ಉಜಿರೆ: ಭಾರತ ಸರ್ಕಾರದ ಶಿಕ್ಷಣ ಸಚಿವಾಲಯ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಶಿಕ್ಷಣ ಪರಿಷತ್, ಉನ್ನತ ಶಿಕ್ಷಣ ಇಲಾಖೆಯಿಂದ ಸ್ವಚ್ಛತಾ ಕಾರ್ಯ ಯೋಜನೆಯಡಿಯಲ್ಲಿ ಕೊಡುವ ಜಿಲ್ಲಾ ಹಸಿರು ಚಾಂಪಿಯನ್ 2021-22 ಪ್ರಶಸ್ತಿಯನ್ನು ಉಜಿರೆಯ ಎಸ್ ಡಿ ಎಂ ಕಾಲೇಜು ಪಡೆದುಕೊಂಡಿದೆ.
ಕಾಲೇಜಿನಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯತೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ಕೈಗೊಂಡ ಉಪಕ್ರಮಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ಶೈಕ್ಷಣಿಕ ಸಂಸ್ಥೆಗಳು ಕಾಲೇಜು ಕ್ಯಾಂಪಸ್ ನಲ್ಲಿ ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣೆಯ ಕುರಿತು ಕೈಗೊಳ್ಳುವ ಕಾರ್ಯಯೋಜನೆಗಳನ್ನು ಗುರುತಿಸಲು ಈ ಸ್ಪರ್ಧೆಯನ್ನು ನಡೆಸಲಾಗುತ್ತದೆ. ದೇಶದ ಎಲ್ಲ ರಾಜ್ಯಗಳ ಶಿಕ್ಷಣ ಸಂಸ್ಥೆಗಳು ತಮ್ಮ ಕ್ಯಾಂಪಸ್ ನಲ್ಲಿ ನಿರ್ವಹಿಸುವ ಸ್ವಚ್ಛತಾ ಕ್ರಮಗಳ ಬಗ್ಗೆ ಸಮಗ್ರ ವರದಿ ಹಾಗೂ ಸಾಕ್ಷ್ಯಚಿತ್ರವನ್ನು ಕಳುಹಿಸುತ್ತವೆ. ಅದರಲ್ಲಿ ಉಜಿರೆಯ ಎಸ್ ಡಿ ಎಂ ಶಿಕ್ಷಣ ಸಂಸ್ಥೆ ಪ್ರಶಸ್ತಿ ಗಳಿಸಿದೆ.
ಎಸ್ ಡಿ ಎಂ ಸಂಸ್ಥೆಯಲ್ಲಿ ಸ್ವಚ್ಚತೆ ಮತ್ತು ತ್ಯಾಜ್ಯ ನಿರ್ವಹಣೆಗೆ ರಚನಾತ್ಮಕ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರತಿ ತರಗತಿಯಿಂದ ಕಸವನ್ನು ಸಂಗ್ರಹಿಸಿ, ತ್ಯಾಜ್ಯ ವಿಂಗಡಣಾ ಘಟಕಕ್ಕೆ ವರ್ಗಾಯಿಸಲಾಗುತ್ತದೆ. ಅಲ್ಲಿ ಉಪಯೋಗಕ್ಕೆ ಯೋಗ್ಯ, ಮರುಬಳಕೆ ಮಾಡಬಹುದಾದ ವಸ್ತುಗಳನ್ನು ಪ್ರತ್ಯೇಕವಾಗಿ ವಿಂಗಡಿಸಲಾಗುತ್ತದೆ. ಜೊತೆಗೆ ಪ್ರತಿ ತರಗತಿಯಿಂದ ಸ್ವಚ್ಛತಾ ರಾಯಭಾರಿಯನ್ನು ಆಯ್ಕೆ ಮಾಡಿ ತರಗತಿ ಸ್ವಚ್ಛತೆಯ ಬಗ್ಗೆಯೂ ಗಮನಹರಿಸಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸಹಾಯಕ ಪ್ರಾಧ್ಯಾಪಕರು ಮತ್ತು ಎನ್ ಎಸ್ ಎಸ್ ಯೋಜನಾಧಿಕಾರಿ ಲಕ್ಷ್ಮಿನಾರಾಯಣ ಕೆ ಎಸ್, "ಕಾಲೇಜಿನಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದ ಕಾರ್ಯ-ಯೋಜನೆಗಳನ್ನು ಅನುಷ್ಠಾನ ಮಾಡಿದ್ದೇವೆ. ಇದರಿಂದಾಗಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗಳಿಸಲು ಸಾಧ್ಯವಾಗಿದೆ. ಈ ಹಂತದಲ್ಲಿ ಸಹಕರಿಸಿದ ಪ್ರಾಂಶುಪಾಲರು, ಉಪನ್ಯಾಸಕರು ವಿದ್ಯಾರ್ಥಿಗಳಿಗೆ ತುಂಬು ಹೃದಯದ ಧನ್ಯವಾದ. ಬರೀ ಕಾಲೇಜು ಮಾತ್ರವಲ್ಲದೇ ಉಜಿರೆ ಗ್ರಾಮದಲ್ಲೂ ಕೂಡ ಸಾಮುದಾಯಿಕ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ" ಎಂದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ