ಮಂಗಳೂರು: ಆಜಾದೀ ಕೀ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರಕಾರ ಹಮ್ಮಿಕೊಂಡಿರುವ 'ಹರ್ ಘರ್ ತಿರಂಗಾ' ಅಭಿಯಾನ ಅತ್ಯಂತ ಔಚಿತ್ಯಪೂರ್ಣ ಕಾರ್ಯಕ್ರಮವಾಗಿದ್ದು, ದೇಶದ ಪ್ರತಿಯೊಬ್ಬ ನಾಗರೀಕರೂ ಈ ಅಭಿಯಾನದಲ್ಲಿ ಕೈ ಜೋಡಿಸಬೇಕು. ರಾಷ್ಟ್ರ ಧ್ವಜ ನಮ್ಮೆಲ್ಲರ ಸ್ವಾಭಿಮಾನದ ಸಂಕೇತ. ಈ ಅಭಿಯಾನ ನಮ್ಮೊಳಗೆ ಸುಪ್ತವಾಗಿರುವ ದೇಶ ಪ್ರೇಮ ಮತ್ತು ದೇಶ ಭಕ್ತಿಯನ್ನು ಬಡಿದೆಬ್ಬಿಸಿ, ನಮ್ಮಲ್ಲಿ ದೇಶಕ್ಕಾಗಿ ಏನಾದರೂ ಕಿಂಚಿತ್ ಅಳಿಲು ಸೇವೆ ಸಲ್ಲಿಸುವಂತೆ ಮನ ಪರಿವರ್ತನೆಯಾಗಬೇಕು, ಹಾಗಾದಲ್ಲಿ ಮಾತ್ರ ಈ ಆಚರಣೆ ಅರ್ಥ ಪೂರ್ಣವಾಗಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣೆಯ ಮುಖ್ಯ ಪಾಲಕರು ಮತ್ತು ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅಭಿಪ್ರಾಯಪಟ್ಟರು.
ನಗರದ ಪದವುನಲ್ಲಿರುವ ಶ್ರೀ ವೇದಮಾಯು ಆಯುರ್ವೇದ ಆಸ್ಪತ್ರೆಯಲ್ಲಿ ದಿನಾಂಕ 11-08-2022ನೇ ಗುರುವಾರದಂದು ಹರ್ ಘರ್ ತಿರಂಗಾ ಅಭಿಯಾನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣೆ ಪಡೆಯ ವತಿಯಿಂದ ಚಾಲನೆ ನೀಡಲಾಯಿತು.
ಶ್ರೀ ವೇದಮಾಯು ಆಸ್ಪತ್ರೆಯ ಮುಖ್ಯ ವೈದ್ಯರಾದ ಡಾ|| ಕೇಶವ ರಾಜ್ ಅವರು ಮಾತನಾಡಿ ರಾಷ್ಟ್ರ ಧ್ವಜ ನಮ್ಮ ಸಾರ್ವಭೌಮತ್ವ ಮತ್ತು ಗೌರವದ ಪ್ರತೀಕವಾಗಿದೆ. ನಾವೆಲ್ಲರೂ ಈ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ನಮ್ಮನ್ನು ಮಗದೊಮ್ಮೆ ದೇಶಕ್ಕಾಗಿ ಸಮರ್ಪಸಿಕೊಳ್ಳೋಣ ಮತ್ತು ಬಲಿಷ್ಠ ಆರೋಗ್ಯಪೂರ್ಣ ಭಾರತದ ನಿರ್ಮಾಣಕ್ಕಾಗಿ ಪ್ರತಿಜ್ಞೆ ಮಾಡೋಣ ಎಂದು ಹಾರೈಸಿದರು. ಶ್ರೀ ವೇದಮಾಯು ಆಸ್ಪತ್ರೆಯ ವೈದ್ಯರು,ದಾದಿಯರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣಾ ತಂಡದ ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ