ಪುಟ್ಟ ತಂಗಿ ತನ್ನ ಅಣ್ಣನನ್ನು ಕೇಳುತ್ತಾಳೆ.
ಅಣ್ಣ ‘ಪ್ರೀತಿ’ ಅಂದರೆ ಎನು? ಅಣ್ಣ ನಿಂದ ಮುದ್ದಾದ ಉತ್ತರ... "ನೀನು ನನ್ನ ಬ್ಯಾಗ್ ನಿಂದ ದಿನ ಚಾಕಲೇಟ್ ಕದಿಯುತ್ತೀಯಾ ಆದರು ನಾನು ದಿನ ಪುನಃ ಪುನಃ ಅಲ್ಲೆ ಚಾಕಲೇಟ್ ಇಡುತ್ತಿನಿ, ಅದೇ ಪ್ರೀತಿ".
ಹೀಗೆ ಸಾವಿರಾರು ಸಂಬಂಧಗಳಿಗಿಂತ ಹೆಚ್ಚಾದದ್ದು ಈ ಅಣ್ಣ ತಂಗಿಯ ಸಂಬಂಧ. ಅದಕ್ಕೆ ಕೊನೆಯಿಲ್ಲ, ಆದಿ ಅಂತ್ಯದ ಮಾತಿಲ್ಲ, ಅಣ್ಣ-ತಂಗಿಯ ಸಂಬಂಧದ ಈ ಸಂಭ್ರಮಕ್ಕೆ ಅಳಿವಿಲ್ಲ. ಈ ಬಾಂಧವ್ಯಕ್ಕೆ ನೀಡುವ ಗೌರವ, ಆದ್ಯತೆ, ಮರ್ಯಾದೆ ಅಂತಿಂತಹದಲ್ಲ.
ತಂಗಿಗೆ ಸಣ್ಣ ಜ್ವರ ಬಂದರೂ ಚಡಪಡಿಸುವ ಅಣ್ಣ, ಸದಾ ಅಣ್ಣನ ಏಳಿಗೆಯನ್ನು ಬಯಸುವ ತಂಗಿ – ಇದೊಂದು ಅಪರೂಪದ ಅವಿನಾಬಾವ ಸಂಬಂದ. ಪ್ರತಿಯೊಬ್ಬ ತಂಗಿಗೆ ಅಣ್ಣ ಹೇಳುವ ಮಾತು ಕೇವಲ ಮಾತಲ್ಲ, ಅದು ಭರವಸೆಯ ಮೊದಲ ಮೆಟ್ಟಿಲು. ಆ ಮಾತು ಸಂಬಂಧವನ್ನು ಕಾಯುವ ಕೀಲಿಕೈ. ಹಾಗೆಯೇ ತಂಗಿ ಹೇಳುವ ನುಡಿ ಅದು ಕೇವಲ ನುಡಿಯಲ್ಲ, ಅದು ಮಮತೆಯ ಕುಲುಮೆ. ಹೀಗೆಯೇ ತಂಗಿ ಯಾರ ಮುಂದೆಯೂ ಹೇಳಲಾಗದ ತನ್ನ ನೋವನ್ನು ಅಣ್ಣನ ಮುಂದೆ ಹೇಳಿಕೊಳ್ಳುವಳು.ಯಾಕೆಂದರೆ, ಬೇರೆ ಯಾವ ಸಂಬಂಧವೂ ನೀಡದ ಭರವಸೆ ಸಹೋದರತ್ವ ನೀಡುವುದು. ಅಣ್ಣನ ಪ್ರೀತಿ ಸಾರ್ವಕಾಲಿಕವಾದುದು. ಸತ್ಯ, ಗೌರವ, ಸಮ್ಮಾನಕ್ಕೆ ಹಾದಿಯಾದುದು.
ಅಣ್ಣನ ಪ್ರೀತಿಗೆ ಬೆಲೆ ಕಟ್ಟಲಾಗದು, ಅಕ್ಷರ ರೂಪದಲ್ಲಿ ಅದನ್ನು ಹಿಡಿದಿಡಲು ಆಗದು. ತಂಗಿಯ ಪಾಲಿಗೆ ಅಣ್ಣ ಎಲ್ಲವೂ ಹೌದು. ಅವಳ ನೋವಿಗೆ ಮಿಡಿಯುತ್ತಾನೆ, ಕಣ್ಣೀರಿಗೆ ಬೆರಳುಗಳಾಗುತ್ತಾನೆ. ಸುಖದಲ್ಲಿ ನಕ್ಕು, ದುಃಖದಲ್ಲಿ ಸಾಂತ್ವನದ ನುಡಿಗಳಾಗುತ್ತಾನೆ. ಅಣ್ಣ-ತಂಗಿ ದೂರವಾದಾಗ, ಇನ್ನೊಬ್ಬರ ಅನುಪಸ್ಥಿತಿಯು ಒಬ್ಬರು ಇನ್ನೊಬ್ಬರ ಮೇಲಿಟ್ಟಿರುವ ಪ್ರೀತಿಯನ್ನು ತಾನಾಗಿಯೇ ಹೊರಹೊಮ್ಮಿಸುತ್ತದೆ. ನೋವಿನಲ್ಲೂ-ನಲಿವಿನಲ್ಲೂ ತನ್ನ ಅಣ್ಣ ತನ್ನ ಜೊತೆಯಲ್ಲಿ ಇರಬೇಕೆಂದು ತಂಗಿ ಬಯಸುತ್ತಾಳೆ. ಅಣ್ಣ ತನ್ನ ತಂಗಿಗೆ ಯಾವ ಕಷ್ಟಗಳೂ ಬಾರದಂತೆ ಕಾಪಾಡಬೇಕೆಂದು, ಅವಳನ್ನು ಕಣ್ಣರೆಪ್ಪೆಯಂತೆ ಕಾಯಲು ಇಚ್ಚಿಸುತ್ತಾನೆ. ಕೆಲವೊಮ್ಮೆ ಮನಸ್ತಾಪಗಳು ಬರುವುದು ಸಹಜ, ಆದರೆ ಅದನ್ನು ಮೀರಿ ನಿಂತಾಗಲೇ ಈ ಸಂಬಂಧದ ಸವಿಯನ್ನು ಸವಿಯಲು ಸಾದ್ಯ.
ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಕುಟುಂಬದ ಬಗ್ಗೆ ಪ್ರೀತಿ-ಹೆಮ್ಮೆ ಇರುತ್ತದೆ. ಅದರಲ್ಲೂ ಒಡಹುಟ್ಟಿದವರ ನಡುವೆ ಇರುವ ಪ್ರೀತಿ-ಆತ್ಮೀಯತೆ ಬಹಳ ಹೆಚ್ಚಾಗಿಯೇ ಇರುತ್ತದೆ. ಇಂತಹ ಒಂದು ಅಪರೂಪದ ಅನುಬಂಧವೇ ಅಣ್ಣ-ತಂಗಿ ಸಂಬಂಧ. ಬಾಲ್ಯದಲ್ಲಿ ಅಣ್ಣ ಮತ್ತು ತಂಗಿಯ ಕಿತ್ತಾಟವನ್ನು ಕಂಡ ಹೆತ್ತವರಿಗೆ ಇವರೆಂತ ಅಣ್ಣ-ತಂಗಿ ಎನಿಸುವುದು ಸಹಜ. ಆದರೆ ಬರುಬರುತ್ತಾ ಕಡಿಮೆಯಾಗುವ ಈ ಕಿತ್ತಾಟಗಳು, ಅಣ್ಣ-ತಂಗಿಯ ಬಾಂದವ್ಯದ ಸೂಕ್ಶ್ಮತೆ ಮತ್ತು ಸುಂದರತೆಯನ್ನು ಅವರಿಬ್ಬರಿಗೂ ಅರಿವು ಮಾಡಿಸುತ್ತದೆ. ಇಷ್ಟೊಂದು ಭಾವನೆಗಳನ್ನು ಹೊಂದಿರುವ ಅಣ್ಣ ತಂಗಿಯ ಭಾಂದವ್ಯ ತುಂಬಾ ಪವಿತ್ರವಾದದ್ದು. ಇದೇ ರೀತಿ ತನ್ನ ಬಾಂಧವ್ಯದ ಸಂಕೇತವಾಗಿ ಏನಾದರೂ ಉಡುಗೊರೆ ಕೊಡುವ ಅಣ್ಣಂದಿರು ಕಡಿಮೆ ಏನೂ ಇಲ್ಲಾ ಆದರೆ ಇಲ್ಲೊಬ್ಬ ಅಣ್ಣ ತನ್ನ ತಂಗಿಗೆ ನೀಡಿದ ಉಡುಗೊರೆ ಒಂದು ರೀತಿ ಅದ್ಭುತ ಉಡುಗೊರೆ. ತನ್ನ ತಂಗಿಗೆ ದೇವಸ್ಥಾನ ಕಟ್ಟಿಸಿದ್ದಾನೆ. ತಂಗಿಗಾಗಿ ದೇವಸ್ಥಾನ ಕಟ್ಟಲು ಕಾರಣ ಏನು ಗೊತ್ತಾ. ನಂಗೆ ತುಂಬಾ ಇಷ್ಟವಾದ ಒಂದು ಅಣ್ಣ ತಂಗಿ ಕಥೆ ಹೇಳ್ತಿನಿ ಕೇಳಿ.
ನಾವು ಹಲವು ಕಡೆ ಹೆಂಡತಿ ಇಲ್ಲವೇ ಪ್ರೇಯಸಿಗೋಸ್ಕರ ಸ್ಮಾರಕಗಳು ದೇವಸ್ಥಾನಗಳು ಕಟ್ಟಿರುವುದನ್ನ ನೋಡಿರುತ್ತೇವೆ. ಆದರೆ ತಂಗಿಗೆ ದೇವಸ್ಥಾನ ಕಟ್ಟಿರುವುದನ್ನು ಎಲ್ಲಿಯೂ ನೋಡಲು ಸಾಧ್ಯವೇ ಇಲ್ಲ. ಆದರೆ ಇಲ್ಲೊಬ್ಬ ಅಣ್ಣ ತನ್ನ ಪ್ರೀತಿಯ ತಂಗಿಗಾಗಿ ಒಂದು ದೇವಸ್ಥಾನವನ್ನು ಕಟ್ಟಿ ಜಗತ್ತಿನಲ್ಲೇ ಮೊದಲ ಬಾರಿಗೆ ತಂಗಿಗಾಗಿ ದೇವಸ್ಥಾನ ಕಟ್ಟಿಸಿದ ಅಣ್ಣ ಎಂದು ಹೆಸರು ಮಾಡಿದ್ದಾನೆ. ಅಷ್ಟಕ್ಕೂ ಈ ಅಣ್ಣ ತಂಗಿಗೋಸ್ಕರ ದೇವಸ್ಥಾನ ಕಟ್ಟಿಸಲು ಕಾರಣ ಏನು ಗೊತ್ತಾ. ಈ ಘಟನೆ ನಡೆದಿರುವುದು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ. ತಂಗಿಗಾಗಿ ದೇವಸ್ಥಾನ ಕಟ್ಟಿಸಿದ ವ್ಯಕ್ತಿಯ ಹೆಸರು ಶಿವ ಪ್ರಸಾದ್ ಮತ್ತು ಆತನ ತಂಗಿಯ ಹೆಸರು ಸುಬ್ಬಲಕ್ಷ್ಮಿ. ಬಿಎ ಓದಿದ್ದ ಶಿವ ಪ್ರಸಾದ್ ಅವರ ತಂಗಿ ಸುಬ್ಬಲಕ್ಷ್ಮಿ ಅರಣ್ಯ ಅಧಿಕಾರಿಯಾಗಿ ಕೆಲಸಕ್ಕೆ ಸೇರಿಕೊಂಡಿದ್ದಳು.
ಪ್ರತಿದಿನ ರೈಲಿನಲ್ಲಿ ಆಫಿಸ್ ಗೆ ಹೋಗುತ್ತಿದ್ದ ಸುಬ್ಬಲಕ್ಷ್ಮಿ ಒಂದು ದಿನ ಅಣ್ಣನ ಜೊತೆಗೆ ಆಫಿಸ್ ಗೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ವ್ಯಾನ್ ಒಂದು ಅವರು ಹೋಗುತಿದ್ದ ಬೈಕ್ಗೆ ಗುದ್ದಿ ಇದರ ಪರಿಣಾಮವಾಗಿ ಅಣ್ಣ ತಂಗಿ ಇಬ್ಬರು ಕೆಳಗೆ ಬೀಳುತ್ತಾರೆ. ಸುಬ್ಬಲಕ್ಷ್ಮಿ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ತಂಗಿ ಸುಬ್ಬಲಕ್ಷ್ಮಿ ಅಣ್ಣನ ಮಡಿಲಲ್ಲೆ ಪ್ರಾಣ ಬಿಡುತ್ತಾಳೆ. ತನ್ನ ಕೈಯಿಂದ ಮುದ್ದಾಗಿ ಸಾಕಿದ ತಂಗಿ ತನ್ನ ಮಡಿಲಲ್ಲಿ ಪ್ರಾಣ ಬಿಟ್ಟಳು ಅನ್ನೋದು ಶಿವ ಪ್ರಸಾದ್ ಅವರಿಗೆ ಎಲ್ಲಿಲ್ಲದ ನೋವು ತರಿಸಿತು. ಈ ಕಾರಣಕ್ಕಾಗಿ ಬಡವನಾದರು ಸಹ ಯಾರೊಬ್ಬರ ಹತ್ತಿರ ಒಂದು ರೂಪಾಯಿ ಕೂಡ ಪಡೆಯದೆ ತನ್ನ ತಂಗಿಗೆ ದೇವಸ್ಥಾನ ಕಟ್ಟಿಸಿ ಪ್ರತಿದಿನ ಪೂಜೆ ಮಾಡುತ್ತಿದ್ದಾನೆ ಈ ಅಣ್ಣ ಶಿವಪ್ರಸಾದ್. ಪ್ರತಿದಿನ ಪೂಜೆ ಮಾಡುವ ಮೂಲಕ ತನ್ನ ತಂಗಿಯನ್ನು ವಿಗ್ರಹದ ರೂಪದಲ್ಲಿ ಕಾಣುತ್ತೇನೆ ಎಂದು ಹೇಳುತ್ತಿದ್ದಾನೆ ಈ ಅಣ್ಣ.
ಅಣ್ಣ ಮತ್ತು ತಂಗಿಯ ಸಂಬಂಧವೆಂದರೆ ಅದು ಅಪ್ಪ ಮಗಳ ಸಂಬಂಧವಿದ್ದಂತೆ. ತಂದೆ ತಾಯಿಯನ್ನು ಬಿಟ್ಟು ನಮ್ಮನ್ನು ಈ ಪ್ರಪಂಚದಲ್ಲಿ ಹೆಚ್ಚು ಪ್ರೀತಿಸುವ ವ್ಯಕ್ತಿ ಅಂದರೆ ಅದು ಅಣ್ಣ, ಇಲ್ಲವೆಂದರೆ ತಂಗಿ ಆಗಿರುತ್ತಾಳೆ. ಜೀವನದ ಜಂಜಾಟದಲ್ಲಿ ಆ ಬಾಂಧವ್ಯ ಮರೆಯಾಗದಿರಲಿ.
-ಸರಸ್ವತಿ ವಿಶ್ವನಾಥ್ ಪಾಟೀಲ್, ಕಾರಟಗಿ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ