ಪುತ್ತೂರು ಶ್ರೀ ಮಹಾಲಿಂಗೇಶ್ವರ ಜಾತ್ರೋತ್ಸವ: ಏ.11ರಂದು ದೇಶಭಕ್ತಿ ಉದ್ದೀಪನಗೊಳಿಸುವ 'ಜಾಗೋ ಹಿಂದುಸ್ಥಾನಿ'

Upayuktha
0

ಪುತ್ತೂರು: ತಾಯಿ ಭಾರತಿ ಎಲ್ಲರಿಗೂ ತಾಯಿ. ಗಾಳಿ, ನೀರು, ಮಣ್ಣು ಇವುಗಳಲ್ಲಿ ಬೇಧವಿಲ್ಲದೆ, ಭೇದ ಮಾಡದೆ ನಮ್ಮಲ್ಲೆರನ್ನು ಏಕದೃಷ್ಟಿಯಿಂದ ಸಲಹುವ ಮಹಾಮಾತೆ. ಇಂಥ ಮಾತೆಯನ್ನು ಅಂತಃಕರಣ ಪೂರ್ವಕವಾಗಿ ವಂದಿಸುವುದು, ಪೂಜಿಸುವುದು ನಮ್ಮ ಧರ್ಮವಾಗಿದೆ. ತಾಯಿ ಭಾರತಿಯ ಗುಣಗಾನವನ್ನು ಕೇಳಿಸುವ ಮೂಲಕ ನಮ್ಮಲ್ಲಿ ಮಾತೃಶಕ್ತಿಯ ಪ್ರೀತಿಯನ್ನು ಉದ್ದೀಪನಗೊಳಿಸಲಿದೆ “ಜಾಗೋ ಹಿಂದುಸ್ಥಾನಿ”.


ಇದೊಂದು ಅವಿಸ್ಮರಣೀಯ ರಸಸಂಜೆ. ನಿದ್ರಿಸುತ್ತಿರುವ, ಜಡಮನಸ್ಸಿನ ಆಳದಲ್ಲಿರುವ ಜೀವಚೈತನ್ಯವನ್ನು ಬಡಿದೆಬ್ಬಿಸುವ ಕ್ಷಣವಾಗಲಿದೆ. ಹಾಡಿನ ಒಂದೊಂದು ಅಕ್ಷರವೂ ರಕ್ತದ ಕಣಕಣವನ್ನು ತಟ್ಟಿ “ದೇಶ ಪ್ರೇಮ”ದ ಮಾತೃಭಕ್ತಿಯನ್ನು ಜಾಗೃತವಾಗಿಸಲಿದೆ. ಇದು ದೇಶ ವಿದೇಶ ಗಡಿನಾಡುಗಳನ್ನು ಮೀರಿ ದೇಶಪ್ರೀತಿಯ ದಿವ್ಯಾನುಭವಗಳ ರಸದೌತಣವನ್ನು ತಮ್ಮ ಕಂಠ ಮಾಧುರ್ಯದಿಂದ ಹರಿಸಲಿರುವ ಮಂಜುಳನಾದದ ಲೋಕವನ್ನು ಪರಿಚಯಿಸಲಿರುವ ತಂಡ “ಜಾಗೋ ಹಿಂದುಸ್ಥಾನಿ”.


ಏನಿದು “ಜಾಗೋ ಹಿಂದುಸ್ಥಾನಿ”?

ಬಹುವಿಧ ಸಂಸ್ಕೃತಿ, ಆಹಾರ, ಭಾಷೆ ಮೊದಲಾದ ವಿಶೇಷಗಳನ್ನು ತನ್ನದಾಗಿಸಿಕೊಂಡ ಭಾರತದಲ್ಲಿ, ವೇಗವಾಗಿ ಸಾಗುತ್ತಿರುವ ಈ ಧರ್ಮದಲ್ಲಿ ಪರಸ್ಪರ ವಿಶ್ವಾಸ, ಸಹೋದರತ್ವ, ಮಾನವ ಪ್ರೀತಿ, ಸಹೃದಯತೆ ಬಡವಾಗುವುದರ ಕುರಿತು ಚಿಂತಿಸಲಾದ ಸಹೃದಯ ತಂಡವೊಂದು ಚಿಂತಿಸಿದ, ತನ್ಮೂಲಕ ಅದನ್ನು ಸೃಷ್ಟಿಸಿದ ಕನಸಿನ ಪ್ರತೀಕವೇ “ಜಾಗೋ ಹಿಂದುಸ್ಥಾನಿ”. ಸಂಗೀತದ ಮೂಲಕ ತಮ್ಮ ಮನದ ಆಳದ ಮೂಲೆಯಲ್ಲಿರುವ ಚಿಂತನೆಯನ್ನು ಸಾಕಾರಗೊಳಿಸಬಹುದು, ಮಾತ್ರವಲ್ಲದೆ ನಮ್ಮದೇ ರೀತಿಯ ದೇಶಭಕ್ತಿಯ ಸಿಂಚನಗೈಯ ಬಹುದೆಂಬುದನ್ನು ಅರ್ಥಮಾಡಿ, ಮಹಾರಾಷ್ಟ್ರದ ಕೊಲ್ಲಾಪುರದ 15 ಮಂದಿ ಹಾಡುಗಾರರ ತಂಡ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಹಿಂದಿ ಚಲನಚಿತ್ರದಲ್ಲಿರುವ ದೇಶಭಕ್ತಿಯ ಅತ್ಯುತ್ತಮ ಚಲನಚಿತ್ರಗೀತೆಗಳ ರಸಸಂಜೆಯೇ “ಜಾಗೋ ಹಿಂದುಸ್ಥಾನಿ”. ಮನರಂಜನೆ ಹಾಗೂ ದೇಶಭಕ್ತಿ ಇವುಗಳ ಸಮ್ಮಿಲನವಾಗಿರುವ ಈ ಪ್ರಯೋಗ ದೇಶದಲ್ಲೇ ಅದ್ವಿತೀಯವೆನಿಸಿದೆ.


ಮಹಾರಾಷ್ಟ್ರ, ಕರ್ನಾಟಕ, ಗೋವಾ, ಪಶ್ಚಿಮ ಬಂಗಾಲ, ಬಿಹಾರ, ತಮಿಳುನಾಡು, ಆಂದ್ರಪ್ರದೇಶ, ಮದ್ಯಪ್ರದೇಶ ಹಾಗೂ ಗುಜರಾತ್ ಮುಂತಾದ ದೇಶದಾದ್ಯಂತ 3200, ಅಮೇರಿಕದಲ್ಲಿ 27ಕ್ಕಿಂತ ಹೆಚ್ಚು ಕಾರ್ಯಕ್ರಮಗಳನ್ನು ಸಾದರಪಡಿಸಿರುವ ಅದ್ಭುತ ವಾದ್ಯವೃಂದಗಳನ್ನೊಳಗೊಂಡ ಅಮೋಘ ಕಾರ್ಯಕ್ರಮ. ಮುಂಬಯಿ, ಕೋಲ್ಕತ್ತಾ, ಪುಣೆ, ಹೈದರಾಬಾದ್, ಚೆನ್ನೈ, ಬೆಂಗಳೂರು, ಮಂಗಳೂರು, ಪಣಜಿ, ರಾಜ್‍ಕೋಟ್, ನಾಸಿಕ್, ನಾಗ್‍ಪುರ, ಅಮರಾವತಿ, ಸೋಲಾಪುರ ಮುಂತಾದ ಪಟ್ಟಣಗಳಲ್ಲಿ ಪ್ರಚಂಡ ಪ್ರಶಂಸೆಗೆ ಪಾತ್ರವಾಗಿ ಜನಮನದಲ್ಲಿ ದೇಶಭಕ್ತಿಯು ಸದಾ ಅನುರಣನವಾಗುವಂತೆ ಮಾಡಿದ ಕಾರ್ಯಕ್ರಮ. ನಮ್ಮಲ್ಲಿರುವ ಯಾವುದೇ ಅಂತರವನ್ನು ದೂರಗೊಳಿಸೋಣ, ಅಂತರ್ಯದ ನೈಜ ಪ್ರೀತಿಯಿಂದ ದೇಶಪ್ರೇಮಿಗಳಾಗೋಣ ಎನ್ನುವಂತೆ ಹುರಿದುಂಬಿಸಿ, ರೋಮಾಂಚನಗೊಳಿಸುವ ಸ್ವರದ ಮೂಲಕ, ಶೀತಲಗೊಂಡ ರಕ್ತದಲ್ಲಿಯ ಜ್ವಾಲೆಯನ್ನು ಪ್ರಜ್ವಲಿತಗೊಳಿಸುವ ದೇಶಭಕ್ತಿಯ ಪ್ರೇರಣೆ ನೀಡುವ ಶಕ್ತಿ ಹೊಂದಿದ ಕಾರ್ಯಕ್ರಮ ಇದಾಗಿದೆ.


ಭವ್ಯವಾದ ವೇದಿಕೆಯಲ್ಲಿ ವೈವಿಧ್ಯಮಯ ಶೃಂಗಾರ, ಬೆಳಕಿನ ಚಿತ್ತಾರ, ಆಧುನಿಕ ಧ್ವನಿ ವ್ಯವಸ್ಥೆ, ನುರಿತ ಕಲಾವಿದರ ಹೃದಯದಿಂದ ಬರುವ ವಿಶೇಷ ಸ್ವರಾನುಭಾವದಲ್ಲಿ ರಾಷ್ಟ್ರೀಯ ಸಂದೇಶ.


ಎ ಮೇರೆ ವತನ್ ಕೆ ಲೋಗೋ..., ಮೇರೆ ದೇಶ್ ಕೆ ಧರ್‍ತಿ ಸೋನಾ ಉಗ್‍ಲೇ..., ಎ ಮೇರೆ ಇಂಡಿಯಾ ಐ ಲವ್ ಇಂಡಿಯಾ.., ಮೇರೆ ಜೂತಾ ಹೇ ಜಪಾನೀ.., ಮುಂತಾದ ಹಳೆಯ ಮತ್ತು ಹೊಸ ದೇಶಭಕ್ತಿಯ ಚಲನಚಿತ್ರ ಗೀತೆಗಳು ನಮ್ಮನ್ನು ಮುದಗೊಳಿಸಲಿದೆ. ಭಾರತ ಎಂಬ ಮೂರು ಅಕ್ಷರಗಳಿಗೆ ಭಾವ-ರಾಗ-ತಾಳಗಳನ್ನು ಪ್ರತಿನಿಧಿಸುವ ಸಾಮರಸ್ಯದ ಪ್ರಪಂಚದ ಅನುಭವವನ್ನು ಎಪ್ರಿಲ್ 11ರಂದು ಸಂಜೆ 6.30ಕ್ಕೆ ಸಂಸ್ಕಾರ ಭಾರತಿ ಪುತ್ತೂರು ಸಂಯೋಜನೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹ ಸಂಸ್ಥೆಯಾಗಿರುವ ರೇಡಿಯೋ ಪಾಂಚಜನ್ಯ ಸಹಕಾರದಿಂದ ಈ ಕಾರ್ಯಕ್ರಮ ಪುತ್ತೂರು ಶ್ರೀ ಮಹಾಲಿಂಗೇಶ್ವರ ಜಾತ್ರೋತ್ಸವದ ಸಂದರ್ಭದಲ್ಲಿ ಜಾತ್ರೆ ಗದ್ದೆಯಲ್ಲಿ ಸಾಕಾರಗೊಳ್ಳಲಿದೆ. ಬನ್ನಿ ಪಾಲ್ಗೊಳ್ಳಿ ದೇಶಪ್ರೇಮವನ್ನು ಮೊಳಗಿಸಿರಿ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top