ವಿವಿ ಸಂಧ್ಯಾ ಕಾಲೇಜಿನ ಎನ್ಎಸ್ಎಸ್ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ
ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಎನ್ಎಸ್ಎಸ್ ಘಟಕವು ಇತ್ತೀಚೆಗೆ ಶಿವರಾಮ ಕಾರಂತ ಭವನದಲ್ಲಿ “ಮಹಿಳಾ ಹಕ್ಕುಗಳ ಸಂರಕ್ಷಣೆ” ಕುರಿತು ಉಪನ್ಯಾಸ ಆಯೋಜಿಸಿತ್ತು.
'ಸಖಿ' - ಒನ್ ಸ್ಟಾಪ್ ಸೆಂಟರ್ ನ ಕೇಂದ್ರಾಡಳಿತ ನಿರ್ವಾಹಕಿ, ಮನೋವೈದ್ಯಕೀಯ ಸಲಹಾತಜ್ಞೆ ಮತ್ತು ಸಮಾಜಸೇವಕಿ ಪ್ರಿಯಾ ಕೆ.ಸಿ. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಂಗಳೂರು ನಗರದ ಯುವಕರ ನೈಜ ಕಥೆಗಳೊಂದಿಗೆ ವಾಸ್ತವಿಕ ಅರಿವು ಮೂಡಿಸಿದರು. ಮಹಿಳಾ ಕಿರುಕುಳವನ್ನು ಹೇಗೆ ತಡೆಗಟ್ಟುವುದು ಮತ್ತು ಸುರಕ್ಷಿತವಾಗಿರಿಸುವುದು, ಜೊತೆಗೆ ಸ್ವತಃ ಜವಾಬ್ದಾರರಾಗಿರುವುದು ಹೇಗೆ ಎಂಬುದರ ಕುರಿತು ಅವರು ಸಲಹೆಗಳನ್ನು ನೀಡಿದರು.
ಮಂಗಳೂರು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ.ಸುಭಾಷಿಣಿ ಶ್ರೀವತ್ಸ ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುಕುಲವನ್ನು ಪಶುವಿನ ವರ್ತನೆಯಿಂದ ಭಿನ್ನವಾಗಿಸಿರುವ ಪ್ರೀತಿ, ಕಾಮ ಮತ್ತು ಸ್ನೇಹದ ನಡುವಿನ ಅಂತರವನ್ನು ಕಾಪಾಡುವಂತೆ ಸಲಹೆ ನೀಡಿದರು.
ಎನ್ಎಸ್ಎಸ್ನ ವಿದ್ಯಾರ್ಥಿ ನಾಯಕಿ, ದ್ವಿತೀಯ ಬಿಕಾಂನ ರೂಪಾ ಕಾಮ್ರೇಕರ್ ಕಾರ್ಯಕ್ರಮ ಸಂಯೋಜಿಸಿದರು. ಎನ್ ಎಸ್ ಎಸ್ ಅಧಿಕಾರಿ ಅಶೋಕನ್ ಅತಿಥಿಗಳನ್ನು ಪರಿಚಯಿಸಿದರು. ಗಣೇಶ್ ಮತ್ತು ತಂಡದವರಿಂದ ಪ್ರಾರ್ಥನೆ ನಡೆಯಿತು. ಎನ್.ಎಸ್.ಎಸ್ ವಿದ್ಯಾರ್ಥಿ ನಾಯಕ ದ್ವಿತೀಯ ಬಿ.ಎ ಯ ವಿದ್ಯಾರ್ಥಿ ಜೀತೇಶ್ ವಂದಿಸಿದರು. ಸುಶ್ಮಿತಾ ಮತ್ತು ತಂಡದವರು ಎನ್ಎಸ್ಎಸ್ ಗೀತೆ ಹಾಡಿದರು. ಕಾರ್ಯಕ್ರಮದಲ್ಲಿ ಬೋಧಕ, ಬೋಧಕೇತರರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ