ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ವೃತ್ತಿಪರ ವಾಣಿಜ್ಯ ವಿಭಾಗದ ವತಿಯಿಂದ ಸಿಎ ಫೌಂಡೇಶನ್ ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ತರಬೇತಿ ಹಾಗೂ ಕೇಂದ್ರ ಬಜೆಟ್ ವಿಶ್ಲೇಷಣೆ, "ಅರ್ಥಸಂಕಲ್ಪ 2022" ಕಾರ್ಯಕ್ರಮ ಜರುಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಫಾರೆನ್ಸಿಕ್ ಆಡಿಟರ್ ಹಾಗೂ ಕೊಚ್ಚಿಯ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಟೆಂಟ್ಸ್ ಆಫ್ ಇಂಡಿಯಾದ ವಿಸಿಟಿಂಗ್ ಫ್ಯಾಕಲ್ಟಿ ಡಾ. ಎಸ್. ಗೋಪಾಲಕೃಷ್ಣ ಶರ್ಮ ಮಾತನಾಡಿ, ಸಿ.ಎ ಎಂಬುದು ಜವಬ್ದಾರಿಯುತ ವೃತ್ತಿಯಾಗಿದೆ. ಒಂದು ಕಂಪೆನಿಯ ಹಣಕಾಸಿನ ವ್ಯವಹಾರವನ್ನು ಸರಿದೂಗಿಸುವಲ್ಲಿ ಆಡಿಟರ್ ಪಾತ್ರ ಮಹತ್ವದಾಗಿದೆ. ವಿದ್ಯಾರ್ಥಿಗಳು ಎಲ್ಲಾ ರೀತಿಯ ಜ್ಞಾನವನ್ನು ಪಡೆದಾಗ ಒಬ್ಬ ಉತ್ತಮ ಸಿ.ಎ ಆಗಲು ಸಾಧ್ಯ. ಚಾರ್ಟರ್ಡ್ ಅಕೌಂಟೆಂಟ್ ವ್ಯಾಪ್ತಿಯು ವಿಸ್ತಾರವಾಗಿದ್ದು, ಪರಿಶ್ರಮ ಮತ್ತು ಬದ್ಧತೆ ಇದ್ದಾಗ ವಿದ್ಯಾರ್ಥಿಗಳು ತೇರ್ಗಡೆಯಾಗಲು ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಕೇರಳ ಹೈಕೋರ್ಟ್ ನ ಕರ್ತವ್ಯ ನಿರತ ವಕೀಲೆ ಹೇಮಾ ಅನಂತಕೃಷ್ಣನ್ ಮಾತನಾಡಿ, ವಿದ್ಯಾರ್ಥಿಗಳು ಜ್ಞಾನವನ್ನು ಎಲ್ಲಾ ಕಡೆಯಿಂದ ಪಡೆಯಬೇಕು. ಏಕೆಂದರೆ ವಿಶ್ವವೇ ಗುರುವಾಗಿದ್ದು, ಅನುಭವದಿಂದ ಕಲಿತ ಪಾಠ ಕೊನೆಯವರೆಗೂ ನಮ್ಮ ಜೊತೆಗಿರುತ್ತದೆ. ವಿದ್ಯಾರ್ಥಿಗಳಲ್ಲಿ ತಾಳ್ಮೆ ಇದ್ದಾಗ ಉತ್ತಮ ಜ್ಞಾನ ಪಡೆಯಬಹುದು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ವೃತ್ತಿಪರ ವಾಣಿಜ್ಯ ವಿಭಾಗದ ಸಂಯೋಜಕ ಅಶೋಕ್ ಕೆ.ಜಿ ಉಪಸ್ಥಿತರಿದ್ದರು. ವಿದ್ಯಾರ್ಥಿ ದಶಮಿ ಸ್ವಾಗತಿಸಿದರು, ಅಮನ್ ವಂದಿಸಿದರು, ವಿದ್ಯಾರ್ಥಿನಿ ಪ್ರಿಮಾಲ್ ಅರ್ಹನ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ