ಮೂಡುಬಿದಿರೆ : ಕಾಂತಾವರ ಕನ್ನಡ ಸಂಘದ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್ ಪ್ರಾಯೋಜಕತ್ವದ 2022ರ ಸಾಲಿನ ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿಯನ್ನು ರಾಯಚೂರಿನ ಶ್ರೀ ಚಿದಾನಂದ ಸಾಲಿ ಅವರ ‘ಕನ್ನಡಿಯಲ್ಲಿ ಮನುಷ್ಯ ಮಾತ್ರ’ ಎಂಬ ಕವನ ಸಂಕಲನದ ಹಸ್ತಪ್ರತಿಯು ಗೆದ್ದುಕೊಂಡಿದೆ ಎಂದು ಸಂಘದ ಸ್ಥಾಪಕಾಧ್ಯಕ್ಷ ಡಾ.ನಾ.ಮೊಗಸಾಲೆ ಘೋಷಿಸಿದ್ದಾರೆ.
ಈ ಸಾಲಿನ ಸ್ಪರ್ಧೆಗೆ ಐವತ್ತ ನಾಲ್ಕು ಹಸ್ತಪ್ರತಿಗಳು ಬಂದಿದ್ದು ಪ್ರಸಿದ್ಧ ವಿಮರ್ಶಕರಾದ ಚಿಂತಾಮಣಿ ಕೊಡ್ಲೆಕೆರೆ, ಬೆಳಗೋಡು ರಮೇಶ ಭಟ್ (ವಿಭಾವರಿ ಭಟ್), ಮತ್ತು ಡಾ. ಆರ್.ತಾರಿಣಿ ಶುಭದಾಯಿನಿ ಅವರುಗಳು ನೀಡಿದ ಅಂಕಗಳ ಆಧಾರದಲ್ಲಿ ಈ ಪ್ರಶಸ್ತಿಯನ್ನು ನಿರ್ಣಯಿಸಲಾಗಿದೆ.
1979ರಲ್ಲಿ ನಂದಳಿಕೆಯ ವರಕವಿ ಮುದ್ದಣನ ಹೆಸರಿನಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯು ಹತ್ತು ಸಾವಿರದ ಗೌರವ ಸಂಭಾವನೆ, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದ್ದು ಪ್ರತೀ ವರುಷದಂತೆ ಈ ವರುಷದ ಪ್ರಶಸ್ತಿ ಪ್ರದಾನ ಸಮಾರಂಭವು 2023ರ ಫೆಬ್ರವರಿ ತಿಂಗಳಲ್ಲಿ ಕಾಂತಾವರದ ‘ಕನ್ನಡ ಭವನ’ದಲ್ಲಿ ನಡೆಯಲಿದ್ದು ಪ್ರಶಸ್ತಿಯ ಪ್ರಾಯೋಜಕರಾದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಅವರು ಪ್ರಶಸ್ತಿ ಪ್ರದಾನವನ್ನು ನೆರವೇರಿಸಲಿರುವರು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ತಿಳಿಸಿದ್ದಾರೆ.
ಚಿದಾನಂದ ಸಾಲಿ ಕುರಿತು
ರಾಯಚೂರಿನ ಚಿದಾನಂದ ಸಾಲಿ ಅವರು ಎಂ.ಎಸ್ಸಿ (ಗಣಿತ) ಎಂ.ಎ (ಇಂಗ್ಲೀಷ್) ಎಂ.ಎ (ಕನ್ನಡ) ಎಂ.ಎ (ಪತ್ರಿಕೋದ್ಯಮ) ಎಂ.ಇಡಿ, ಪಿಜಿಡಿಎಚ್ ಇ, ಪಿಜಿಡಿಎಚ್ ಆರ್ ಎಂ, ಎಂ.ಫಿಲ್ (ಶಿಕ್ಷಣ ಶಾಸ್ತ್ರ) ಹಾಗೂ ಪತ್ರಿಕೋದ್ಯಮದಲ್ಲಿ ಪಿ.ಎಚ್.ಡಿ ಪದವೀಧರರಾಗಿದ್ದಾರೆ.
ಕಥೆ, ಕಾದಂಬರಿ, ಕವನ, ಗಜಲ್, ವಿಮರ್ಶೆ, ಸಂಶೋಧನೆ ಹೀಗೆ ಅನೇಕ ಪ್ರಕಾರಗಳಲ್ಲಿ ಒಟ್ಟು 29 ಕೃತಿಗಳನ್ನು ಪ್ರಕಟಿಸಿದ್ದು ತಮ್ಮ ಸೃಜನಶೀಲ ಬರಹಗಳಿಗಾಗಿ ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಅನುವಾದಗಳಿಗಾಗಿ ಎರಡು ಬಾರಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಬಹುಮಾನ ಮತ್ತು ಕ.ಸಾ.ಪರಿಷತ್ತಿನ ಶ್ರೀ ವಿಜಯ ಪ್ರಶಸ್ತಿಗಳು ಸೇರಿದಂತೆ ಹಲವಾರು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಹಲವು ವಿ.ವಿಗಳಲ್ಲಿ ಇವರ ಬರಹಗಳು ಪಠ್ಯಗಳಾಗಿದ್ದು ಪ್ರಸ್ತುತ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ರಾಯಚೂರಿನ ಮೌಲಾನಾ ಆಜಾದ್ ಮಾದರಿ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದಾರೆ.