‘ಆಳ್ವಾಸ್ ಸಿನಿಮಾ ಸಮಾಜ’ ಉದ್ಘಾಟನೆ
ವಿದ್ಯಾಗಿರಿ(ಮೂಡುಬಿದಿರೆ): ‘ಸಿನಿಮಾ ಯಶಸ್ಸು ಕಾಣಲು ಪೂರ್ವ ತಯಾರಿ ಹಾಗೂ ನಿರ್ದೇಶಕರ ಸ್ಪಷ್ಟತೆ ಬಹುಮುಖ್ಯ’ ಎಂದು ಸಿನಿಮಾ-ರಂಗ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ಬೈಲ್ ಹೇಳಿದರು.
ಆಳ್ವಾಸ್ ಸ್ನಾತಕೋತ್ತರ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದಲ್ಲಿ ಸೋಮವಾರ ‘ಆಳ್ವಾಸ್ ಸಿನಿಮಾ ಸಮಾಜ’ಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಸಿನಿಮಾಕ್ಕೆ ಗಟ್ಟಿಯಾದ ಪೂರ್ವ ತಯಾರಿ ಬೇಕು. ಪಾತ್ರಗಳಿಗಾಗಿ ಕಲಾವಿದರನ್ನು ಆಯ್ಕೆ ಮಾಡಬೇಕೇ ಹೊರತು ಕಲಾವಿದರಿಗಾಗಿ ಪಾತ್ರ ಸೃಷ್ಟಿಸಬಾರದು ಎಂದರು.
ಉತ್ತಮ ಸಿನಿಮಾ ಅಥವಾ ರಂಗ ಪ್ರಯೋಗಕ್ಕೆ ಪ್ರೇಕ್ಷಕರು ಬರುತ್ತಾರೆ. ಉತ್ತಮ ಪ್ರೇಕ್ಷಕ ವರ್ಗವನ್ನು ರೂಪಿಸುವುದೂ ಸಿನಿಮಾ-ರಂಗಕರ್ಮಿಗಳ ಜವಾಬ್ದಾರಿ. ಪ್ರೇಕ್ಷಕರೂ ಉತ್ತಮ ಪ್ರಯೋಗಗಳನ್ನು ಪ್ರೋತ್ಸಾಹಿಸಬೇಕು ಎಂದರು.
ಒಂದು ಸಿನಿಮಾ ಯಶಸ್ಸು ಕಂಡ ಬಳಿಕ ಅದೇ ಶೈಲಿಯ ಸಿನಿಮಾ ನಿರ್ಮಿಸುವುದು ಉತ್ತಮ ಬೆಳವಣಿಗೆಯಲ್ಲ. ಹೊಸ ಹೊಸ ಪ್ರಯೋಗಗಳು ಬರಬೇಕು. ಈ ನಿಟ್ಟಿನಲ್ಲಿ ತುಳುವಿನಲ್ಲಿ ಪ್ರಯೋಗ ನಡೆಸಲು ಸಿದ್ಧತೆ ಮಾಡಿಕೊಂಡಿದ್ದೇನೆ ಎಂದರು.
ಮಲೆಯಾಳದಲ್ಲಿ ಹೊಸ ನಿರ್ದೇಶಕರು, ಕತೆ, ಶೈಲಿಯನ್ನು ಪ್ರೋತ್ಸಾಹಿಸಿದಂತೆ, ತುಳು, ಕನ್ನಡದಲ್ಲೂ ಯುವಜನತೆ ಉತ್ತಮ ಪ್ರಯತ್ನಗಳನ್ನು ಪ್ರೋತ್ಸಾಹಿಸಬೇಕು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ‘ಸಿನಿಮಾ ಒಂದು ಉತ್ತಮ ಹಾಗೂ ಪ್ರಭಾವಿ ಸಮೂಹ ಮಾಧ್ಯಮ. ಆದರೆ, ಈ ಮಾಧ್ಯಮವನ್ನು ಉತ್ತಮ ಮೌಲ್ಯಗಳ ಸಂದೇಶ ನೀಡಲು ಬಳಸಬೇಕು. ಈಚೆಗೆ ಕೆಲವು ದ್ವೇಷ ಬಿತ್ತುವ ಸಿನಿಮಾಗಳು ಬಂದಿರುವುದು ಬೇಸರ ಮೂಡಿಸುತ್ತವೆ. ನಮ್ಮ ಯುವ ಜನತೆಗೆ ಉತ್ತಮ ಸಿನಿಮಾ ನೀಡುವ ಕೆಲಸ ಆಗಬೇಕು’ ಎಂದು ಆಶಯ ವ್ಯಕ್ತಪಡಿಸಿದರು.
ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಸಿನಿಮಾ ಪ್ರಭಾವಿ ಮಾಧ್ಯಮ. ‘ಮದರ್ ಇಂಡಿಯಾ’ ಸಿನಿಮಾದಿಂದ ಬಹುಜನರು ತಮ್ಮ ಅಪ್ಪ-ಅಮ್ಮನ ಬಗ್ಗೆ ಕಾಳಜಿ ವಹಿಸಿದ್ದರು’ ಎಂದು ಸ್ಮರಿಸಿಕೊಂಡರು.
ಪ್ರಾಶುಂಪಾಲ ಡಾ.ಕುರಿಯನ್, ಕಲಾವಿದ ರಾಜೇಶ್ ಕುಡ್ಲ, ಆಳ್ವಾಸ್ ಸಿನಿಮಾ ಸಮಾಜದ ವಿದ್ಯಾರ್ಥಿ ಸಂಯೋಜಕಿ ಸುಕನ್ಯಾ ಇದ್ದರು. ಸಹಾಯಕ ಪ್ರಾಧ್ಯಾಪಕ ಹರ್ಷವರ್ಧನ ಪಿ.ಆರ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಇಎ ನಿತಿನ್, ಸಹ ಪ್ರಾಧ್ಯಾಪಕ ಡಾ.ಶ್ರೀನಿವಾಸ ಎಚ್., ಸಹಾಯಕ ಪ್ರಾಧ್ಯಾಪಕರಾದ ನಿಶಾನ್ ಕೋಟ್ಯಾನ್, ಇಂಚರ ಗೌಡ, ದುರ್ಗಾ ಪ್ರಸನ್ನ, ರವಿ ಮೂಡುಕೋಣಾಜೆ, ರವಿ ಶೆಣೈ ಇದ್ದರು. ಅವಿನಾಶ್ ಕಟೀಲ್ ಹಾಗೂ ಪ್ರಖ್ಯಾತ್ ಬೆಳುವಾಯಿ ನಿರೂಪಿಸಿ, ಕವನಾ ಸ್ವಾಗತಿಸಿ ಶಿಲ್ಪಾ ವಂದಿಸಿದರು.
ಮದುವೆಗೆ ಆಳ್ವರ ಊಟ- ಮೂರು ಅಸ್ತ್ರ
ಕಲೆಗೆ ಪ್ರೋತ್ಸಾಹ ನೀಡುತ್ತಿರುವ ಅಪೂರ್ವ ಶಿಕ್ಷಣ ಸಂಸ್ಥೆ ‘ಆಳ್ವಾಸ್’. ಡಾ.ಮೋಹನ ಆಳ್ವ ಅವರು ಕಲೆಗೆ ನೀಡುತ್ತಿರುವ ಪ್ರೋತ್ಸಾಹ ಅನನ್ಯ. ನನ್ನ ಮದುವೆಗೆ ಊಟದ ವ್ಯವಸ್ಥೆ ಕಲ್ಪಿಸಿದವರೂ ಆಳ್ವರೇ. ಅವರ ಕೊಡುಗೆ ಸಿನಿಮಾಕ್ಕೂ ಸಿಗಲಿ ಎಂದು ಆಶಯ ವ್ಯಕ್ತಪಡಿಸಿದರು.
‘ಒರಿಯರ್ದೊರಿ ಅಸಲ್ ಭಾಗ-2’ ಸಿನಿಮಾ ಹಾಗೂ ಮೂರು ವಿಭಿನ್ನ ಅಸ್ತ್ರ (ನಾಟಕ)ಗಳನ್ನು ನಿರ್ಮಿಸುವುದಾಗಿ ವಿಜಯಕುಮಾರ್ ಕೊಡಿಯಾಲ್ಬೈಲ್ ಹೇಳಿದರು.
ಒಂದು ಸಂಪೂರ್ಣ ಹಾಸ್ಯಮಯ, ಇನ್ನೊಂದು ಭೂಗತ ಜಗತ್ತಿನ ಕತೆ ಹಾಗೂ ಮತ್ತೊಂದು ಕ್ರಿಕೆಟ್ ಆಟಗಾರನೊಬ್ಬನ ಕತೆಯ ನಾಟಕಗಳನ್ನು ನಿರ್ಮಿಸುತ್ತಿದ್ದೇನೆ. ಅದರ ಜೊತೆಗೆ ಶಿವಧೂತೆ ಗುಳಿಗೆ ನಾಟಕದ ಮೂಲಕ ಗಿನ್ನಿಸ್ ದಾಖಲೆ ಬರೆಯಲಿದ್ದೇವೆ ಎಂದು ಅವರು ತಿಳಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ