ಭಾಗವತ ಪ್ರಿಯನಿಗೊಂದು ಭಕ್ತಿ ನಮನ

Upayuktha
2 minute read
0

       ಪರಿಚಯ : ಪರಗಿ ಭಾರತಿರಮಣಾಚಾರ್ಯ, ಜೈವಿಕ ತಂತ್ರಜ್ಞಾನ ಉಪನ್ಯಾಸಕರು, ವಿಜಯ ಕಾಲೇಜು, ಬೆಂಗಳೂರು


ಬೆಂಗಳೂರು: ವಾಚಕ ಬಂಧುಗಳಿಗೆ ಧಾರ್ಮಿಕ ವಿಚಾರಧಾರೆಯನ್ನು ತಮ್ಮ ಸೊಗಡಿನಿಂದ ಕೂಡಿದ ಅಧ್ಯಾತ್ಮ ಸಾಹಿತ್ಯದ ಮೂಲಕ ಮನೆ ಮಾತಾಗಿರುವ ಡಾ.ಗುರುರಾಜ ಪೋಶೆಟ್ಟಿಹಳ್ಳಿರವರ ಲೇಖನಿಯಿಂದ ಸಂಸ್ಕೃತಿ – ಅನುಭೂತಿಗಳ ತಂಪನ್ನು ಹೊತ್ತ 40ಕ್ಕೂ ಅಧಿಕ ಲೇಖನಗಳ ಸಂಕಲನ ‘ಶ್ರೀ ಕೃಷ್ಣಾರ್ಪಣ’ದ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ  ವಿಶಿಷ್ಟ ಕೊಡುಗೆಯನ್ನಿತ್ತಿದ್ದಾರೆ. 

ಬೆಂಗಳೂರು ಹೊರವಲಯದ ಕಾಕೋಳು ಶ್ರೀ ವೇಣುಗೋಪಾಲನ 90ನೇ ಬ್ರಹ್ಮರಥೋತ್ಸವದ ಸವಿನೆನಪಲ್ಲಿ ಈ ಹೊತ್ತಗೆಯು ಪಾಂಚಜನ್ಯ ಪ್ರತಿಷ್ಠಾನದ ಸಹಯೋಗದಲ್ಲಿ ಪ್ರಕಾಶನಗೊಂಡಿದೆ. ಆಧುನಿಕ ವಿದ್ಯುನ್ಮಾನ ಮಾಧ್ಯಮಗಳ ಭರಾಟೆಯಲ್ಲಿ ಧಾರ್ಮಿಕ ಸಾಹಿತ್ಯ ರಚನೆ ಮತ್ತು ಚಟುವಟಿಕೆಗಳು ವಿರಳವಾಗುತ್ತಿರುವ ಈ ಸಂಕೀರ್ಣ ಕಾಲಘಟ್ಟದಲ್ಲಿ ಕನ್ನಡದ ಸವಿನುಡಿಯಲ್ಲಿ  ಧಾರ್ಮಿಕ ಹಿನ್ನೆಲೆಯ ಇಂತಹ ಕೃತಿಗಳು ಬೆಳಕು ಕಾಣುತ್ತಿರುವುದು ಒಂದು ಸಂತಸದ ಹೊಂಗಿರಣವಾಗಿದೆ.

ಸರಳ ಸುಂದರ ಶೈಲಿಯಲ್ಲಿ ವಿಷ್ಣುವಿನ ವಿವಿಧ ಅವತಾರಗಳ ಚಿಂತನೆಯಿಂದ ಪ್ರಾರಂಭವಾಗುವ ಕೃತಿಯಲ್ಲಿ ಐದು ಭಾಗಗಳಲ್ಲಿ ಪರಮಾತ್ಮನ ಪಂಚರೂಪದ ಸ್ಮರಣೆಯಿದೆ. ಭಾರತೀಯ ಭಕ್ತಿ ಪಂಥದ ಹಿನ್ನೆಲೆಯಲ್ಲಿ ಈ ಅವತಾರಗಳ ಚಿತ್ರಣವನ್ನು ಓದುಗರ ಮುಂದಿರಿಸಲು ಲೇಖಕರು ಮಾಡಿರುವ ಪ್ರಯತ್ನ ತುಂಬಾ ಉಪಯುಕ್ತವಾಗಿದೆ. 


ಉತ್ತಮ ಗುಣಮಟ್ಟದ ಕಾಗದದಿಂದ ಕೂಡಿ ಮುದ್ರಾರಾಕ್ಷಸನ ಹಾವಳಿಗೆ ಎಡೆ ಇಲ್ಲದಂತೆ ನೋಡಿಕೊಂಡಿರುವುದು ಮುದ ತರುವ ಸಂಗತಿ .ವಂದೇ ಗುರು ಪರಂಪರಾಂ, ಸತ್ಸಂಗ ಸಂಪದ, ದಾಸಪಂಥದಂತಹ ಸದಭಿರುಚಿಯ ಕೃತಿಗಳನ್ನು ನೀಡಿದ್ದ ಗುರುರಾಜರು  ಸಹಜವಾಗಿಯೇ ವಸ್ತು ವಿಷಯದ ಮಹತ್ವ ಮತ್ತು ವ್ಯಾಪ್ತಿಯ ಆಧಿಕ್ಯಗಳಿಂದಾಗಿ ತಮ್ಮ ನಿರೂಪಣಾ ಶೈಲಿಯಲ್ಲಿ ಕೊಂಚ ಮಾರ್ಪಾಡು ಮಾಡಿಕೊಂಡಿದ್ದಾರೆ. ಪತ್ರಿಕೆಯ ಪರಿಭಾಷೆಗೆ ವಿಭಿನ್ನವಾಗಿ ತೆರೆದುಕೊಂಡ ಕೃತಿ ಇದಾಗಿದೆ. ಹೀಗಾಗಿಯೇ ‘ಶ್ರೀಕೃಷ್ಣಾರ್ಪಣ’ ಆಪ್ಯಾಯಮಾನವಾಗಿ ರುಚಿಕರ ಪಾಕವಾಗಿ ಪರಿಣಮಿಸಿದೆ. 


ದೇವೋತ್ತಮ  ಪರಮ ಪುರುಷ ಶ್ರೀ ಕೃಷ್ಣನ ಬಾಳಿನ ಮಹತ್ತರ ಘಟ್ಟ ಮನುಕುಲಕ್ಕೆ ಇಂದಿಗೂ ಮಾರ್ಗದರ್ಶಿಯಾಗಿರುವ ಗೀತೋಪದೇಶದ  ಪ್ರಯೋಜನ - ಪ್ರಭಾವದ ವಿಶ್ಲೇಷಣೆಯಿಂದ ಹಾಗು ದಾರ್ಶನಿಕರನ್ನು ಪರಿಚಯಿಸುವ ಹಾಗೂಗು ಈ ಕೃತಿಯ ಮತ್ತೊಂದು ಅಧ್ಯಾಯ ’ಗುರು ನಮನ’ ದಲ್ಲಿ ಅವರ ಜೀವನ ಸಂದೇಶದಿಂದ ಈ ಕೃತಿಯ ಮೌಲ್ಯ ಹೆಚ್ಚಾಗಿದೆ. 

ಪರಮಾತ್ಮನನ್ನು ಕಾಣುವ , ಆತ್ಮಜ್ಞಾನ ಹೊಂದುವ, ಭಗವಂತನ ಆಶ್ರಯವನ್ನು ಬಯಸಿ ಶರಣಾಗತನಾಗುವ ಮಹತ್ಕಾರ್ಯಕ್ಕೆ ಗಜೇಂದ್ರ ಮೋಕ್ಷದ ಆಧ್ಯಾತ್ಮಿಕ ಒಳನೋಟ ನಮ್ಮ ಗಮನ ಸೆಳೆಯುತ್ತದೆ. ಸಾಧಕನು ಕೈಗೊಳ್ಳಬೇಕಾದ ಅನುಷ್ಠಾನಗಳ ಕುರಿತು ಅಧ್ಯಯನ ಪೂರ್ಣ ಲೇಖನಗಳು ಭಾಗ ಮೂರರಲ್ಲಿ ಬೆಸಗೊಂಡಿದೆ. ದಾಸ ಸಾಹಿತ್ಯ ಧುರೀಣ ಅರಳುಮಲ್ಲಿಗೆ ಪಾರ್ಥಸಾರಥಿರವರ ಬೆನ್ನುಡಿಯು 90ರ ಸಂಭ್ರಮಕ್ಕೆ  ಹೊನ್ನ ಕಳಸವಿಟ್ಟಂತಿದೆ. 

ಬರಹಗಳ ಮುಕ್ತಾಯ ಸಂದರ್ಭದಲ್ಲಿ ಉಳಿಯುವ ಜಾಗದಲ್ಲಿ ಫಿಲ್ಲರ್‍‌ಗಳ ರೂಪದಲ್ಲಿ  ಬಳಸಿರುವ ವಾಕ್ಯಸರಣಿ ಆಪ್ತವೆನಿಸುತ್ತದೆ. ಯಾವುದೇ ಒಂದು ಧಾರ್ಮಿಕ , ಐತಿಹಾಸಿಕ ಸ್ಥಳದ ಕುರಿತು ಬೆರಯುವಾಗ ಸ್ಥಳ ಪುರಾಣ , ವರ್ಣರಂಜಿತ ಚಿತ್ರಸಂಪುಟ ಮತ್ತು ಅಲ್ಲಿಗೆ ಬಂದು ಹೋಗುವ ಕುರಿತು ಮಾಹಿತಿ ನೀಡಿ ಕೈತೊಳೆದುಕೊಳ್ಳುವರೇ ಅಧಿಕ, ಆದರೇ ಡಾ.ಗುರುರಾಜ ಪೋಶೆಟ್ಟಿಹಳ್ಳಿ ರವರು ತಮ್ಮದೇ ಆದ ಪ್ರತ್ಯೇಕ ಹಾದಿಯನ್ನು ಅನುಸರಿಸುವುದರ ಮೂಲಕ ವಿಭಿನ್ನತೆಯ ಸ್ಪರ್ಶದಿಂದ ಪ್ರಿಯರಾಗಿದ್ದಾರೆ.ಭಕ್ತಿ ವೇದಾಂತದ ಭಾವಾರ್ಥವನ್ನು ನೀಡುವ ಮೂಲಕ ಶ್ರೀಕೃಷ್ಣ ಚರಿತೆಯನ್ನು ಹೃದ್ಯವನ್ನಾಗಿಸುವುದರಿಂದ ‘ಶ್ರೀ ಕೃಷ್ಣಾರ್ಪಣ’ ಯಶ ಕಂಡಿದೆ. ಪ್ರತಿಗಳಿಗೆ ಸಂಪರ್ಕಿಸಿ: 97393 69621



ಕೃತಿ : ಶ್ರೀ ಕೃಷ್ಣಾರ್ಪಣ

ಲೇಖಕರು : ಡಾ.ಗುರುರಾಜ ಪೋಶೆಟ್ಟಿಹಳ್ಳಿ

ಪುಟಗಳು : 238 ಬೆಲೆ : ರೂ 200/-

ಪ್ರಕಾಶಕರು : ಕಾಕೋಳು ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ ಟ್ರಸ್ಟ್ (ರಿ),ಬೆಂಗಳೂರು -560089


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
To Top