ಬಂಟ್ವಾಳ: ಬಂಟ್ವಾಳ ತಾಲೂಕಿನ ರಾಯಿ ಸಮೀಪದ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಏಪ್ರಿಲ್ 5ರಿಂದ 10ರ ವರೆಗೆ ನಡೆಯಲಿದೆ. 18 ವರ್ಷಗಳ ಬಳಿಕ 1.50 ಕೋಟಿ ರೂ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿರುವ ದೇವಸ್ಥಾನದಲ್ಲಿ ಈಗ ಬ್ರಹ್ಮಕಲಶೋತ್ಸವದ ಸಿದ್ಧತೆ ನಡೆದಿದೆ.
18 ವರ್ಷಗಳ ಹಿಂದೆ ಕುಸಿದು ಬೀಳುವಂತಿದ್ದ ಮಣ್ಣಿನ ಗೋಡೆಯ ಗರ್ಭಗುಡಿ ಮತ್ತು ಸುತ್ತುಗೋಪುರವನ್ನು ತೆರವುಗೊಳಿಸಿ, ದೇವಳ ಪುನರ್ ನಿರ್ಮಾಣಗೊಂಡು ಬ್ರಹ್ಮಕಲಶೋತ್ಸವ ನಡೆದಿತ್ತು. ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ ಮತ್ತು ಜಿ.ಪಂ ಮಾಜಿ ಅಧ್ಯಕ್ಷ ದಿ. ಕೆ. ಸಂತೋಷ್ ಕುಮಾರ್ ಭಂಡಾರಿ ನೇತೃತ್ವದಲ್ಲಿ ಮೊದಲ ಬ್ರಹ್ಮಕಲಶೋತ್ಸವ ನಡೆಸಲಾಗಿತ್ತು.
ಇದೀಗ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಹಾಗೂ ಉದ್ಯಮಿ ದುರ್ಗಾದಾಸ್ ಶೆಟ್ಟಿ ಕರೆಂಕಿಣಿ ಅವರ ನೇತೃತ್ವದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ನೂತನ ಬಾವಿ, ನಾಗನಕಟ್ಟೆ, ಅಶ್ವತ್ಥ ಕಟ್ಟೆ, ವಸಂತ ಮಂಟಪ ನಿರ್ಮಾಣಗೊಂಡಿದೆ. ಒಳಾಂಗಣದಲ್ಲಿ ಹಾಸುಗಲ್ಲು ಮತ್ತು ಗ್ರಾನೈಟ್ ಅಳವಡಿಕೆ, ಚಾವಣಿಗೆ ಶೀಟು ಅಳವಡಿಕೆ, ಸಭಾಂಗಣದ ವಿಸ್ತರಣೆ, ಅನ್ನ ಛತ್ರ ನಿರ್ಮಾಣ- ಮುಂತಾದ ಕಾರ್ಯಗಳು ನಡೆದಿವೆ.
ಸ್ಥಳೀಯ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಗುತ್ತು ಅವರು ಸಣ್ಣ ನೀರಾವರಿ ಇಲಾಖೆಯಿಂದ ಮಂಜೂರುಗೊ:ಳಿಸಿದ 50 ಲಕ್ಷ ರೂ ಮೊತ್ತದಲ್ಲಿ ತಡೆಗೋಡೆ ನಿರ್ಮಾಣದೊಂದಿಗೆ ಬೃಹತ್ ತೀರ್ಥಕೆರೆ ನಿರ್ಮಾಣಗೊಳ್ಳುತ್ತಿದೆ. 50 ಲಕ್ಷ ರೂ ವೆಚ್ಚದಲ್ಲಿ ರಾಯಿ-ಬನದಡಿ ರಸ್ತೆಯ ವಿಸ್ತರಣೆ ಮತ್ತು ಡಾಮರೀಕರಣ ಪ್ರಗತಿಯಲ್ಲಿದೆ.
ಬ್ರಹ್ಮಕಲಶೋತ್ಸವ: ಏ.5ರಿಂದ 10ರ ವರೆಗೆ ಕ್ಷೇತ್ರದ ತಂತ್ರಿಗಳಾದ ನಡ್ವಂತಾಡಿ ಶ್ರೀಪಾದ ಪಾಂಗಣ್ಣಾಯ ಅವರ ಮಾರ್ಗದರ್ಶನದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದೆ. ಏ. 5ರದು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವರಾದ ಬಿ. ನಾಗರಾಜ ಶೆಟ್ಟಿ, ಕಾರ್ಯಾಧ್ಯಕ್ಷ ಸಂತೋಷ್ ಕುಮಾರ್ ಚೌಟ, ಆರ್ಥಿಕ ಸಮಿತಿ ಅಧ್ಯಕ್ಷ ಶರತ್ ಕುಮಾರ್ ಕೊಯಿಲ, ಹೊರೆಕಾಣಿಕೆ ಸಮಿತಿ ಅಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರ ಪೂಜಾರಿ ನೇತೃತ್ವದಲ್ಲಿ ವಿವಿಧ ಉಪ ಸಮಿತಿಗಳನ್ನು ರಚಿಸಲಾಗಿದೆ.
ಸ್ಥಳೀಯ ಭಜನಾ ಮಂಡಳಿ ಮತ್ತು ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಪ್ರತಿದಿನ ಭಜನೆ ಹಾಗೂ ಉತ್ಸವದ ತಯಾರಿ ಹಾಗೂ ಯಶಸ್ಸಿಗಾಗಿ ಶ್ರಮದಾನ ನಡೆಸುತ್ತಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
.