ಹೆತ್ತವರಿಗೆ ಹೆಗ್ಗಣವೂ ಮುದ್ದು ಎನ್ನುವಂತೆ ತಂದೆ ತಾಯಂದಿರಿಗೆ ಮಕ್ಕಳು ಎಷ್ಟು ದೊಡ್ಡವರಾದರೂ ಸಣ್ಣ ಮಕ್ಕಳಂತೆಯೇ ಕಾಣುತ್ತಾರೆ. ಮುದ್ದು ಮಾಡುವುದು ಹೆಚ್ಚಾದಂತೆ ಮಕ್ಕಳ ವಯೋಮಿತಿ ಹೆಚ್ಚಾಗುತ್ತಿದೆ ಎಂಬ ಅರಿವು ಕೂಡ ಮರೆತು ಹೋಗುತ್ತದೆ. ಸಣ್ಣ ಮಗುವು ದೊಡ್ಡದಾಗುವ ಪ್ರತಿಯೊಂದು ಹಂತದಲ್ಲೂ ಹಿರಿಯರ ಅಥವಾ ಹೆತ್ತವರ ಸಹಾಯ, ಬೆಂಬಲ ಖಂಡಿತ ಬೇಕೇಬೇಕು. ಆದರೆ ಮಗು ಬೆಳೆಯುತ್ತಿದ್ದಂತೆ ಸ್ವಾವಲಂಬನೆಯತ್ತ ಅದರ ಚಿತ್ತ ಹೆಚ್ಚಾಗುವಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಹೆತ್ತವರದ್ದೇ ಆಗುತ್ತದೆ. ಮಗು ನಡೆಯುವಾಗ ಬೀಳುವುದು ಸಹಜವೇ. ಹಾಗೆಂದು ಬೀಳಬಾರದೆಂದು ಯಾವಾಗಲೂ ಎತ್ತಿಕೊಂಡಿರಲು ಸಾಧ್ಯವೇ? ಬೀಳುವಾಗ ಎತ್ತಿಕೊಳ್ಳಬೇಕು ಸಾಂತ್ವನ ಹೇಳಬೇಕು. ಪುನಹ ಓಡಾಡಲು ಬಿಡಬೇಕು. ಇದು ಸಹಜವಾದ ನಡೆ. ಯಾವಾಗಲೂ ಕೈ ಹಿಡಿಯುತ್ತಲೇ ಇದ್ದರೆ ಮಗುವಿಗೆ ಸ್ವಂತಿಕೆ ಎನ್ನುವುದು ದಿನದಿಂದ ದಿನಕ್ಕೆ ಕ್ಷೀಣವಾಗುತ್ತ ಹೋಗುವುದಂತು ಖಂಡಿತ. ಮಕ್ಕಳನ್ನು ಮಕ್ಕಳಂತೆ ಇರಲು ಬಿಡುವುದು ಒಂದು ವಿಚಾರವಾದರೆ, ಮಕ್ಕಳನ್ನು ಬಾಲ್ಯತನದಿಂದ ಹೊರ ಬರುವಲ್ಲಿ ಉತ್ತೇಜನ ಕೊಡುವುದು ಇನ್ನೊಂದು ವಿಚಾರ. ಮಕ್ಕಳ ಪ್ರತಿಯೊಂದು ವಿಷಯದಲ್ಲೂ ಹೆತ್ತವರು ಪ್ರವೇಶಿಸಬಾರದು. ಉದಾಹರಣೆಗೆ ಬಟ್ಟೆಗಳನ್ನು ಕೊಳ್ಳುವಾಗ, ಚಪ್ಪಲಿಯನ್ನು ಖರೀದಿಸುವಾಗ, ಹೋಟೇಲಿಗೆ ಹೋದಾಗ, ಆಯ್ಕೆ ಅವರಿಗೇ ಬಿಡಬೇಕು. ಒಂದು ವೇಳೆ ಮಕ್ಕಳ ಆಯ್ಕೆ ತಪ್ಪಾದಲ್ಲಿ ಅದರ ಬಾಧಕವನ್ನು ಹೇಳಬೇಕು. ನಮಗೆ ಸಣ್ಣ ಪ್ರಾಯದಲ್ಲಿ ಮರ ಹತ್ತುವುದು, ತೋಡಿನ ನೀರಿನಲ್ಲಿ ಆಡುವುದು, ಭಾರ ಹೊರುವುದು, ಗುಡ್ಡ ಹತ್ತುವುದು ಮುಂತಾದವುಗಳಲ್ಲಿ ಇನ್ನಿಲ್ಲದ ಆಸಕ್ತಿ. ಆದರೆ ನಮಗೆ ನಮ್ಮ ತಂದೆ ತಾಯಿ ಒಂದು ದಿನವೂ ಹಾಗೆ ಮಾಡಬೇಡ,ಹೀಗೆ ಮಾಡಬೇಡ ಎಂದು ಹೇಳುತ್ತಿರಲಿಲ್ಲ. ಅಡಿಕೆ ಮರವೋ ತೆಂಗಿನ ಮರವೋ ಹತ್ತುವದಕ್ಕೆ ಪ್ರೋತ್ಸಾಹಿಸುತ್ತಿದ್ದರೇ ವಿನಹ ಆತಂಕದಿಂದ ಭಯ ಬರಿಸುತ್ತಿರಲಿಲ್ಲ. ಆದ್ದರಿಂದ ನಾವು ಶಾಲೆಗೆ ಹೋಗುತ್ತಿರುವ ವೇಳೆಯಲ್ಲಿಯೇ ಕೆಲವಾರು ಶ್ರಮದ ಕೆಲಸಗಳನ್ನೂ ಮಾಡುತ್ತಿದ್ದೆವು.
ಕೆಲವರು ಹೇಳುವುದಿದೆ ನಮ್ಮ ಮಕ್ಕಳು ನಾವು ಹಾಕಿದ ಗೆರೆ ದಾಟುವುದಿಲ್ಲವೆಂದು. ಅಂದರೆ ಅಷ್ಟರ ಮಟ್ಟಿಗೆ ಅವರು ಸ್ವಂತಿಕೆಯನ್ನು ಕಳಕೊಂಡವರೆಂದೇ ಅರ್ಥ. ಆದ್ದರಿಂದ ಅದು ಅಷ್ಟು ಒಳ್ಳೆಯ ಲಕ್ಷಣವಲ್ಲ. ಅಂಥ ಮಕ್ಕಳು ಯಾವಾಗಲೂ ಹೆತ್ತವರನ್ನೇ ಆಶ್ರಯಿಸಬೇಕಾಗುತ್ತದೆ ಮಾತ್ರವಲ್ಲ ಸ್ವಾತಂತ್ರ್ಯದ ಸುಖವನ್ನೂ ತ್ಯಜಿಸಬೇಕಾಗುತ್ತದೆ. ಪ್ರೀತಿಯ ಬಂಧನ ಮಕ್ಕಳ ಭವಿಷ್ಯತ್ತಿಗೆ ಪೂರಕವಾಗಿರಬೇಕು. ನಮ್ಮ ಮಗು ಸಾತ್ವಿಕನಾಗಿರಬೇಕೆಂದು ಅದೇ ಪಾಠವನ್ನು ಮಾಡುತ್ತಿದ್ದರೆ, ಅಹಿಂಸೆಯನ್ನೇ ಬೋಧಿಸುತ್ತಿದ್ದರೆ, ಸುಖದಲ್ಲೇ ಇರಬೇಕೆಂದು ಬಯಸಿದರೆ ಮಕ್ಕಳು ಸುಖದಲ್ಲಿರಲಾದೀತೇ? ಇಲ್ಲ ಖಂಡಿತ ಸಾಧ್ಯವಿಲ್ಲ. ಹಾಗಾದರೆ ಕೆಟ್ಟದ್ದನ್ನೂ ಕಲಿಸಬೇಕೇ ಎಂದಾಗ, ಕಲಿಸುವುದು ಬೇಡ ಆದರೆ ಅದರ ಅರಿವು ಮಕ್ಕಳಿಗೆ ನೀಡಲೇಬೇಕು. ಸುಳ್ಳು ಅಂದರೆ ಏನು, ಕದಿಯುವುದು ಎಂದರೇನು, ಅದರ ಪರಿಣಾಮ ಏನು, ಮೋಸ ಹೇಗೆ ಹೋಗಬಹುದು, ಇನ್ನೊಬ್ಬರಿಗೆ ತೊಂದರೆ ಕೊಡುವುದು ಹೇಗೆ ಕೊಡದಿರುವುದು ಹೇಗೆ... ಹೀಗೆ ಹಲವಾರು ವಿಷಯಗಳನ್ನು ಋಣಾತ್ಮಕವಾಗಿಯೂ ಧನಾತ್ಮಕವಾಗಿಯೂ ಮಕ್ಕಳಿಗೆ ಪರಿಚಯ ಮಾಡಿಸಲೇಬೇಕು. ಯಾವಾಗಲೂ ನಮ್ಮ ಅಂಕೆಯಲ್ಲೇ ಇರಬೇಕೆಂದುಕೊಂಡರೆ ಇದೆಲ್ಲ ಪಾಠಗಳಿಂದ ಮಕ್ಕಳು ವಂಚಿತರಾಗುವುದೇ ಸರಿ. ಸಣ್ಣ ಪ್ರಾಯದಲ್ಲಿಯೇ ಮಕ್ಕಳು ತಾವು ಯಾವುದೇ ನಿರ್ಧಾರವನ್ನು ಹಿರಿಯರ ಒಪ್ಪಿಗೆಯಿಂದಲೇ ತೆಗೆದುಕೊಳ್ಳಬೇಕೆಂಬ ನಿರ್ಧಾರಕ್ಕೊಳಗಾದರೆ ಮುಂದೆ ದೊಡ್ಡವರಾದಾಗ ಅಂತೆಯೇ ಹಿರಿಯರ ಅನುಪಸ್ಥಿತಿಯಲ್ಲಿ ಅತಂತ್ರರಾಗುವುದಂತು ಖಂಡಿತ. ಮಕ್ಕಳು ಹದಿನಾರು ವರ್ಷ ಪ್ರಾಯವಾದಾಗ ನಿಧಾನವಾಗಿ ಸ್ವಂತಿಕೆಯತ್ತ ಹೊರಳುತ್ತವೆ. ಆ ಘಟ್ಟದಲ್ಲಿ ಅವರನ್ನು ನಮ್ಮ ಅಂಕೆಯಿಂದಲೂ ನಿಧಾನವಾಗಿ ಸಡಿಲಗೊಳಿಸಬೇಕು. ಕೆಲವರಿರುತ್ತಾರೆ ಮಕ್ಕಳು ಮದುವೆ ಆದ ಮೇಲೂ ಅವರ ಮೇಲೆ ಪ್ರಭುತ್ವವನ್ನು ಸ್ಥಾಪಿಸಿ ಮಕ್ಕಳ ಖಾಸಗಿ ಜೀವನಕ್ಕೂ ತಡೆ ಉಂಟು ಮಾಡುವವರು. ಅಂತೆಯೇ ಇಂಥ ಮಕ್ಕಳು ಪ್ರತಿಯೊಂದಕ್ಕೂ ಅಮ್ಮನನ್ನೇ ಕೇಳುವುದು ಕೂಡ ಸಹಜವೇ ಆಗಿರುತ್ತದೆ. ಹೆಂಡತಿಯ ಮಾತು ಇವರಿಗೆ ಹಿತವಾದರೂ ಪಥ್ಯವಾಗದು. ಅಮ್ಮನ ಮಾತು ಕೇಳಿ ಕೇಳಿ ಅದು ಅಪ್ರಸ್ತುತವಾದರೂ ಸತ್ಯವೇ ಅನಿಸುವುದು. ಅಲ್ಲಿಗೆ ಈ ಮಕ್ಕಳು ತಾಯಿಗೆ ತಕ್ಕ ಮಕ್ಕಳಾದರೂ ಹೆಂಡತಿಗೆ ತಕ್ಕ ಗಂಡ ಅಥವಾ ಗಂಡನಿಗೆ ತಕ್ಕ ಹೆಂಡತಿ ಆಗಲಾರರು. ತಾಯಿಯ ಹೊರತಾಗಿ ಅಸ್ತಿತ್ವ ಇಲ್ಲ ಎನ್ನುವಲ್ಲಿಗೆ ಪರಿಸ್ಥಿತಿಯು ತಲುಪುತ್ತದೆ.
ಯಾವಾಗಲೂ ಅಷ್ಟೆ ನಾವು ನಮ್ಮತನವನ್ನು ಉಳಿಸಿಕೊಳ್ಳಲೇಬೇಕು. ಆ ನಿಟ್ಟಿನಲ್ಲಿ ಕೆಲವೊಂದು ಸ್ವಂತ ನಿರ್ಧಾರಗಳನ್ನು ನಾವೇ ತೆಗೆದುಕೊಳ್ಳಬೇಕು. ಉದಾಹರಣೆಗೆ ಮಗ ಎಲ್ಲಿಗೋ ಹೊರಡಬೇಕೆಂದಿರುತ್ತಾನೆ. ಅದೇ ಗಳಿಗೆಯಲ್ಲಿ ತಾಯಿಗೋ ತಂದೆಗೋ ಮಗ ತಾನು ಹೇಳಿದಂತೆ ಇರಬೇಕೆನ್ನುವ ಚಟವಿದ್ದರೆ ನೀನು ಬಸ್ಸಲ್ಲಿಯೇ ಹೋಗು, ಕಾರಲ್ಲಿಯೇ ಹೋಗು ಅಥವಾ ಮೋಟಾರ್ ಸೈಕಲಲ್ಲೇ ಹೋಗು ಎಂದು ಆಜ್ಞೆ ಮಾಡಬಹುದು. ಆಗ ಮಕ್ಕಳು ಸಣ್ಣ ಪ್ರತಿರೋಧ ತೋರಿಸಿದರೆ ಪವಾಡವೇ ನಡೆಯುವುದು. ಹೆಚ್ಚೇನೂ ಅಲ್ಲ ಅವರು ಏನು ಹೇಳುತ್ತಾರೋ ಅದನ್ನು ನಯವಾಗಿ ನಿರಾಕರಿಸಿ ಅವರು ಹೇಳದ ಒಂದು ಮಾರ್ಗದಲ್ಲಿ ಮುನ್ನಡೆದಾಗ ನನ್ನ ಮಕ್ಕಳು ಬೆಳೆಯುತ್ತಿದ್ದಾರೆ ಎನ್ನುವ ಭಾವ ಹಿರಿಯರಿಗೆ ಬರತೊಡಗಿದರೆ, ಹಿರಿಯರ ವಿಚಾರಗಳ ಹೊರತಾಗಿಯೂ ಸ್ವಂತಿಕೆಯನ್ನು ತೋರಬಹುದೆಂಬ ಭಾವವು ಮಕ್ಕಳಲ್ಲೂ ಬರಬಹುದು. ಅಂತೆಯೇ ಹಿರಿಯರಿಗೂ ತನ್ನ ಮಕ್ಕಳು ದೊಡ್ಡವರಾಗುತ್ತಿದ್ದಾರೆ ಎನ್ನುವ ಭಾವವೂ ಬಲಿಯತೊಡಗುವುದು. ತಂದೆ ತಾಯಿಯ ಭದ್ರತೆಯಲಿ ಬೆಳೆದ ಮಗುವು ಪ್ರತಿಭಾನ್ವಿತನಾಗಬಹುದು ಅಥವಾ ಆಗದೆಯೂ ಇರಬಹುದು. ಅದೇ ವೇಳೆ ಹೆತ್ತವರಿಲ್ಲದೆ ಅಥವಾ ಇದ್ದರೂ ಮಕ್ಕಳೊಡನೆ ಬೆರೆಯದೆ ಇರುವಂಥ ಸನ್ನಿವೇಶಗಳಡಿಯಲ್ಲಿ ಬೆಳೆದ ಮಕ್ಕಳಿಗೂ ಈ ಸಾಧ್ಯತೆ ಇರುತ್ತದೆ. ಆದ್ದರಿಂದ ಒಂದು ಹಂತದ ನಂತರ ಸ್ವಾನುಭವ, ಸ್ವೇಚ್ಛೆ, ಸ್ವಂತಿಕೆ ಎನ್ನುವುದೇ ಸುಂದರ ಜೀವನಕ್ಕೆ ನಿರ್ಣಾಯಕವಾಗಿರುತ್ತದೆ. ಇನ್ನು ಗೌರವ ಬೇರೆ ಸ್ವಂತಿಕೆ ಬೇರೆ. ತಾನು ಸ್ವಂತ ನಿರ್ಧಾರದಿಂದ ಮುಂದೆ ಗುರಿ ತಲುಪಲು ಸಾಧ್ಯವಿದೆ ಎಂಬ ಆತ್ಮಧೈರ್ಯವಿದ್ದಾಗ ಅಥವಾ ಅದರಲ್ಲಿ ಸಂಪೂರ್ಣ ವಿಶ್ವಾಸವಿದ್ದಾಗ ಹೆತ್ತವರ ಕೆಲವು ವಿಚಾರಗಳು ನಮ್ಮ ವ್ಯವಹಾರಕ್ಕೆ ಸರಿಕಾಣದಿದ್ದಾಗ ಅದನ್ನು ನಿರಾಕರಿಸುವುದು ಅಗೌರವವಲ್ಲ. ಬದಲಾಗಿ ಅದು ಆತ್ಮವಿಶ್ವಾಸದ ದ್ಯೋತಕವಾಗುತ್ತದೆ. ಅದನ್ನು ಹೆತ್ತವರೂ ಅರ್ಥಮಾಡಿಕೊಂಡರೆ ಬದುಕು ಸುಂದರವಾಗುತ್ತದೆ. ಅದರ ಬದಲಾಗಿ ಮಕ್ಕಳು ನಮ್ಮ ಮಾತು ಮೀರುತ್ತವೆ ಎಂದು ಅರ್ಥೈಸಿಕೊಂಡರೆ ಅದೇ ಬದುಕು ಇಗೋ ಎಂಬಲ್ಲಿಗೆ ಬಂದು ಸಿಕ್ಕಿ ಹಾಕಿಕೊಳ್ಳುತ್ತದೆ. ಅಂಥ ಒಂದು ಅಡಚಣೆ ಮುಂದೆ ಬಹುದೊಡ್ಡ ಗೋಡೆಯಾಗಿ ಪರಿವರ್ತನವಾದರೆ ಬದಕಿಗೆಲ್ಲಿ ನೆಮ್ಮದಿ? ಮಕ್ಕಳು ದೊಡ್ಡವರಾಗುತ್ತಾರೆಂದರೆ ಬರಿದೆ ಕಾಯದಲ್ಲಿ ಮಾತ್ರವಲ್ಲ ಬುದ್ಧಿಯಲ್ಲೂ ಕೂಡ. ಇಂದಿನ ಮಕ್ಕಳ ಕಾಲಕ್ಕೂ ನಮ್ಮ ಕಾಲಕ್ಕೂ ಬಹಳ ಅಂತರವಿರುವುದರಿಂದ ನಾವು ಮಕ್ಕಳಂತಾದರೆ ಅಥವಾ ಮಕ್ಕಳನ್ನು ಅರಿತುಕೊಂಡರೆ ಬಹುಷ ಅವರ ಜತೆ ನಾವು ಬೆಳೆದಂತೆ. ಮುಂದೆ ಮಕ್ಕಳಿಗೆ ಮಕ್ಕಳಾದಾಗಲೂ ಇದು ಅನ್ವಯವಾಗುವ ವಿಷಯವೇ. ಏನೇ ಇರಲಿ ಮೊದಲು ಮಕ್ಕಳನ್ನು ಬೆಳೆಸೋಣ.. ಮಕ್ಕಳು ದೊಡ್ಡವರಾದೊಡನೆ ನಾವು ಮಕ್ಕಳಂತಾಗೋಣ. ಇಂಥ ಭಾವ ನಮ್ಮದಾದರೆ ಸಂಸಾರದಲ್ಲಿ ವಿರಸ ಬಾರದು. ಅಂತೆಯೇ ಅವರವರ ಆತ್ಮಾಭಿಮಾನಕ್ಕೂ ಕೊರತೆಯಾಗದು ಏನಂತೀರಿ...?
-ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ