ಜಗತ್ತಿನ ಐದನೇ ಅತೀ ದೊಡ್ಡ ಆರ್ಥಿಕತೆಯಾಗಿ ಭಾರತ
2029ರ ಒಳಗೆ ಭಾರತವು ಜಗತ್ತಿನ ಮೂರನೇ ಅತೀ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ. 2014ನೇ ಸಾಲಿಗೆ ಹೋಲಿಸಿದರೆ ದೇಶಕ್ಕೆ ಏಳನೇ ಸ್ಥಾನಗಳಷ್ಟು ಪದೋನ್ನತಿ ಸಿಗಲಿದೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ನ ಆರ್ಥಿಕ ಸಂಶೋಧನ ವಿಭಾಗದ ಅಧ್ಯಯನ ವರದಿ ತಿಳಿಸಿದೆ. ಬ್ರಿಟನನ್ನು ಮೀರಿಸಿ ಭಾರತವು ಜಗತ್ತಿನ 5ನೇ ಅತೀ ದೊಡ್ಡ ಆರ್ಥಿಕತೆ ಎಂಬ ಹೆಗ್ಗಳಿಕೆ ಗಳಿಸಿರುವುದಾಗಿ ’ಬ್ಲೂಮ್ ಬರ್ಗ್’ ವರದ ಮಾಡಿದ ಬೆನ್ನಲ್ಲೇ ಈ ಹೊಸ ವರದಿ ಹೊರಬಿದ್ದಿದೆ. ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಭಾರತದ ಆರ್ಥಿಕತೆಗೆ ಇದೊಂದು ಮಹತ್ವದ ಮೈಲಿಗಲ್ಲು.
ದೇಶದ ಅಗ್ರಮಾನ್ಯ ಬ್ಯಾಂಕ್ ಎಸ್ ಬಿಐ ಮಾಡಿರುವ ಅಂದಾಜಿನ ಪ್ರಕಾರ ಭಾರತ 2027ರ ವೇಳೆಗೆ ಜರ್ಮನಿಯನ್ನ ಕೂಡ ಹಿಂದಕ್ಕೆ ಹಾಕುವ ಸಾಧ್ಯತೆಯಿದೆ, ಜಪಾನ್ ದೇಶವನ್ನ 2029ರ ವೇಳೆಗೆ ಹಿಂದಿಕ್ಕಿ ಜಾಗತಿಕ ಮಟ್ಟದಲ್ಲಿ ಮೂರನೇ ಸ್ಥಾನವನ್ನ ಏರುವ ಸಾಧ್ಯತೆಯಿದೆ.
ತಲಾ ಆದಾಯದಲ್ಲಿ142 ನೇ ಸ್ಥಾನ!
ಒಟ್ಟಾರೆ ಉತ್ಪಾದನೆಯ ಮಟ್ಟದಲ್ಲಿ ಭಾರತವು ಈಗ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಅದು ಸ್ವತಃ ಪ್ರಭಾವಶಾಲಿ ಸಾಧನೆಯಾಗಿದೆ. ಆದರೆ ತಲಾ ಆದಾಯದ ವಿಷಯದಲ್ಲಿ, ಅಂತರಾಷ್ಟ್ರೀಯ ಹಣಕಾಸು ನಿಧಿಯ ಪ್ರಕಾರ ಭಾರತದ ಶ್ರೇಣಿಯು 197 ದೇಶಗಳ ಪಟ್ಟಿಯಲ್ಲಿ 142 ಆಗಿದೆ.
ಇಂಗ್ಲೆಂಡ್ ಜನಸಂಖ್ಯೆ 6.86 ಕೋಟಿ. ಭಾರತದ ಜನಸಂಖ್ಯೆ 140 ಕೋಟಿ ಮೀರಿದೆ. ಆರೂವರೆ ಕೋಟಿ ಜನಸಂಖ್ಯೆಯ ಪುಟಾಣಿ ದೇಶದ ಜಿಡಿಪಿಯನ್ನ ಹಿಂದಿಕ್ಕಿದೆವು ಎಂದು ಹಿಗ್ಗುವಂತಿಲ್ಲ. ಗಾತ್ರದಲ್ಲಿ, ಜನಸಂಖ್ಯೆಯಲ್ಲಿ ನಮಗೆ ಸರಿಸಮನಾಗಿ ನಿಲ್ಲುವ ಚೀನಾದ ಆರ್ಥಿಕತೆ ನಮಗಿಂತ ಆರು ಪಟ್ಟು ದೊಡ್ಡದು. ಭಾರತದ ಆರ್ಥಿಕತೆ 3 ಟ್ರಿಲಿಯನ್ ಮೀರಿದೆ, ಚೀನಾ 18 ಟ್ರಿಲಿಯನ್ ಹಾಗೂ ಅಮೇರಿಕಾ 24 ಟ್ರಿಲಿಯನ್ ಆರ್ಥಿಕತೆಯೊಂದಿಗೆ ಪ್ರಥಮ ಸ್ಥಾನದಲ್ಲಿದೆ.
ಇಡೀ ಜಗತ್ತು ಆರ್ಥಿಕ ಹಿಂಜರಿತದ ಭೀತಿಗೆ ಒಳಗಾಗಿದ್ದರೆ ಭಾರತದ ಆರ್ಥಿಕತೆ ಮಾತ್ರ ಪ್ರಭಲವಾಗಿ ಮುಂದಡಿಯಿಡುತ್ತಿದೆ. ಪ್ರಸಕ್ತ ವಿತ್ತೀಯ ವರ್ಷದಲ್ಲಿ ಒಟ್ಟು ದೇಶೀಯ ಉತ್ಪಾದನೆ ಪ್ರಮಾಣ ಶೇ.6ರಿಂದ ಶೇ.6.5ರ ನಡುವ ಬೆಳವಣಿಗೆ ಸಾಧಿಸುವ ನಿರೀಕ್ಷೆಯಿದೆ ಎಂದು ಅಭಿಪ್ರಾಯಪಡಲಾಗಿದೆ.
ಭಾರತ ಜಿಡಿಪಿಯಲ್ಲಿ ಐದನೇ ಸ್ಥಾನ ಪಡೆದಿರುವುದು ಮಹತ್ಸಾಧನೆಯೆ. ಆದರೆ ತಲಾ ಆದಾಯದಲ್ಲಿ ಹಾಗೂ ಪ್ರಾದೇಶಿಕ ಸಮಾನತೆ ಸಾಧಿಸುವಲ್ಲಿ ಇನ್ನೂ ಹೆಚ್ಚಿನ ಪ್ರಯತ್ನಗಳಾಗಬೇಕು.
ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳ ಮೇಲೆ ’ನಿಗಾ’
ಅಭಿವೃದ್ಧಿ ಸೂಚ್ಯಂಕಗಳಲ್ಲಿ ಹಿಂದುಳಿದಿರುವ ತಾಲೂಕುಗಳನ್ನು ಗುರುತಿಸಿ ’ಅಭಿವೃದ್ಧಿ ಆಕಾಂಕ್ಷಿ ತಾಲೂಕು’ ಯೋಜನೆ ರೂಪಿಸಿರುವ ಕರ್ನಾಟಕ ಸರಕಾರ ಅಲ್ಲಿನ ಪ್ರಗತಿ ಬಗ್ಗೆ ನಿಗಾ ವಹಿಸಲು ತೀರ್ಮಾನಿಸಿರುವುದು ಸ್ವಾಗತಾರ್ಹ ಅಭಿವೃದ್ಧಿ ನಡೆ.
ರಾಜ್ಯದಲ್ಲಿ ಹೊಸದಾಗಿ ರಚನೆಯಾಗಿರುವ ತಾಲೂಕುಗಳೂ ಇದರಡಿ ಸೇರ್ಪಡೆಗೊಂಡಿದ್ದು 92ತಾಲೂಕುಗಳಲ್ಲಿ ಶಿಕ್ಷಣ, 100 ತಾಲೂಕುಗಳಲ್ಲಿ ಆರೋಗ್ಯ ಸೇವೆ, 102ತಾಲೂಕುಗಳಲ್ಲಿ ಮಕ್ಕಳ ಅಪೌಷ್ಟಿಕತೆ ನಿವಾರಿಸಲು ಆದ್ಯತೆ ಮೇರೆಗೆ ಯೋಜನೆ ರೂಪಿಸಲಾಗಿದೆ. ಪ್ರಸಕ್ತ ವರ್ಷ ಈ ತಾಲೂಕುಗಳ ಅಭಿವೃದ್ಧಿಗಾಗಿ ಮೂರು ಸಾವಿರ ಕೋಟಿ ರೂಗಳ ಯೋಜನೆ ಹಾಗೂ ಸಪರ್ಪಕ ಬಳಕೆಗಾಗಿ ಉಸ್ತುವಾರಿ ಸಮಿತಿ ರಚಿಸಲು ನಿರ್ಧರಿಸಲಾಗಿದೆ.
ನೀತಿ ಆಯೋಗದ ಸೂಚ್ಯಂಕ ಅನುಸಾರವೇ ಅಭಿವೃದ್ಧಿ ಆಕಾಂಕ್ಷಿ ತಾಲೂಕುಗಳಿಗೆ ಅಭಿವೃದ್ಧಿಯ ಗುರಿ ಹಾಗೂ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಲಾಗುವುದು.
ನೀತಿ ಆಯೋಗದ ವರದಿ ಪ್ರಕಾರ 2020-21ರಲ್ಲಿ ಕರ್ನಾಟಕ ಸುಸ್ಥಿರ ಅಭಿವೃದ್ಧಿ ಮಾನದಂಡದಲ್ಲಿ 72 ಅಂಕ ಗಳಿಸಿ, ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಕೇರಳ 75 ಅಂಕ ಗಳಿಸಿ ಮೊದಲ ಸ್ಥಾನದಲ್ಲಿದ್ದರೆ, ಹಿಮಾಚಲ ಪ್ರದೇಶ ಹಾಗೂ ತಮಿಳುನಾಡು ೭೪ ಅಂಕ ಗಳಿಸಿ ದ್ವಿತೀಯ ಸ್ಥಾನದಲ್ಲಿದೆ.
ನಮ್ಮ ರಾಜ್ಯವು ಉನ್ನತ ಶ್ರೇಣಿಯನ್ನು ಪಡೆಯಲು ಬಡತನ ನಿರ್ಮೂಲನೆ, ಹಸಿವುಮುಕ್ತ, ಉತ್ತಮ ಆರೋಗ್ಯ,ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ ಗುರಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ.
ಕೃಷಿಯಲ್ಲಿ 101ತಾಲೂಕು, ಪೌಷ್ಟಿಕತೆಯಲ್ಲಿ 203 ತಾಲೂಕು, ಆರೋಗ್ಯದಲ್ಲಿ 100 ತಾಲೂಕು, ಶಿಕ್ಷಣದಲ್ಲಿ 93 ತಾಲೂಕು, ಮೂಲ ಸೌಕರ್ಯದಲ್ಲಿ 81 ತಾಲೂಕುಗಳು ರಾಜ್ಯದ ಸರಾಸರಿಗಿಂತ ಕಡಿಮೆ ಇರುವ ತಾಲೂಕುಗಳು ಎಂದು ಗುರುತಿಸಲಾಗಿದೆ.
ಸರಕಾರವು 2000ನೇ ಸಾಲಿನಲ್ಲಿ ಪ್ರಾದೇಶಿಕ ಅಸಮತೋಲನೆ ನಿವಾರಣೆ ಬಗ್ಗೆ ಅಧ್ಯಯನ ನಡೆಸಲು ರಚಿಸಿದ್ದ ಡಾ.ಡಿ.ಎಂ ನಂಜುಂಡಪ್ಪ ಸಮಿತಿಯ ವರದಿಯ ಪ್ರಕಾರ 175 ತಾಲೂಕುಗಳ ಪೈಕಿ 114 ತಾಲೂಕು ಹಿಂದುಳಿದ, 61 ಅಭಿವೃದ್ಧಿ ಹೊಂದಿದ ತಾಲೂಕು ಎಂದು ವರ್ಗೀಕರಣ ಮಾಡಿತ್ತು. 114 ಹಿಂದುಳಿದ ತಾಲೂಕುಗಳ ಪೈಕಿ 39 ತಾಲೂಕು ಅತ್ಯಂತ ಹಿಂದುಳಿದ, 40 ತಾಲೂಕು ಅತಿ ಹಿಂದುಳಿದ ಹಾಗೂ 35 ತಾಲೂಕು ಹಿಂದುಳಿದ ತಾಲೂಕು ಎಂದು ವರ್ಗೀಕರಣ ಮಾಡಲಾಗಿತ್ತು.
ಜಿಲ್ಲೆಗಳ ನಡುವಿನ ಆದಾಯದ ಅಂತರ ಹೆಚ್ಚಳ
ಇತ್ತೀಚೆಗೆ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಬಿಡುಗಡೆ ಮಾಡಿರುವ ವರದಿ ಪ್ರಕಾರ 2021-22 ನೇ ಸಾಲಿನಲ್ಲಿ ರಾಜ್ಯದ ನಿವ್ವಳ ತಲಾ ಆದಾಯವು ರೂ.265623 ಆಗಿದ್ದು ಇದು 2023-24 ನೇ ಸಾಲಿನಲ್ಲಿ ಶೇ 13.6 ರಷ್ಟು ಹೆಚ್ಚಳದೊಂದಿಗೆ ರೂ.301673 ಗಳಷ್ಟಾಗುವುದೆಂದ ಅಂದಾಜಿಸಲಾಗಿದೆ. ರಾಜ್ಯದ ತಲಾ ಆದಾಯವು ರಾಷ್ಟ್ರೀಯ ತಲಾ ಆದಾಯಕ್ಕಿಂತ ಹೆಚ್ಚಿದೆ. ತಲಾ ಆದಾಯದಲ್ಲಿ ಕರ್ನಾಟಕವು ದೆಹಲಿ, ತೆಲಂಗಾಣ ಮತ್ತು ಹರಿಯಾಣದ ನಂತರ ನಾಲ್ಕನೇ ಸ್ಥಾನದಲ್ಲಿದೆ.
ಬೆಂಗಳೂರು ನಗರ ರೂ.621131 ತಲಾ ಆದಾಯದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ದಕ್ಷಿಣ ಕನ್ನಡ (ರೂ. 443057) ಹಾಗೂ ಉಡುಪಿ (ರೂ.370834)ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿದ್ದರೆ ಕೊನೆಯ ಐದು ಸ್ಥಾನದಲ್ಲಿ ಯಾದಗಿರಿ (ರೂ.139838), ಕೊಪ್ಪಳ(ರೂ.139838), ಬೆಳಗಾವಿ (ರೂ.137644) ಬೀದರ್ (ರೂ.133935) ಹಾಗೂ ಕಲಬುರಗಿ (ರೂ.124998) ಜಿಲ್ಲೆಗಳಿವೆ. ನಮ್ಮ ರಾಜ್ಯದ ಅರ್ಧದಷ್ಟು ಜಿಲ್ಲೆಗಳಲ್ಲಿ ಬೆಂಗಳೂರನ ತಲಾ ಆದಾಯದ ಶೇ.25 ರಷ್ಟನ್ನೂ ಹೊಂದಿಲ್ಲದಿರುವುದು ಆಘಾತಕಾರಿ ಅಂಶ.
ಬೆಳೆಯುತ್ತಿರುವ ಅಂತರ್ ಜಿಲ್ಲಾ ವ್ಯತ್ಯಾಸವು ರಾಜ್ಯದ ಆರ್ಥಿಕ ಅಭಿವೃದ್ದಿಯ ಪ್ರಕ್ರಿಯೆಯಲ್ಲಿ ವಿಶಾಲ ಅಂತರ-ಪ್ರಾದೇಶಕ ಅಸಮಾನತೆಯ ಮೂಲವಾಗಿದೆ. ಉತ್ತರ ಕರ್ನಾಟಕ ಪ್ರದೇಶದ ಬೆಳಗಾವಿ ಮತ್ತು ಬೀದರ್ ವಿಭಾಗದ ತಲಾ ಆದಾಯವು ಬೆಂಗಳೂರು ವಿಭಾಗದ ಅರ್ಧಕ್ಕಿಂತ ಕಡಿಮ ಇರುವುದು ಆಘಾತಕಾರಿ ಅಂಶ. ಕಲಬುರಗಿ ವಿಭಾಗದಲ್ಲಿ ಬರುವ ಜೆಲ್ಲೆಗಳಾದ ಬಳ್ಳಾರಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿಯ ತಲಾ ಆದಾಯವು ಕೊನೆಯ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ಬೆಳಗಾವಿ ಮತ್ತು ಮೈಸೂರು ವಿಭಾಗಗಳಿವೆ. ತಲಾ ಆದಾಯದಲ್ಲಿ ಕೆಳಮಟ್ಟದಲ್ಲಿರುವ ವಿಭಾಗಗಳಲ್ಲಿ ಕೈಗಾರಿಕೆ ಮತ್ತು ಸೇವಾ ವಲಯದ ಉದ್ಯಮಗಳು ಕಡಿಮೆ ಇರುವುದು ಮುಖ್ಯ ಕಾರಣವಾಗಿದೆ. ಈ ಪ್ರದೇಶಗಳಲ್ಲಿ ಖಾಸಗಿ ಉದ್ಯಮಗಳನ್ನು ಪ್ರೋತ್ಸಾಹಿಸಬೇಕಾಗಿದೆ.
ಅಭಿವೃದ್ಧಿ ಮತ್ತು ಸಮಾನತೆ
ಅಭಿವೃದ್ಧಿ ಪ್ರಕ್ರಿಯೆ ಎಂಬುದು ಉತ್ತಮ ಬದುಕಿಗೆ ಹಾಗೂ ಜನರ ಕಾರ್ಯನಿರ್ವಹಣೆಗೆ ಇರುವ ಭೌತಿಕ ಸೌಕರ್ಯಗಳನ್ನು ಹಾಗೂ ಉತ್ಪಾದಕತೆಯನ್ನು ಹೆಚ್ಚಿಸಿಕೊಳ್ಳಲು ಹೊಸ ಕೌಶಲ್ಯಗಳನ್ನು ಪಡೆದುಕೊಂಡು ಆದಾಯದ ಹೆಚ್ಚಳವನ್ನು ಸಾಧಿಸುವುದಾಗಿದೆ. ಅಮೇರಿಕಾ, ಬ್ರಿಟನ್, ಜಪಾನ್ ದೇಶಗಳಲ್ಲಿ ಹೆಚ್ಚಿನ ಎಲ್ಲಾ ಚಟುವಟಿಕೆಗಳು ಮುಖ್ಯವಾಹಿನಿಯ ಆರ್ಥಿಕ ಲೆಕ್ಕಾಚಾರದಲ್ಲಿ ಬರುತ್ತವೆ. ಇದರಿಂದಾಗಿ ಆ ದೇಶಗಳ ಜಿಡಿಪಿ ಲೆಕ್ಕಾಚಾರಗಳು ಸದೃಡವಾಗಿವೆ. ಆಂತರಿಕ ಖರೀದಿ ಶಕ್ತಿಯ ಲೆಕ್ಕಾಚಾರದಲ್ಲಿ ನಾವು ಶಕ್ತಿಶಾಲಿ ದೇಶವೇ ಏಕೆಂದರೆ ಅಲ್ಲಿ ಒಂದು ಡಾಲರ್ ಕೊಂಡುಕೊಳ್ಳಲಾಗದ ವಸ್ತುಗಳನ್ನು ಭಾರತದಲ್ಲಿ ರೂ.80 ಕೊಂಡುಕೊಳ್ಳಬಲ್ಲುದು. ಜಿಡಿಪಿ ಹಾಗೂ ತಲಾ ಆದಾಯಗಳ ಲೆಕ್ಕಾಚಾರಗಳು ಅಭಿವೃದ್ಧಿಯ ಪ್ರಕ್ರಿಯೆಯ ಮಾರ್ಗದರ್ಶಿಯಂತೂ ಸತ್ಯ. ಆರ್ಥಿಕ ಅಭಿವೃದ್ಧಿಯಲ್ಲಿ ಸಮಾನತೆಯನ್ನು ಸಾಧಿಸದ ಹೊರತು ಒಳಗೊಳ್ಳುವ ಸುಸ್ಥಿರ ಅಭಿವೃದ್ಧಿಯಂತೂ ಕಷ್ಟ ಸಾಧ್ಯ. ಅತೀ ದೊಡ್ಡ ಆರ್ಥಿಕತೆಯತ್ತ ಹೆಜ್ಜೆಯಿಡುವುದರೊಂದಿಗೆ ಪ್ರಾದೇಶಿಕ ಸಮಾನತೆಯನ್ನು ಸಾಧಿಸುವಲ್ಲಿ ಗಮನ ಹರಿಸೋಣ.
-ಡಾ.ಎ.ಜಯ ಕುಮಾರ ಶೆಟ್ಟಿ
ನಿವೃತ್ತ ಪ್ರಾಂಶುಪಾಲರು
ಶ್ರೀ.ಧ.ಮಂ. ಕಾಲೇಜು (ಸ್ವಾಯತ್ತ), ಉಜಿರೆ
9448154001
ajkshetty@sdmcujire.in
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ