ಪಟ್ಲ ಸಂಭ್ರಮ: ನಾಳೆ (ಮೇ 29) ಕಲಾವಿದರ ಸ್ಮರಣೆ ಮತ್ತು ಯಕ್ಷ ವೈವಿಧ್ಯ

Upayuktha
0

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಮೇ 29ರಂದು ಮಂಗಳೂರು ಹೊರವಲಯದ ಅಡ್ಯಾರ್ ಗಾರ್ಡನ್ ನಲ್ಲಿ ನಡೆಯುವ 'ಯಕ್ಷಧ್ರುವ ಪಟ್ಲ ಸಂಭ್ರಮ- 2022' ಸಮಾರಂಭದಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿ ವಿವಿಧ ಬಗೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಅಗಲಿದ ಕಲಾವಿದರ ಸಂಸ್ಮರಣೆಯೂ ಒಳಗೊಂಡಿರುವುದು ವಿಶೇಷ.


ಸಮಾರಂಭದ ವೇದಿಕೆಗೆ ಈ ವರ್ಷ ನಿಧನರಾದ ಸಿನಿಮಾರಂಗದ ಯುವ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹೆಸರನ್ನಿರಿಸಲಾಗಿದೆ. ಅಲ್ಲದೆ ಸಭಾ ಕಲಾಪ ಮತ್ತು ಯಕ್ಷಗಾನ ಕಾರ್ಯಕ್ರಮಗಳ ನಡುವೆ ಅಗಲಿದ ಯಕ್ಷಗಾನ ಕಲಾವಿದರಿಗೆ ನುಡಿನಮನ ಸಲ್ಲಿಸಲಾಗುವುದು ಎಂದು ಟ್ರಸ್ಟ್ ನ ಸ್ಥಾಪಕಾಧ್ಯಕ್ಷ, ಭಾಗವತ ಸತೀಶ್ ಶೆಟ್ಟಿ ಪಟ್ಲ ತಿಳಿಸಿದ್ದಾರೆ.


ನುಡಿ ನಮನ:

ಪೂರ್ವಾಹ್ನ ಜರಗುವ 'ಯಕ್ಷಗಾನ ವೈಭವ' ಸಪ್ತಸ್ವರ ಕಾರ್ಯಕ್ರಮದಲ್ಲಿ ಅಗಲಿ ಹೋದ ಯಕ್ಷಗಾನ ವಾಲ್ಮೀಕಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಅವರ ಬಗ್ಗೆ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸಂಸ್ಮರಣಾ ಭಾಷಣ ಮಾಡುವರು. ಅಪರಾಹ್ನದ ತಾಳಮದ್ದಲೆ  ಸಂದರ್ಭ ಯಕ್ಷಗಾನ ವಿದ್ವಾಂಸರಾದ ದಿ. ಹೊಸ್ತೋಟ ಮಂಜುನಾಥ ಭಾಗವತ ಮತ್ತು ಪ್ರೊ.ಎಂ.ಎ. ಹೆಗಡೆ ಅವರ ಕುರಿತು ಡಾ.ಎಂ. ಪ್ರಭಾಕರ ಜೋಶಿ ನುಡಿನಮನ ಸಲ್ಲಿಸುವರು. ಸಂಜೆ ನಡೆಯುವ ಮಹಿಳಾ ಯಕ್ಷಗಾನಕ್ಕೆ ಮುನ್ನ ಶೇಷ್ಠ ಪುಂಡುವೇಷಧಾರಿ ದಿ.ಡಾ.ಪುತ್ತೂರು ಶ್ರೀಧರ ಭಂಡಾರಿಯವರನ್ನು ಕರ್ನೂರು ಮೋಹನ್ ರೈ ಸ್ಮರಿಸುವರು. ರಾತ್ರಿ ತೆಂಕು ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ಪ್ರದರ್ಶನಗಳು ನಡೆಯಲಿದ್ದು ಈ ಸಂದರ್ಭದಲ್ಲಿ ಭಾಗವತರಾದ ದಿ.ಪದ್ಯಾಣ ಗಣಪತಿ ಭಟ್ ಮತ್ತು ಪ್ರಸಾದ್ ಬಲಿಪರ ಬಗ್ಗೆ ಉಜಿರೆ ಅಶೋಕ ಭಟ್ ಸಂಸ್ಮರಣಾ ಭಾಷಣ ಮಾಡುವರು.

ಸೇವಾ ಕಾರ್ಯಕ್ರಮಗಳು:

ದಿನವಿಡೀ ನಡೆಯುವ ಪಟ್ಲ ಸಂಭ್ರಮದಲ್ಲಿ ಕಲಾವಿದರ ಸಮಾವೇಶ, ಪಟ್ಲ ಪ್ರಶಸ್ತಿ ಪ್ರದಾನ, ಯಕ್ಷ ಧ್ರುವ ಕಲಾ ಗೌರವ, ಕಲಾವಿದರಿಗೆ ವೈದ್ಯಕೀಯ ತಪಾಸಣೆ, ರಕ್ತದಾನ, ವಿದ್ಯಾರ್ಥಿವೇತನ ವಿತರಣೆ, ಅಪಘಾತ ವಿಮೆ, ಚಿಕಿತ್ಸಾ ನೆರವು, ಗೃಹ ನಿರ್ಮಾಣಕ್ಕೆ ಸಹಾಯ ಇತ್ಯಾದಿ ಸೇವಾ ಕಾರ್ಯಕ್ರಮಗಳಲ್ಲದೆ, ಮಕ್ಕಳಿಗಾಗಿ ಮನೋರಂಜನೆ ಹಾಗೂ ನೂರಾರು ಕಲಾವಿದರಿಂದ ಯಕ್ಷಗಾನದ ವಿವಿಧ ಪ್ರಕಾರಗಳ ಪ್ರದರ್ಶನ ಜರಗಲಿದೆ ಎಂದು ಪಟ್ಲ ಫೌಂಡೇಶನ್ ಟ್ರಸ್ಟ್ ನ ಪ್ರಕಟಣೆ ತಿಳಿಸಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top