ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ
ಮೂಡುಬಿದಿರೆ: ಕನ್ನಡ ಪರಿಷತ್ತಿನ ಬೆಳವಣಿಗೆಗೆ ನಾಡು, ನುಡಿ, ಸಾಹಿತ್ಯ ಎಂಬ ಮೂರು ಪರಿಕಲ್ಪನೆಗಳು ಅತಿ ಅಗತ್ಯ. ಕನ್ನಡ ಭಾಷೆಯ ಕುರಿತಾಗಿ ಸಂಶೋಧನೆ ಕೈಗೊಳ್ಳಬೇಕು ಎಂದು ಖ್ಯಾತ ಲೇಖಕ ಹಾಗೂ ಚಿಂತಕ ಅರವಿಂದ ಚೊಕ್ಕಾಡಿ ಹೇಳಿದರು.
ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದ, ರತ್ನಾಕರವರ್ಣಿ ಸಭಾಭವನದಲ್ಲಿ ಶುಕ್ರವಾರ ನಡೆದ "ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಕನ್ನಡಕ್ಕೆ ಒಂದು ಪರಂಪರೆಯ ಹಿನ್ನೆಲೆ ಇದೆ. ಸಮನ್ವಯತೆಯ ಪರಿಕಲ್ಪನೆ ಇಟ್ಟುಕೊಂಡಾಗ ಮಾತ್ರ ನುಡಿ ಸಾಧ್ಯ. ನುಡಿಯ ಪರಿಕಲ್ಪನೆಯಿಂದ ಕನ್ನಡವನ್ನು ಸಶಕ್ತಗೊಳಿಸುವ ಅಗತ್ಯವಿದೆ. ಭಾರತೀಯ ಸನ್ನಿವೇಶದಲ್ಲಿ ನುಡಿ ತನ್ನ ಪರಂಪರೆಯ ಜತೆಯಲ್ಲೇ ಸಾಗುತ್ತಾ ಹೋಗುತ್ತದೆ.
ಇಂಗ್ಲಿಷ್ ಮಾತನಾಡುವುದು ಒಂದು ಘನತೆಯ ವಿಷಯವಾದರೆ ಕನ್ನಡದ ಮೂಲಕ ಹೊಸ ಕಲ್ಪನೆ ಮೂಡಿಸುವುದು ನುಡಿಯ ನಿರ್ಧಾರ. ಹಾಗೆಯೇ ಸಾಹಿತ್ಯಗಳನ್ನು ಗ್ರಂಥಗಳ ಮೂಲಕ ಪ್ರಕಟಿಸಬೇಕು. ಸಾಹಿತ್ಯ ಎನ್ನುವುದು ಒಂದು ಸಂಸ್ಕಾರ ಆ ಸಂಸ್ಕಾರಕ್ಕೆ ಸಾಹಿತ್ಯ ಪರಿಷತ್ತು ಅತೀ ಅಗತ್ಯ. ಕನ್ನಡ ಪರಿಷತ್ತಿನ ತಳಹದಿ ಜ್ಞಾನವಾಗಿದೆ. ಜ್ಞಾನ ಆಲೋಚನೆಯ ವಿಧಾನಗಳು ಸರಿ ಇದ್ದರೆ ಮಾತ್ರ ಜೀವನ ಉತ್ತಮವಾಗಿರುತ್ತದೆ. ಕನ್ನಡ ಬೆಳವಣಿಗೆಯನ್ನು ಇಂಗ್ಲೀಷ್ ಮಾಡುತ್ತದೆ ಹಾಗೆಯೇ ಸಮಸ್ಯೆಗಳನ್ನು ಕೂಡ ಸೃಷ್ಟಿಸುತ್ತದೆ, ಆದ್ದರಿಂದ ಭಾಷೆಯನ್ನು ಮರು ನಿರೂಪಣೆ ಮಾಡುವುದು ನಮ್ಮ ಹೊಣೆ ಎಂದರು.
ಮೂಡುಬಿದಿರೆ ತಾಲೂಕು ಕ.ಸಾ.ಪ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಕೆ. ಮಾತನಾಡುತ್ತಾ, ಶಿಕ್ಷಕರಿಗೆ, ವಿದ್ವಾಂಸರಿಗೆ ಮಾತ್ರವೇ ಕನ್ನಡದ ಪರಿಕಲ್ಪನೆಯಲ್ಲ, ಪ್ರತಿಯೊಬ್ಬರೂ ಕನ್ನಡವನ್ನು ಬೆಳೆಸಬೇಕು. ನಮ್ಮದು ಎಂಬ ಭಾಷೆಯನ್ನು ನಾವೆಂದು ಮರೆಯಬಾರದು. ಕೆಲವರಾದರು ಕೇಳುವುದನ್ನು, ಬರೆಯುವುದನ್ನು ರೂಢಿಸಿಕೊಂಡರೆ ಸಾರ್ಥಕ ಎಂದರು.
ಸದಾನಂದ ನಾರಾವಿ ವಂದಿಸಿದರು. ವಿಜಯಲಕ್ಷ್ಮಿ ಮಾರ್ಲ ನಿರೂಪಿಸಿ ಸ್ವಾಗತಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ