ಕರಾವಳಿಯ ಭಗೀರಥನಿಗೆ ಒಲಿದ ಪದ್ಮಶ್ರೀ ಪುರಸ್ಕಾರ

Upayuktha
0

ಮಂಗಳೂರು: ಏಕಾಂಗಿಯಾಗಿ ಭಗೀರಥ ಪ್ರಯತ್ನದ ಮೂಲಕ ಜೀವಜಲವನ್ನು ತರಿಸಿ ಬೋಳು ಗುಡ್ಡೆಯನ್ನು ಹಚ್ಚ ಹಸಿರ ನಂದನವನ ಮಾಡಿದ ಪ್ರಗತಿಪರ ಕೃಷಿಕ ಬಂಟ್ವಾಳ ತಾಲೂಕಿನ ಅಡ್ಯನಡ್ಕ ಸಮೀಪದ ಅಮೈ ಮಹಾಲಿಂಗ ನಾಯ್ಕ ಅವರಿಗೆ 2022ನೇ ಸಾಲಿನ ದೇಶದ ಅತ್ಯುನ್ನತ ಪ್ರಶಸ್ತಿಯಾಗಿರುವ ಪದ್ಮಶ್ರೀ ಪುರಸ್ಕಾರವನ್ನು ಘೋಷಿಸಲಾಗಿದೆ.


ಕರಾವಳಿ ಜಿಲ್ಲೆಗಳಲ್ಲಿ ಕೃಷಿ ಹಿನ್ನಲೆಗೆ ಸಾಗುತ್ತಿದೆ. ಈ ಸಂದರ್ಭದಲ್ಲಿ ಕೃಷಿಯೇ ಬದುಕಿಗೆ ಮೂಲ ಎಂಬ ಕಲ್ಪನೆಯನ್ನು ಬಿತ್ತುತ್ತಿರುವ ಸಾಧಕ 77 ವರ್ಷದ ಅಮೈ ಮಹಾಲಿಂಗ ನಾಯ್ಕ. ಕೃಷಿ ಕಾಯಕದ ಮೂಲಕವೇ ಸ್ವಾವಲಂಬಿ ಜೀವನ ಸಾಧ್ಯ ಎಂಬುದನ್ನು ಸಾಧಿಸಿ ಆಧುನಿಕ ತಲೆಮಾರಿಗೆ ಮಾದರಿಯಾಗಿದ್ದಾರೆ.


ಕೃಷಿಗೆ ನೀರನ್ನು ಹಾಯಿಸಲು ಪಂಪ್ ಸೆಟ್‌ಗಳ ಸೌಲಭ್ಯವಿಲ್ಲದ ಕಾಲದಲ್ಲಿ ಹಿಂದಿನ ತಲೆಮಾರಿನವರು ಅವಲಂಬಿಸಿದ್ದ ಸುರಂಗ ನೀರಿನ ವ್ಯವಸ್ಥೆಯಲ್ಲಿ  ಇವರು ನಂಬಿಕೆ ಇಟ್ಟರು. ಇದೇ ವ್ಯವಸ್ಥೆಯಲ್ಲಿ ವಿದ್ಯುತ್ ರಹಿತವಾಗಿ ಗುರುತ್ವಾಕರ್ಷಣೆಯ (ಗ್ರಾವಿಟಿ) ಸಹಾಯದಿಂದ ಕೃಷಿಗೆ ತುಂತುರು ನೀರಾವರಿ, ಸ್ಪ್ರಿಂಕ್ಲರ್ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸುವಲ್ಲಿ ಯಶಸ್ವಿಯಾದರು. ಮಹಾಲಿಂಗ ನಾಯ್ಕ ಏಕಾಂಗಿಯಾಗಿ ಏಳು ಸುರಂಗಗಳನ್ನು ಕೊರೆದ ಕರಾವಳಿಯ ಭಗೀರಥ ಎಂದರೆ ಅತಿಶಯೋಕ್ತಿ ಆಗದು.


ಕರಾವಳಿ ಭಗೀರಥನ ಜೀವನಗಾಥೆ:

ಅಡಕೆ, ತೆಂಗಿನ ಮರ ಏರುವುದರಲ್ಲಿ ಎಕ್ಸ್‌ಪರ್ಟ್ ಎನಿಸಿಕೊಂಡಿದ್ದ ಕೃಷಿ ಕೂಲಿ ಕಾರ್ಮಿಕ ಮಹಾಲಿಂಗ ನಾಯ್ಕ ಅವರು 40 ವರ್ಷಗಳ ಹಿಂದೆ ಸ್ವಂತ ಊರಿನ ಇತರ ಕೃಷಿಕರ ತೋಟಗಳಲ್ಲಿ ದುಡಿಯುವಾಗ ಸ್ವಂತ ತೋಟ ಮಾಡಿ, ಸ್ವಾವಲಂಬಿ ಜೀವನದ ಕನಸನ್ನು ಕಂಡಿದ್ದರು. ಆದರೆ, ಇದಕ್ಕಾಗಿ ಅವರಲ್ಲಿ ಸ್ವಂತ ಜಮೀನು ಇರಲಿಲ್ಲ. ಭೂ ಮಾಲೀಕರಾಗಿದ್ದ ಅಮೈ ಮಹಾಬಲ ಭಟ್ಟರ ತೋಟಕ್ಕೆ ನಿತ್ಯವೂ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು.


ಈ ದುಡಿಮೆಯಿಂದ ಬಂದ ಆದಾಯದಲ್ಲೇ ಅವರ ಸಂಸಾರದ ಬಂಡಿ ಸಾಗುತ್ತಿತ್ತು. ಅದೊಂದು ದಿನ ಮಹಾಬಲ ಭಟ್ ಅವರು ಮಹಾಲಿಂಗ ನಾಯ್ಕರಿಗೆ ಎರಡು ಎಕರೆ ಭೂಮಿ ನೀಡಲು ಒಪ್ಪಿಕೊಂಡರು. 1978ರಲ್ಲಿ ಮಹಾಬಲ ಭಟ್ಟರ ಸಹಕಾರದಿಂದ ಎರಡು ಎಕರೆ ಗುಡ್ಡ 'ದರ್ಖಾಸ್ತು' ರೂಪದಲ್ಲಿ ಮಹಾಲಿಂಗ ನಾಯ್ಕರಿಗೆ ದೊರೆಯಿತು.


ಮನೆ ಕಟ್ಟಲು ಅಸಾಧ್ಯವಾದ, ನೀರಿನ ಅಂಶವೇ ಇಲ್ಲದ ಇಳಿಜಾರಾಗಿದ್ದ ಬೋಳು ಗುಡ್ಡದಲ್ಲಿ ಕೃಷಿ ತೋಟ ಮಾಡುವುದು ಮಹಾಲಿಂಗ ನಾಯ್ಕರಿಗೆ ಮೊದಲ ಸವಾಲಾಗಿತ್ತು. ಆದರೆ ಅವರು ತನ್ನ ಪ್ರಯತ್ನವನ್ನು ಎಂದೂ ಬಿಡಲಿಲ್ಲ.


ಅದೇ ಭೂಪ್ರದೇಶದಲ್ಲಿ ಭವಿಷ್ಯವನ್ನು ರೂಪಿಸುವ ಉದ್ದೇಶದಿಂದ ಸ್ವಲ್ಪ ಜಾಗ ಸಮತಟ್ಟು ಮಾಡಿ ವಾಸ್ತವ್ಯಕ್ಕಾಗಿ ಪುಟ್ಟದಾದ ಗುಡಿಸಲು ಕಟ್ಟಿದರು. ಕುಡಿಯುವ ನೀರಿಗಾಗಿ ಪಕ್ಕದ ಮನೆಯವರನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದ್ದ ಮಹಾಲಿಂಗ ನಾಯ್ಕರಿಗೆ ಬಾವಿ ತೋಡಿಸಲು ಕೈಯಲ್ಲಿ ದುಡ್ಡಿರಲಿಲ್ಲ. ಒಂದು ವೇಳೆ ಬಾವಿ ತೋಡಿದರೂ ನೀರು ದೊರೆಯುವ ಸಾಧ್ಯತೆ ಇರಲಿಲ್ಲ.


ಏಕಾಂಗಿಯಾಗಿ ಬಾವಿ ತೋಡುವುದು ಅಸಾಧ್ಯದ ಮಾತಾಗಿತ್ತು. ಆಗ ಅವರಿಗೆ ತಟ್ಟನೆ ನೆನಪಾಗಿದ್ದು ಹಿರಿಯರು ಅವಲಂಬಿಸಿದ್ದ ಸುರಂಗ ಕೊರೆತ. ಅರ್ಧ ದಿನ ಕೂಲಿ ಕೆಲಸ, ಉಳಿದ ಅರ್ಧ ದಿನ ಮತ್ತು ರಾತ್ರಿ ಹೊತ್ತು ಸುರಂಗ ಕೊರೆಯುವ ಮೂಲಕ ಜೀವಜಲವನ್ನು ಹುಡುಕುವ ಭಗೀರಥ ಪ್ರಯತ್ನಕ್ಕೆ ಇಳಿದೇ ಬಿಟ್ಟರು.

ಮಹಾಲಿಂಗ ನಾಯ್ಕ ಮೊದಲು 30 ಮೀ. ಉದ್ದದ ಸುರಂಗ ಕೊರೆದರು. ಆದರೆ ನೀರು ಸಿಗಲಿಲ್ಲ.


ಇದರಿಂದ ಹತಾಶರಾಗದೆ ಅವರು ಮತ್ತೆ ಪ್ರಯತ್ನವನ್ನು ಮುಂದುವರಿಸಿದರು. ಸೀಮೆಎಣ್ಣೆ , ತೆಂಗಿನೆಣ್ಣೆ ದೀಪದ ಬೆಳಕಿನಲ್ಲಿ ಪ್ರತಿ ವರ್ಷ ತಲಾ ಒಂದರಂತೆ 25 ರಿಂದ 30 ಮೀಟರ್ ಉದ್ದದ ಐದು ಸುರಂಗಗಳನ್ನು ಕೊರೆದರು. ಆದರೆ, ಅವರ ಅಪಾಯಕಾರಿ ಪ್ರಯತ್ನಕ್ಕೆ ಫಲ ಮಾತ್ರ ದೊರೆಕಲೇ ಇಲ್ಲ. ಅವರ ಪ್ರಯತ್ನವನ್ನು ನೋಡಿ ಊರಿನ ಹಲವರು ಗೇಲಿ ಮಾಡಿ ನಕ್ಕಿದ್ದರು ಎಂಬುದಾಗಿ ಮಾಹಾಲಿಂಗ ನಾಯ್ಕ ಅಂದಿನ ದಿನಗಳ ನೆನಪುಗಳನ್ನು ಮೆಲುಕು ಹಾಕುತ್ತಾರೆ.


ಯಾರು ಏನೇ ಹೇಳಿದರೂ ಮಹಾಲಿಂಗ ನಾಯ್ಕರು ತನ್ನ ಭಗೀರಥ ಪ್ರಯತ್ನವನ್ನು ನಿಲ್ಲಿಸದೆ ಮುಂದುವರಿಸಿದರು. ಇವರ ಆರನೇ ಪ್ರಯತ್ನ ಫಲ ನೀಡಿತು. ಈ ಪ್ರಯತ್ನದಲ್ಲಿ ನೀರು ಕಾಣಿಸಿಕೊಂಡಿತು. 25 ಮೀ. ಉದ್ದದ ಸುರಂಗದಲ್ಲಿ ದೊರೆತ ನೀರಿನಲ್ಲಿ ಕೃಷಿ ಸಾಧ್ಯವಿಲ್ಲ ಎಂಬುದು ಅವರಿಗೆ ಅರಿವಿತ್ತು.


ಆರನೇ ಸುರಂಗದ ಪಕ್ಕದಲ್ಲಿಯೇ ಮತ್ತೊಂದು ಸುರಂಗವನ್ನು ಕೊರೆದರು. 25 ಮೀ. ತಲುಪುವಾಗ ನೀರು ಚಿಮ್ಮಿತು. ಮತ್ತೆ ಪ್ರಯತ್ನ ಮುಂದುವರಿಸಿ 75 ಮೀ. ಉದ್ದದ ಸುರಂಗ ನಿರ್ಮಾಣವಾಗುವ ಹೊತ್ತಿಗೆ ಯೆಥೇಚ್ಛ ಪ್ರಮಾಣದ ಜೀವಜಲ ದೊರೆಯಿತು. ಆಗ ಅವರ ಸ್ವಂತ ತೋಟದ ಕನಸು ಮತ್ತೆ ಚಿಗುರೊಡೆಯಿತು. ಸುರಂಗದ ನೀರನ್ನು ಸಂಗ್ರಹ ಮಾಡಲು ಮಣ್ಣಿನ ಟ್ಯಾಂಕ್ ಒಂದನ್ನು ನಿರ್ಮಿಸಿದರು. ನೀರಿನ ಸಂಪನ್ನತೆಯಿಂದಾಗಿ ತನ್ನದೇ ಆದ ಸ್ವಂತ ತೋಟವನ್ನು ಮಾಡುವ ಕನಸು ನನಸಾಯಿತು.


ಗುಡ್ಡವನ್ನು ಸಮತಟ್ಟು ಮಾಡಿ ಭತ್ತ, ಅಡಕೆ, ತೆಂಗು, ಬಾಳೆ ಕೃಷಿಯನ್ನು ಮಹಾಲಿಂಗ ನಾಯ್ಕರು ಕೈಗೊಂಡರು. ಮಡದಿ ಲಲಿತ ಹಾಗೂ ಮೂವರು ಮಕ್ಕಳು ಇವರ ಪ್ರಯತ್ನಕ್ಕೆ ಕೈಜೋಡಿಸಿದರು.


ಬದುಕಿಗೆ ಎದುರಾದ ಸಂಕಷ್ಟ:

ಮಹಾಲಿಂಗ ನಾಯ್ಕ ಕೃಷಿಯಿಂದ ಆದಾಯ ಬರುತ್ತಿದ್ದರೂ, ಹಿಂದಿನ ದುಡಿಮೆಯ ಕಾಯಕವನ್ನು ನಿಲ್ಲಿಸಿರಲಿಲ್ಲ. 14 ವರ್ಷಗಳ ಹಿಂದೆ ನೆಗಳಗುಳಿ ಎಂಬಲ್ಲಿ ಕೃಷಿಕರೊಬ್ಬರ ತೋಟದಲ್ಲಿ ತೆಂಗಿನ ಮರವನ್ನು ಹತ್ತುತ್ತಿದ್ದಾಗ ಮಹಾಲಿಂಗ ನಾಯ್ಕ ಆಯತಪ್ಪಿ ಆಕಸ್ಮಿಕವಾಗಿ ಕೆಳಗೆ ಜಾರಿ ಬಿದ್ದು ತೀವ್ರ ಗಾಯಗೊಂಡರು.


ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆ ಸೇರಿ ಮೂರು ತಿಂಗಳು ಅಲ್ಲೇ ಕಳೆಯುವಂತಾಯಿತು. ಬಳಿಕ ಮನೆಗೆ ಮರಳಿದ್ದರೂ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಒಂದು ವರ್ಷವೇ ಬೇಕಾಯಿತು. ದುಡಿದು ಉಳಿಸಿದ ಹಣ ಅವರ ಕಷ್ಟ ಕಾಲಕ್ಕೆ ಸಹಾಯಕ್ಕೆ ಬಂತು. ಈ ಘಟನೆಯ ಬಳಿಕ ಅವರು ಅಡಕೆ, ತೆಂಗಿನ ಮರ ಹತ್ತುವ ಕಾಯಕಕ್ಕೆ ಕೊನೆ ಹಾಡಲೇಬೇಕಾಯಿತು. ಆದರೆ ಕೃಷಿಯನ್ನು ಕೈ ಬಿಡದೆ, ಮುಂದುವರಿಸಿದರು.


ಒಂದು ಎಕರೆಯಲ್ಲಿ ಕೃಷಿ:

ಮಹಾಲಿಂಗ ನಾಯ್ಕ ಒಂದು ಎಕರೆಯಲ್ಲಿ ಅಡಕೆ, ತೆಂಗು, ಬಾಳೆ, ಕಾಳುಮೆಣಸಿನ ಕೃಷಿಯನ್ನು ಮಾಡಿದ್ದಾರೆ. ಇನ್ನೊಂದು ಎಕರೆಯಲ್ಲಿ ಕಾಡನ್ನು ಬೆಳೆಸಿದ್ದಾರೆ. ಇದರೊಂದಿಗೆ ಗೇರು ಕೃಷಿಯೂ ಇದೆ. ಮಣ್ಣಿನ ಟ್ಯಾಂಕಿಯಿಂದ ವಿದ್ಯುತ್‌ ವೆಚ್ಚವಿಲ್ಲದೆಯೇ ಗ್ರಾವಿಟಿಯ ಮೂಲಕ ಅಡಕೆ, ತೆಂಗು ಮತ್ತು ಬಾಳೆ ಗಿಡಗಳಿಗೆ ಬೇಕಾದಷ್ಟು ನೀರು ಉಣಿಸುತ್ತಾರೆ.


ಅವರ ತೋಟದಲ್ಲಿ 300 ಅಡಕೆ, 75 ತೆಂಗು, 200 ಬಾಳೆ ಗಿಡಗಳಿವೆ. ಹಟ್ಟಿ ಗೊಬ್ಬರ, ಕಾಂಪೋಸ್ಟ್ ಹೊರತು ಬೇರೆ ಯಾವುದೇ ಗೊಬ್ಬರದ ಬಗ್ಗೆ ಮಾಹಾಲಿಂಗ ನಾಯ್ಕರಿಗೆ ತಿಳಿದಿಲ್ಲ. ಜಮೀನಿನಲ್ಲಿ ಇಂಗು ಗುಂಡಿಗಳ ಮುಖಾಂತರ ಜಲಕೊಯ್ಲು ಮಾಡುತ್ತಾರೆ. ಸುಮಾರು ನಾಲ್ಕು ವರ್ಷಗಳ ಹಿಂದೆ ಎರಡು ಬೋರ್‌ವೆಲ್ ತೆಗೆಸಿದ್ದಾರೆ. ಮೊದಲ ಬೋರ್‌ವೆಲ್ 400 ಅಡಿ ಸಾಗಿದ್ದರೂ ನೀರು ದೊರೆತಿರಲಿಲ್ಲ. ಎರಡನೇ ಬೋರ್‌ನಲ್ಲಿ 370 ಅಡಿ ತಲುಪುವ ವೇಳೆ ಒಂದು ಇಂಚು ನೀರು ಲಭ್ಯವಾಗಿದೆ. ಇದೀಗ ಬೋರ್ ವೆಲ್‌ಗೆ ಪಂಪ್ ಸೆಟ್ ಅಳವಡಿಸಿದ್ದಾರೆ.


ಇವರು ಸಾಲಕ್ಕಾಗಿ ಯಾವುದೇ ಬ್ಯಾಂಕ್ ಮೊರೆ ಹೋಗಿಲ್ಲ. ಕೃಷಿಯಲ್ಲಿ ದೊರೆತ ಆದಾಯದಿಂದ ಸ್ವಂತ ಮನೆಯನ್ನೂ ಕಟ್ಟಿದ್ದಾರೆ. ಮನೆಗೆ ವಿದ್ಯುತ್ ಸೇರಿದಂತೆ ಮೂಲಸೌಕರ್ಯಗಳನ್ನು ಮಾಡಿಸಿಕೊಂಡಿದ್ದಾರೆ. ಶಾಲಾ ಕಾಲೇಜುಗಳ ಮೆಟ್ಟಿಲು ಹತ್ತದೆ, ವಿದ್ಯೆಯ ಗಂಧಗಾಳಿ ಇಲ್ಲದ ಛಲಗಾರ ಮಹಾಲಿಂಗ ನಾಯ್ಕರಿಗೆ ದುಡಿಮೆಯೇ ಎಲ್ಲವನ್ನೂ ನೀಡಿದೆ.


ಮಹಾಲಿಂಗ ನಾಯ್ಕರ ಏಕಾಂಗಿ ಸಾಧನೆಯನ್ನು ದೂರದರ್ಶನ ವಾಹಿನಿಯು ತನ್ನ 'ವಾಟರ್ ವಾರಿಯರ್' ಎಂಬ ಧಾರಾವಾಹಿಯಲ್ಲಿ ಪ್ರಸಾರ ಮಾಡಿದೆ. 2018ರಲ್ಲಿ ಅವರು ಮಂಗಳೂರು ಪ್ರೆಸ್ ಕ್ಲಬ್ ಪುರಸ್ಕಾರಕ್ಕೆ ಆಯ್ಕೆಯಾಗಿದ್ದರು.


ದೇಶದ ಆಶೀರ್ವಾದ ಸಿಕ್ಕಂತಾಗಿದೆ:

ನಾನು ಪುಟ್ಟ ಕೆಲಸ ಮಾಡಿದ್ದೇನೆ. ಆದರೆ, ನನ್ನನ್ನು ಗುರುತಿಸಿರುವುದು ಖುಷಿಯನ್ನು ತಂದಿದೆ. ಇಡೀ ಭಾರತ ದೇಶವೇ ನನ್ನನ್ನು ಆಶೀರ್ವಾದ ಮಾಡಿದಂತಾಗಿದೆ. 2004ರಲ್ಲಿ ನನಗೆ ಮೊದಲ ಸನ್ಮಾನ ದೊರೆತಿತ್ತು. ನಂತರ ಹಲವು ಸನ್ಮಾನ, ಪ್ರಶಸ್ತಿಗಳು ಸಿಕ್ಕಿವೆ. ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆಗೊಂಡಿರುವುದು ಖುಷಿ ಕೊಟ್ಟಿದೆ.

- ಅಮೈ ಮಹಾಲಿಂಗ ನಾಯ್ಕ


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top