ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಪರಿಸರ ಸಂಘದ ವತಿಯಿಂದ ಗುರುವಾರ 'ರಾಷ್ಟೀಯ ಪಕ್ಷಿಗಳ ದಿನ'ವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಿಕೆ ಡಾ. ನಾಗರತ್ನ ಮಾತನಾಡಿ, ಪಕ್ಷಿಗಳು ಪ್ರಕೃತಿಯ ಬಹುಮುಖ್ಯ ಭಾಗ. ಮಾನವನ ಬದುಕಿಗೆ ಬೇಕಾದ ಹಲವು ಪಾಠಗಳನ್ನು ಪಕ್ಷಿಗಳ ವೀಕ್ಷಣೆಯಿಂದ ಕಲಿಯಬಹುದಾಗಿದೆ. ಬೆಳೆ ಹಾಳು ಮಾಡುವ ಹುಳು- ಹುಪ್ಪಟೆಗಳನ್ನು ತಿನ್ನುವ ಪಕ್ಷಿಗಳು ರೈತ ಸ್ನೇಹಿ, ಎಂದು ತಿಳಿಸಿದರು.
ಕಾರ್ಯಕ್ರಮದ ಸಂಚಾಲಕ ಡಾ. ಸಿದ್ದರಾಜು ಎಂ.ಎನ್ ಕಾರ್ಯಕ್ರಮದ ಉದ್ದೇಶ ವಿವರಿಸಿ, 'ಪಕ್ಷಿಗಳ ವಿಸ್ಮಯ ಲೋಕ' ಎಂಬ ಪ್ರಾತ್ಯಕ್ಷಿಕೆ ಪ್ರದರ್ಶಿಸಿದರು. ಪಕ್ಷಿಗಳು ಸ್ವಾತಂತ್ರ್ಯದ ಸಂಕೇತ, ಹಕ್ಕಿಗಳ ಹಾರಾಟದಿಂದಲೇ ಮಾನವ ವಿಮಾನದ ಸೃಷ್ಟಿಯ ಬಗ್ಗೆ ಕನಸು ಕಾಣಲು ಸಾಧ್ಯವಾಯಿತು, ಎಂದು ಅಭಿಪ್ರಾಯಪಟ್ಟರು.
ನಂತರ ನಡೆದ ಪಕ್ಷಿಗಳ ಸಂಬಂಧಿತ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಉತ್ಸಾಹದಿಂದ ಭಾಗವಹಿಸಿದರು. ರಸಪ್ರಶ್ನೆ ಕಾರ್ಯಕ್ರಮವನ್ನು ರಚನಾ ಮತ್ತು ಆಯಿಷಾ ನವಾಲ್ ನಿರ್ವಹಿಸಿದರು. ಸುನಿತಾ ಮತ್ತು ಚೈತನ್ಯರವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಭಾಗ್ಯಶ್ರೀ ಹಕ್ಕಿಗಳ ದಿನದ ಆಚರಣೆಯ ಅಗತ್ಯ ಮತ್ತು ಮಹತ್ವದ ಬಗ್ಗೆ ತಿಳಿಸಿದರು. ಪ್ರಥಮ ವರ್ಷದ ವಿದ್ಯಾರ್ಥಿನಿ ಖುಷಿ ಶೆಟ್ಟಿ ಕಾರ್ಯಕ್ರಮ ನಡೆಸಿಕೊಟ್ಟರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ