ಮಂಗಳೂರು: ನಗರದ ಕ್ರಿಯಾಶೀಲ ರಂಗಸಂಸ್ಥೆ ಕಲಾಭಿ ಥಿಯೇಟರ್ ವತಿಯಿಂದ ಆಯೋಜಿಸಲಾದ ಮಾಲೆಮಾರ್ ನ ಕಲಾಭಿ ಥಿಯೇಟರ್ ನಲ್ಲಿ ಶಿಬಿರಾರ್ಥಿಗಳು ನಡೆಸಿಕೊಟ್ಟ "ಪುರ್ಸನ ಪುಗ್ಗೆ" ಗೊಂಬೆಯಾಟ ಯಶಸ್ವಿಯಾಗಿ ಪ್ರದರ್ಶನಗೊಂಡಿತು.
ಕಲಾಭಿ ಥಿಯೇಟರ್ ನ ಕಾರ್ಯದರ್ಶಿ ಉಜ್ವಲ್ ಯು.ವಿ. ಮಾತನಾಡಿ, "ಕಲೆಗಾಗಿ ಕಲಾವಿದ ಎಂಬ ಆಶಯದಲ್ಲಿ ಇದನ್ನು ಮಾಡಲಾಗಿದ್ದು ಇದರ ಹಿಂದೆ ಎಲ್ಲಾ ಶಿಬಿರಾರ್ಥಿಗಳ ಕಠಿಣ ಪರಿಶ್ರಮ ಅಡಗಿದೆ" ಎಂದು ಹೇಳಿದರು.
ಬುನ್ರಾಕು ಗೊಂಬೆಯಾಟ ಕಲಿಕಾ ಕಾರ್ಯಾಗಾರ 20 ದಿನಗಳ ಕಾಲ ನಡೆದಿದ್ದು, ಕೊನೆಯ ದಿನ ಈ ಪ್ರದರ್ಶನ ಏರ್ಪಡಿಸಲಾಗಿತ್ತು. ಕಾರ್ಯಾಗಾರದಲ್ಲಿ ಸಿದ್ಧಪಡಿಸಲಾದ ಗೊಂಬೆಗಳು ವೈದ್ಯಕೀಯ ಕ್ಷೇತ್ರದಲ್ಲಿ ಬರುವ ಅಂಗರಚನಾ ಶಾಸ್ತ್ರದ ಸಿದ್ದಾಂತಗಳ ಆಧಾರದಲ್ಲಿ ರೂಪುಗೊಂಡಿದ್ದು, ನೀನಾಸಂ ಪದವೀಧರರು ಮತ್ತು ಇತರ ಆಸಕ್ತ ಕಲಾವಿದರಾದ ಗಣೇಶ್ ಕೆ.ವಿ., ಚೇತನ್ ಕೊಪ್ಪ, ಅಕ್ಷತಾ, ಕಾರ್ತಿಕ್ ಸನಿಲ್, ಭುವನ್ ಮಣಿಪಾಲ, ಅಭಿಷೇಕ್, ಅವಿನಾಶ್ ರೈ, ಮೊದಲಾದವರು ಈ ಕಲೆಯನ್ನು ಕಲಿತು ತಮ್ಮ ಅದ್ಭುತ ಕೈಚಳಕದ ಮೂಲಕ ಗೊಂಬೆಗಳ ಅಭಿನಯಕ್ಕೆ ಜೀವ ತುಂಬಿದರು.
ಕಾರ್ಯಾಗಾರದ ನಿರ್ದೇಶಕರಾದ ಶ್ರವಣ್ ಹೆಗ್ಗೋಡು ಅವರ ಪರಿಶ್ರಮ, ಪ್ರತಿಭೆ ಈ ಸಂದರ್ಭದಲ್ಲಿ ಗಮನ ಸೆಳೆಯಿತು. ಮಂಗಳೂರಿನಲ್ಲಿ ಹೊಸ ಪ್ರಯೋಗವೆಂಬಂತೆ ಮೂಡಿಬಂದ ಈ ಗೊಂಬೆಯಾಟವು ಬೆನ್ನು ಬೆನ್ನಿಗೆ ಎರಡು ಪ್ರದರ್ಶನಗಳನ್ನು ಕಾಣುವ ಮೂಲಕ ಬೆರಗು ಮೂಡಿಸಿತು. ವಯಸ್ಸಿನ ಭೇದವಿಲ್ಲದೆ ಹಿರಿಯ ಕಿರಿಯ ಪ್ರೇಕ್ಷಕರೆಲ್ಲರೂ ಈ ಕಲಾವಿದರ ಪ್ರತಿಭೆಯನ್ನು ಮೆಚ್ಚಿ ತಲೆದೂಗಿದರು.
ಕಾರ್ಯಕ್ರಮದಲ್ಲಿ ಕಲಾಭಿಯ ಕಾರ್ಯಾಧ್ಯಕ್ಷೆ ಡಾ. ಮೀನಾಕ್ಷಿ ರಾಮಚಂದ್ರ, ಅತ್ರಿ ಬುಕ್ ಸೆಂಟರ್ ನ ಅಶೋಕ್ ವರ್ಧನ್ ದಂಪತಿ, ಸನಾತನ ನಾಟ್ಯಾಲಯದ ಚಂದ್ರಶೇಖರ್ ಶೆಟ್ಟಿ, ಲಲಿತಕಲಾ ಆರ್ಟ್ಸ್ ನ ಧನ್ ಪಾಲ್, ಕಲಾಭಿಯ ಗೌರವಾಧ್ಯಕ್ಷ ಸುರೇಶ್ ಬಟ್ಟೇಕಳ್ ವರ್ಕಾಡಿ, ಉಪಾಧ್ಯಕ್ಷ ಸುಮನ್ ಕದ್ರಿ, ಜೊತೆ ಕಾರ್ಯದರ್ಶಿ ರವಿರಾಜ್ ಎಸ್, ಕಿರಣ್ ಕಲಾಂಜಲಿ ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ