ನಿಧಾಗ್ ಕರುನಾಡು ಮತ್ತವರ ತಂಡ ಪ್ರಸ್ತುತ ಪಡಿಸಿದ ನೃತ್ಯ ಕರ್ತಾದ ಒಟ್ಟು ಅಂದ
ಬೆಂಗಳೂರು: ಸಂಗೀತದ ಸಪ್ತ ಸ್ವರಗಳನ್ನೇ ಜಗದೀಶ್ವರನ ವಿವಿಧ ಕಥೆಗಳನ್ನು ಪ್ರಸ್ತುತ ಪಡಿಸಿದ ರೀತಿ... ನೋಡಿದ್ದೂ ಸಾರ್ಥಕ ಅನಿಸಿತು.
ಹುಟ್ಟು ಎನ್ನುವುದು ಕೇವಲ ಕಲ್ಪನೆಯಾಗಿ ಬ್ರಹ್ಮ,ವಿಷ್ಣುವಿನ ನಡುವೆ ಮೇಲಾರು ಎಂಬ ವಾದ, ಹರ ಸವಾಲಾಗಿ ಬೆಳೆದಾಗ ಆತನ ಆದಿ, ಅಂತ್ಯಗಳನ್ನು ಹುಡುಕುತ್ತಾ ಹೊರಟ ಹಂಸವಾಹಿನಿ ಬ್ರಹ್ಮ ಮತ್ತು ಕೂರ್ಮ ರೂಪಿಯಾಗಿ ವಿಷ್ಣು. ಇಬ್ಬರೂ ಹುಡುಕಲಾರದೇ ಹರನೇ ಶ್ರೇಷ್ಠ ಎಂದೊಪ್ಪುವ ಸದ್ಯೋಜ.... (ಸ)
ಅಲ್ಪಾಯುಷಿ ಮಗನಿಗಿಂತ ನಿತ್ಯ ಶಿವ ಸಾಂಗತ್ಯದಲ್ಲಿರುವ ನಂದಿಯನ್ನು ಪಡೆಯುವ ಮೂಲಕ ರಿಷಭ ವಾಹನನಾದ ಹರ.... (ರಿ)
ಪೂರ್ವಜರ ಪಾಪ ಕಳೆಯಲು ದರ್ಪದಿಂದ ಧುಮ್ಮಿಕ್ಕಿದ ಗಂಗೆಯನ್ನು ತನ್ನ ಶಿರದಲ್ಲಿ ಬಂಧಿಸಿ ಗಂ ಗಾಧರನಾದ ಈಶ್ವರ....(ಗ)
ಭಕ್ತ ಮಾರ್ಕಂಡೇಯನ ಶಿವ ಭಕ್ತಿ, ಶಿವನಾಮ ಮಂತ್ರದ ಜಪದ ಮುಂದೆ ಸಾಕ್ಷಾತ್ ಯಮನನ್ನೂ ಮಣಿಸುವ ಮೂಲಕ ಮೃತ್ಯುಂಜಯನಾದ ಶಿವ.... (ಮ)
ರಾಕ್ಷಣರ ವಧೆಯ ಮೂಲಕ ಪುರಹರ ನಾದ ಸದಾಶಿವ.... (ಪ)
ನಿರೀಶ್ವರ ಯಾಗದ ಮೂಲಕ ದಾಕ್ಷಾಯಿಣಿಯ ಅಗ್ನಿ ಪ್ರವೇಶದಿಂದ ಕುಪಿತನಾಗಿ, ತನ್ನ ಜಟೆಯ ಮೂಲಕ ವೀರಭದ್ರನನ್ನು ಸೃಷ್ಟಿಸಿ ದಕ್ಷಾಧ್ವರ ಹರ ನಾದ ಮೃತ್ಯುಂಜಯ.... (ದ)
ಸಮುದ್ರಮಥನ ಕಾಲದ ಹಾಲಾ ಹಲವನ್ನು ಕುಡಿಯುವಾಗ ಪಾರ್ವತಿ ಶಿವನ ಗಂಟಲಿನಲ್ಲಿ ವಿಷವನ್ನು ತಡೆದಾಗ ನೀಲ ಕಂಠನಾದ ಸರ್ವೇಶ್ವರ.... (ನಿ)
ಕೊನೆಗೆ ಸತಿ ಪಾರ್ವತಿಯನ್ನು ವರಿಸಿ, ಜಗದ ಒಳಿತಿಗೆ ಕಾರಣನಾಗುವ ಸಅಂಬಾ ಶಿವನಾದ ಸಾಂಬಶಿವ.. (ಸ)
ಹೀಗೆ 'ಸರಿಗಮಪದನಿಸ' ದ ಮೂಲಕ ಪ್ರಸ್ತುತ ಪಡಿಸಿದ ನೃತ್ಯ ಕರ್ತಾ.
ಪ್ರತೀ ಕಥೆಯ ಆರಂಭದ ಬಗ್ಗೆ ನೀಡುತ್ತಿದ್ದ ನೃತ್ಯ ಪೀಠಿಕೆ, ಕಥೆಯನ್ನು ವಿಶದೀಕರಿಸುತ್ತಾ ನೋಡುಗನನ್ನು ತನ್ನೊಳಗೆ ಅವುರ್ಭವಿಸಿಕೊಂಡ ಚಕ್ಯತೆ, ಕಥೆಯ ಕೊನೆಯಲ್ಲಿ ಈಶ್ವರನ ಸನ್ನಿವೇಶಕ್ಕೊಪ್ಪುವ ಭಂಗಿ (ಉದಾ - ಶಿವ ನಂದಿ, ಗಂಗಾಧರ, ದಾಕ್ಷಾಯಿಣಿ - ಹರ...) ಪ್ರತೀ ನೃತ್ಯಕ್ಕೆಂದೇ ಹೊಂದಿಸಿಕೊಂಡ ಬೆಳಕು... ಮತ್ತದರ ಆಟ... ಕರ್ಣಾನಂದಕರ ಸಂಗೀತ ಸಾಂಗತ್ಯ...
ಎಲ್ಲವನ್ನೂ ತನ್ನ ಭದ್ರ ಬಂಧನದ ಮೂಲಕ ಕತೆಯ ಚೌಕಟ್ಟಿನೊಳಗೆ ಯಶಸ್ವಿಗೊಳಿಸಿದ ಟಿ.ಎಸ್.ಶರತ್ ಅವರ ಸಾಹಿತ್ಯ, ಕಥೆಯ ಸಂಕಲನ, ಒಟ್ಟೂ ಕಲ್ಪನೆಯ ವಿಸ್ತಾರ .ವಿದ್ವಾನ್ ಬಾಲಸುಬ್ರಹ್ಮಣ್ಯ ಶರ್ಮರವರ ಕಂಠಸಿರಿಯಿಂದ ಮೂಡಿದ ಗಾಯನ, ಕೀರ್ತಿ ಕುಮಾರ್ ಬೆಳಕಿನ ಸಂಯೋಜನೆ ಚೇತೋಹಾರಿಯಾಗಿ ಮೂಡಿಬಂತು.
ನಿಧಾಗ್ ಮತ್ತು ರಚನಾ ಕಾರ್ಣಿಕ್ ಅವರ ನೃತ್ಯ ಸಂಯೋಜನೆ. ಇಡೀ ರಂಗವನ್ನು ಒಂದು ಘಂಟೆಯ ಕಾಲ ಹರಮಯವನ್ನಾಗಿಸಿದ ಕಲಾವಿದರ ಭಾವ, ನಾಟ್ಯ, ಚಲನೆಯನ್ನು ಸಂಯೋಜಿಸಿದ ಈ ಇಬ್ಬರ ಶ್ರಮ, ಪರಿಣತಿಗೆ ಶರಣು.
ಎಲ್ಲಾ ವಿಭಾಗದಲ್ಲೂ, ಎಲ್ಲೂ ತಡವರಿಸದೇ, ಅದ್ಭುತ ಸಂಜೆಯನ್ನಾಗಿಸಿದ ಕರುನಾಡು ನಿಧಾಗ್ ಅವರ ತಂಡದ ಈ ಪ್ರಸ್ತುತಿ ಕರ್ತಾ ಮತ್ತಷ್ಟು ಪ್ರದರ್ಶನ ಕಾಣಲಿ.