ಎಐಇಟಿ ‘ಚಿಂತನ- ಮಂಥನ'- ರೀಡರ್ಸ್ ಕ್ಲಬ್
ಮಿಜಾರು (ಮೂಡುಬಿದಿರೆ): ‘ಕುತೂಹಲದಿಂದ ಆವಿಷ್ಕಾರ ಸಾಧ್ಯ’ ಎಂದು ಸಾಹಿತಿ ಸುರೇಶ್ ಕುಲಕರ್ಣಿ ಹೇಳಿದರು. ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿ (ಎಐಇಟಿ)ನಲ್ಲಿ ‘ಚಿಂತನ- ಮಂಥನ' ರೀಡರ್ಸ್ ಕ್ಲಬ್ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಬೇಂದ್ರೆ ಅವರ ಒಡನಾಟ' ಕುರಿತು ಅವರು ಉಪನ್ಯಾಸ ನೀಡಿದರು.
‘ನಾದ’ ಸ್ವರದಿಂದ ಮಾತ್ರ ಸಮೂಹ ಸಂವಹನ ಯಶಸ್ವಿಯಾಗುತ್ತದೆ. ‘ನಾ’ ಎಂಬುದೇ ಅಹಂಕಾರ. ‘ದ’ ಎಂದರೆ ಧ್ವನಿ. ಅಹಂಕಾರವನ್ನು ಬಿಟ್ಟ ಧ್ವನಿ ಮಾತ್ರ ಜನರಿಗೆ ತಲುಪಲು ಸಾಧ್ಯ. ಇಂತಹ ವಿಚಾರಗಳನ್ನು ಅನುಷ್ಠಾನಕ್ಕೆ ತರಲು ಬೇಂದ್ರೆಯವರ ಸಾಹಿತ್ಯದ ಓದು ಅಗತ್ಯವಿದೆ ಎಂದರು.
ದೇಶ ವಿದೇಶದ ಬಗ್ಗೆ ನಾವು ತಿಳಿದುಕೊಳ್ಳುತ್ತೇವೆ. ಆದರೆ ನಮ್ಮ ಊರು, ರಾಜ್ಯದ, ಸುತ್ತಲಿನ ವಿಷಯದ ಕುರಿತು ನಮಗೆ ಹೆಚ್ಚು ಜ್ಞಾನ ಇರುವುದಿಲ್ಲ. ಬೇಂದ್ರೆಯವರ ಮೇಲೆ 16 ಜನ ಪಿಹೆಚ್.ಡಿ ಮಾಡಿದ್ದಾರೆ. ಅವರ ಕನ್ನಡ ಕವನವನ್ನು ಜರ್ಮನಿಯಲ್ಲಿ ಅನುವಾದ ಮಾಡಿ ಓದುತ್ತಿದ್ದಾರೆ. ಇದರ ಅರಿವು ನಮಗಿಲ್ಲ ಎಂದರು. ‘ನಮ್ಮ ಗುರಿಯ ಕಡೆ ದಿನನಿತ್ಯ ಪ್ರಯತ್ನ ಮಾಡಬೇಕು. ಕುತೂಹಲ ಬೆಳೆಸಿಕೊಳ್ಳಬೇಕು’ ಎಂದರು.
‘ಚಿಂತನ- ಮಂಥನ' ಸಂಯೋಜಕರಾದ ಶಶಿಕುಮಾರ್ ಹಾಗೂ ಶ್ವೇತಾ, ಕನ್ನಡ ಸಂಘ ಸಂಯೋಜಕ ವಾಸುದೇವ್ ಶಹಾಪೂರ ಇದ್ದರು.
ವಿದ್ಯಾರ್ಥಿನಿ ತೇಜೋಮಯಿ ಸ್ವಾಗತ ಗೀತೆ ಹಾಡಿದರು. ವಿದ್ಯಾರ್ಥಿನಿ ಪೂರ್ವಿಕಾ ನಿರೂಪಿಸಿದರು. ವಿದ್ಯಾರ್ಥಿನಿ ಕೆ. ಜಿ. ಶ್ರೇಯಾ ಅತಿಥಿಗಳನ್ನು ಪರಿಚಯಿಸಿದು. ವಿದ್ಯಾರ್ಥಿ ಗುರುಕಿರಣ್ ಪಿ. ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ