ಕುಂದಾಪುರದ ರಾಜಕೀಯ ಇತಿಹಾಸ ನೇೂಡಿದಾಗ ಬಹು ಸುದೀರ್ಘ ಕಾಲ ಕುಂದಾಪುರ ಕ್ಷೇತ್ರವನ್ನು ಶಾಸಕರಾಗಿ ಪ್ರತಿನಿಧಿಸಿದ ಕೀರ್ತಿ ಕಾಂಗ್ರೆಸ್ ಪಕ್ಷದ ಪ್ರತಾಪ್ಚಂದ್ರ ಶೆಟ್ಟಿಯವರಿಗೆ ಮತ್ತು ಹಾಲಾಡಿ ಶ್ರೀನಿವಾಸ್ ಶೆಟ್ಟಿಯವರಿಗೆ ಸಲ್ಲುತ್ತದೆ. ಇದಕ್ಕೆ ಬಹು ಮುಖ್ಯ ಕಾರಣ ಅವರು ಯಾವ ಪಕ್ಷವನ್ನು ಪ್ರತಿನಿಧಿಸಿದ್ದರು ಅನ್ನುವುದಕ್ಕಿಂತ ಅವರು ಬೆಳೆಸಿಕೊಂಡಿದ್ದ ಜಾತ್ಯತೀತ ನಿಲುವು ಮತ್ತು ಪಕ್ಷ ಮೀರಿ ಕ್ಷೇತ್ರದ ಜನ ಸಾಮಾನ್ಯರ ಜೊತೆ ಬೆಳೆಸಿಕೊಂಡಿದ್ದ ಸರಳ ಸಜ್ಜನಿಕೆ ಪ್ರಾಮಾಣಿಕತನದ ಸಂಬಂಧ ಅನ್ನುವುದು ಅಷ್ಟೇ ಮುಖ್ಯ. ಹಾಗಾಗಿ ಇಬ್ಬರೂ ಕೂಡ ಒಂದರ್ಥದಲ್ಲಿ ಸೇೂಲರಿಯದ ಸರದಾರರು ಅನ್ನಿಸಿಕೊಂಡು ರಾಜಕೀಯದ ಪರದೆಯಿಂದ ಹಿಂದೆ ಸರಿದಿದ್ದಾರೆ. ಹಾಗಾಗಿಯೇ ಈ ಇಬ್ಬರೂ ಕೂಡಾ ಜನ ಮಾನಸದಲ್ಲಿ ಸದಾ ನೆನಪಿನಲ್ಲಿ ಉಳಿಯಬಲ್ಲ ನೆನಪಿನ ಮುದ್ರೆ ಒತ್ತಿ ಸಕ್ರಿಯವಾಗಿ ರಾಜಕೀಯ ಸ್ಪರ್ಧಾ ಕಣದಿಂದ ವಿರಮಿಸಿದ್ದಾರೆ. ಇದು ಉತ್ತಮ ನಿರ್ಧಾರವೂ ಹೌದು.
ಹಾಲಾಡಿಯವರ ರಾಜಕೀಯ ನಿವೃತ್ತಿ ಯಾರಿಗೆ ಲಾಭ ಯಾರಿಗೆ ನಷ್ಟ ಅನ್ನುವ ಚಚೆ೯ ರಾಜಕೀಯ ವಲಯದಲ್ಲಿ ಪ್ರಾರಂಭವಾಗಿದೆ.ಬಿಜೆಪಿ ಮಟ್ಟಿಗೆ ಹಾಲಾಡಿಯವರು ಒಂದು ರೀತಿಯಲ್ಲಿ ನುಂಗಲಾರದ ತುತ್ತಾಗಿದ್ದರು ಅನ್ನುವುದು ಅಷ್ಟೇ ಸತ್ಯ. ಬಹುಕಾಲದ ವರೆಗೆ ಬಿಜೆಪಿಯನ್ನು ಪ್ರತಿನಿಧಿಸಿದ ಹಾಲಾಡಿಯವರ ಕೆಲವೊಂದು ರಾಜಕೀಯಕ್ಕೆ ಮೀರಿದ ಆದಶ೯ತನದ ಗುಣಗಳು ಬಿಜೆಪಿಯ ಜಿಲ್ಲಾ ರಾಜ್ಯ ಮುಖಂಡರಿಗೆ ಅಷ್ಟೇನೂ ಹಿಡಿಸಲಾರದ ಪ್ರಸಂಗಗಳನ್ನು ನಾವು ಗಮನಿಸಿದ್ದೇವೆ. ಹಿರಿಯ ನಾಯಕರುಗಳಿಗೆ ತಗ್ಗಿ ಬಗ್ಗಿ ಸಲಾಂ ಹೊಡೆಯದ ಹಾಲಾಡಿಯವರು ಬಿಜೆಪಿಯ ರಾಜಕೀಯ ಚಟುವಟಿಕೆಗಳಿಂದ ಸ್ವಲ್ಪ ಅಂತರವನ್ನೆ ಕಾದುಕೊಂಡು ಬಂದವರು. ಹಾಗಂತ ಇವರನ್ನು ಕೈ ಬಿಟ್ಟು ಇನ್ನೊಬ್ಬ ಸ್ಥಳೀಯ ನಾಯಕನನ್ನು ಬೆಳೆಸೇೂಣ ಅಂದರೆ ಅದು ಸಾಧ್ಯವಾಗದ ಮಾತು. ಹಾಲಾಡಿಯವರಿಗೆ ಒಂದು ಸಚಿವ ಸ್ಥಾನವನ್ನಾದರೂ ಕೊಟ್ಟು ಹಾಲಾಡಿಯವರಿಗೆ ಒಂದು ಕೃತಜ್ಞತೆಯನ್ನಾದರೂ ಸಲ್ಲಿಸ ಬಹುದಿತ್ತು. ಅದನ್ನೂ ಕೂಡಾ ಮಾಡುವ ಭಾಗ್ಯ ಬಿಜೆಪಿಯವರಿಗೆ ಒಲಿದು ಬರಲೇ ಇಲ್ಲ. ಅದು ಹಾಲಾಡಿವರ ದೌಭಾ೯ಗ್ಯವೊ ಅಥವಾ ಕುಂದಾಪುರ ಕ್ಷೇತ್ರದ ದೌಭಾ೯ಗ್ಯವೊ ಗೊತ್ತಿಲ್ಲ. ಅಂತೂ ಕುಂದಾಪುರ/ ಬೈಂದೂರಿಗಂತೂ ಇದು ಒಂದು ಮರೀಚಿಕೆಯಾಗಿಯೇ ಮುಂದುವರಿದಿದೆ.
ಅಂತೂ ಬಿಜೆಪಿಯವರ ಒಳ ಮನಸ್ಸಿನ ಪ್ರಶ್ನೆಗೆ ಇಂದು ಹಾಲಾಡಿಯವರು ತೆರೆದ ಮನಸ್ಸಿನಲ್ಲಿಯೇ ಉತ್ತರ ನೀಡಿ ತಮ್ಮ ರಾಜಕೀಯ ಬದುಕಿಗೆ ವಿರಾಮ ಘೇೂಷಿಸಿ ಬಿಟ್ಟಿದ್ದಾರೆ. ಈ ನಿವೃತ್ತಿಯಿಂದ ಬಿಜೆಪಿಯ ಮುಂದಿನ ನಡೆ ಸುಗಮವಾಯಿತು ಅಂದು ನಂಬಬಹುದೇ? ಖಂಡಿತವಾಗಿಯೂ ಸಾಧ್ಯವಿಲ್ಲ. ಇದಕ್ಕೂ ಹಲವು ಕಾರಣಗಳಿವೆ. ಹಾಲಾಡಿಯವರು ತಮ್ಮ ಶಾಸಕತನದ ರಾಜಕೀಯದಿಂದ ಮರಳುವಾಗ ಹೇಳಿದ ಒಂದು ಮಾತು ತುಂಬಾ ಅರ್ಥಪೂರ್ಣ ಮತ್ತು ಮನನ ಮಾಡಬೇಕಾದ ವಿಚಾರ. "ನನಗೆ ಬಿಜೆಪಿಯಿಂದ ಜನ ಸೇವೆ ಮಾಡಲು ಅವಕಾಶ ಸಿಕ್ಕಿದೆ ತಾವು ಮುಂದೆ ಕೂಡಾ ಬಿಜೆಪಿಯನ್ನು ಪ್ರೇೂತ್ಸಾಹಿಸಿ ಬೆಳೆಸಿರಿ ಅನ್ನುವ ಕೊನೆಯ ಮಾತು ಹಾಲಾಡಿಯವರ ಹೃದಯ ವೈಶಾಲ್ಯತೆ ತೆರೆದುಕೊಂಡ ಮಾತು. ಇದು ಕೃತಜ್ಞತೆಯ ಮಾತು. ಆದರೆ ಬಿಜೆಪಿಯರು ಈ ಹಾಲಾಡಿ ಸತತವಾಗಿ ಗೆದ್ದು ಬಂದ ಈ ಕುಂದಾಪುರದ ನೆಲ ಜನ ನಮ್ಮ ನಮ್ಮ ಪಕ್ಷದ ಶಾಶ್ವತ ಆಸ್ತಿ ಎಂದು ಕೊಂಡು ನಡೆದರೆ ಅದಕ್ಕಿಂತ ದೊಡ್ಡ ಮೂರ್ಖತನ ಇನ್ನೊಂದಿಲ್ಲ.
ಕುಂದಾಪುರದಲ್ಲಿ ಹಾಲಾಡಿಯವರ ಮಹಿಮೆ ಯಾಕೆ ಸುದೀರ್ಘ ಕಾಲ ನಡೆಯಿತು ಅಂದರೆ ಅಂದರೆ ಅದು ಹಾಲಾಡಿಯವರ ಕೆಲವೊಂದು ವಿಶೇಷ ಗುಣದಿಂದ ಹೊರತು ಅದು ಬಿಜೆಪಿಯ ಬಳುವಳಿಯಿಂದ ಖಂಡಿತವಾಗಿಯೂ ಅಲ್ಲ ಅನ್ನುವುದು ಎಲ್ಲರಿಗೂ ತಿಳಿದ ವಿಚಾರವೂ ಹೌದು. ಹಾಲಾಡಿ ಅವರಿಗೆ ಪಕ್ಷ ಒಂದು ವೇದಿಕೆ ಅಷ್ಟೇ. ಅದನ್ನು ಅವರು ಪಕ್ಷಾತೀತರಾಗಿ ಮಾಡಿ ತೇೂರಿಸಿದ್ದಾರೆ. ಹಾಲಾಡಿ ಇಲ್ಲಿ ಗೆದ್ದು ಬಂದ ಸ್ಥಳ ಹಾಗಾಗಿ ನಾವು ಯಾರನ್ನು ನಿಲ್ಲಿಸಿದ್ದರೂ ಗೆಲ್ಲಬಹುದು ಅನ್ನುವುದು ವಿಶ್ವಾಸ "ಆಂಜನೇಯ ಸಿಂಡ್ರೋಮ್" ಆದರೂ ಆಶ್ಚರ್ಯವಿಲ್ಲ.
ಈ ಹಾಲಾಡಿ ಅನ್ನುವ ಅಪರೂಪದ ವ್ಯಕ್ತಿಯನ್ನು ಗೆಲ್ಲಿಸಿದ್ದು ಬರೇ ಬಿಜೆಪಿಯನ್ನು ಒಪ್ಪಿಕೊಂಡ ಮತದಾರರು ಮಾತ್ರವಲ್ಲ ಬಿಜೆಪಿಯ ತತ್ವ ಸಿದ್ಧಾಂತ ನಾಯಕರುಗಳನ್ನು ಒಪ್ಪಿಕೊಳ್ಳದ ಮತದಾರರು ಸರಿ ಸುಮಾರು ಶೇ.40ರಷ್ಟು ಇದ್ದಾರೆ ಅನ್ನುವುದು ಅಷ್ಟೇ ವಾಸ್ತವಿಕ. ಬಹು ಹಿಂದೆ ಇದೇ ನಮ್ಮ ಹಾಲಾಡಿ ಅವರು ಹೇಳಿದ ಒಂದು ಮಾತು ಇಂದಿಗೂ ನೆನಪಿದೆ. "ನಾನು 60 ಶೇಕಡ ಬಿಜೆಪಿ 40 ಶೇ.ಕಮ್ಯುನಿಸ್ಟ್. ಇದು ಹೇಳಿದ ಮಾತು ಮಾತ್ರವಲ್ಲ, ಹಾಗೆಯೇ ನಡೆದುಕೊಂಡರು. ಹಾಗಾಗಿ ಮತದಾನದ ಕಾಲದಲ್ಲಿ ಜಾತಿ ಧರ್ಮ ಬಡವ ಸಿರಿವಂತ ಮಾತ್ರವಲ್ಲ ಪಕ್ಷ ಮೀರಿ ಈ ಹಾಲಾಡಿಯವರಿಗೆ ಮತ ಹರಿದು ಬಂತು.ಇಂತಹ ಸಿದ್ಧಾಂತ ಮತ್ತು ಕಾರ್ಯವನ್ನು ಬಿಜೆಪಿ ಮುಂದೆ ಈ ಕ್ಷೇತ್ರದಲ್ಲಿ ಮುಂದುವರಿಸಿ ಕೊಂಡು ಹೇೂಗಬಲ್ಲ ಇನ್ನೊಬ್ಬ ಅಭ್ಯರ್ಥಿ ಸಿಗಬಹುದೆ ಅನ್ನುವುದು ಬಿಜೆಪಿಯ ಗೆಲ್ಲುವನ್ನು ಲೆಕ್ಕ ಹಾಕುವವರ ಮನದಲ್ಲಿ ಮೂಡಿ ಬಂದ ವಿಶ್ಲೇಷಣಾತ್ಮಕ ಮಾತು.
ಅಂತೂ ಹಾಲಾಡಿಯವರು ಸಕಾಲದಲ್ಲಿಯೇ ತಮ್ಮ ನಿವೃತ್ತಿಯನ್ನು ಪ್ರಕಟಿಸಿ ತಮ್ಮ ಘನತೆ ಗೌರವವನ್ನು ಹೆಚ್ಚಿಸಿ ಕೊಂಡಿದ್ದಾರೆ. ಸುಧೀರ್ಘ ತಮ್ಮ ಕಾಲ ಶಾಸಕತನದ ಸಿಹಿ ಕಹಿ ಅನುಭವಗಳನ್ನು ಹೊತ್ತುಕೊಂಡು, ಜನ ಹಾಲಾಡಿಯವರು ಇನ್ನೂ ಬೇಕು ಬೇಕು ಅನ್ನುವಾಗಲೇ ಸ್ವಯಂ ನಿವೃತ್ತಿ ಪಡೆದುಕೊಂಡರು. ಇದು ನಮ್ಮ ಜನಪ್ರತಿನಿಧಿಗಳಿಗೆ ಬರ ಬೇಕಾದ ಮೇರು ಗುಣ.
-ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ