ಮಂಗಳೂರು: "ಹಲವು ವರ್ಷಗಳಿಂದ ಈ ಸಂಘದ ಕಾರ್ಯಕ್ರಮಗಳ ಬಗ್ಗೆ ತಿಳಿದಿದ್ದೆ. ಈಗ ಶತಮಾನೋತ್ಸವ ಸಂದರ್ಭದ ಸರಣಿಯಲ್ಲಿ ತನಗೆ ಅಧ್ಯಕ್ಷ ಸ್ಥಾನ ನೀಡಿದ್ದು ಅತ್ಯಂತ ಸಂತೋಷ ನೀಡಿದೆ. ಈ ಸಂಘ ಇನ್ನಷ್ಟು ಹೆಸರು ಗಳಿಸಲಿ" ಎಂದು ಶ್ರೀ ವೀರಸಿಂಹ ಶೆಣೈ ಅವರು ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವದ 17 ನೆಯ ಸರಣಿ ಕಾರ್ಯಕ್ರಮದಲ್ಲಿ ಶರತ್ ಕುಮಾರ್ ಕದ್ರಿಯವರನ್ನು ಸಮ್ಮಾನಿಸಿ ಅಧ್ಯಕ್ಷ ಸ್ಥಾನದಿಂದ ತಮ್ಮ ಆಶಯವನ್ನು ತಿಳಿಸಿದರು.
ಕರ್ನಾಟಕ ಯಕ್ಷಗಾನ ಅಕಾಡಮಿಯ ಸಹಭಾಗಿತ್ವದಲ್ಲಿ 50 ಕಲಾವಿದರ ಸಂಮಾನ, 50 ಕೀರ್ತಿಶೇಷ ಕಲಾವಿದರ ಸಂಸ್ಮರಣೆ ಹಾಗೂ 50 ವಿಶೇಷ ತಾಳಮದ್ದಳೆ ಕೂಟಗಳು ಕಳೆದ ನಾಲ್ಕು ತಿಂಗಳುಗಳಿಂದ ಪ್ರತೀ ಭಾನುವಾರ ಸಂಯೋಜಿಸಲ್ಪಟ್ಟಿವೆ.
"ಶರತ್ ಕುಮಾರ್ ಕದ್ರಿಯವರು ಉತ್ತಮ ಸಂಘಟಕ, ಹವ್ಯಾಸಿ ಬಳಗ ಕದ್ರಿ (ರಿ), ಇದರ ಸ್ಥಾಪಕಾಧ್ಯಕ್ಷ, ಶಾಲೆ ಕಾಲೇಜುಗಳಲ್ಲಿ ಯಕ್ಷಗಾನ ಕಲಿಸಿ, ಸ್ಪರ್ಧೆಗಳಿಗೆ ತರಬೇತಿ ನೀಡಿದವರು. 100 ಕಲಾವಿದರಿಗೆ ಸಂಮಾನ ಮಾಡಿ "ಶತಕ ಧ್ವಜ" ಎಂಬ ಬಿರುದನ್ನು ಪಡೆದವರು ಎಂದು ಶರತ್ ಕುಮಾರ್ ಕದ್ರಿ ಇವರನ್ನು ಪ್ರಧಾನ ಕಾರ್ಯದರ್ಶಿ ಪಿ.ಸಂಜಯ ಕುಮಾರ್ ರಾವ್ ಅಭಿನಂದಿಸಿದರು
ಸನ್ಮಾನಕ್ಕೆ ಉತ್ತರಿಸಿದ ಶ್ರೀ ಶರತ್ ಕುಮಾರ್ ಕದ್ರಿಯವರು, 1991 ರಲ್ಲಿ ಭಾರತೀಯ ವಿದ್ಯಾಭವನದಲ್ಲಿ ಕಲಿತ ಬಳಿಕ ಯಕ್ಷಗಾನವನ್ನು ಮುಂದಿವರಿಸಿದ್ದು ಈ ಸಂಘದಲ್ಲಿ. ತನಗೆ ನೀಡಿದ ಸನ್ಮಾನ ನನ್ನ ಗುರುಗಳಾದ ಪಿ.ವಿ. ಪರಮೇಶ್ ಮತ್ತು ಸರ್ಪಂಗಳ ಈಶ್ವರ ಭಟ್ ಇವರಿಗೆ ಅರ್ಪಿಸುತ್ತೇನೆ ಎಂದರು.
ಸಂಘದ ಗೌರವಾಧ್ಯಕ್ಷರಾದ ಶ್ರೀ ಪ್ರದೀಪ್ ಕುಮಾರ ಅವರು "ಶರತ್ ಕುಮಾರ್ ಕದ್ರಿಯವರು ಮದ್ದಳೆ ವಾದನ, ಪ್ರಸಾಧನ ಹಾಗೂ ನಾಟ್ಯಗುರು ಮತ್ತು ಸಂಘಟಕ. ಇಂತಹ ಕಲಾವಿದರು ಬಹಳ ವಿರಳ. ಇವರಿಗೆ ಮಹಾಮಾಯೆಯ ಅನುಗ್ರಹ ಸದಾ ಇರಲಿ" ಎಂದು ಹಾರೈಸಿದರು.
ನಾರಾಯಣ ದೇವಾಂಗ ಸಂಸ್ಮರಣೆ:
ಕೀರ್ತಿಶೇಷ ನಾರಾಯಣ ದೇವಾಂಗರು ಹಲವು ವರ್ಷಗಳ ಕಾಲ ವಾಗೀಶ್ವರೀ ಸಂಘದಲ್ಲಿ ಅರ್ಥಧಾರಿಯಾಗಿ, ಭಾಗವತರಾಗಿ ಕಲಾ ಸೇವೆಯನ್ನು ಮಾಡಿದವರು.ವೃದ್ಧಾಪ್ಯದಲ್ಲಿಯೂ ಪ್ರತಿ ವಾರವೂ ತಪ್ಪದೆ ಭಾಗವಹಿಸುತ್ತಿದ್ದ ದೇವಾಂಗರ ಸಂಸ್ಮರಣೆ ಮಾಡಲಾಯಿತು.
ಶಿವಾನಂದ ಪೆರ್ಲಗುರಿ ಸನ್ಮಾನ ಪತ್ರ ವಾಚಿಸಿದರು. ಶ್ರೀಮತಿ ಮಧುಮತಿ ಶೆಣೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅಧ್ಯಕ್ಷ ಶ್ರೀ ಶ್ರೀನಾಥ್ ಪ್ರಭು, ಕೋಶಾಧಿಕಾರಿ ಶ್ರೀ ಶಿವಪ್ರಸಾದ್ ಪ್ರಭು, ಉಪಾಧ್ಯಕ್ಷೆ
ಶ್ರೀಮತಿ ಪ್ರಫುಲ್ಲ ನಾಯಕ್, ಭಾಗವತ ಅಶೋಕ್ ಬೋಳೂರು ಉಪಸ್ಥಿತರಿದ್ದರು. ಬಳಿಕ ಸಂಘದ ಕಲಾವಿದರಿಂದ "ಸೇತು ಬಂಧನ" ತಾಳಮದ್ದಳೆ ಜರಗಿತು.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ