ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ನಾಮಫಲಕ ತೆರವು; ದಲಿತಪರ ಸಂಘಟನೆಗಳ ಪ್ರತಿಭಟನೆ

Upayuktha
0

ಚಿಕ್ಕಮಗಳೂರು ಜನವರಿ 04: ನಗರದ ಉಂಡೇದಾಸರಹಳ್ಳಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ನಾಮಫಲಕವನ್ನು ನಗರಸಭಾ ಪೌರಾಯುಕ್ತರು ರಾತ್ರಿ ಸಮಯದಲ್ಲಿ ತೆರವುಗೊಳಿಸಿರುವುದನ್ನು ಖಂಡಿಸಿ ದಲಿತಪರ ಸಂಘಟನೆಗಳು ಹಾಗೂ ಗ್ರಾಮದ ನಿವಾಸಿಗಳು ನಗರಸಭಾ ಕಛೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.


ಇದೇ ವೇಳೆ ಮಾತನಾಡಿದ ಗ್ರಾಮದ ನಿವಾಸಿ ಹೊನ್ನೇಶ್ ಅಂಬೇಡ್ಕರ್ ಪರ ಎನ್ನುವ ನಗರಸಭಾ ಪೌರಾಯುಕ್ತರು ಕೇವಲ ಮೇಲ್ನೋಟಕ್ಕೆ ಮಾತ್ರ ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ಅವರು ಅಂಬೇಡ್ಕರ್ ವಿರೋಧಿಯಾಗಿ ಕೆಲಸ ಮಾಡುತ್ತಿರುವುದು ಉಂಡೇದಾಸರಹಳ್ಳಿ ನಾಮಫಲಕವನ್ನು ತೆರವುಗೊಳಿಸಿರುವುದೇ ಸಾಕ್ಷಿಯಾಗಿದೆ ಎಂದು ದೂರಿದರು.


ಉಂಡೇದಾಸರಹಳ್ಳಿಯ ಗ್ರಾಮಸ್ಥರು ಸುಮಾರು 80 ವರ್ಷಗಳಿಂದ ಅಲ್ಲಿ ವಾಸ ಮಾಡಿಕೊಂಡಿದ್ದು ಆ ವೃತ್ತಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ಎಂದು ಕರೆಯಲ್ಪಡುತ್ತಿತ್ತು. ಆದ್ದರಿಂದ ಆ ವೃತ್ತಕ್ಕೆ ಮಹಾನಾಯಕ ಎಂಬ ನಾಮಫಲಕ ಅಳವಡಿಸಿದ್ದೆವು. ಆದರೆ ಕೆಲವು ಅಂಬೇಡ್ಕರ್ ವಿರೋಧಿಗಳು ನಗರಸಭಾ ಪೌರಾಯುಕ್ತರ ಜೊತೆಗೂಡಿ ರಾತ್ರಿ ಸಮಯದಲ್ಲಿ ಏಕಾಏಕಿ ನಾಮಫಲಕ ತೆರವುಗೊಳಿಸಿರುವುದು ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ ಎಂದರು.


ಈ ಸಂಬಂಧ ಹಿಂದಿನ ದಿನ ಪೌರಾಯುಕ್ತರು ಸ್ಥಳಕ್ಕೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರು ಒಟ್ಟುಗೂಡಿ ಇನ್ನೊಂದು ದಿನ ಕಾಲಾವಕಾಶ ನೀಡಿ ಎಂದು ಮನವಿ ಮಾಡಿದ್ದರೂ ಸಹ ರಾತ್ರೋ ರಾತ್ರಿ ನಾಮಫಲಕ ತೆರವುಗೊಳಿಸಿರುವುದು ದಲಿತ ಸಮುದಾಯ ಹಾಗೂ ಗ್ರಾಮಸ್ಥರಿಗೆ ಮಾಡಿದ ಅನ್ಯಾಯವಾಗಿದೆ ಎಂದು ತಿಳಿಸಿದರು.


ಡಿ.ಎಸ್.ಎಸ್. ರಾಜ್ಯ ಸಂಚಾಲಕ ಶ್ರೀನಿವಾಸ್ ಮಾತನಾಡಿ ದುಡಿಯುವ ಜನರಿಗೆ ಅಂಬೇಡ್ಕರ್ ಅವರ ಕೊಡುಗೆ ಅಪಾರ. ಪ್ರಮುಖ ವೃತ್ತಗಳಲ್ಲಿ ಇರುವಂತಹ ಅಂಬೇಡ್ಕರ್ ಹೆಸರನ್ನು ತೆರವುಗೊಳಿ ಸಿರುವುದು ದಲಿತ ಸಮುದಾಯ ಯಾವ ಪರಿಸ್ಥಿತಿಯಲ್ಲಿದೆ ಎಂದು ಯೋಚಿಸಬೇಕಾಗಿದೆ ಎಂದರು.


ಡಿ.ಎಸ್.ಎಸ್. ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ ಮಾತನಾಡಿ ಪೌರಾಯುಕ್ತರು ಉಂಡೇದಾಸರಹಳ್ಳಿ ಹಾಕಿರುವಂತಹ ನಾಮಫಲಕವನ್ನು ಮಾತ್ರ ತೆಗೆಯದೇ ದಲಿತ ಸಮುದಾಯ ಎಲ್ಲಲ್ಲಿ ಮಹಾನಾಯಕ ಧಾರವಾಹಿಯ ಬ್ಯಾನರ್‌ಗಳನ್ನು ಹಾಕಿರುವ ಕಡೆಗಳಲ್ಲಿ ರಾತ್ರೋ ರಾತ್ರಿ ತೆರಳಿ ಪ್ಲೆಕ್ಸ್ ಗಳನ್ನು ತೆಗೆಸುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ದೂರಿದರು.


ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಹುಣಸೇಮಕ್ಕಿ ಲಕ್ಷ್ಮಣ್, ಭೀಮ್ ಸೇನಾ ಅಧ್ಯಕ್ಷ ಸಂತೋಷ್, ಭೀಮ್ ಆರ್ಮಿ ಅಧ್ಯಕ್ಷ ಗಿರೀಶ್, ಸಿದ್ದರಾಜು ಹಾಗೂ ಉಂಡೇದಾಸರಹಳ್ಳಿ ಗ್ರಾಮಸ್ಥರು ಹಾಜರಿದ್ದರು.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top