ನಾಲ್ಕು ದಿನದ ಹಿಂದೆ ಕೃಷಿಕರು ನಾವು ಏಳು ಮಂದಿ ಕಾರಿನಲ್ಲಿ ಕುಳಿತು ಪಯಣಿಸುತ್ತಿದ್ದೆವು. ಕೃಷಿಕರು ಒಟ್ಟಾಗಿ ಸೇರಿದಾಗ ಮಾತು ಆರಂಭವಾಗುವುದೇ ಆ ಕಾಲದಲ್ಲಿ ತುರ್ತು ಆಗಬೇಕಾದ ಕೆಲಸಗಳೊಂದಿಗೆ. ಮಹಾಳಿಯ ಮಹಾನತೆಯೊಂದಿಗೆ ಮಾತು ಆರಂಭವಾಗಿತ್ತು. ಹಳದಿ ರೋಗದ ಗಂಭೀರತೆಯತ್ತಲು ಮಾತು ಮುಂದುವರಿದಿತ್ತು. ನಾಲ್ಕು ಜನ ಸೇರಿದಾಗ ನಡೆಯುವ ಹಾಸ್ಯ, ಕಾಲೆಳೆಯುವಿಕೆಗೇನು ಕೊರತೆ ಇರಲಿಲ್ಲ. ಮುಂದುವರಿದ ಮಾತು ಕಳೆದ ಬೇಸಿಗೆ ಋತುವಿನ ತೂತು ಯಂತ್ರ ಕೊರೆತದ ಸಮೃದ್ಧಿಯತ್ತ ಹೊರಳಿತು. ನಮ್ಮೊಡನೆ ಇದ್ದ ತೂತು ಯಂತ್ರ ತಂತ್ರಜ್ಞಾನಿ ಒಬ್ಬರಿಂದ ಪುಂಕಾನು ಪುಂಕ ಮಾಹಿತಿಗಳು ಹೊರಬಂತು. ಕೇಳುತ್ತಾ ಕೇಳುತ್ತಾ ಮಾತು ಮೂಖವಾಗಿತ್ತು. ಮಹಾಳಿ, ಹಳದಿ ರೋಗ, ಯಾವುದೂ ಅತ್ಯಂತ ಭೀಕರ ಸಮಸ್ಯೆಯಲ್ಲ. ಏನಿದ್ದರೂ ವ್ಯಕ್ತಿಗತ. ಆದರೆ ತೂತು ಯಂತ್ರ ಕೊರೆಯುವಿಕೆ ಎಂಬ ರೋಗ ಭವಿಷ್ಯದ ಪೀಳಿಗೆಗೆ ಶಾಪವಾಗಿ ಪರಿಣಮಿಸುತ್ತದೆ ಎಂಬುದಕ್ಕೆ ಯಾವುದೇ ಸಂಶಯ ಇಲ್ಲ ಎಂದು ಗೋಚರಿಸಿತು.
ಮಳೆಗಾಲದ ಧೋ ಎಂದು ಸುರಿಯುವ ಮಳೆಯನ್ನು ಕಂಡಾಗ ಗುಡ್ಡೆಯ ನೆತ್ತಿಯವರೆಗೂ ಅಡಿಕೆ ಕೃಷಿ ಕೈಗೊಳ್ಳುವ ಉತ್ಸಾಹ ನಮ್ಮಲ್ಲಿ ಕಂಡು ಬರುತ್ತದೆ. ಸೆಪ್ಟೆಂಬರ್ ತಿಂಗಳು ಕಳೆದಂತೆ ಬಿಸಿಲಿನ ಝಳ ಆರಂಭವಾದಾಗ ತೂತು ಯಂತ್ರ ಎಂಬ ರಾಕ್ಷಸನ ನೆನಪಾಗುತ್ತದೆ. ರಾತ್ರಿ ತೂತು ಯಂತ್ರದ ಭೋರ್ಗರೆತ ಕಿವಿಯನ್ನು ಅಪ್ಪಳಿಸುತ್ತಲೇ ಇರುತ್ತದೆ. ಹಳ್ಳಿಯ ಮೂಲೆ ಮೂಲೆಯಲ್ಲಿ ಜೆಸಿಬಿಯ ಆರ್ಭಟದೊಂದಿಗೆ ಹೊಸದಾದ ರಸ್ತೆಯನ್ನು ಕಡಿದು ತೂತು ಯಂತ್ರದ ಲಾರಿ ಧೂಳೆಬ್ಬಿಸುತ್ತ ಹೋಗುವುದನ್ನು ಸಾಮಾನ್ಯ ಎಲ್ಲರೂ ಕಂಡಿರಬಹುದು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಬೋರ್ವೆಲ್ ಯಂತ್ರಗಳು ಬರುವುದು ತಮಿಳುನಾಡಿನ ಸೇಲಂ ಸಮೀಪದ ತಿರುಚಂಗೋಡು ಎಂಬ ಪುಟ್ಟ ಹಳ್ಳಿಯಿಂದ. ಯಂತ್ರಗಳನ್ನು ತಯಾರು ಮಾಡುವ ಕಾರ್ಖಾನೆಗಳು ಆ ಹಳ್ಳಿಯಲ್ಲೇ ಇವೆಯಂತೆ. ಹಳ್ಳಿಯ ಪ್ರತಿಯೊಂದು ವ್ಯಕ್ತಿಯು ಮೂರರಿಂದ ನಾಲ್ಕು ಯಂತ್ರಗಳನ್ನು ಇಟ್ಟುಕೊಂಡವರು. 150ರಷ್ಟು ಯಂತ್ರಗಳನ್ನು ಇಟ್ಟುಕೊಂಡ ವ್ಯಕ್ತಿಗಳೂ ಇದ್ದಾರೆ. ತೀವ್ರವಾಗಿ ಕಾಡುತ್ತಿರುವ ಕೂಲಿ ಸಮಸ್ಯೆಯ ಪರಿಹಾರಕ್ಕಾಗಿ ಯಂತ್ರಗಳಲ್ಲಿ ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಸುತ್ತಲೇ ಇರುತ್ತಾರೆ. ಉಭಯ ಜಿಲ್ಲೆಗಳಿಗೆ ಸೆಪ್ಟೆಂಬರ್ ನಿಂದ ಜೂನ್ ವರೆಗೆ ಧಾಂಗುಡಿ ಇಡುವ ಯಂತ್ರಗಳು ಮುನ್ನೂರರಷ್ಟು. ಒಂದೊಂದು ಯಂತ್ರಗಳು ದಿನಕ್ಕೆ ಮೂರರಷ್ಟು ತೂತು ಬಾವಿಗಳನ್ನು ಕೊರೆಯುತ್ತವೆ. ಸುಮಾರು 20 ಸಾವಿರಕ್ಕಿಂತ ಮೇಲ್ಪಟ್ಟು ಪ್ರತಿವರ್ಷ ತೂತು ಬಾವಿಗಳ ಕೊರೆತವಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಮತ್ತು ನೆರೆಯ ಬಂಟ್ವಾಳದ ಸ್ವಲ್ಪ ಭಾಗ ಕೊರೆತದಲ್ಲಿ ಅಗ್ರಸ್ಥಾನಿಗಳಂತೆ. ನಮ್ಮ ಕೊರೆತ ಪ್ರತಿವರ್ಷ ಹತ್ತು ಸಾವಿರಕ್ಕಿಂತ ಜಾಸ್ತಿ. 200 ರಷ್ಟು ಏಜೆಂಟುಗಳು ಕೊರೆತದಲ್ಲಿ ಸಹಾಯಕ್ಕಾಗಿ ಟೊಂಕಗಟ್ಟಿ ನಿಂತಿರುತ್ತಾರೆ.
90ರ ದಶಕದಲ್ಲಿ ನೀರು ಸಿಗುತ್ತಿದ್ದುದು ಸರಿಸುಮಾರು
ನೂರೆಂಬತ್ತರಿಂದ ಇನ್ನೂರು ಅಡಿಯಲ್ಲಿ. ವರುಷದಿಂದ ವರುಷಕ್ಕೆ ನೀರಿನ ಮಟ್ಟ 50ರಿಂದ 100 ಅಡಿಯಷ್ಟು ಕೆಳಗೆ ಹೋಗುತ್ತಿದೆ ಎಂದು ಅವರು ವಿಷಯವನ್ನು ಹಂಚಿಕೊಂಡರು. ಇಂದು ಸರಾಸರಿ ನೀರು ದೊರೆಯುವ ಮಟ್ಟವೆಂದರೆ 600 ಅಡಿಗಳು. ಅತ್ಯಂತ ಹೆಚ್ಚೆಂದರೆ ಸಾವಿರದ ಇನ್ನೂರು ಅಡಿ ಕೊರೆತದ ದಾಖಲೆ ಇದೆ. 10 ರಿಂದ 20 ಅಡಿ ಕೇಸಿಂಗ್ ಪೈಪುಗಳ ಬದಲಾಗಿ ಇಂದು ಗುಡ್ಡೆಯ ನೆತ್ತಿಯಲ್ಲಿ ಕೊರೆಯುವ ಕಾರಣ ನೂರರಿಂದ 200 ಅಡಿಯಷ್ಟು ಕೇಸಿಂಗ್ ಪೈಪುಗಳನ್ನು ಹಾಕಬೇಕಾಗುತ್ತದೆಯಂತೆ. ಜಾಸ್ತಿ ಅಳ ಹೋಗುವ ಕಾರಣ ಬೋರ್ವೆಲ್ಲುಗಳ ಯಶಸ್ಸು ನೂರಕ್ಕೆ 80ರಷ್ಟು ಇದೆಯಂತೆ. ಇತ್ತೀಚಿನ ಎರಡು ವರ್ಷಗಳಲ್ಲಿ ಜಾಸ್ತಿ ಆಳಕ್ಕೆ ಹೋದ ಬೋರ್ವೆಲ್ ಗಳಲ್ಲಿ ಬಣ್ಣದ ನೀರು ಬರುವುದು ಕಂಡು ಬಂದಿದೆಯಂತೆ. ಹಳೆಯ ಬೋರ್ವೆಲ್ಗಳಲ್ಲಿ ನೀರು ಬತ್ತಿಕೊಳ್ಳುವುದು ಮಾಮೂಲು ಪ್ರಕ್ರಿಯೆಗಳಲ್ಲಿ ಒಂದಾಗಿದೆ.
ಸಂಪೂರ್ಣ ಕರ್ನಾಟಕದಲ್ಲಿ ವರ್ಷವೊಂದರ 50 ರಿಂದ 60 ಸಾವಿರ ತೂತುಬಾವಿಗಳ ನಿರ್ಮಾಣವಾಗುತ್ತದೆ. ದೊಡ್ಡಬಳ್ಳಾಪುರದ ಕೃಷಿಕರೊಬ್ಬರ ನೂರು ಎಕರೆ ಜಾಗದಲ್ಲಿ ಕೊರೆಸಿದ ಬೋರ್ವೆಲ್ ಗಳ ಸಂಖ್ಯೆ 500ಕ್ಕಿಂತ ಜಾಸ್ತಿ ಇದೆ. ಸರಕಾರಿ ಲೆಕ್ಕದಲ್ಲಿ ಆಗುವ ಬೋರ್ವೆಲ್ಗಳು ಇದರೊಂದಿಗೆ ಸೇರಿಲ್ಲವಂತೆ.
ತನ್ನ ಆಶ್ರಮವನ್ನು ಕೊಚ್ಚಿಕೊಂಡು ಹೋದ ಸಿಟ್ಟಿನಲ್ಲಿ ಗಂಗೆಯನ್ನು ಜೂಹ್ನು ಮಹರ್ಷಿ ಆಪೋಷಣ ತೆಗೆದುಕೊಂಡನಂತೆ. ಸಿಟ್ಟು ಬಿರಿದಾಗ ಕಿವಿಯ ಮೂಲಕ ಹೊರ ಹಾಕಿದನಂತೆ. ನಾವುಗಳೆಲ್ಲ ಭೂಮಿಯಂತರ್ಗತ ಗಂಗೆಯನ್ನು ಇಂದು ಆಪೋಷಣೆ ತೆಗೆದುಕೊಳ್ಳುತ್ತಿದ್ದೇವೆ. ಜುಹ್ನುವಂತೆ ಹೊರ ಹಾಕುವ ಸಾಮರ್ಥ್ಯ ನಮ್ಮಲ್ಲಿಲ್ಲ. ಆಪೋಷಿಸಿದ ಗಂಗೆ ಎಲ್ಲೆಂದರಲ್ಲಿ ಸುರಿದು ನಮ್ಮೆಲ್ಲ ಆಶ್ರಮಗಳನ್ನು ಕೊಚ್ಚಿಕೊಂಡು ಹೋಗುತ್ತಿದ್ದಾಳೆ. ಯಾವುದೇ ಮುಂದಾಲೋಚನೆ ಇಲ್ಲದೆ ಆಪೋಷಿಸಿದರೆ, ಮುಂದೊಂದು ದಿನ ಆಕೆಯ ಸಹಾಯ ನಮಗೆ ಸಿಗದೇ ಹೋಗಬಹುದು. ಸುಟ್ಟು ಕರಕಲಾದ ಸಗರ ಪುತ್ರರ ಸಾಲಿಗೆ ನಾವು ಸೇರುವಂತಾದರೆ ಆಶ್ಚರ್ಯವಿಲ್ಲ ಎಂಬ ಭಾವ ದೊಂದಿಗೆ ಮಾತಿಗೆ ಮಂಗಳ ಹಾಡಿದ್ದೆವು.
ಸೃಷ್ಟಿಗೆ ವಿರುದ್ಧವಾಗಿ ನಡೆದರೆ ಪರಿಣಾಮ ಅತಿ ಘೋರವಾಗಿರುತ್ತದೆ ಎಂಬ ಗುರುವಾಣಿ ಮತ್ತೆ ಮತ್ತೆ ನೆನಪಿಗೆ ಬಂತು.
-ಎ.ಪಿ ಸದಾಶಿವ, ಮರಿಕೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ