|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿಷ್ಣುಗುಪ್ತ ವಿಶ್ವವಿದ್ಯಾಪೀಠದಿಂದ ಮತ್ತೆ ಭಾರತೀಯ ಇತಿಹಾಸ ಮರುಕಳಿಸಬಹುದೇ?

ವಿಷ್ಣುಗುಪ್ತ ವಿಶ್ವವಿದ್ಯಾಪೀಠದಿಂದ ಮತ್ತೆ ಭಾರತೀಯ ಇತಿಹಾಸ ಮರುಕಳಿಸಬಹುದೇ?



ಮೇಲಿನ ಪ್ರಶ್ನೆ ಅನೇಕರ ಮನದಲ್ಲಿ ಮೂಡಿಬಂದಿರಬಹುದು. ಆ ದಿಕ್ಕಿನತ್ತ ಪ್ರಥಮ ಹೆಜ್ಜೆ ಗೋಕರ್ಣದ ಅಶೋಕೆಯಲ್ಲಿ ಆರಂಭವಾಗಿದೆ. ಇತಿಹಾಸವನ್ನು ಬರೆಯಬೇಕಾದರೆ ಆ ದಿಕ್ಕಿನಲ್ಲಿ ಆಳ ಅಧ್ಯಯನ ಬೇಕಾಗುತ್ತದೆ. ಅನೇಕ ದಾಖಲೆಗಳನ್ನು ಪರಿಶೀಲಿಸಬೇಕಾಗುತ್ತದೆ.


ನಮ್ಮ ಶ್ರೀಮಠಕ್ಕೆ ಅಂತಹ ಅಧ್ಯಯನ ಆಸಕ್ತಿಯೂ, 36 ಯತಿವರೇಣ್ಯರ ಕಾಲದ ಅಧ್ಯಯನಗಳು, ಸಾವಿರದ ಮುನ್ನೂರು ವರ್ಷಕ್ಕಿಂತ ಹೆಚ್ಚಿನ ಕಾಲದ ಇತಿಹಾಸದ ದಾಖಲೆಗಳು ಎಲ್ಲವೂ ಇರುವುದರಿಂದ,ಭಾರತೀಯ ಇತಿಹಾಸವನ್ನು ಪುನರ್ ರೂಪಿಸಲು ಹೆಚ್ಚಿನ ಅನುಕೂಲವಿದೆ.


ವಿದ್ಯಾನಂದ ಶೆಣೈಯವರು ಮಾತಿನ ಮೂಲಕ ಭಾರತದ ಇತಿಹಾಸದ ಕಲ್ಪನೆಯನ್ನು ನಮ್ಮ ಮುಂದಿರಿಸಿದ್ದರು. ಕೇಳುತ್ತಿದ್ದ ನಮಗೆ ರೋಮಾಂಚನ ಆಗುತ್ತಿತ್ತು. ಹೆಬ್ಬಂಡೆಯನ್ನು ಕೊರೆದು ಮಾಡಿದ, ಅನೇಕ ಕಥೆಗಳನ್ನು ಸಾರುವ ಅಜಂತಾ-ಎಲ್ಲೋರ ಗುಹೆಗಳನ್ನು ನೋಡಿದರೆ ಮೂಕವಿಸ್ಮಿತರಾಗದವರು ಯಾರೂ ಇರಲಾರರು. ಆಧುನಿಕ ರಾಸಾಯನಿಕದಿಂದ ಕೂಡಿದ ಬಣ್ಣಗಳು ಒಂದೆರಡು ವರ್ಷಗಳಲ್ಲಿ ತನ್ನ ಆಕರ್ಷಣೆಯನ್ನು ಕಳೆದುಕೊಳ್ಳುವುದು ನೋಡಿಲ್ಲವೇ? ಸಾವಿರಾರು ವರುಷಗಳ ಹಿಂದೆ ಮಾಡಿದ ಬಣ್ಣದ ಲೇಪನದ ಚಿತ್ರಕಲೆಗಳು ಇಂದೂ ಇದೆ ಎಂದಾದರೆ, ಅದೆಂತಹ ಉನ್ನತ ತಂತ್ರಜ್ಞಾನ ಇರಬಹುದು. ಸಾವಿರ ಅಡಿಗಿಂತ ಜಾಸ್ತಿಯ ಶ್ರವಣಬೆಳಗೊಳದ ಗೊಮ್ಮಟನನ್ನು ಪರ್ವತದ ತುದಿಯಲ್ಲಿ ನಿಲ್ಲಿಸಬೇಕಾದರೆ, ಚಿತ್ರದುರ್ಗದ ಕಲ್ಲಿನ ಕೋಟೆಯ ಹವಾನಿಯಂತ್ರಣ ವ್ಯವಸ್ಥೆ, ವೈಭವದ ಇತಿಹಾಸವನ್ನು ಸಾರುವ ಹಂಪಿ, ಕಲಾಕುಸುಮಗಳ ಬೇಲೂರು ಹಳೇಬೀಡು, ಸಮುದ್ರವನ್ನೇ ಬಂಧಿಸಿದ ರಾಮಸೇತು, ಇಂತಹ ಸಾವಿರ ಸಾವಿರಗಳು ನಮ್ಮ ಕಣ್ಣಮುಂದಿದೆ. ಯಾವ ಆಧುನಿಕ ಇಂಜಿನಿಯರಿಂಗ್ ಕಾಲೇಜುಗಳು ಇರದ ಕಾಲದಲ್ಲಿ ಇಂತಹ ಅದ್ಭುತ ತಂತ್ರಜ್ಞಾನಗಳು ಬೆಳೆದುಬಂದಿದೆ ಎಂದಾದರೆ ಭಾರತದಲ್ಲಿ ವಿದ್ಯೆ ಇರಲಿಲ್ಲವೇ?


ಕೆಲವು ವರ್ಷಗಳ ಹಿಂದೆ  ಹಿತ್ಲಳ್ಳಿ ನಾಗೇಂದ್ರ ಭಟ್ಟ ಎಂಬ ಘನವಿದ್ವಾಂಸರೊಬ್ಬರು ನಮ್ಮ ಮನೆಗೆ ಬಂದಿದ್ದರು.  ನಾನು ಹುಟ್ಟು ಕೃಷಿಕನಾದುದರಿಂದ ಅವರನ್ನು ಗಿಡಗೆಳೆತನ ಸಂಘದ ಸಭೆಯೊಂದಕ್ಕೆ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಕರೆಸಿದ್ದೆವು. ವರಾಹಮಿಹಿರ ಸಂಹಿತೆಯನ್ನು ನಾಲಿಗೆಯ ತುದಿಯಲ್ಲಿ ಇರಿಸಿಕೊಂಡಿದ್ದರು. ಭಾರತೀಯ ಕೃಷಿ ಪರಂಪರೆ ಬೆಳೆದು ಬಂದ ಪರಿಯನ್ನು ಶ್ಲೋಕದ ಮೂಲಕ ಹೇಳಿ ವಿವರಿಸುವಾಗ ಮೂಗಿನ ಮೇಲೆ ಬೆರಳಿಡುವಂತೆ ಆಗಿತ್ತು. ಕೃಷಿಯ ಬಗ್ಗೆ ನಾವಿಂದು ಏನು ತಿಳಿದಿದ್ದೇವೆ ಅವುಗಳನ್ನೆಲ್ಲ ಶತಮಾನಗಳ ಹಿಂದೆಯೇ ಶ್ಲೋಕದ ರೂಪದಲ್ಲಿ ಬರೆದು ತಿಳಿಸಿದ್ದಾರೆ. ಬರೆದುದರಲ್ಲಿ ನಮಗೆ ಗೊತ್ತಿಲ್ಲದೆ ಇರುವುದು  ಜಾಸ್ತಿ. ಇಂತಹ ಸಂಹಿತೆಗಳು ಅದೆಷ್ಟು ಸಾವಿರ ಸಂಖ್ಯೆಯಲ್ಲಿ ಭಾರತದಲ್ಲಿ ಇದೆ ಮತ್ತು ಇತ್ತು ಎಂದು ನನಗೆ ಗೊತ್ತಿಲ್ಲ. ಇತ್ತೀಚಿನ ದಿನಗಳಲ್ಲಿ ಸಂಸ್ಕೃತ ಭಾಷೆಯಲ್ಲಿ ಬರೆದ ಇಂತಹ ಸಂಹಿತೆಗಳನ್ನು ಓದಿ ಮನನ ಮಾಡಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಭಾಸವಾಗುತ್ತಿದೆ.


ನಾವೆಲ್ಲರೂ ಇಂದು ಭಾರತದ ಪಾರಂಪರಿಕ ವೈಭವವನ್ನು ವೀಕ್ಷಣೆಗೆ ಹೋಗುತ್ತೇವೆ. ಎಷ್ಟು ಬೇಡವೆಂದರೂ ವಾವ್ ಎಂಬ ಉದ್ಗಾರ ಪ್ರತಿಯೊಬ್ಬರ ಬಾಯಲ್ಲೂ ಬಂದೇ ಬರುತ್ತದೆ. ನಾಲ್ಕಾರು ಫೋಟೋಗಳನ್ನು ಕ್ಲಿಕ್ಕಿಸಿಕೊಂಡು ಪರಿಚಯಸ್ಥರಲ್ಲಿ, ಅಂತರ್ಜಾಲದಲ್ಲಿ ಹಂಚಿಕೊಂಡು ಸಂತೋಷಿಸುತ್ತೇವೆ. ಇವುಗಳೆಲ್ಲಾ ಭಾರತದ ಹೆಮ್ಮೆ ಎಂದು ಮನದಲ್ಲಿ ಮೂಡಿಬಂದರೂ ಕಾರ್ಯದೊತ್ತಡದಿಂದ ನಾಲ್ಕಾರು ದಿನದಲ್ಲಿ ಮರೆತುಬಿಡುತ್ತೇವೆ. ಇಂತಹ ತಂತ್ರಜ್ಞಾನ ಗಳಿರಬಹುದು, ಕಲಾಕುಸುಮಗಳಿರಬಹುದು, ಪ್ರಪಂಚಕ್ಕೆ ಮಾದರಿಯಾಗುವ ಆಶ್ಚರ್ಯ ಗಳಿರಬಹುದು. ಇವುಗಳೆಲ್ಲಾ ಮೂಡಿಬಂದುದು ಅದೆಷ್ಟೋ ಸಾವಿರ ಸಾವಿರ ಸಂಖ್ಯೆಯ ಜನರ ತ್ಯಾಗದ ಫಲದಿಂದ.


ಹೀಗಿತ್ತು ನಮ್ಮ ಜ್ಞಾನ ಬಂಡಾರ, ಶ್ರೀಮಂತ ಸಂಸ್ಕಾರ,ವೈಭವದ ಸ್ಮಾರಕಗಳು,ಅಪೂರ್ವ ತಂತ್ರಜ್ಞಾನಗಳು ಎಂದೆನಿಸಿ ಕೊಳ್ಳುವುದು ಎಷ್ಟು ಹೆಮ್ಮೆಯೋ, ಅದಕ್ಕಿಂತ ಹೆಚ್ಚಿನ ಹೆಮ್ಮೆಪಡುವಂತಹ ವಿಷಯ ಮತ್ತೆ ಆ ಕಡೆಗೆ ಹೆಜ್ಜೆ ಇರಿಸಿರುವುದು.


ನಮ್ಮ ಹಿರಿಯರ ತ್ಯಾಗದ ಫಲವನ್ನು ನಾವಿಂದು ನೋಡುವಂತೆ, ನಮ್ಮ ತ್ಯಾಗದ ಫಲ ಮುಂದಿನ ಪೀಳಿಗೆಗೆ ದೊರೆಯುವಂತಾಗ ಬೇಡವೇ?


ಎತ್ತರದ ಬೆಟ್ಟದ ಮೇಲೆ ಅದ್ಭುತ ಕಲಾಕೃತಿಯ ಗುಡಿಯೊಂದಿದೆ. ನೋಡಬೇಕಾದರೆ ಏರಿ ಹೋಗಲೇಬೇಕು. ಏರಲು ಸಾಧ್ಯವಿಲ್ಲದವ ಅಲ್ಲೇನೂ ಇಲ್ಲ ಎಂದು ಹೇಳಬಹುದು, ಏರುತ್ತಿರುವವರಿಗೆ ಸುತ್ತಲಿನ ಪ್ರಕೃತಿಯೇಅದ್ಭುತ ಎನಿಸಬಹುದು, ಕಲಾಸಕ್ತಿಯವನಿಗೆ ಚಿತ್ರಕಲೆಗಳಮೇಲೆ ದೃಷ್ಟಿ ಕೂರಬಹುದು. ತಂತ್ರಜ್ಞಾನಿಗೆ ಈ ಬೆಟ್ಟದ ತುದಿಯಲ್ಲಿ ಅದೆಂತು ಸ್ಥಾಪಿಸಿರಬಹುದು ಎಂಬ ಯೋಚನೆ ಬರಬಹುದು, ಆಧ್ಯಾತ್ಮ ಜೀವಿಗೆ ದೇವರನ್ನು ಕಾಣಬಹುದು, ಏಕಾಂತ ವಾಸ ಅನೇಕರಿಗೆ ಹಿತವೆನಿಸಬಹುದು. ಭಾರತೀಯ ಜ್ಞಾನವೆಂದರೆ ಹೀಗೆ ಗುಡಿ ಇದ್ದಂತೆ. ಒಬ್ಬೊಬ್ಬನ ದೃಷ್ಟಿಯಲ್ಲಿ ಒಂದೊಂದು ವಿಧ.


ಇಂತಹ ಪಾರಂಪರಿಕ ಜ್ಞಾನ ಭಂಡಾರಗಳು ವಿಶ್ವವಿದ್ಯಾಪೀಠ ವಿದ್ಯಾರ್ಥಿಗಳ ಮೂಲಕ ಮುಂದಿನ ಪೀಳಿಗೆಗೆ ಹರಿದು ಬರಲಿ ಎಂಬ ಆಶಯ ನಮ್ಮೆಲ್ಲರದು ಆಗಲಿ ಎಂದು ಆಶಿಸುತ್ತೇನೆ. ಮಗುವೊಂದು ಹುಟ್ಟಿ ವಿದ್ಯಾ ಬುದ್ಧಿಯನ್ನು ಪಡಕೊಂಡು ಜ್ಞಾನವಂತನಾಗಲು ಹಲವು ವರುಷಗಳು ಬೇಕಾದಂತೆ ವಿದ್ಯಾಪೀಠ ಬೆಳೆಯಲು ಹಲವು ವರ್ಷಗಳು ಬೇಕಾದೀತು. ಬೆಳೆಸುವ ತಂದೆ-ತಾಯಿಗಳ ಪಾಲು ನಮ್ಮದೆಲ್ಲರದು ಆಗಲಿ ಎಂದು ಹಾರೈಸುವೆ.

ಹರೇರಾಮ.

-ಎ.ಪಿ. ಸದಾಶಿವ ಮರಿಕೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post