ಉಜಿರೆ: ಬೆಂಗಳೂರಿನ ಡಾ. ನರಹಳ್ಳಿ ಪ್ರತಿಷ್ಠಾನವು ಉಜಿರೆ ಎಸ್.ಡಿ.ಎಂ. ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ರಾಜಶೇಖರ ಹಳೆಮನೆ ಅವರನ್ನು ತನ್ನ 2019ನೇ ಸಾಲಿನ ‘ನರಹಳ್ಳಿ ಪ್ರಶಸ್ತಿ’ಗೆ ಆಯ್ಕೆ ಮಾಡಿದೆ. ಪ್ರಶಸ್ತಿಯು ಹದಿನೈದು ಸಾವಿರ ರೂ. ನಗದು ಮತ್ತು ಫಲಕವನ್ನು ಒಳಗೊಂಡಿರುತ್ತದೆ. ಪ್ರತಿವರ್ಷ ಯುವ ಬರಹಗಾರರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ಪ್ರತಿಷ್ಠಾನದ ಪ್ರಕಟನೆ ತಿಳಿಸಿದೆ.
ಸೆ.18ರಂದು ಬೆಂಗಳೂರಿನ ನ್ಯಾಶನಲ್ ಕಾಲೇಜಿನ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ನಡೆಯಲಿರುವ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಜಿ.ಎನ್. ರಂಗನಾಥರಾವ್ ಪ್ರಶಸ್ತಿ ಪ್ರದಾನ ಮಾಡುವರು. ಯುವ ವಿಮರ್ಶಕ ವೆಂಕಟಗಿರಿ ದಳವಾಯಿ ಅಭಿನಂದನಾ ನುಡಿಗಳನ್ನಾಡುವರು. ಪ್ರತಿಷ್ಠಾನದ ಅಧ್ಯಕ್ಷ ಎಚ್.ಎಸ್. ವೆಂಕಟೇಶಮೂರ್ತಿ ಅಧ್ಯಕ್ಷತೆ ವಹಿಸುವರು. ಅಲ್ಲದೆ, ಪ್ರೇಮಾ ಉಪಾಧ್ಯ ಮತ್ತು ತಂಡದಿಂದ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮವೂ ನಡೆಯಲಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಆನಂದರಾಮ ಉಪಾಧ್ಯ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಡಾ. ರಾಜಶೇಖರ ಹಳೆಮನೆ:
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ನಾಗಡದಿನ್ನಿಯಲ್ಲಿ ಜನಿಸಿದ ಡಾ. ರಾಜಶೇಖರ ಹಳೆಮನೆ ಅವರು ‘ಬಿಸಿಲ ಉಡಿಯ ಕಥೆಗಳು’ (ಕಥಾ ಸಂಕಲನ), ‘ಭವದ ಪಾಡು’, ‘ಬೊಗಸೆಯಷ್ಟು ಓದು’, ‘ನುಡಿ ನಡೆ’, 'ಪರಿಣಾಮದೊಳಗೆ', 'ರೂಪ ಸ್ವರೂಪ' (ವಿಮರ್ಶಾ ಸಂಕಲನಗಳು), ‘ತಲೆಮಾರುಗಳ ಸಂಕಥನ’ (ಸಂಶೋಧನೆ) 'ಮಕ್ಕಳಿಗಾಗಿ ಬೀರಪ್ಪ', 'ಮಹಾಕವಿ ಕಾಳಿದಾಸ', `ಜ್ಯೋತಿ ಬಾಪುಲೆ' ಕೃತಿಗಳನ್ನು ರಚಿಸಿದ್ದಾರೆ. ಇವರ ಕಥೆಗಳು 'ವಿಜಯಕರ್ನಾಟಕ', 'ಕರ್ಮವೀರ' ಮೊದಲಾದ ಪತ್ರಿಕೆಗಳ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದು, 'ಮಯೂರ', 'ತರಂಗ', 'ತುಷಾರ' ಮೊದಲಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಇವರಿಗೆ ಜಯತೀರ್ಥ ರಾಜಪುರೋಹಿತ ಕಥಾ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಕೇಂದ್ರ ಸಾಹಿತ್ಯ ಅಕಾಡೆಮಿಯು ಪಾಂಡಿಚೇರಿ ಮತ್ತು ವಿಜಯವಾಡದಲ್ಲಿ ಆಯೋಜಿಸಿದ ದಕ್ಷಿಣ ಭಾರತ ಸಾಹಿತ್ಯ ಸಮಾವೇಶದಲ್ಲಿ ಅವರು ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಉತ್ತಮ ವಾಗ್ಮಿ ಮತ್ತು ಚಿಂತಕ ಎಂದು ಪ್ರಸಿದ್ಧರಾಗಿರುವ ಇವರು, ಡಾ. ನಾ. ಮೊಗಸಾಲೆ, ಡಾ. ಚಿಂತಾಮಣಿ ಕೊಡ್ಲೆಕೆರೆಯಂಥ ಹಿರಿಯ ಸಾಹಿತಿಗಳ ಕೃತಿಗಳಿಗೆ ಮುನ್ನುಡಿಯನ್ನೂ ಬರೆದಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ