ಆಳ್ವಾಸ್ ಕಾಲೇಜಿನಲ್ಲಿ ವಿಜಯವಾಣಿ ಮಂಗಳೂರು ಬ್ಯೂರೊ ಮುಖ್ಯಸ್ಥ ಸುರೇಂದ್ರ ವಾಗ್ಲೆ
(ವಿದ್ಯಾಗಿರಿ)ಮೂಡುಬಿದಿರೆ: ಪತ್ರಿಕೆ, ಟಿ.ವಿ, ನವಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದಲ್ಲಿ ಯಶಸ್ವಿಯಾಗಲು ತಪ್ಪಿಲ್ಲದೇ ಬರೆಯುವ ಕಲೆ ಹಾಗೂ ಸೂಕ್ಷ್ಮಗ್ರಹಿಕೆ ಅತಿಮುಖ್ಯ ಎಂದು ಹಿರಿಯ ಪತ್ರಕರ್ತ ಸುರೇಂದ್ರ ವಾಗ್ಲೆ ಹೇಳಿದರು.
ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಮಂಗಳವಾರ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ ಅವರು, ಮಾರ್ಗದರ್ಶನ ನೀಡಿದರು.
ಮಾಧ್ಯಮದಲ್ಲಿ ಯಶಸ್ಸು ಪಡೆಯಲು ಪತ್ರಿಕೋದ್ಯಮ ಕಲಿಕೆಯ ಜೊತೆ ನಿಮ್ಮ ಆಸಕ್ತಿಯ ಒಂದು ಕ್ಷೇತ್ರದಲ್ಲಿ ತಜ್ಞತೆ ಪಡೆಯಬೇಕು. ವಿಜ್ಞಾನ, ತಂತ್ರಜ್ಞಾನ ಮತ್ತು ವಾಣಿಜ್ಯ ವಿಷಯದ ತಜ್ಞರಿಗೆ ಹೆಚ್ಚಿನ ಅವಕಾಶವಿದೆ. ಆಸಕ್ತಿಯ ವಿಷಯದಲ್ಲಿ ಹೆಚ್ಚು ಅಧ್ಯಯನ ನಡೆಸಿದಾಗ, ಭವಿಷ್ಯದಲ್ಲಿ ಅವಕಾಶ ಹೆಚ್ಚುತ್ತದೆ ಎಂದರು.
ಪತ್ರಿಕೋದ್ಯಮ ವಿದ್ಯಾರ್ಥಿಗಳು ದಿನನಿತ್ಯ ಪತ್ರಿಕೆ ಓದಬೇಕು. ಬರವಣಿಗೆ ಮತ್ತು ಅನುವಾದದಲ್ಲಿ ಕರಗತರಾಗಬೇಕು. ಇಂಗ್ಲಿಷ್ ಪಕ್ವವಾಗಿದ್ದರೆ, ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ಉತ್ತಮ ಅವಕಾಶ ಇದೆ ಎಂದರು.
ನವ ಮಾಧ್ಯಮಗಳಿಗೆ ಹೋಗುವ ಕನಸನ್ನು ಬಹುತೇಕರು ಕಾಣುತ್ತಾರೆ. ಆದರೆ, ಅಂತಹ ಮಾಧ್ಯಮಗಳಲ್ಲೂ ಯಶಸ್ವಿಯಾಗಲು ಯಾವುದಾದರು ಒಂದು ಭಾಷೆಯ ಮೇಲೆ ಹಿಡಿತ ಹಾಗೂ ಓದು ಅವಶ್ಯ ಎಂದರು.
ವಿಜಯವಾಣಿ ಮಂಗಳೂರು ವಿಭಾಗದ ಹಿರಿಯ ಉಪ ಸಂಪಾದಕ ಮೋಹನ್ ದಾಸ್ ಮರಕಡ, ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಇದ್ದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ