸೇರ್ಪಡೆಯಾಗುತ್ತದೆ. ಎಷ್ಟೋ ಮಿಲಿಯ ವರ್ಷಗಳ ನಂತರ 1800 ರಲ್ಲಿ ಜಗತ್ತಿನ ಒಟ್ಟು ಜನಸಂಖ್ಯೆ ಒಂದು ಬಿಲಿಯ ಅಂದರೆ 100 ಕೋಟಿಯನ್ನು ಮೊತ್ತ ಮೊದಲ ಬಾರಿಗೆ ತಲುಪಿತು. ಮುಂದೆ 127 ವರ್ಷಗಳ ನಂತರ ಅಂದರೆ 1927ರಲ್ಲಿ ಜಗತ್ತಿನ ಜನಸಂಖ್ಯೆ ದ್ವಿಗುಣಗೊಂಡು 2 ಬಿಲಿಯ ತಲುಪಿತು. ಮುಂದಿನ 33 ವರ್ಷಗಳಲ್ಲಿ ಅಂದರೆ 1960 ರಲ್ಲಿ 3 ಬಿಲಿಯ ತಲುಪಿ, ಮುಂದೆ 14 ವರ್ಷಗಳಲ್ಲಿ 1974ಕ್ಕೆ 4 ಬಿಲಿಯ ತಲುಪಿತು. ಮುಂದೆ ಕೇವಲ 13 ವರ್ಷಗಳಲ್ಲಿ(1987) ಜುಲೈ 11 ರಂದು ಜಗತ್ತಿನ ಜನಸಂಖ್ಯೆ 5 ಬಿಲಿಯ ತಲುಪಿತು. ಮುಂದೇ ಕೇವಲ 12 ವರ್ಷಗಳ ಅಂತರದಲ್ಲಿ 6 ಬಿಲಿಯ (1999) ಹಾಗೂ 7 ಬಿಲಿಯನ್ (2011) ತಲುಪಿತು. ಇದೀಗ 12 ವರ್ಷಗಳ ಅಂತರದಲ್ಲಿ 8 ಬಿಲಿಯನ್ (2023) ತಲುಪಿದೆ.


ಈ ಜಗತ್ತಿನಲ್ಲಿ ಹಿಂದೆ ಜನಸಂಖ್ಯೆಯು ಬಹಳ ನಿಧಾನವಾಗಿ ಹೆಚ್ಚುತ್ತಿತ್ತು. ಜಗತ್ತಿನ ಒಟ್ಟು ಜನಸಂಖ್ಯೆಯು ದ್ವಿಗುಣಗೊಳ್ಳಲು ಏಳು ಶತಮಾನಗಳನ್ನೇ ತೆಗೆದುಕೊಂಡಿತು. 9ನೇ ಶತಮಾನದಲ್ಲಿ 0.25 ಬಿಲಿಯನ್ ಇದ್ದ ಜನಸಂಖ್ಯೆ 16ನೇ ಶತಮಾನಕ್ಕಾಗುವಾಗ ದ್ವಿಗುಣಗೊಂಡು 0.50 ಬಿಲಿಯ ತಲುಪಿತು. ಮುಂದೆ ಎರಡು ಶತಮಾನಗ ಅವಧಿಯಲ್ಲಿ ಜನಸಂಖ್ಯೆಯು ದ್ವಿಗುಣಗೊಂಡಿತು. 1950 ಮತ್ತು 1987ರ ಕೇವಲ 37 ವರ್ಷಗಳ ಅವಧಿಯಲ್ಲಿ ಜಗತ್ತಿನ ಜನಸಂಖ್ಯೆಯು 2.5 ಬಿಲಿಯದಿಂದ 5 ಬಿಲಿಯಕ್ಕೇ ಬಹಳ ವೇಗವಾಗಿ ದ್ವಿಗುಣಗೊಂಡಿತು.


ಜನಸಂಖ್ಯೆ ಎನ್ನುವುದು ಕೇವಲ ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಉಳಿದಿಲ್ಲ. ಬಹಳ ಹಿಂದಿನಿಂದಲೂ ಮಾನವ ಸಮಾಜದಲ್ಲಿ ಆತಂಕ ಮೂಡಿಸುತ್ತಲೇ ಬಂದಿದೆ. ಕ್ರಿ.ಪೂ 4 ನೇ ಶತಮಾನದಲ್ಲಿ ಜಗತ್ತಿನ ಜನಸಂಖ್ಯೆ ಕೇವಲ 20 ಕೋಟಿ ಇದ್ದಾಗಲೇ ಪ್ಲೇಟೋ ಮತ್ತು ಅರಿಸ್ಟಾಟಲ್ ಮೊದಲಾದ ದಾರ್ಶನಿಕರು ಕಟ್ಟುನಿಟ್ಟಿನ ಜನನ ನಿಯಂತ್ರಣ ಕ್ರಮಗಳಿಗೆ ಸಲಹೆ ನೀಡಿದ್ದರು.


ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಲಿರುವ ಭಾರತ

ಈ ವರ್ಷದ ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ (UNFPA) "ಸ್ಟೇಟ್ ಆಫ್ ವರ್ಲ್ಡ್ ಪಾಪ್ಯುಲೇಶನ್ ರಿಪೋರ್ಟ್" ನ ಪ್ರಕಾರ ಈ ವರ್ಷದ ಮಧ್ಯದಲ್ಲಿ ಭಾರತದ ಜನಸಂಖ್ಯೆಯು 1.4286 ಶತಕೋಟಿಯಾಗಿ ಚೀನಾವನ್ನು(1.4286 ಶತಕೋಟಿ) ಹಿಂದಿಕ್ಕಲಿದೆ ಎಂದು ಅಂದಾಜಿಸಲಾಗಿದೆ. ಈ ಮೂಲಕ ಭಾರತದಲ್ಲಿ ಚೀನಾಕ್ಕಿಂತ 2.9 ಮಿಲಿಯನ್ ಹೆಚ್ಚು ಜನರಿರುತ್ತಾರೆ. 2023ರೊಳಗೆ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಲಿರುವ ಭಾರತವು 2050ರ ವೇಳೆಗೆ 1.668 ಬಿಲಿಯನ್ ಜನಸಂಖ್ಯೆಯನ್ನು ಹೊಂದಬಹುದು ಎಂದು ಅಂದಾಜಿಸಲಾಗಿದ್ದು ಈ ವೇಳೆ ಚೀನಾದ ಜನಸಂಖ್ಯೆ 1.317 ಬಿಲಿಯನ್ ಆಗಲಿದೆ

ಭಾರತ ಬೌಗೋಳಿಕವಾಗಿ ಜಗತ್ತಿನ 2.4% ಭೂಭಾಗವನ್ನು ಹೊಂದಿದೆ, ಆದರೆ ಜಗತ್ತಿನ 17.7% ಜನರು ಭಾರತದಲ್ಲಿದ್ದಾರೆ. ಜಗತ್ತಿನ ಪ್ರತಿ 6 ಜನರಲ್ಲಿ ಒಬ್ಬ ಭಾರತೀಯ. ಜಾಗತಿಕ ವರಮಾನದಲ್ಲಿ ಭಾರತದ ಪಾಲು ಕೇವಲ 2.51%. ಬೌಗೋಳಿಕವಾಗಿ ಅಮೇರಿಕಾ ಭಾರತದ ಎರಡೂವರೆ ಪಟ್ಟು ದೊಡ್ಡದಿದೆ. ಆದರೆ ಜನಸಂಖ್ಯೆಯಲ್ಲಿ ಭಾರತವು ಅಮೇರಿಕಾದ ಮೂರೂವರೆ ಪಟ್ಟು ದೊಡ್ಡದಿದೆ. ಭಾರತದ ವಾರ್ಷಿಕ ಜನಸಂಖ್ಯಾ ಹೆಚ್ಚಳವು ಆಸ್ಟ್ರೇಲಿಯಾ ದೇಶದ ಒಟ್ಟು ಜನಸಂಖ್ಯೆಗೆ ಸಮನಾಗಿದೆ.


ಏರುತ್ತಿರುವ ಜನಸಂಖ್ಯೆಯೊಂದಿಗೆ ಹೆಚ್ಚುತ್ತಿರುವ ಸವಾಲುಗಳು

ಈಗಾಗಲೇ ಭಾರತ ಸೇರಿದಂತೆ ಜಗತ್ತಿನಾದ್ಯಂತ ಬಡತನ, ಆಹಾರ, ಅನಕ್ಷರತೆ, ಬಾಲ ಕಾರ್ಮಿಕರು, ನಿರುದ್ಯೋಗ ಸಮಸ್ಯೆಗಳು ಕಾಡುತ್ತಿವೆ. ವಿಶ್ವದ ಜನಸಂಖ್ಯೆ ಹೆಚ್ಚಿದಂತೆ ಜಾಗತಿಕ ತಾಪಮಾನದ ಸಮಸ್ಯೆ, ನೈಸರ್ಗಿಕ ವಿಪತ್ತು ಹಾಗೂ ಇನ್ನಿತರ ಸಮಸ್ಯೆಗಳು ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ.

ವಿಶ್ವದ ಅತೀ ಹೆಚ್ಚಿನ ಜನಸಂಖ್ಯೆಯ ರಾಷ್ಟ್ರವಾಗಿರುವುದು ಅನೇಕ ಜವಾಬ್ದಾರಿಗಳನ್ನೂ ಹೊತ್ತು ತರುತ್ತದೆ. ಎಲ್ಲರಿಗೂ ಆಹಾರ, ವಸತಿ, ಉದ್ಯೋಗ, ಆರೋಗ್ಯ, ಶಿಕ್ಷಣ ಒದಗಿಸುವ ಜವಾಬ್ದಾರಿ ಹೆಚ್ಚಾಗುತ್ತದೆ. ಅಂತೆಯೇ ಪರಿಸರದ ಮೇಲಿನ ಒತ್ತಡ ಹಚ್ಚಾಗುತ್ತದೆ. ಜನಸಂಖ್ಯೆ ಹೆಚ್ಚಳದಿಂದ ವಾಯುಮಾಲಿನ್ಯ, ತ್ಯಾಜ್ಯ ನಿರ್ವಹಣೆಯ ಸವಾಲುಗಳೂ ಭೂತಾಕಾರವಾಗಿ ಪೀಡಿಸಲಿವೆ.


Demographic Dividend (ಜನಸಂಖ್ಯಾ ಲಾಭಾಂಶ)

ಜನಸಂಖ್ಯೆಯ ವಯಸ್ಸಿನ ರಚನೆಯ ಬದಲಾವಣೆಯು ಆರ್ಥಿಕ ಬೆಳವಣಿಗೆಗೆ ಪೂರಕವಾಗುವ ಸಂಭವತೆಯನ್ನು demographic dividend ಎಂದು ಕರೆಯುತ್ತಾರೆ. ಈ ಸಮಯದಲ್ಲಿ ಅವಲಂಬಿತ ಜನಸಂಖ್ಯೆಯ ಪ್ರಮಾಣ ಕಡಿಮೆಯಾಗಿ, ಕೆಲಸ ಮಾಡುವ ವಯಸ್ಸಿನ ಜನರ ಪ್ರಮಾಣ ಹೆಚ್ಚಾಗುವ ಸ್ಥಿತಿಯಾಗಿರುತ್ತದೆ.

ಭಾರತದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಒಂದೆಡೆ ಸವಾಲಾದರೆ, ಇನ್ನೊಂಡೆಡೆ ಅದು ಬೆಳವಣಿಗೆಗೆ ಅವಕಾಶವನ್ನೂ ಒದಗಿಸಿಕೊಡುತ್ತದೆ. ಭಾರತದ ಜನಸಂಖ್ಯೆಯಲ್ಲಿ 62.5% ಜನರು ಕೆಲಸ ಮಾಡುವ (15-59) ಪ್ರಾಯದವರಾಗಿದ್ದಾರೆ. ಈ ಪ್ರಮಾಣವು 2036 ರಲ್ಲಿ ಗರಿಷ್ಟ 65% ತಲುಪಲಿದೆ. ಈ ರೀತಿಯ ಜನಸಂಖ್ಯಾ ಲಾಭವನ್ನು ಭಾರತವು 2006 ರಿಂದ 2036 ವರೆಗೆ ಮೂರು ದಶಕಗಳ ಕಾಲ ಅನುಭವಿಸಲಿದೆ. ಆದರೆ ಇದು ವಾಸ್ತವವಾಗಬೇಕಾದಲ್ಲಿ ಜನರ ಜೀವನ ಮಟ್ಟ ಸುಧಾರಿಸುವಂತಹ ಅನೇಕ ವಲಯಗಳಲ್ಲಿ ಹಣಹೂಡಿಕೆ ಅಗತ್ಯವಾಗುತ್ತದೆ.


ಜನಸಂಖ್ಯೆ ಕೇವಲ ಸಂಖ್ಯೆಯಾಗದೆ ಸಂಪನ್ಮೂಲವಾಗಲಿ

ಜನಸಂಖ್ಯೆಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಲಭ್ಯ ಸಂಪನ್ಮೂಲಗಳನ್ನು ಜಾಣತನದಿಂದ ಬಳಸಿಕೊಂಡು ದೇಶದ ಉತ್ಪಾದಕತೆಯನ್ನು ಹೆಚ್ಚಿಸಿಕೊಂಡಾಗ ಮಾತ್ರ ಮುಂದಿನ ದಿನಗಳಲ್ಲಿ ಭಾರತೀಯರ ಬದುಕು ಸಹನೀಯವಾಗಿರಲು ಸಾಧ್ಯವಿದೆ.


ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ, ಸಂತೋಷ ಮತ್ತು ಸಮೃದ್ಧಿಗಾಗಿ ಕುಟುಂಬ ಯೋಜನೆಯನ್ನು ಆಯ್ಕೆಯಾಗಿ ಅಳವಡಿಸಿಕೊಳ್ಳುವ ಪ್ರತಿಜ್ಞೆಯನ್ನು ತೆಗೆದುಕೊಳ್ಳೋಣ (On the occasion of Azadi Ka Amrit Mahotsav, let us take the pledge to adopt family planning as a choice for happiness and prosperity) ಇದು ಭಾರತ ಸರಕಾರದ ಈ ವರ್ಷದ ಜನಸಂಖ್ಯಾ ದಿನಾಚರಣೆಯ ಉದ್ಧೇಶವಾಗಿದೆ.


ಜನಸಂಖ್ಯೆ ಎಂಬುದನ್ನು ಮಾನವ ಸಂಪನ್ಮೂಲ ಎಂದು ಪರಿಭಾವಿಸಿದಾಗ ಅದು ದೇಶಕ್ಕೆ ಕೊಡುಗೆಯೇ. ಆದರೆ ಅದು ಕೇವಲ ಸಂಖ್ಯೆಯಷ್ಟೇ ಆದರೆ ದೇಶಕ್ಕೆ ಅದಕ್ಕಿಂತ ದೊಡ್ಡ ಸಮಸ್ಯೆ ಬೇರಿಲ್ಲ. ಇಂದಿನ ಅಭಿವೃದ್ಧಿಶೀಲ ಯುಗದಲ್ಲಿ ವೈಜ್ಞಾನಿಕ ಅನ್ವೇಷಣೆಗಳು ಮಾನವನನ್ನು ಈ ವಿಶ್ವದ ಒಡೆಯನಾಗಿ ಮಾಡಿದರೂ, ಅವನು ಮಾತ್ರ ತನ್ನನ್ನು ತಾನೇ ನಿಯಂತ್ರಣಕ್ಕೊಳಪಡಿಸುವುದು ಅಸಾಧ್ಯವಾಗಿದೆ.


ಕುಟುಂಬ ಯೋಜನೆ ನಮ್ಮ ಆಯ್ಕೆಯಾಗಲಿ, ಆ ಮೂಲಕ ಭವ್ಯ ಭಾರತದ ನಿರ್ಮಾಣದಲ್ಲಿ ಕೈಜೋಡಿಸೋಣ. ಯುವ ಶಕ್ತಿ ಭಾರತದ ವರ್ತಮಾನ ಮತ್ತು ಭವಿಷ್ಯ. ಮಾನವ ಬಂಡವಾಳದ ಸದ್ಬಳಕೆಯ ಮೂಲಕ ಆರ್ಥಿಕಾಭಿವೃದ್ಧಿಯ ಲಾಭಗಳು ಜನಸಾಮಾನ್ಯರಿಗೆ ತಲುಪುವಂತಾದಾಗ ಮಾತ್ರ ಸುಸ್ಥಿರ ಹಾಗೂ ಅರ್ಥಪೂರ್ಣ ಅಭಿವೃದ್ಧಿ ಸಾಧ್ಯ. ಯುವ ಜನರಲ್ಲಿ ಸಮಕಾಲೀನ ಕೌಶಲ್ಯವರ್ಧನೆ ಮಾಡುವ ಮೂಲಕ ಜನಸಂಖ್ಯೆಯನ್ನು ಮಾನವ ಸಂಪತ್ತು ಆಗಿ ಪರಿವರ್ತಿಸಿ ಅಭಿವೃದ್ದಿಯನ್ನು ಪಡೆಯಲು ಸಾಧ್ಯ. ಜನಸಂಖ್ಯೆ ಹೊರೆಯಾಗಿರದೆ ಸಂಪನ್ಮೂಲವಾಗಲಿ.


- ಡಾ.ಎ. ಜಯಕುಮಾರ ಶೆಟ್ಟಿ

ನಿವೃತ್ತ ಪ್ರಾಚಾರ್ಯರು

ಶ್ರೀ.ಧ.ಮಂ.ಕಾಲೇಜು, ಉಜಿರೆ-574240

9448154001

ajkshetty@gmail.com


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top