ಡಿ. 23ರಿಂದ 27ರವರೆಗೆ ತೀರ್ಥರಾಜಪುರದ ಅಧಿದೇವತೆ ಶ್ರೀ ರಾಮೇಶ್ವರನ ಜಾತ್ರೆ

Upayuktha
0

"ಮಾತೃಹತ್ಯಾದೋಷವನ್ನೇ ಪರಿಹರಿಸಿದ ಪವಿತ್ರ ಧಾರ್ಮಿಕ ಕ್ಷೇತ್ರ''


ಮಾತೃಹತ್ಯಾದೋಷವನ್ನೇ ಪರಿಹರಿಸಿದ ಖ್ಯಾತಿಯನ್ನು ಹೊಂದಿರುವ ಪವಿತ್ರ ಧಾರ್ಮಿಕ ಕ್ಷೇತ್ರವಾದ ಪುರಾಣ ಪ್ರಸಿದ್ದ ತೀರ್ಥರಾಜಪುರ ಸ್ಥಳನಾಮದ ತೀರ್ಥಹಳ್ಳಿ ಇಲ್ಲಿನ ಅಧಿದೇವತೆ ಶ್ರೀ ರಾಮೇಶ್ವರನ ಮಹಿಮೆಯಿಂದಾಗಿ ಆತನ ಸನ್ನಿಧಿ ಅತ್ಯಂತ ಪ್ರಭಾವಿ ಧಾರ್ಮಿಕ ನೆಲೆಯಾಗಿ ನಾಡಿನಲ್ಲಿ ಖ್ಯಾತಿಯನ್ನು ಹೊಂದಿದೆ ಎನ್ನುತ್ತಾರೆ ಕಳೆದ 30 ವರ್ಷಗಳಿಂದ ದೇವಾಲಯದ ಪ್ರಧಾನ ಅರ್ಚಕರು - ಅಗಮಿಕರು ಆಗಿರುವ ರಾಜಶೇಖರಭಟ್ !!


ಸ್ಥಳ ಪುರಾಣ

ತೀರ್ಥಹಳ್ಳಿ ಪುರಾಣ ಪ್ರಸಿದ್ಧ ಶ್ರೀ ಪರಶುರಾಮ ಪ್ರತಿಷ್ಟಾಪಿತ ಶ್ರೀ ರಾಮೇಶ್ವರ ದೇವಸ್ಥಾನ. ಜಮದಗ್ನಿ ಋಷಿ ತನ್ನ ಹೆಂಡತಿಯಾದ ರೇಣುಕಾದೇವಿಯ ಕರ್ತವ್ಯ ಲೋಪದ ಬಗ್ಗೆ ಕೋಪ ವ್ಯಕ್ತಪಡಿಸಿ ಹೆಂಡತಿಯ ಶಿರವನ್ನು ಕತ್ತರಿಸಲು ತನ್ನ ಎಲ್ಲಾ ಮಕ್ಕಳಿಗೂ ಆಜ್ಞೆ ಮಾಡಿದಾಗ ಉಳಿದ ಮಕ್ಕಳು ಆತನ ಆಜ್ಞೆ ಪಾಲಿಸದೇ ನಿರಾಕರಿಸಿ ಶಾಪಗ್ರಸ್ತರಾದಗ ತನ್ನ ಮಗನಾದ ಪರಶುರಾಮನಿಗೆ ಆಜ್ಞೆ ಮಾಡುತ್ತಾರೆ. ಪರಶುರಾಮನು ತನ್ನ ತಂದೆಯ ಮಾತಿನಂತೆ ತಾಯಿಯಾದ ರೇಣುಕಾದೇವಿಯ ಶಿರವನ್ನು ಪರಶುವಿನಿಂದ ಶಿರಛ್ಛೇದ ಮಾಡುತ್ತಾನೆ.


ಪರಶುವಿನಲ್ಲಿ (ಕೊಡಲಿ) ಹಿಡಿದ ರಕ್ತದ ಕಲೆ ಎಷ್ಟು ಬಾರಿ ತೊಳೆದರೂ ಎಳ್ಳಿನಷ್ಟು ರಕ್ತದ ಕಲೆ ಹೋಗದೆ ಪರಶುವಿನಲ್ಲಿಯೇ ಉಳಿಯುತ್ತದೆ. ಇದರಿಂದ ಮಾತೃ ಹತ್ಯೆ ದೋಷ ಪರಶುರಾಮರಿಗೆ ಬಾಧಿಸುತ್ತದೆ.ಆಗ ಎಳ್ಳಿನಷ್ಟು ರಕ್ತದ ಕಲೆ ತೊಳೆಯಲು ಪರಶುರಾಮರು ನಾನಾ ಊರುಗಳಲ್ಲಿ ಸಂಚರಿಸಿ ಹಳ್ಳ, ನದಿಗಳಲ್ಲಿ ಪರಶುವಿಗೆ ಹಿಡಿದ ರಕ್ತದ ಕಲೆಯನ್ನು ತೊಳೆಯಲು ಪ್ರಯತ್ನಿಸಿ ವಿಫಲರಾಗುತ್ತಾರೆ.


ನಂತರ ಪರಶುರಾಮರು ಆಯಾಸದಿಂದ ತೀರ್ಥರಾಜಪುರ (ತೀರ್ಥಹಳ್ಳಿ)ದ ತುಂಗಾ ನದಿಯ ತಟದಲ್ಲಿ ವಿಹರಿಸುತ್ತಾರೆ. ಆ ಸಮಯದಲ್ಲಿ ಪರಶುರಾಮರ ಪರಶು ಆಕಸ್ಮಿಕವಾಗಿ ಕೈಯಿಂದ ಜಾರಿ ನೆಲಕ್ಕೆ ಬಿದ್ದು ಕಲ್ಲು ಬಂಡೆ ಇಭ್ಭಾಗವಾಗಿ ನೀರಿಗೆ ಸ್ಪರ್ಷವಾಗುತ್ತದೆ. ನಂತರ ಬಿದ್ದ ಪರಶುವನು ಪುನಃ ಎತ್ತಿ ನೋಡಿದಾಗ ಪರಶುವಿಗೆ ಹಿಡಿದಿದ್ದ ಎಳ್ಳಿನಷ್ಟು ರಕ್ತದ ಕಲೆಯೂ ಹೋಗಿರುತ್ತದೆ. ಪರಶುವಿಗೆ ಹಿಡಿದಿದ್ದ ರಕ್ತದ ಕಲೆಯು ನಿವಾರಣೆಯಾದ ಆ ದಿನ ಮಾರ್ಗಶಿರ ಅಮವಾಸ್ಯೆಯಾಗಿದ್ದು ಅಂದು ಪರಶುರಾಮರು ಸಂತೋಷಗೊಂಡು ರಕ್ತದ ಕಲೆ ನಿವಾರಣೆಯಾದ ಹಿನ್ನೆಲೆಯಲ್ಲಿ ಇಲ್ಲಿಗೆ ಸಂಪೂರ್ಣವಾಗಿ ಮಾತೃ ಹತ್ಯೆ ದೋಷ ಪರಿಹಾರವಾಯಿತೆಂದು ಮನಗಂಡು ಈ ತೀರ್ಥರಾಜಪುರ ಕ್ಷೇತವು ಬಹಳ ಪವಿತ್ರವಾಗಿದೆ.


ಈ ಕ್ಷೇತ್ರದಲ್ಲಿ ಪ್ರತಿ ವರ್ಷದ ಮಾರ್ಗಶಿರ ಬಹುಳ ಅಮವಾಸ್ಯೆ ದಿನ ತುಂಗಾ ನದಿಯ ಪರಶುರಾಮ ಕೊಂಡದಲ್ಲಿ ಮಿಂದು, ಸ್ವತಃ ಪರಶುರಾಮರೇ ಪ್ರತಿಷ್ಠಾಪಿಸಿ, ಪೂಜಿಸಿ, ರಾಮೇಶ್ವರ ಎಂದು ನಾಮಕರಣ ಮಾಡಿರುವ ಈಶ್ವರ ಲಿಂಗವನ್ನು ದರ್ಶನ ಮಾಡುವರೋ ಅವರ ಸಂಕಷ್ಟಗಳು, ದೋಷಗಳು ನಿವಾರಣೆಯಾಗುವುದು ಎಂಬುದು ಈ ಕ್ಷೇತ್ರದ ಐತಿಹಾಸಿಕ ಪುರಾಣ ಹಿನ್ನೆಲೆ.


ಆಗ ಪರಶುರಾಮರು ಪ್ರತಿಷ್ಠಾಪಿಸಿದ್ದ ಈಶ್ವರ ಲಿಂಗಕ್ಕೆ ಕೆಳದಿ ಅರಸರ ಕಾಲದಲ್ಲಿ ಗರ್ಭಗುಡಿ ಹಾಗೂ ದೇವಾಲಯದ ಮುಂಭಾಗ ಛಾವಣಿಗಳನ್ನು ಮಾಡಲಾಗಿದೆ. ಅಂದು ಅರಸರ ಕಾಲದಲ್ಲಿ ನಿರ್ಮಾಣಗೊಂಡ ಈ ದೇವಾಲಯವು ಸಂಪೂರ್ಣವಾಗಿ ಶಿಲಾಮಯವಾಗಿದೆ. ಅಂದಿನಿಂದ ಪ್ರತಿ ವರ್ಷವು ಈ ಕ್ಷೇತ್ರದಲ್ಲಿ ಪಾಂಚಬೌದಿಕ ವಿಧಿ ವಿಧಾನಗಳಲ್ಲಿ 5ದಿನಗಳ ಕಾಲ ಜಾತ್ರೆ ನಡೆಯುತ್ತದೆ. ಹಿಂದಿನಿಂದಲೂ ಕರೆಯಲ್ಪಡುತ್ತಿದ್ದ ತೀರ್ಥರಾಜಪುರ ಕ್ಷೇತ್ರ ಕ್ರಮೇಣ ಈಗ ತೀರ್ಥಹಳ್ಳಿ ಎಂದು ಕರೆಯಲ್ಪಡುತ್ತಿದೆ.


ಪರಶುರಾಮರಿಂದ ಪ್ರತಿಷ್ಠಾಪನೆಗೊಂಡ ರಾಮೇಶ್ವರನ ದಿವ್ಯ ಕ್ಷೇತ್ರ ಅಂದಿನಿಂದ ಇಂದಿನವರೆಗೂ ಭಕ್ತರಲ್ಲಿ ಸಧ್ಭಕ್ತಿಯನ್ನು ಅನೂಚಾನವಾಗಿ ಮೂಡಿಸುತ್ತಲೇ ಇದೆ. ಹಿಂದಿನಿಂದಲೂ ತೀರ್ಥರಾಜಪುರ ಎಂದೇ ಕರೆಯಲ್ಪಡುತ್ತಿದ್ದು ಕ್ರಮೇಣ ಬದಲಾಗಿ ಪ್ರಸ್ತುತ ಈ ಪಟ್ಟಣವನ್ನು ತೀರ್ಥಹಳ್ಳಿ ಎಂದು ಕರೆಯಲಾಗುತ್ತಿದೆ.


ಈಶ್ವರ ಲಿಂಗ ಪ್ರತಿಷ್ಠಾನ: ರಕ್ತದ ಕಲೆ ನಿವಾರಣೆಯಾದ ಆ ದಿನ ಮಾರ್ಗಶಿರ ಬಹುಳ ಅಮಾವಾಸ್ಯೆಯ ದಿನವಾಗಿದೆ. ದೋಷ ನಿವಾರಣೆಯಾದ ಹಿನ್ನೆಲೆಯಲ್ಲಿ ಸಂತೋಷಭರಿತರಾದ ಪರಶುರಾಮರು ತೀರ್ಥರಾಜಪುರದ ಸ್ಥಳ ಮಹತ್ವವನ್ನು ಮನಗಂಡು ತುಂಗಾನದಿದಡದ ಎಡಭಾಗದಲ್ಲಿ ಈಶ್ವರ ಲಿಂಗವನ್ನು ಪ್ರತಿಷ್ಠಾಪಿಸಿ ಅದಕ್ಕೆ ರಾಮೇಶ್ವರ ಎಂಬ ನಾಮಧೇಯವನ್ನೂ ನೀಡಿ ಪೂಜಿಸುತ್ತಾರೆ. ಸ್ವತಃ ಪರಶುರಾಮರೇ ಪ್ರತಿಷ್ಠಾಪಿಸಿ, ಪೂಜಿಸಿದ ಈಶ್ವರ ಲಿಂಗವನ್ನು ಮಾರ್ಗಶಿರ ಬಹುಳ ಅಮಾವಾಸ್ಯೆಯ ದಿನ ( ಎಳ್ಳಮಾವಾಸ್ಯೆ) ದರ್ಶನ ಮಾಡುವರೋ ಅವರ ಸಂಕಷ್ಟಗಳು, ದೋಷಗಳು ನಿವಾರಣೆಯಾಗುವುದು ಎಂಬುದು ಈ ಕ್ಷೇತ್ರದ ಪುರಾಣದ ಹಿನ್ನೆಲೆ.


ರಾಮಕೊಂಡ: ತುಂಗಾ ನದಿಯ ಮಧ್ಯದಲ್ಲಿ ಪರಶುರಾಮರ ಕೊಡಲಿ ಬಿದ್ದು ನಿರ್ಮಾಣವಾದ ಕೊಂಡ ರಾಮಕೊಂಡವೆಂದೇ ಪ್ರಸಿದ್ದಿಯೂ ಆಗಿದೆ. ಮಾರ್ಗಶಿರ ಬಹುಳ ಅಮಾವಾಸ್ಯೆಯ ದಿನ ಈ ಜಾಗದಲ್ಲಿ ತೀರ್ಥಸ್ನಾನ ಮಾಡುವುದರಿಂದ ಸರ್ವ ಪಾಪಗಳು ನಿವಾರಣೆಯಾಗುತ್ತದೆ ಎಂಬುದು ಪ್ರತೀತಿ. ಹೀಗಾಗಿ ಪ್ರತಿ ವರ್ಷ ಎಳ್ಳಮಾವಾಸ್ಯೆಯ ದಿನದಂದು ಸಹಸ್ರಾರು ಸಂಖ್ಯೆಯಲ್ಲಿ ಈ ತೀರ್ಥದಲ್ಲಿ ಮಿಂದು ಧನ್ಯತಾಭಾವವನ್ನು ತಾಳುತ್ತಾರೆ.


ಸನ್ನಿಧಾನ & ಪರಿವಾರ ದೇವರುಗಳು: ಶ್ರೀ ರಾಮೇಶ್ವರ ನ ದೇವಾಸ್ಥಾನ ತೀರ್ಥಹಳ್ಳಿಯ ರಥಬೀದಿಯಲ್ಲಿದ್ದು ಶ್ರೀ ಸ್ವಾಮಿ ಯ ದೇವಾಲಯವು ಅತಿ ಪುರಾತನ ಕಾಲದಿಂದಲೂ ಇದ್ದು ಇದು ಮುಜಾರಾಯಿ ದೇವಾಲಯವು ಆಗಿದ್ದು, ದೇವಾಲಯವು ಚೌಕಕಾರ ವಾಗಿದ್ದು ಶ್ರೀ ಸ್ವಾಮಿಯ ಸನ್ನಿಧಿಯ ಗರ್ಭಗುಡಿಯಲ್ಲಿ ರಾಮೇಶ್ವರ ದೇವರಲ್ಲದೇ ಪಾರ್ವತಿ, ಮಹಿಷ ಮರ್ಧಿನಿ, ಗಣಪತಿ ಗರ್ಭಗುಡಿಗಳಿವೆ. ಹೊರಭಾಗದಲ್ಲಿ ಸತ್ಯಮಲ್ಲಿಕಾರ್ಜುನ, ಜ್ಞಾನಾನಂದ ಸೋಮೇಶ್ವರ, ಸುರೇಶ್ವರ, ನಾಗದೇವರು ಹಾಗೂ ನವಗ್ರಹಗಳ ಗುಡಿಯೂ ಇದೆ.


ಕಂಬದ ಗಣಪತಿ ಹಾಗೂ ನಂದಿಯನ್ನು ಪ್ರತಿಷ್ಠಾಪಿಸಲಾಗಿದ್ದು ಸ್ವಾಮಿಯ ದರ್ಶನ ಲಭ್ಯ .ಅಲ್ಲಿ ಆರಾಧನೆಗಳನ್ನು ಮಾಡುತ್ತಾ ಬಂದಿದ್ದಾರೆ, ಇಲ್ಲಿ ದರ್ಶನ ಪಡೆದರೆ ಬದುಕು ಪಾವನ ಹಾಗು ಭಕ್ತರು ಬೇಡಿದ ಸಕಲ ಇಷ್ಟಾರ್ಥ ಗಳನ್ನು ನೆರಿವೇರಿಸುತ್ತ ನೆಲೆ ನಿಂತಿದ್ದಾನೆ ತುಂಗಾ ನದಿಯ ತಟ ದಲ್ಲಿ ಶ್ರೀ ರಾಮೇಶ್ವರ ಸ್ವಾಮಿ ಪುರಾತನ ವಾದ ಕಲ್ಲು ದೇಗುಲದಲ್ಲಿ, ಕಳೆದ ಎರಡು ವರುಷಗಳ ಹಿಂದೆ ದೇವಾಲಯದ ಜೀರ್ಣೋದ್ಧಾರ ಕಾರ್ಯ ನಡೆದಿದೆ.


ಕಂಬದ ಗಣಪತಿ: ದೇವಾಲಯದಲ್ಲಿ ಕಂಬದ ಗಣಪತಿ ಸಹ ವಿಶೇಷತೆ ಹೊಂದಿದೆ. ಕಂಬದಲ್ಲೇ ಮೂಡಿದ್ದು ಎಂಬ ಇತಿಹಾಸವಿದ್ದು ಮದುವೆಗೆ ಗಂಡು ಹೆಣ್ಣು ಸಂಬಂಧ ಜಾತಕ ಕೂಡಿ ಬರದೇ ಹೋದರೆ ಕಂಬದ ಗಣಪತಿಯಲ್ಲಿ ಪ್ರಸಾದ ನೊಡುವ ಕ್ರಮವಿದ್ದು, ವಿವಾಹ ನಿಶ್ಚಯ ಸೇರಿದಂತೆ ಎಲ್ಲಾ ರೀತಿಯ ಶುಭ ಕಾರ್ಯಗಳಿಗೆ ಇಲ್ಲಿ ಪ್ರಸಾದ ನೋಡುವುದು ಕಂಬದ ಗಣಪತಿಯಲ್ಲಿ ಅನಾದಿಕಾಲದಿಂದಲೂ ನಡೆದು ಬಂದ ಪದ್ದತಿ. ಇಲ್ಲಿ ಪ್ರಸಾದ ಬಂತೆಂದರೆ ಅದಕ್ಕೆ ವಿಶೇಷವಾದ ಮಹತ್ವವೂ ಇದೆ.


ಈ ಪರಿಸರದವರು ಮಾತ್ರವಲ್ಲದೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಕುಟುಂಬ ಸೇರಿದಂತೆ ನಾಡಿನಾದ್ಯಂತ ಅಪಾರ ಭಕ್ತರು ಈ ದೇವರ ಬಗ್ಗೆ ವಿಶೇಷ ಭಕ್ತಿಯನ್ನು ಹೊಂದಿದ್ದಾರೆ.


ಜೀರ್ಣೋದ್ದಾರ: ಕೆಳದಿ ಅರಸರ ಕಾಲದಲ್ಲಿ ಗರ್ಭಗುಡಿ ಹಾಗೂ ದೇವಾಲಯಶಿಲಾಮಯವಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಶೃಂಗೇರಿ ಜಗದ್ಗುರುಗಳ ಮಾರ್ಗದರ್ಶನದಲ್ಲಿ ದೇವಾಲಯವನ್ನು ಸಂಪೂರ್ಣವಾಗಿ ಜೀರ್ಣೋದ್ದಾರಗೊಳಿಸಲಾಗಿದೆ.


ವಜ್ರಲೇಪನ: ಋಷಿ ಪ್ರತಿಷ್ಠಿತ ರಾಮೇಶ್ವರನ ಈ ಲಿಂಗವನ್ನು ಜೀರ್ಣೋದ್ದಾರದ ಸಂಧರ್ಭದಲ್ಲಿ ವಜ್ರಲೇಪನದಿಂದ ಅಷ್ಟಬಂಧವನ್ನೂ ಮಾಡಲಾಗಿದೆ. ಜೀರ್ಣೊದ್ದಾರಗೊಂಡ ಈ ದೇವಾಲಯ 2017 ಫೆಬ್ರುವರಿ ಮಾಹೆಯಲ್ಲಿ ಶೃಂಗೇರಿಯ ಉಭಯ ಶ್ರೀಗಳ ನೇತೃತ್ವದಲ್ಲಿ ಪುನರ್ ಪ್ರತಿಷ್ಠೆ, ಅಷ್ಟಬಂಧ, ಬ್ರಹ್ಮ ಕಲಶ ಸ್ಥಾಪನೆ ಹಾಗೂ ಬ್ರಹ್ಮ ರಥೋತ್ಸವ ಜರುಗಿತ್ತು.


ಧಾರ್ಮಿಕ ಕಾರ್ಯಗಳು: ಇಲ್ಲಿ ಶಿವನ ಸನ್ನಿಧಿಯಲ್ಲಿ ಭಕ್ತಾದಿಗಳ ಗ್ರಹಚಾರ ದೋಷ ಪರಿಹಾರರಾರ್ಥವಾಗಿ ಪ್ರತಿ ಸೋಮವಾರ ತೀರ್ಥಸ್ನಾನ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಮುಂತಾದ ಮಹತ್ವದ ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯುತ್ತಿದೆ. ಶಿವರಾತ್ರಿ ಮುಂತಾದ ದಿನಗಳಲ್ಲಿ ಅಹೋರಾತ್ರಿ ಧಾರ್ಮಿಕ ಕಾರ್ಯಗಳು ನಡೆಯುವುದು ಸಾಮಾನ್ಯವಾಗಿದೆ.


ಅರ್ಚಕ ಪರಂಪರೆ: ಈ ದೇವಸ್ಥಾನದ ಮುಖ್ಯ ಅರ್ಚಕರಾಗಿ ದಿ. ಸುಬ್ರಾಯಭಟ್ ಕುಟುಂಬ ಕಳೆದ 80 ವರ್ಷಗಳಿಂದ ಈ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಸುಬ್ರಾಯ ಭಟ್ ಕಾಲಾ ನಂತರದಲ್ಲಿ ಕಳೆದ 30 ವರ್ಷಗಳಿಂದ ಅವರ ಪುತ್ರರಾದ ರಾಜಶೇಖರ ಭಟ್ ಸೇವೆ ಸಲ್ಲಿಸುತ್ತಿದ್ದಾರೆ.


ಜಾತ್ರಾ ಮಹೋತ್ಸವ: ಪ್ರತಿ ವರ್ಷ ಎಳ್ಳಮಾವಾಸ್ಯೆಯ ಅಂಗವಾಗಿ ನಡೆಯುವ ಮೂರು ದಿನಗಳ ಜಾತ್ರೆ ನಾಡಿನಲ್ಲೇ ಪ್ರಸಿದ್ದಿಯನ್ನು ಪಡೆದಿದೆ. ಮೊದಲ ದಿನ ತೀರ್ಥಸ್ನಾನ, ಮರುದಿನ ಬ್ರಹ್ಮ ರಥೋತ್ಸವ ಹಾಗೂ ಸಾರ್ವಜನಿಕರಿಂದ ನಡೆಸಲಾಗುವ ತೆಪ್ಪೋತ್ಸವ ಈ ಜಾತ್ರೆಗೆ ವಿಶೇಷ ಮೆರಗನ್ನು ನೀಡುತ್ತಿದೆ.


ದಸರಾ ಉತ್ಸವ: ನವರಾತ್ರಿಯ ಹತ್ತು ದಿನಗಳ ಪರ್ಯಂತ ನಡೆಯುವ ರಾಮೇಶ್ವರ ದೇವರ ದಸರಾ ಉತ್ಸವ ವಿಶೇಷವಾದ ಧಾರ್ಮಿಕ ಆಚರಣೆಯೊಂದಿಗೆ ಸಾಂಸ್ಕೃತಿಕವಾಗಿಯೂ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ದಶಮಿಯಂದು ನಡೆಯುವ ದಸರಾ ಮೆರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಈ ತಾಲೂಕಿನ ಸಾಂಸ್ಕೃತಿಕ ಹಿರಿಮೆಗೂ ಸಾಕ್ಷಿಯಾಗಿದೆ.


ಪೌರಾಣಿಕ ಹಿನ್ನೆಲೆಯೊಂದಿಗೆ ಶ್ರೀಮಂತ ಪರಿಸರ ಮತ್ತು ಪ್ರಶಾಂತವಾದ ವಾತಾವರಣದ ನಡುವೆ ತುಂಗಾನದಿ ದಡದಲ್ಲಿ ನೆಲೆ ನಿಂತಿರುವ ಶ್ರೀ ರಾಮೇಶ್ವರನ ದಿವ್ಯ ಸನ್ನಿದಿ ಭಗವದ್ಭಕ್ತರಿಗೆ ಭಕ್ತಿಯೊಂದಿಗೆ ಸದಾ ಶಾಂತಿಯನ್ನು ನೀಡುವ ತಾಣವಾಗಿದೆ. ಸರ್.ಎಂ ವಿಶ್ವೇಶ್ವರಯ್ಯರವರ ಪರಿಕಲ್ಪನೆ ಮತ್ತು ತಂತ್ರಜ್ಞಾನದಲ್ಲಿ ಮೂಡಿಬಂದು ಊರಿನ ಲ್ಯಾಂಡ್ ಮಾರ್ಕಿನಂತೆ ಕಂಗೊಳಿಸುತ್ತಿರುವ ತುಂಗಾ ತೂಗು ಸೇತುವೆ. ಹೀಗೆ ಒಮ್ಮೆ ಈ ಕ್ಷೇತ್ರಕ್ಕೆ ಭೇಟಿ ನೀಡಿದವರು ಮತ್ತೆ ಮತ್ತೆ ಬರಬೇಕೆನ್ನಿಸುವಷ್ಠರ ಮಟ್ಟಿಗೆ ಇಲ್ಲಿನ ಶಿವನ ಸಾನಿಧ್ಯ ಆಕರ್ಷಣೀಯವಾಗಿದೆ.ಪ್ರತಿ ದಿನ ಜಾತ್ರೆ ಸಮಯದಲ್ಲಿ ಶ್ರೀ ರಾಮೇಶ್ವರ ಅನ್ನ ದಾಸೋಹ ಮಿತ್ರ ವೃಂದದಿಂದ ಅನ್ನ ದಾಸೋಹ ನಡೆಯಲಿದೆ.


ಅನಂತ ಕಲ್ಲಾಪುರ ಅವರ ಹಾಡಿನ ಸಾಹಿತ್ಯ ಜನರ ಮನಕ್ಕೆ ಮುಟ್ಟುವಂತೆ ಇದೆ: ಸಚಿವ ಆರಗ ಜ್ಞಾನೇಂದ್ರ


ತೀರ್ಥಹಳ್ಳಿಯ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಕವಿ - ಅನಂತ ಕಲ್ಲಾಪುರ ತೀರ್ಥಹಳ್ಳಿ ಇವರ ಸಾಹಿತ್ಯದಲ್ಲಿ ಮೂಡಿ ಬಂದಿರುವ ಮಲೆನಾಡ ಕೋಗಿಲೆ ಗರ್ತಿಕೆರೆ ರಾಘಣ್ಣ ಇವರ ರಾಗ ಸಂಯೋಜನೆಯಲ್ಲಿ ರಾಘವೇಂದ್ರ ಡಿ.ಜಿ.ಮತ್ತು ತಂಡ ತೀರ್ಥಳ್ಳಿ ಇವರ ಗಾಯನದಲ್ಲಿ ಎಸ್.ಯು ಮ್ಯೂಸಿಕ್ ಕುಂದಾಪುರ ಇವರ ಸಂಗೀತ ಸಂಯೋಜನೆಯ ಶ್ರೀ ರಾಮೇಶ್ವರ ಉತ್ಸವ ಉತ್ಸವ ಹಾಡಿನ ಧ್ವನಿಸುರುಳಿಯನ್ನು ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರು ಬಿಡುಗಡೆ ಮಾಡಿ ಅನಂತ ಕಲ್ಲಾಪುರ ಅವರ ಹಾಡಿನ ಸಾಹಿತ್ಯ ಶ್ರೀ ರಾಮೇಶ್ವರನ ಹಾಗೂ ಜಾತ್ರೆಯ ವೈಭವ ವನ್ನು ಜನರ ಮನಕ್ಕೆ ಮುಟ್ಟುವಂತೆ ಇದೆ ಹಾಗೂ ಅವರಿಂದ ಇನ್ನು ಹೆಚ್ಚಿನ ಭಕ್ತಿ ಗೀತೆಗಳು ಮೂಡಿ ಬರಲಿ ಎಂದು ಹಾರೈಸಿದರು.


ಈ ಕಾರ್ಯಕ್ರಮದಲ್ಲಿ ಜಾತ್ರಾ ಸಮಿತಿ ಮತ್ತು ಪಟ್ಟಣ ಪಂಚಾಯತ್ ಸದಸ್ಯರಾದ ರಾಘವೇಂದ್ರ ಸೊಪ್ಪು ಗುಡ್ಡೆ, ತೀರ್ಥಹಳ್ಳಿ ಭಾಜಪ ಅಧ್ಯಕ್ಷರಾದ ರಾಘವೇಂದ್ರ ನಾಯಕ್ , ರಂಗಾಯಣ ನಿರ್ದೇಶಕರು ಮತ್ತು ಪಟ್ಟಣ ಪಂಚಾಯತ್ ಸದಸ್ಯರಾದ ಸಂದೇಶ್ ಜವಳಿ , ವಿಶ್ವ ಹಿಂದು ಪರಿಷತ್ ಕಾರ್ಯದರ್ಶಿ ಗಣೇಶ್ ಪ್ರಸಾದ್ ಮತ್ತು ತೀರ್ಥಳ್ಳಿ ಭಾಜಪ ಯುವ ಮೋರ್ಚಾದ ಅಧ್ಯಕ್ಷರಾದ ಸಂತೋಷ್ ದೇವಾಡಿಗ ಹಾಗು ಗಾಯಕ ರಾಘವೇಂದ್ರ ಡಿ.ಜಿ.ಮತ್ತು ತಂಡ ಉಪಸ್ಥಿತರಿದ್ದರು. ತೀರ್ಥಹಳ್ಳಿ ಶ್ರೀ ರಾಮೇಶ್ವರ ಉತ್ಸವದ ಹಾಡು. ಈ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ.




ಅನಂತ ಕಲ್ಲಾಪುರ – ಮಲೆನಾಡ ಪ್ರತಿಭೆ


ಮಲೆನಾಡಿನ ಮಡಿಲು ಕವಿಗಳ ತವರು, ಅಲ್ಲಿ ಅನೇಕ ಸಣ್ಣ ಸಣ್ಣ ಕವನ, ಲೇಖನ, ವರದಿ, ಪ್ರವಾಸಿ ತಾಣಗಳ ಮೇಲೆ ಬೆಳಕು ಚೆಲ್ಲುವ ಲೇಖನ ಬರಹಗಳನ್ನು ಬರೆದಿದ್ದು, ನಿರಂತರ ವಾಗಿ ರಾಜ್ಯದ ವಿವಿಧ ಪ್ರತಿಕೆ ಗಳಿಗೆ ಲೇಖನ ಹಾಗೂ ವರದಿ ಬರೆಯುವ ಹವ್ಯಾಸ ಹಾಗೂ ಸಾಮಾಜಿಕ ಸಮಸ್ಯೆಗಳ ಕುರಿತು ಬರವಣಿಗೆ. ಪ್ರಸುತ್ತ ಈಗ ಉದ್ಯೋಗ ಅರಸಿ ಬೆಂಗಳೂರು ನಗರದಲ್ಲಿ ಖಾಸಗಿ ಸಂಸ್ಥೆಯಲ್ಲಿ ಅಕೌಂಟೆಂಟ್ ಆಗಿ ಉದ್ಯೋಗಿಯಾಗಿ ಬದುಕು ಸಾಗಿದೆ. ಇದು ನನ್ನ ಸಾಹಿತ್ಯ ದಿಂದ ಹೊರಹೊಮ್ಮಿದ್ದ ಮೊದಲ ಭಕ್ತಿ ಗೀತೆ ಹಾಗೂ ಮೊದಲ ಹಾಡು ಶ್ರೀ ರಾಮೇಶ್ವರನಿಗೆ ಅರ್ಪಣೆ ಎಂದು ವಿನಮ್ರವಾಗಿ ನುಡಿಯುತ್ತಾರೆ.



ಬರಹ : ತೀರ್ಥಹಳ್ಳಿ ಅನಂತ ಕಲ್ಲಾಪುರ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top