ಕಾರ್ಕಳ : 'ಭಾರತ ದೇಶದ ಪ್ರತಿಷ್ಟಿತ ವಿದ್ಯಾ ಸಂಸ್ಥೆಗಳಲ್ಲೊಂದಾಗಿರುವ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡು ಭಾರತ ಹಾಗೂ ಜಪಾನ್ ದೇಶಗಳ ಸಾಂಸ್ಕೃತಿಕ, ಜಾಗತಿಕ, ಆಹಾರ ಪದ್ದತಿ ಮುಂತಾದ ವಿಷಯಗಳ ಬಗೆಗೆ ಪರಸ್ಪರ ಮಾಹಿತಿ ವಿನಿಮಯವಾಗುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.
ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ನಾವು ಸಾಗಲು ಬೇಕಾಗಿರುವ ಜ್ಞಾನ ಸಂಗ್ರಹದ ಕಾರ್ಯ ಸದಾ ನಡೆಯಬೇಕಿದೆ' ಎಂದು ಬೆಂಗಳೂರಿನಲ್ಲಿ ನೇಮಿಸಲ್ಪಟ್ಟಿರುವ ಜಪಾನ್ ಕೌನ್ಸುಲ್ ಜನರಲ್ ತ್ಸುತೊಮೊ ನಕನೆ ಅಭಿಪ್ರಾಯಪಟ್ಟರು.
ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸ್ಥಾಪಿಸಲಾಗಿರುವ 'ನಿಟ್ಟೆ ಟೆಕ್ನೋ ಕಲ್ಚುರಲ್ ಸೆಂಟರ್'ನ್ನು ಅವರು ಮಾ.೨ರಂದು ಗಣ್ಯರ ಸಮ್ಮುಖದಲ್ಲಿ ಉದ್ಘಾಟಿಸಿ ಮಾತನಾಡಿದರು.
ಜಪಾನ್ ದೇಶದಲ್ಲಿ ಅನುಸರಿಸಲಾಗುತ್ತಿರುವ ತಾಂತ್ರಿಕ ಶಿಕ್ಷಣಪದ್ದತಿಯನ್ನು ಹಾಗೂ ಅಲ್ಲಿ ದೊರೆಯುವ ಇಂಟರ್ನ್ ಶಿಪ್ ಹಾಗೂ ಉದ್ಯೋಗಾವಕಾಶಗಳ ಬಗೆಗೆ ಅವರು ವಿವರಿಸಿದರು.
ಗೌರವ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಪ್ರೊ-ಚಾನ್ಸೆಲರ್ ಡಾ. ಶಾಂತರಾಮ್ ಶೆಟ್ಟಿ ಅವರು ಮಾತನಾಡಿ ಜಪಾನ್ ದೇಶದ ಸಂಸ್ಥೆಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆದು ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರಬೇಕಿದೆ ಎಂದರು.
ಇನ್ನೋರ್ವ ಗೌರವ ಅತಿಥಿ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ಅವರು ಮಾತನಾಡಿ ಜಪಾನ್ ದೇಶದ ವಿವಿಧ ಅಭಿವೃದ್ದಿ ಕಾರ್ಯದ ಬಗೆಗೆ ನಾವು ತಿಳಿಯುವುದರೊಂದಿಗೆ ಅವರ ಶಿಸ್ತಿನ ಜೀವನವನ್ನೂ ನಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಪಾನ್ ಕೌನ್ಸುಲ್ ಜನರಲ್ ತ್ಸುತೊಮೊ ನಕನೆ ಅವರ ಸಲಹೆಗಾರ ಕುಟಿನ್ಹಡಾಲ್ವಿನ್ ಅವರು ಮಾತನಾಡಿ ಭಾರತ ಹಾಗೂ ಜಪಾನ್ನ ಸಾಂಸ್ಕೃತಿಕ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ಶ್ರೀಮಂತಿಕೆ ವಿನಿಮಯಕ್ಕೆ ಉತ್ತಮ ವಿಷಯಗಳಾಗಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಶ್ರೀ ಎನ್. ವಿನಯಹೆಗ್ಡೆ ಅವರು 'ಇಂತಹ ಸೆಂಟರ್ ಗಳು ನಮ್ಮ ಸಂಸ್ಥೆಯಲ್ಲಿ ಸ್ಥಾಪಿಸಲಾಗಿರುವುದರಿಂದ ವಿದ್ಯಾರ್ಥಿಗಳಿಗೆ ತಮ್ಮ ಸಾಂಸ್ಕೃತಿಕ ಜ್ಞಾನ, ಜಪಾನ್ ಭಾಷಾಜ್ಞಾನ ಹಾಗೂ ತಂತ್ರಜ್ಞಾನದ ಬಗೆಗಿನ ಕೌಶಲ್ಯಗಳನ್ನು ವೃದ್ದಿಸಲು ಉತ್ತಮ ವೇದಿಕೆಯಾಗಲಿದೆ. ಜಪಾನ್ ದೇಶದ ರಾಯಭಾರಿಯಾಗಿರುವ ಜಪಾನ್ ಕೌನ್ಸುಲ್ ಜನರಲ್ ತ್ಸುತೊಮೊ ನಕನೆ ಅವರೊಂದಿಗಿನ ಒಡನಾಟ ಹಲವಾರು ವಿಚಾರಗಳ ಅಭಿವೃದ್ದಿಗೆ ಅಡಿಪಾಯವಾಗಲಿದೆ.
ವಿದ್ಯಾರ್ಥಿಗಳ ಹಾಗೂ ಸಮಾಜದ ಏಳಿಗೆಯ ದೃಷ್ಠಿಯಿಂದ ಜಪಾನ್ನಂತಹ ಅಭಿವೃದ್ದಿ ಹೊಂದಿದ ದೇಶಗಳೊಂದಿಗೆ ಬಾಂಧವ್ಯ ಬಲವರ್ಧನೆ ಅತ್ಯಗತ್ಯ' ಎಂದರು.
ಈ ಸಂದರ್ಭದಲ್ಲಿ ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಪ್ರೊ- ವೈಸ್ ಚಾನ್ಸಲರ್ .ಎಂ.ಎಸ್ ಮೂಡಿತ್ತಾಯ, ಕುಲಸಚಿವ ಡಾ. ಹರ್ಷ ಹಾಲಹಳ್ಳಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್ ಚಿಫ್ಳೂಣ್ಕರ್ ಅತಿಥಿಗಳನ್ನುಸ್ವಾಗತಿಸಿ ಸಂಸ್ಥೆಯ ಬಗೆಗೆ ವಿವರಿಸಿದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಸಹಯೋಗ ವಿಭಾಗದ ನಿರ್ದೇಶಕ ಪ್ರೊ. ಹರಿಕೃಷ್ಣ ಭಟ್ ವಂದಿಸಿದರು. ವಿದ್ಯಾರ್ಥಿನಿ ಶೈವಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಅನಂತರ ತುಳುನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವ 'ತುಳುನಾಡವೈಭವ' ಎಂಬ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿಟ್ಟೆ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ