ಜಿಲ್ಲಾ ಗೃಹರಕ್ಷಕ ದಳ ಕಛೇರಿಯಲ್ಲಿ ಕಾರ್ಗಿಲ್ ವಿಜಯ ದಿವಸ್ ದಿನಾಚರಣೆ
ಮಂಗಳೂರು: ಮಂಗಳವಾರದಂದು ಮೇರಿಹಿಲ್ನ ಜಿಲ್ಲಾ ಗೃಹರಕ್ಷಕದಳ ಕಛೇರಿ ಇಲ್ಲಿ ಕಾರ್ಗಿಲ್ ದಿನಾಚರಣೆಯ ಅಂಗವಾಗಿ ಕಾರ್ಗಿಲ್ನಲ್ಲಿ ಹುತಾತ್ಮರಾದವರಿಗೆ ಗೌರವ ನಮನವನ್ನು ಸಲ್ಲಿಸುತ್ತಾ, 24ನೇ ವರ್ಷದ ಕಾರ್ಗಿಲ್ ವಿಜಯೋತ್ಸವ ಆಚರಣೆ ನಡೆಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ. ಮುರಲೀ ಮೋಹನ್ ಚೂಂತಾರು ವಹಿಸಿದ್ದರು. 1999 ರ ಕಾರ್ಗಿಲ್ ಯುದ್ಧದಲ್ಲಿ ಭಾರತ ದೇಶಕ್ಕಾಗಿ ಮಡಿದ ಆ ಸೈನಿಕರ ಆತ್ಮಗಳಿಗೆ ಭಾವಪೂರ್ಣ ಪುಷ್ಪ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ರವರು ಮಾತನಾಡಿ ಪ್ರಾಣವನ್ನೇ ತೆತ್ತ ಸೈನಿಕರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ, ಆ ಸಮಯದಲ್ಲಿ ಪ್ರಧಾನಿಯಾಗಿದ್ದ ವಾಜಪೇಯಿಯವರು ಶಾಂತಿ ಸಂಧಾನಕ್ಕೆ ಪ್ರಯತ್ನಿಸುತ್ತಿರುವ ಸಮಯದಲ್ಲಿ ಪಾಪಿ ಪಾಕಿಸ್ತಾನ ಕಾರ್ಗಿಲ್ ಪ್ರದೇಶಕ್ಕೆ ಮೋಸದಿಂದ ಸೈನಿಕರನ್ನು ಕಳುಹಿಸಿ ಆಕ್ರಮಣ ಮಾಡಿದ್ದರು. ಮೇ 5 ರಂದು ಕಾರ್ಗಿಲ್ ಯುದ್ಧ ಆರಂಭವಾಗಿ ಜುಲೈ 26 ರಂದು ಕೊನೆಗೊಂಡಿರುತ್ತದೆ, ಒಟ್ಟು 74 ದಿನಗಳ ಕಾರ್ಗಿಲ್ ಕದನದಲ್ಲಿ ಭಾರತದ 2,00,000 ಸೈನಿಕರು ದೇಶಕ್ಕಾಗಿ ಕಿಚ್ಚೆದೆಯಿಂದ ಹೋರಾಡಿದರು, ಸುಮಾರು 500ಕ್ಕೂ ಹೆಚ್ಚು ಸೈನಿಕರು ದೇಶಕ್ಕಾಗಿ ತಮ್ಮನ್ನೇ ಬಲಿದಾನ ಮಾಡಿ ಹುತಾತ್ಮರಾದರು. ಆಪರೇಷನ್ ವಿಜಯ್ ಮುಖಾಂತರ ಭಾರತದ ಸೇನೆ ಪಾಕಿಸ್ತಾನವನ್ನು ಬಗ್ಗು ಬಡಿದ ಸವಿನೆನಪಿಗಾಗಿ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ ದಿವಸ್ ಎಂದು ದೇಶದೆಲ್ಲೆಡೆ ಆಚರಿಸಿ ದೇಶಕ್ಕೆ ಬಲಿದಾನ ಮಾಡಿದ ಸೈನಿಕರನ್ನು ಸ್ಮರಿಸುತ್ತಾ, ನಾವು ನಮ್ಮನ್ನು ದೇಶ ಸೇವೆಗಾಗಿ ಪುನರ್ಸಮರ್ಪಿಸುವ ವಿಶೇಷ ದಿನ ಎಂದು ಅವರು ಅಭಿಪ್ರಾಯಪಟ್ಟರು ಹಾಗೂ ಹುತಾತ್ಮರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವೆಲ್ಲ ಹಾರೈಸೋಣ ಎಂದು ನುಡಿದರು.
ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ಖ್ಯಾತ ವೈದ್ಯರಾದ ಡಾ. ಕಿಶನ್ ರಾವ್ ಬಾಳಿಲ ಅವರು ಮಾತನಾಡಿ, ದೇಶಕ್ಕಾಗಿ ಅದೇಷ್ಟೋ ಜನ ಸೈನಿಕರು ಪ್ರಾಣವನ್ನೇ ಭಾರತ ಮಾತೆಗೆ ಅರ್ಪಿಸಿದ್ದರು. ಗೃಹರಕ್ಷಕರಿಗೂ ಯೋಧರಿಗೂ ಯಾವುದೇ ವ್ಯತ್ಯಾಸವಿಲ್ಲ. ಯೋಧರು ಕಾಶ್ಮೀರದ ಗಡಿಯಲ್ಲಿ ಭಾರತೀಯರನ್ನು ಕಾಯುವ ಹಾಗೆ ಗೃಹರಕ್ಷಕರು ಪ್ರವಾಹರಕ್ಷಣಾ ಸಮಯದಲ್ಲಿ ತಮ್ಮ ಪ್ರಾಣ ಒತ್ತೆ ಇಟ್ಟು ಜನರನ್ನು ರಕ್ಷಿಸುತ್ತಾರೆ ಇವರ ಸೇವೆಯೂ ಶ್ಲಾಘನೀಯ ಎಂದು ನುಡಿದರು.
ಈ ಸಂದರ್ಭದಲ್ಲಿ ಉಪ ಸಮಾದೇಷ್ಟರಾದ ಶ್ರೀ ರಮೇಶ್, ಸಹಾಯಕ ಆಡಳಿತಾಧಿಕಾರಿ ಶ್ರೀಮತಿ ಕವಿತಾ ಕೆ.ಸಿ, ಕಛೇರಿಯ ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಶ್ಯಾಮಲ, ಉಡುಪಿ ಕಛೇರಿಯ ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಅನಿತಾ ಟಿ.ಎಸ್, ಮೀನಾಕ್ಷಿ, ಹಿರಿಯ ಗೃಹರಕ್ಷಕರಾದ ಸುನಿಲ್ ಕುಮಾರ್, ಸುನಿಲ್ ಪೂಜಾರಿ, ದಿವಾಕರ್, ಕೇಶವ ಶೆಟ್ಟಿಗಾರ್, ಧನಂಜಯ್, ಕನಕಪ್ಪ, ಜ್ಞಾನೇಶ್, ಪ್ರಸಾದ್, ನಿಖಿಲ್, ಸಂದೇಶ್, ಸಂತೋಷ್, ನವಿನ್, ಸುಲೋಚನಾ, ಜಯಲಕ್ಷ್ಮೀ ಮುಂತಾದವರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ