ಮಂಗಳೂರು ವಿವಿ ಕಾಲೇಜು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ
ಮಂಗಳೂರು: ಯೋಗವೆಂದರೆ ಶಾರೀರಿಕವಾಗಿ ಫಿಟ್ ಆಗುವುದು ಮಾತ್ರವಲ್ಲ, ಅದು ಮನಸ್ಸು, ಆಧ್ಯಾತ್ಮಗಳಿಗೆ ಸಂಬಂಧಪಟ್ಟದ್ದು. ದೇಹ, ಮನಸ್ಸನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆ. ಸರಳವಾಗಿ ಯೋಗಾಭ್ಯಾಸ ಆರಂಭಿಸಿ ಬಳಿಕ ಪ್ರಬುದ್ಧತೆ ಸಾಧಿಸುವ ಗುರಿ ನಮ್ಮದಾಗಬೇಕು, ಎಂದು ಕಸ್ತೂರ್ ಬಾ ವೈದ್ಯಕೀಯ ಕಾಲೇಜಿನ ವಿಕಿರಣಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕಿ ಡಾ. ವಿನಯಪೂರ್ಣಿಮಾ ಅಭಿಪ್ರಾಯಪಟ್ಟರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಮಾನವಪ್ರಜ್ಞೆ ಹಾಗೂ ಯೋಗ ವಿಜ್ಞಾನ ವಿಭಾಗವು, ಕಾಲೇಜಿನ ಐಕ್ಯೂಎಸಿ ಸಹಯೋಗದೊಂದಿಗೆ, ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಬುಧವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಯೋಗ ದಿನದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ನಮ್ಮೊಳಗಿನ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಆ ಮೂಲಕ ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಯೋಗವೊಂದು ಸಾಧನ, ಎಂದರು.
ಅಧ್ಯಕ್ಷತೆವಹಿಸಿದ್ದ ಪ್ರಾಂಶುಪಾಲೆ ಡಾ. ಅನಸೂಯ ರೈ, ಕಾಲೇಜಿನ ಯೋಗ ವಿಜ್ಞಾನವಿಭಾಗ ನಡೆಸುವ ಯೋಗ ತರಗತಿಗಳಿಗೆ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿರುವುದನ್ನು ಗಮನಿಸಿ, ಹೊಸತಾಗಿ ಯೋಗ ಚಿಕಿತ್ಸಾ ಕೇಂದ್ರವನ್ನು ಆರಂಭಿಸಲಾಗಿದೆ, ಎಂದರು. ವಿದ್ಯಾರ್ಥಿ, ಯೋಗಪಟು ಪ್ರತ್ಯಕ್ಷಕುಮಾರ್ ಯೋಗಾಸನಗಳ ಪ್ರಾತ್ಯಕ್ಷಿಕೆ ನೀಡಿದರು.
ಕಾಲೇಜಿನ ಯೋಗ ವಿಜ್ಞಾನ ವಿಭಾಗದ ಸಂಯೋಜಕ ಡಾ. ಕೇಶವಮೂರ್ತಿ ಅತಿಥಿಗಳನ್ನು ಸ್ವಾಗತಿಸಿದರು. ವಿಭಾಗದ ಉಪನ್ಯಾಸಕ ಅಜಿತೇಶ್ ಅತಿಥಿ ಪರಿಚಯ ಮಾಡಿದರು. ಡಾ. ರಂಗಪ್ಪ ಧನ್ಯವಾದ ಸಮರ್ಪಿಸಿದರು. ಸಂಧ್ಯಾ ಕಾಲೇಜಿನ ಉಪನ್ಯಾಸಕಿ, ಯೋಗ ವಿದ್ಯಾರ್ಥಿ ಪವಿತ್ರ ಕಾರ್ಯಕ್ರಮ ನಿರೂಪಿಸಿದರು. ಸಭಾಕಾರ್ಯಕ್ರಮಕ್ಕೂ ಮೊದಲು ಯೋಗ ವಿಜ್ಞಾನವಿಭಾಗದ ಉಮಾನಾಥ ಕೆ ಅವರ ನೇತೃತ್ವದಲ್ಲಿ ಸುಮಾರು ಒಂದು ಗಂಟೆಯ ಯೋಗಾಭ್ಯಾಸ ನಡೆಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ