ಜೀವನ ಬೋಧ ವಿದ್ಯಾರ್ಥಿಗಳು ಶ್ರೀಗುರು ಸನ್ನಿಧಾನದತ್ತ ಯಾತ್ರೆಯನ್ನು ಮಾಡಿ, ಮನಃಪೂರ್ಣವಾಗಿ ಶ್ರೀಗಳ ಶುಭಾಶೀರ್ವಾದ ಹಾಗೂ ಉತ್ತಮ ಯಾತ್ರಾ ಅನುಭವಗಳನ್ನು ಪಡೆದುಕೊಂಡರು. ಜೂನ್ 10, 2023ರಂದು ರಾತ್ರೆ ಎಂಟೂವರೆಗೆ ಪ್ರಾರಂಭವಾದ ಪ್ರಯಾಣದಲ್ಲಿ ಶಿಬಿರದ ವಿದ್ಯಾರ್ಥಿಗಳು ಹಾಗೂ ಇತರ ಕಾರ್ಯಕರ್ತರು ಇದ್ದೆವು. ಎಳೆಯ ಮಕ್ಕಳಿಂದ ಹಿಡಿದು ವೃದ್ಧರ ವರೆಗಿನ ಎಲ್ಲರೂ ಸೇರಿ ಜಯಕಾರ ಘೋಷಿಸಿ ಯಾತ್ರೆಯು ಪ್ರಾರಂಭವಾಯಿತು. ಮಾರನೆಯ ದಿನ ಬೆಳಗ್ಗೆ ಅಶೋಕೆಗೆ ತಲುಪಿದೆವು.
ಮೊದಲಿಗೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಹೋದೆವು. ಮಕ್ಕಳು ದೇವರ ಮುಂದೆ ಭಜನೆ-ಭಕ್ತಿಗೀತೆಗಳನ್ನು ಹಾಡಿದರು, ಮಕ್ಕಳು ಹಿರಿಯರು ಜೊತೆ ಸೇರಿ ಮಂತ್ರ ನಿನಾದ ಮೊಳಗಿಸಿದರು. ಬಳಿಕ ಎಲ್ಲರೂ ಸೇರಿ ಗಣೇಶ ಪಂಚರತ್ನ ಸ್ತೋತ್ರವನ್ನು ಹಾಡಿದೆವು.
ಗಣಪತಿ ಹಾಗೂ ಮಲ್ಲಿಕಾರ್ಜುನ ಪೂಜೆಯ ಬಳಿಕ ಶ್ರೀ ಚಂದ್ರಮೌಳೀಶ್ವರ ಪೂಜೆಯನ್ನು ನೋಡಿ ಆನಂದಿಸಿದೆವು. ಬಳಿಕ ಶ್ರೀಗಳು ಜೀವನಬೋಧ ಶಿಬಿರದ ವೈಶಿಷ್ಯವನ್ನು ಎತ್ತಿ ಹಿಡಿದು, ಇಂತಹ ಶಿಬಿರಗಳ ಅಗತ್ಯತೆಯ ಕುರಿತಾಗಿ ಹೇಳಿದರು. ಶಿಬಿರದ ವಿಷಯವಾಗಿ ಮೆಚ್ಚುಗೆಯನ್ನು ಪ್ರಕಟಿಸಿ ಇನ್ನು ಮುಂದೆಯೂ ಇಂತಹ ಇನ್ನಷ್ಟು ಒಳ್ಳೆಯ ಶಿಬಿರವನ್ನು ಆಚರಿಸಲಾಗಿ ಆಯೋಜಕ ವೃಂದದವರಲ್ಲಿ ಹೇಳಿದರು. ಶಿಬಿರದ ವಿದ್ಯಾರ್ಥಿಗಳಿಗೆ ವಿಶೇಷ ಮಂತ್ರಾತಕ್ಷತೆಯನ್ನು ಕರುಣಿಸಿದರು. ಗುರುಗಳ ಆದೇಶದಂತೆ ಅಶೋಕೆ ಮೂಲಮಠ, ಅಲ್ಲಿನ ವಿದ್ಯಾಲಯ ಹಾಗೂ ಆಗುತ್ತಿರುವ ಬೆಳವಣಿಗೆಗಳನ್ನು ಶಿಬಿರಾರ್ಥಿಗಳು ನೋಡಿದರು.
ಬಳಿಕ ಮುಣ್ಚಿಕಾನ ಗಣೇಶಣ್ಣನ ನೇತೃತ್ವದಲ್ಲಿ ಶಿಬಿರಾರ್ಥಿಗಳು ಖುದ್ದಾಗಿ ಕ್ಯಾಬೇಜು, ಶುಂಠಿ, ಮೆಣಸನ್ನು ಹೆಚ್ಚಿ ಪಾಕ ಮಾಡಿ ಕ್ಯಾಬೇಜ್ ವಡೆಯನ್ನು ತಯಾರಿಸಿ ಎಲ್ಲರಿಗೂ ಹಂಚಿದರು.
ಹೀಗೆ ಅನನ್ಯವಾದ ಯಾತ್ರೆ ಕೊನೆಗೊಳ್ಳುತ್ತಾ ಬಂತು. ದೈವನಾಮಸ್ಮರಣೆ, ಜಯಕಾರದೊಂದಿಗೆ ಅಶೋಕೆಯಿಂದ ಹಿಂತಿರುಗಿ ಬಳಿಕ ನಿರ್ವಿಘ್ನವಾಗಿ ನಮ್ಮ ಯಾತ್ರೆಯು ಕೊನೆಗೊಂಡಿತು. ಭಾಗವಹಿಸಿದ ಎಲ್ಲರಿಗೂ ಆನಂದ, ಉತ್ಸಾಹ ಹಾಗೂ ಸುಖ-ಶಾಂತಿ-ನೆಮ್ಮದಿಯು ದೊರಕಿದೆ ಎಂಬುದು ನನ್ನ ಅನಿಸಿಕೆ.
ಬರಹ:ಮೈತ್ರಿ ಮುಣ್ಚಿಕಾನ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ


