ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಹತ್ವಾಕಾಂಕ್ಷೆಯ ಕೋಟಿ ಕಂಠ ಗೀತ ಗಾಯನದ ಅಂಗವಾಗಿ ಉಜಿರೆ ಶ್ರೀ. ಧ ಮ ಕಾಲೇಜಿನ ಅಧ್ಯಾಪಕರು ವಿದ್ಯಾರ್ಥಿಗಳು ಸಾಮೂಹಿಕವಾಗಿ ಶ್ರದ್ಧೆ ಉಲ್ಲಾಸದಿಂದ ಆರು ಗೀತೆಗಳನ್ನು ಹಾಡುವ ಮೂಲಕ ಕನ್ನಡದ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದರು.
ಕಾಲೇಜಿನ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅಧ್ಯಾಪಕರು ಕನ್ನಡದ ಪ್ರಸಿದ್ಧ ಆರು ಗೀತೆಗಳನ್ನು ಸುಶ್ರಾವ್ಯವಾಗಿ ಹಾಡುವ ಮೂಲಕ ಕನ್ನಡದ ಮೇಲಿನ ಅಭಿಮಾನ ಮೆರೆದರು.
ನಾಡ ಗೀತೆಯಿಂದ ಮೊದಲ್ಗೊಂಡು, ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು, ಹಚ್ಚೇವು ಕನ್ನಡದ ದೀಪ, ವಿಶ್ವ ವಿನೂತನ ವಿದ್ಯಾ ಚೇತನ, ಭಾರಿಸು ಕನ್ನಡ ಡಿಂಡಿಮವ, ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು ಗೀತೆಗಳನ್ನು ಹಿನ್ನೆಲೆ ಸಂಗೀತದೊAದಿಗೆ ಹೇಳುವ ಮೂಲಕ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾಲೇಜಿನ ಎಲ್ಲಾ ವಿಭಾಗದ ವಿದ್ಯಾರ್ಥಿಗಳೊಂದಿಗೆ ಸಂಗೀತದಲ್ಲಿ ನುರಿತ ಹಾಗೂ ತರಬೇತಾದ ೧೨೫ ಕ್ಕೂ ಅಧಿಕ ವಿದ್ಯಾರ್ಥಿಗಳು ಮುನ್ನೆಲೆಯಲ್ಲಿ ಒಕ್ಕೊರಲಿನಿಂದ ಕನ್ನಡಾಭಿಮಾನದ ಹಾಡುಗಳನ್ನು ಹಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮವನ್ನುದ್ದೇಶಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾಲೇಜಿನ ಸಸ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಿ.ಎ ಕುಮಾರ ಹೆಗ್ಡೆ ರಾಷ್ಟೀಯ ಹಬ್ಬವನ್ನು ವಿಶೇಷ ಗೌರವದಿಂದ ಆಚರಿಸಬೇಕು, ಕನ್ನಡ ಸಾಹಿತ್ಯವು ಎಂಟು ಜ್ಞಾನ ಪೀಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಸಮೃದ್ಧ ಭಾಷೆಯಾಗಿದೆ. ರಾಜ್ಯದೆಲ್ಲೆಡೆ ನಾಡಭಕ್ತಿಯನ್ನು ಹೆಚ್ಚಿಸುವ ಸರ್ಕಾರದ ಈ ನಡೆಯು ಸ್ವಾಗತಾರ್ಹವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪಿ. ಎನ್ ಉದಯಚಂದ್ರ ಮಾತನಾಡಿ ರಾಜ್ಯೋತ್ಸವದ ಪ್ರಯುಕ್ತ ನಡೆಯುವ ಕಾರ್ಯಕ್ರಮಗಳು ಪ್ರತೀವರ್ಷ ಇಷ್ಟೇ ವಿಜೃಂಭಣೆಯಿAದ ನಡೆಯಬೇಕೆಂಬ ಆಶಯ ವ್ಯಕ್ತಪಡಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಡಾ.ಸುಧೀರ್ ಕೆ.ವಿ ಹಾಗೂ ಮತ್ತಿತರ ಉಪನ್ಯಾಸಕರು ಉಪಸ್ಥಿತರಿದ್ದರು. ಡಾ. ಮಹೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.