(ಚಿತ್ರ ಕೃಪೆ: ಝೀನ್ಯೂಸ್.ಇಂಡಿಯಾ)
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದಿಗೆ 72ನೇ ವರ್ಷ ತುಂಬುತ್ತಿದ್ದು, ಕೋಟ್ಯಂತರ ಭಾರತೀಯರು ಮತ್ತು ದೇಶ-ವಿದೇಶಗಳ ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನ್ಕರ್, ಕೇಂದ್ರ ಗೃಹಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಸಂಪುಟ ಸಹೋದ್ಯೋಗಿಗಳು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಪ್ರಧಾನಿ ಮೋದಿ ಅವರಿಗೆ ಶುಭ ಹಾರೈಸಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ಭಾರತದ ನಾಯಕರಿಂದ ತೊಡಗಿ ವಿದೇಶದಲ್ಲಿರುವ ಭಾರತೀಯ ಪ್ರಜೆಗಳು ಪ್ರಧಾನಿಗೆ ಶುಭಾಶಯಗಳನ್ನು ಸಲ್ಲಿಸುತ್ತಿದ್ದಾರೆ.
ಪ್ರಧಾನಿ ಮೋದಿಯವರ ಜನ್ಮದಿನದ ಪ್ರಯುಕ್ತ ದೇಶಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಈ ಸಂದರ್ಭದಲ್ಲಿ, ನಮೀಬಿಯಾದಿಂದ ಆಗಮಿಸುವ ಎಂಟು ಚಿರತೆಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರಧಾನಿ ಬಿಡುತ್ತಾರೆ. ಇದೊಂದು ಐತಿಹಾಸಿಕ ಘಟನೆಯಾಗಿ ದಾಖಲಾಗುತ್ತಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ವಿಜ್ಞಾನ ಭವನದಲ್ಲಿ ರಾಷ್ಟ್ರೀಯ ಲಾಜಿಸ್ಟಿಕ್ ನೀತಿಯನ್ನು ಬಿಡುಗಡೆ ಮಾಡಲಿದ್ದಾರೆ. ಲಾಜಿಸ್ಟಿಕ್ ನೀತಿಯು ಲಾಜಿಸ್ಟಿಕ್ ವೆಚ್ಚವನ್ನು ತಗ್ಗಿಸಲು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ದೇಶೀಯ ಸರಕುಗಳ ಸ್ಪರ್ಧಾತ್ಮಕತೆಯನ್ನು ಸುಧಾರಿಸುವ ಗುರಿಯನ್ನು ಹೊಂದಿದೆ.
ಇಂದು ಆರಂಭವಾಗಲಿರುವ ಮತ್ತೊಂದು ಅಭಿಯಾನವೆಂದರೆ ಬಿಜೆಪಿಯ "ವಿವಿಧತೆಯಲ್ಲಿ ಏಕತೆ" ಉತ್ಸವಗಳನ್ನು "ಎಲ್ಲಾ ಜಿಲ್ಲೆಗಳಲ್ಲಿ" ಆಯೋಜಿಸಲಾಗುವುದು. ಇದು ಹದಿನೈದು ದಿನಗಳ ಅವಧಿಯ "ಸೇವಾ" ಅಭಿಯಾನವಾಗಿದ್ದು, ಪ್ರಧಾನಿಯವರ ಜನ್ಮದಿನದಂದು ಆರಂಭವಾಗಿ ಅಕ್ಟೋಬರ್ 2 ರಂದು ಮಹಾತ್ಮ ಗಾಂಧಿಯವರ ಜನ್ಮದಿನದಂದು ಮುಕ್ತಾಯಗೊಳ್ಳಲಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಶುಭಾಶಯ:
"ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದಂದು ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. ನೀವು ಅನುಪಮವಾದ ಪರಿಶ್ರಮ, ಸಮರ್ಪಣೆ ಮತ್ತು ಸೃಜನಶೀಲತೆಯಿಂದ ನಡೆಸುತ್ತಿರುವ ರಾಷ್ಟ್ರ ನಿರ್ಮಾಣ ಅಭಿಯಾನವು ನಿಮ್ಮ ನಾಯಕತ್ವದಲ್ಲಿ ಮುಂದುವರಿಯಲಿ ಎಂದು ನಾನು ಬಯಸುತ್ತೇನೆ. ದೇವರು ಆಶೀರ್ವದಿಸಲಿ ಎಂದು ನಾನು ಬಯಸುತ್ತೇನೆ. ಭಗವಂತ ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಕರುಣಿಸಲಿ' ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್ ಮಾಡಿದ್ದಾರೆ.
ಭಾರತದ ಪ್ರತಿಷ್ಠೆಯನ್ನು ಎತ್ತರಿಸಿದವರು ಮೋದಿ: ರಾಜನಾಥ್ ಸಿಂಗ್ ಮೆಚ್ಚುಗೆ
"ಅವರ ನಾಯಕತ್ವದೊಂದಿಗೆ, ಅವರು ದೇಶದ ಪ್ರಗತಿ ಮತ್ತು ಉತ್ತಮ ಆಡಳಿತಕ್ಕೆ ಅಭೂತಪೂರ್ವ ಶಕ್ತಿಯನ್ನು ನೀಡಿದ್ದಾರೆ ಮತ್ತು ಪ್ರಪಂಚದ ಮುಂದೆ ಭಾರತದ ಪ್ರತಿಷ್ಠೆ ಮತ್ತು ಸ್ವಾಭಿಮಾನಕ್ಕೆ ಹೊಸ ಎತ್ತರವನ್ನು ಒದಗಿಸಿದ್ದಾರೆ" ಎಂದು ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
"ಸೇವೆ, ಸಮರ್ಪಣೆಯ ಸಂಕೇತ- ಪ್ರಧಾನಿ ಮೋದಿ: ಅಮಿತ್ ಶಾ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಜನ್ಮದಿನದ ಶುಭಾಶಯ ಕೋರಿದ್ದು, ಅವರನ್ನು ಸುರಕ್ಷಿತ, ಸದೃಢ ಮತ್ತು ಸ್ವಾವಲಂಬಿ "ನವ ಭಾರತ" ಮತ್ತು ಸೇವೆ ಮತ್ತು ಸಮರ್ಪಣೆಯ ಸಂಕೇತ ಎಂದು ಕರೆದಿದ್ದಾರೆ.
ಹಿಂದಿಯಲ್ಲಿ ಸರಣಿ ಟ್ವೀಟ್ಗಳನ್ನು ಮಾಡಿರುವ ಅವರು, ಬಡವರ ಕಲ್ಯಾಣ, ಉತ್ತಮ ಆಡಳಿತ, ಅಭಿವೃದ್ಧಿ, ರಾಷ್ಟ್ರೀಯ ಭದ್ರತೆ ಮತ್ತು ಐತಿಹಾಸಿಕ ಸುಧಾರಣೆಗಳ ಸಮಾನಾಂತರ ಸಮನ್ವಯದೊಂದಿಗೆ, ಪ್ರಧಾನಮಂತ್ರಿ ಅವರು 'ಮಾ ಭಾರತಿ' ಅನ್ನು ಮತ್ತೆ ಜಗತ್ತಿನಲ್ಲಿ ಅಗ್ರಸ್ಥಾನದಲ್ಲಿ ಸ್ಥಾಪಿಸುವ ತಮ್ಮ ಸಂಕಲ್ಪವನ್ನು ಪೂರೈಸಿದ್ದಾರೆ ಎಂದು ಹೇಳಿದರು.
ನಿರ್ಣಾಯಕ ನಾಯಕತ್ವ ಮತ್ತು ಆ ನಾಯಕತ್ವದಲ್ಲಿ ಜನರ ಅಚಲ ನಂಬಿಕೆಯಿಂದಾಗಿ ಇದೆಲ್ಲವೂ ಸಾಧ್ಯವಾಗಿದೆ ಎಂದರು.
"ಸುರಕ್ಷಿತ, ಬಲಿಷ್ಠ ಮತ್ತು ಸ್ವಾವಲಂಬಿ ನವಭಾರತದ ಸೃಷ್ಟಿಕರ್ತ ನರೇಂದ್ರ ಮೋದಿ ಅವರ ಜೀವನವು ಸೇವೆ ಮತ್ತು ಸಮರ್ಪಣೆಯ ಸಂಕೇತವಾಗಿದೆ. ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ, ಕೋಟಿಗಟ್ಟಲೆ ಬಡವರಿಗೆ ಅವರ ಹಕ್ಕುಗಳನ್ನು ನೀಡುವ ಮೂಲಕ, ಮೋದಿ ಭರವಸೆಯ ಭಾವನೆಯನ್ನು ತುಂಬಿದ್ದಾರೆ. ಮತ್ತು ಅವರಲ್ಲಿ ನಂಬಿಕೆ ಇರಿಸಿದ್ದಾರೆ. ಇವತ್ತು ದೇಶದ ಪ್ರತಿಯೊಂದು ವರ್ಗವೂ ಮೋದಿಯವರೊಂದಿಗೆ ಬಂಡೆಯಂತೆ ಅಚಲವಾಗಿ ನಿಂತಿದೆ" ಎಂದು ಅವರು ಹೇಳಿದರು.
ಪ್ರಧಾನಿ ಜನ್ಮದಿನಕ್ಕೆ 2000 ಸ್ಥಳಗಳಲ್ಲಿ ರಕ್ತದಾನ: ತೇಜಸ್ವಿ ಸೂರ್ಯ
ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಶುಭಾಶಯಗಳನ್ನು ಕೋರಿದ ಸಂಸದ ಹಾಗೂ ಯುವಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ, ಭಾರತೀಯ ಜನತಾ ಯುವ ಮೋರ್ಚಾವು ದೇಶದ 2000 ಕ್ಕೂ ಹೆಚ್ಚು ಸ್ಥಳಗಳಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿದೆ ಎಂದು ಹೇಳಿದರು.
"ಲಕ್ಷಗಟ್ಟಲೆ ಯುವಜನರು ಅಗತ್ಯ ಸಮಯದಲ್ಲಿ ರಕ್ತದಾನ ಮಾಡಲು https://eraktkosh.in ನಲ್ಲಿ ನೋಂದಾಯಿಸಿಕೊಳ್ಳುತ್ತಾರೆ, ಇದು ದೇಶದಲ್ಲಿ ರಕ್ತದ ದಾನಿಗಳ ಅತಿದೊಡ್ಡ ರಕ್ತ ಭಂಡಾರವನ್ನು ನಿರ್ಮಿಸುತ್ತದೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ವಿಶ್ವಕರ್ಮ ಜಯಂತಿಗೆ ಶುಭ ಕೋರಿದ ಪ್ರಧಾನಿ ಮೋದಿ
ಪ್ರಧಾನಿ ಮೋದಿ ಅವರು ತಮ್ಮ ಜನ್ಮದಿನದಂದು ವಿಶ್ವಕರ್ಮ ಜಯಂತಿಯ ಸಂದರ್ಭದಲ್ಲಿ ದೇಶಕ್ಕೆ ಶುಭ ಹಾರೈಸಿದ್ದಾರೆ. "ಈ ಸಂದರ್ಭದಲ್ಲಿ ನವನಿರ್ಮಾಣ ಮತ್ತು ನವಸೃಷ್ಟಿಯ ಜೊತೆಗೆ ಎಲ್ಲಾ ರೀತಿಯ ಸೃಜನಶೀಲ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಕರ್ಮಯೋಗಿಗಳಿಗೆ ನನ್ನ ಹೃತ್ಪೂರ್ವಕ ಶುಭಾಶಯಗಳು. ನಿಮ್ಮ ಕೌಶಲ್ಯ ಮತ್ತು ಕರ್ತವ್ಯವು ದೇಶವನ್ನು ಶಾಶ್ವತವಾಗಿ ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ" ಎಂದು ಟ್ವೀಟ್ ಮಾಡಿದ್ದಾರೆ.
ದಲೈ ಲಾಮಾ ಶುಭಾಶಯ:
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಎಪ್ಪತ್ತೆರಡನೇ ಹುಟ್ಟುಹಬ್ಬದ ಸಂದರ್ಭದಲ್ಲಿ ನಾನು ಅವರಿಗೆ ಪತ್ರ ಬರೆದಿದ್ದೇನೆ, ಅವರ ಉತ್ತಮ ಆರೋಗ್ಯವನ್ನು ಕೋರಿ ಆತ್ಮೀಯವಾಗಿ ಶುಭಾಶಯಗಳು ಮತ್ತು ಪ್ರಾರ್ಥನೆಗಳನ್ನು ಅರ್ಪಿಸುತ್ತೇನೆ ಎಂದು ದಲೈಲಾಮಾ ಶುಭಾಶಯ ಕೋರಿದ್ದಾರೆ.
ರಾಹುಲ್ ಗಾಂಧಿ ಶುಭಾಶಯ:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಪ್ರಧಾನಿ ಮೋದಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ