ಸಂವಿಧಾನ ರಚನೆಯಲ್ಲಿ ದಕ್ಷಿಣ ಕನ್ನಡದವರ ಕೊಡುಗೆಯೂ ಇದೆ : ಡಾ. ಪಿ.ಕೆ.ಬಾಲಕೃಷ್ಣ
ಪುತ್ತೂರು: ಪ್ರಜೆಗಳೇ ಪ್ರಭುಗಳಾದ ದಿವಸವನ್ನು ಪ್ರಜಾಪ್ರಭುತ್ವ ದಿವಸ ಎಂದು ಆಚರಿಸುತ್ತೇವೆ. ಸಂವಿಧಾನ ರಚನೆಯಲ್ಲಿ ದಕ್ಷಿಣ ಕನ್ನಡದ ಹಿರಿಯರೂ ಪ್ರಮುಖ ಪಾತ್ರ ವಹಿಸಿದ್ದರೆಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಚಾರ. ಸಂವಿಧಾನ ರಚನೆ ಮಾಡಿದ್ದರಿಂದ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಅಳವಡಿಸಲು ಸಾಧ್ಯವಾಯಿತು ಎಂದು ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ಪಿ.ಕೆ.ಬಾಲಕೃಷ್ಣ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ವಿದ್ಯಾಲಯ ಸಿಬಿಎಸ್ಇಯಲ್ಲಿ ಗುರುವಾರ ಆಯೋಜಿಸಲಾದ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ನಮ್ಮ ಭಾರತ ದೇಶ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶ. ಹಾಗಾಗಿಯೇ ಇದು ಪ್ರಪಂಚಕ್ಕೆ ಮಾದರಿಯಾಗಿ ನಿಂತಿದೆ. ಭಾರತವಿಂದು ವಿಶ್ವದ ಗುರು ಸ್ಥಾನಕ್ಕೇರುವಲ್ಲಿ ಪ್ರಜಾಪ್ರಭುತ್ವ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದರಲ್ಲದೆ ನಾವು ನಮ್ಮ ವೈಯಕ್ತಿಕ ಆಸೆ ಬಿಟ್ಟು ದೇಶದ ಉದ್ಧಾರಕ್ಕಾಗಿ ದುಡಿಯಬೇಕಾಗಿದೆ. ಸರ್ವೇ ಜನಾಃ ಸುಖಿನೋ ಭವಂತು ಎಂದು ಹೇಳಿದ್ದು ನಮ್ಮ ದೇಶ. ಈ ದೇಶದ ಕೆಲವು ಅಪ್ರತಿಮ ನಾಯಕರಿಂದಾಗಿ ಇಂದು ನಮ್ಮ ದೇಶ ಈ ತೆರನಾಗಿ ಬೆಳೆದು ನಿಲ್ಲುವುದಕ್ಕೆ ಸಾಧ್ಯವಾಗಿದೆ. ಸಂವಿಧಾನ ದೇವರಿದ್ದಂತೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ, ಕೋಶಾಧಿಕಾರಿ ರಾಜಶ್ರೀ ನಟ್ಟೋಜ, ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಸುರೇಶ್ ಶೆಟ್ಟಿ, ಅಂಬಿಕಾ ವಿದ್ಯಾಲಯ ಸಿಬಿಎಸ್ಇಯ ಪ್ರಾಂಶುಪಾಲೆ ಮಾಲತಿ ಡಿ ಭಟ್, ಉಪಪ್ರಾಂಶುಪಾಲೆ ಸುಜನಿ ಬೋರ್ಕರ್, ಅಂಬಿಕಾ ಮಹಾವಿದ್ಯಾಲಯದ ಪ್ರಾಂಶುಪಾಲ ರಾಕೇಶ ಕುಮಾರ್ ಕಮ್ಮಜೆ, ಬಪ್ಪಳಿಗೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲೆ ಸುಚಿತ್ರ ಪ್ರಭು, ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ ಉಪಸ್ಥಿತರಿದ್ದರು.
ವಿದ್ಯಾರ್ಥಿ ಶ್ರೀಕೃಷ್ಣ ನಟ್ಟೋಜ ಸ್ವಾಗತಿಸಿ, ವಿದ್ಯಾರ್ಥಿನಿ ಮನಿಷಾ ಕಜೆ ವಂದಿಸಿದರು. ವಿದ್ಯಾರ್ಥಿನಿಯರಾದ ನಿಹಾರಿಕ ಹಾಗೂ ಅನ್ವಿತಾ ನಿರ್ವಹಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ