ಬೆಂಗಳೂರು: ಹೇಗೆ ರಾತ್ರಿ ಕಳೆದ ನಂತರ ಸೂರ್ಯೋದಯವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲವೋ ಹಾಗೆಯೇ ಕಾಲ ಮಹಿಮೆಗನುಸಾರ ಆಗಲಿರುವ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆಯನ್ನೂ ಯಾರೂ ತಡೆಯಲು ಸಾಧ್ಯವಿಲ್ಲ. ‘ಹಿಂದೂ ರಾಷ್ಟ್ರ ಬಂದೇ ಬರಲಿದೆ. ಇದು ಕಲ್ಲಿನ ಮೇಲೆ ಕೊರೆದ ವಾಕ್ಯವಾಗಿದೆ. ಅನೇಕ ಸಂತರು ಸಹ ಇದರ ಬಗ್ಗೆ ಹೇಳಿದ್ದು ಕಾಲವೂ ಅದೇ ದಿಕ್ಕಿನಲ್ಲಿ ನಡೆಯುತ್ತಿದೆ. ಆದ್ದರಿಂದ ಈ ಕಾಲದಲ್ಲಿ ನಾವು ಒಂದು ವೇಳೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಾರ್ಯವನ್ನು ಮಾಡಿದರೆ, ಕಾಲಕ್ಕನುಗುಣವಾಗಿ ಧರ್ಮಕಾರ್ಯವಾಗಿ ಆ ಮಾಧ್ಯಮದಿಂದ ನಮ್ಮ ಸಾಧನೆಯಾಗಲಿದೆ. ಆದ್ದರಿಂದ ಈ ವರ್ಷದ ಗುರುಪೂರ್ಣಿಮೆಯ ಶುಭ ಸಂದರ್ಭದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯ ಮಾಡುವ ದೃಢ ನಿಶ್ಚಯ ಮಾಡಿ` ಎಂದು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಚಂದ್ರ ಮೊಗವೀರ ಇವರು ಕರೆ ನೀಡಿದರು.
ಅವರು ಹಿಂದೂ ಜನಜಾಗೃತಿ ಸಮಿತಿಯಿಂದ ರಾಜಾಜಿನಗರದ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಗುರುಪೂರ್ಣಿಮಾ ಮಹೋತ್ಸವದಲ್ಲಿ ಮಾತನಾಡುತ್ತಿದ್ದರು. ಜುಲೈ 3 ಗುರುಪೂರ್ಣಿಮೆಯ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿಯಿಂದ ಭವಾನಿ ಕಲ್ಯಾಣ ಮಂಟಪ, ಗಾಂಧಿ ಬಜಾರ್, ಶ್ರೀ ವಿನಾಯಕ ಮಿನಿಹಾಲ್, ಯಲಹಂಕ ನ್ಯೂ ಟೌನ್ ನಲ್ಲಿ ಗುರುಪೂರ್ಣಿಮಾ ಮಹೋತ್ಸವವನ್ನು ಆಯೋಜಿಸಲಾಗಿತ್ತು, 250 ಕ್ಕೂ ಅಧಿಕ ಜಿಜ್ಞಾಸುಗಳು ಉಪಸ್ಥಿತರಿದ್ದು ಇದರ ಲಾಭವನ್ನು ಪಡೆದುಕೊಂಡರು.
ಮಹೋತ್ಸವದ ಪ್ರಾರಂಭದಲ್ಲಿ ಶ್ರೀ ವ್ಯಾಸಪೂಜೆ ಮತ್ತು ಪ.ಪೂ. ಭಕ್ತರಾಜ ಮಹಾರಾಜರ ಪ್ರತಿಮೆಯ ಪೂಜೆಯನ್ನು ಮಾಡಲಾಯಿತು. ಶ್ರೀ. ನೀಲೇಶ ಇವರು ಹಿಂದೂ ಜನಜಾಗೃತಿ ಸಮಿತಿಯ ಪ್ರೇರಣಾಸ್ಥಾನ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರ ಗುರುಪೂರ್ಣಿಮೆಯ ಸಂದೇಶ ವಾಚನವನ್ನು ಮಾಡಿದರು. ಈ ಸಂದರ್ಭದಲ್ಲಿ ಉದ್ಯಮಿ ಶ್ರೀ. ಪ್ರಕಾಶ್ ರಾಯ್ಕರ್ ಮಾತನಾಡಿ, ನಮ್ಮ ಮನಸ್ಸಿನಲ್ಲಿರುವ ಅಂಧಕಾರವನ್ನು ಹೋಗಲಾಡಿಸುವ ನಮ್ಮ ಗುರುಗಳನ್ನು ಗೌರವಿಸಲು ಗುರುಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಪ್ರಾಚೀನ ಕಾಲದಿಂದಲೂ ಶಿಷ್ಯರ ಜೀವನದಲ್ಲಿ ಗುರುಗಳಿಗೆ ವಿಶೇಷ ಸ್ಥಾನವಿದೆ. ಹಿಂದೂ ಧರ್ಮದ ಎಲ್ಲಾ ಪವಿತ್ರ ಗ್ರಂಥಗಳು ಗುರುಗಳ ಮಹತ್ವ ಮತ್ತು ಗುರು ಮತ್ತು ಅವರ ಶಿಷ್ಯ ನಡುವಿನ ಅಸಾಧಾರಣ ಸಂಬಂಧವನ್ನು ನಿರ್ದೇಶಿಸುತ್ತವೆ` ಎಂದರು.
ನ್ಯಾಯವಾದಿ ಸುರೇಶ್ ಮಾತನಾಡಿ, ಇಂದು ಧರ್ಮಶಿಕ್ಷಣದ ಅಭಾವದಿಂದ ನಾವು ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಪಾಶ್ಚಾತ್ಯರಂತೆ ನಾವು ಜೀವನ ಮಾಡುತ್ತೇವೆ. ಸ್ವಾಭಿಮಾನದ ಕೊರತೆಯಿಂದ ಹಿಂದೂಗಳು ಆಮಿಷಗಳಿಗೆ ಬಲಿಯಾಗಿ ಸುಲಭವಾಗಿ ಮತಾಂತರ ಆಗುತ್ತಿದ್ದಾರೆ. ಅದಕ್ಕಾಗಿ ಹಿಂದೂಗಳಿಗೆ ಧರ್ಮ ಶಿಕ್ಷಣ ನೀಡುವುದೇ ಮತಾಂತರ ತಡೆಯಲು ಇರುವ ಏಕಮೇವ ಉಪಾಯವಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಗುರುಪೂರ್ಣಿಮೆ ನಿಮಿತ್ತ ಧರ್ಮಚರಣೆಯ ಸಂಕಲ್ಪ ಮಾಡೋಣ` ಎಂದರು. ಉದ್ಯಮಿ ಶ್ರೀಧರ್ ಭಟ್ ಇವರು 'ಇಂದು ಧರ್ಮದ ಆಚರಣೆ ಆಗುತ್ತಿಲ್ಲ, ಅನ್ಯ ಸಮುದಾಯದವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಅವರ ಪಂಥದ ಬಗ್ಗೆ ಶಿಕ್ಷಣವನ್ನು ಸರಕಾರದ ವತಿಯಿಂದ ನೀಡಲಾಗುತ್ತದೆ. ಹಾಗಾಗಿ ಅವರು ಇವತ್ತು ಕಟ್ಟರ್ ಪಂಥೀಯರಾಗುತ್ತಿದ್ದಾರೆ. ಆದರೆ ಎಲ್ಲೂ ಕೂಡ ಹಿಂದುಗಳಿಗೆ ಧರ್ಮ ಶಿಕ್ಷಣವನ್ನು ಕೊಡುವ ವ್ಯವಸ್ಥೆ ಸರಕಾರದ ವತಿಯಿಂದ ಆಗಲಿಲ್ಲ` ಹಿಂದುಗಳು ಇದನ್ನು ಗಮನದಲ್ಲಿಟ್ಟು ಜಾಗೃತರಾಗುವುದು ಅವಶ್ಯಕವಾಗಿದೆ` ಎಂದರು.
ಈ ಸಮಯದಲ್ಲಿ ‘ಸ್ವರಕ್ಷಣೆಯ ಪ್ರಾತ್ಯಕ್ಷಿಕೆಗಳನ್ನು ಮಾಡಿ ತೋರಿಸಲಾಯಿತು. ಅಧ್ಯಾತ್ಮಶಾಸ್ತ್ರ, ದೈನಂದಿನ ಜೀವನದಲ್ಲಿನ ಆಚಾರಧರ್ಮ, ಧಾರ್ಮಿಕ ಕೃತಿಗಳ ಹಿಂದಿನ ಶಾಸ್ತ್ರ, ಹಿಂದೂ ಸಂಸ್ಕಾರ ಮತ್ತು ಪರಂಪರೆ, ಗುರುಕೃಪಾಯೋಗಾನುಸಾರ ಸಾಧನೆ, ಬಾಲಸಂಸ್ಕಾರ, ಹಿಂದೂ ಧರ್ಮ ರಕ್ಷಣೆ, ಧರ್ಮಜಾಗೃತಿ, ಸಂಸ್ಕೃತಿಪಾಲನೆ, ಆಯುರ್ವೇದ, ಆಪತ್ಕಾಲದ ಸಂಜೀವಿನಿ ಹಾಗೂ ಹಿಂದೂ ರಾಷ್ಟ್ರದ ಸ್ಥಾಪನೆ ಸೇರಿದಂತೆ ಮುಂತಾದ ವಿಷಯದಲ್ಲಿ ಕೃತಿಶೀಲ ಗೊಳಿಸುವಂತಹ ಸನಾತನ ನಿರ್ಮಿತ ಗ್ರಂಥ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಶ್ರೀಮತಿ ಹೇಮಲತಾ ಗೋಪಾಲಯ್ಯ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ