ಮಂಗಳೂರು: ಸ್ಟೂಡೆಂಟ್ಸ್ ಫಾರ್ ಡೆವಲಪ್ಮೆಂಟ್ (ಎಸ್ಎಫ್ಡಿ)
ಮಂಗಳೂರು ಇದರ ಸದಸ್ಯರು ಭಾನುವಾರ 2023 ರ ಆಗಮನವನ್ನು ಅರ್ಥಪೂರ್ಣ
ರೀತಿಯಲ್ಲಿ ಸ್ವಾಗತಿಸಿದರು. ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಸಹಯೋಗದಲ್ಲಿ ವಿದ್ಯಾರ್ಥಿ
ಸಂಘಟನೆಯು ಜನವರಿ 1 ರಂದು ಮಂಗಳೂರಿನ ತಣ್ಣೀರ್ ಬಾವಿ ಬೀಚ್ನಲ್ಲಿ
ಬೀಚ್ ಸ್ವಚ್ಛತಾ ಅಭಿಯಾನವನ್ನು ನಡೆಸಿತು.
ಬೀಚ್ನಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಗರದ ವಿವಿಧ ಕಾಲೇಜುಗಳ ಎಸ್ಎಫ್ಡಿ ಯ 100 ಕ್ಕೂ ಹೆಚ್ಚು ವಿದ್ಯಾರ್ಥಿ ಸ್ವಯಂಸೇವಕರ ಜತೆ ಎಂಸಿಸಿ ಯ ನೌಕರರು ಪಾಲ್ಗೊಂಡರು.
ಬೆಳಗ್ಗೆ 9 ಗಂಟೆಗೆ ಆರಂಭಗೊಂಡ ಸ್ವಚ್ಛತಾ ಅಭಿಯಾನ ಮಧ್ಯಾಹ್ನ 12 ಗಂಟೆಯವರೆಗೆ ನಡೆದಿದ್ದು ಸುಮಾರು 3 ಕಿ.ಮೀ ನಷ್ಟು ಪ್ರದೇಶವನ್ನು ಸ್ವಚ್ಛಗೊಳಿಸಲಾಯಿತು. 30 ಜನರ 4 ಗುಂಪುಗಳಾಗಿ ಸ್ವಯಂಸೇವಕರನ್ನು ವಿಂಗಡಿಸಿ, ಪ್ರತಿ ಗುಂಪಿಗೆ ನಿರ್ದಿಷ್ಟ ಕಸದ ವಸ್ತುವನ್ನು ಸಂಗ್ರಹಿಸುವ ಕಾರ್ಯವನ್ನು ನೀಡಲಾಯಿತು. ಒಂದು ಗುಂಪು ಗಾಜು ಮತ್ತು ಇತರ ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಸಂಗ್ರಹಿಸಿದರೆ, ಇತರ ಗುಂಪುಗಳಿಗೆ ಪ್ಲಾಸ್ಟಿಕ್ ಮತ್ತು ಮರುಬಳಕೆ ಮಾಡಲಾಗದ ವಸ್ತುಗಳನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ನೀಡಲಾಯಿತು. ಇದು ತ್ಯಾಜ್ಯವನ್ನು ಪ್ರತ್ಯೇಕಿಸಲು ಸಹಾಯ ಮಾಡಿತು.
ಮಂಗಳೂರು ಮಹಾನಗರ
ಪಾಲಿಕೆಯಿಂದ ಸ್ವಚ್ಛಗೊಳಿಸಿದ ಕಸ ವಿಲೇವಾರಿಗೆ ವ್ಯವಸ್ಥೆ ಮಾಡಲಾಗಿದ್ದು, ಆಂಟೋನಿ ತ್ಯಾಜ್ಯ ನಿರ್ವಹಣಾ ಕೋಶದಿಂದ ಕಸ
ಸಂಗ್ರಹಿಸುವ ವಾಹನಗಳು ತ್ಯಾಜ್ಯವನ್ನು ಹೆಚ್ಚಿನ ಸಂಸ್ಕರಣೆಗೆ ತೆಗೆದುಕೊಂಡವು.
ಎಬಿವಿಪಿ ಯ ಒಂದು ಆಯಾಮವಾಗಿರುವ ಎಸ್ಎಫ್ಡಿ "ಜಲ್, ಜಮೀನ್, ಜಾನವರ್ ಮತ್ತು ಜನ್ ಅನ್ನು ರಕ್ಷಿಸುವ" - ಪರಿಸರದ ಎಲ್ಲಾ ಅಂಶಗಳ ಆದೇಶದೊಂದಿಗೆ ರಚಿಸಲಾಗಿದೆ. ವಿಭಾಗ ಸಂಚಾಲಕ ನಿಶಾನ್ ಆಳ್ವಾ ಕಾವೂರು, ಎಸ್ಎಫ್ಡಿ ಪ್ರಮುಖ ನಿಶ್ಚಿತ್ ಬಂಟ್ವಾಳ್, ಎಬಿವಿಪಿ ಮಂಗಳೂರು ತಾಲೂಕು ಸಂಚಾಲಕ ಆದರ್ಶ್ ಉಪ್ಪಾರ್, ಎಬಿವಿಪಿ ಮಂಗಳೂರು ಪ್ರಮುಖರಾದ ಸ್ಕಂದ ಕಿರಣ್, ಭವನೀಶ್ ಶೆಟ್ಟಿ, ಅಭಿನಯ ಸೇರಿದಂತೆ ಮಂಗಳೂರು ಘಟಕದ ಪದಾಧಿಕಾರಿಗಳು, ಕಾರ್ಯಕರ್ತರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.