ಧರ್ಮಸ್ಥಳ: ಮತದಾರರ ಸಾಕ್ಷರತಾ ಸಂಘದ ವತಿಯಿಂದ ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲಮಾಧ್ಯಮ ಶಾಲೆಯಲ್ಲಿ ತಾಲೂಕು ಮಟ್ಟದ ಪ್ರಬಂಧ, ರಸಪ್ರಶ್ನೆ ಹಾಗೂ ಭಿತ್ತಿಪತ್ರಿಕೆ ತಯಾರಿ ಸ್ಪರ್ಧೆಯನ್ನು ದಿನಾಂಕ 11/11/2021 ರಂದು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಧರ್ಮಸ್ಥಳದ ಅನ್ನಪೂರ್ಣ ಛತ್ರದ ವ್ಯವಸ್ಥಾಪಕ ಸುಬ್ರಹ್ಮಣ್ಯ ಪ್ರಸಾದ್ ದೀಪ ಪ್ರಜ್ವಲಿಸುವ ಮುಖಾಂತರ ಉದ್ಘಾಟಿಸಿದರು.
ಇವರು ಮತದಾನದ ಮಹತ್ವ, ದೇಶದ ಭವಿಷ್ಯತ್ತು ಯುವಜನರ ಕೈಯಲ್ಲಿದೆ ಎಂಬ ಮಾಹಿತಿ ನೀಡಿದರು. ಮತದಾನದ ಸಂದರ್ಭದಲ್ಲಿ ಕಿರಿಯರಾದ ವಿದ್ಯಾರ್ಥಿಗಳು ತಮ್ಮ ಹೆತ್ತವರಿಗೂ ಮತದಾನದ ಮಹತ್ವವನ್ನು ತಿಳಿಸಬೇಕು. ಎಷ್ಟೇ ದೂರದಲ್ಲಿದ್ದರೂ ನಮ್ಮ ದೇಶದ ಭವಿಷ್ಯತ್ತಿಗಾಗಿ ಮತದಾನ ಮಾಡಬೇಕು ಎಂಬ ಕಿವಿಮಾತು ಹೇಳಿದರು.
ನಂತರ ಶಾಲಾ ಸಂಚಾಲಕ ಅನಂತಪದ್ಮನಾಭ ಭಟ್ ಸ್ಪರ್ಧಿಗಳಿಗೆ ಶುಭ ಹಾರೈಸಿದರು. ಶ್ರೀಯುತ ಸುಭಾಷ್ ಜಾದವ್ ಶಿಕ್ಷಣ ಸಂಯೋಜಕರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಚುನಾವಣಾ ಆಯೋಗವು ಮುಖ್ಯವಾಗಿ ಕಿರಿಯರಿಗೆ ಮತದಾನದ ಮಹತ್ವ ಅರಿವಾಗಬೇಕೆಂಬ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸುತ್ತಿದೆ. ಹೀಗಾಗಿ ಇದರ ಸದುಪಯೋಗ ಪಡೆದುಕೊಂಡು ಮುಂದಿನ ದಿನಗಳಲ್ಲಿ ದೇಶದ ಭವಿಷ್ಯ ನಿಮ್ಮ ಕೈಲಿರುವಾಗ ಸತ್ಪ್ರಜೆಗಳಾಗಿ ನೈತಿಕತೆಯಿಂದ ಮತದಾನ ಮಾಡಬೇಕು ಎನ್ನುತ್ತಾ,ಕಾರ್ಯಕ್ರಮದ ರೂಪುರೇಷೆಗಳನ್ನು ತಿಳಿಸಿದರು.
ಶಾಲಾ ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವು ಶಾಲಾ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಪರಿಮಳ ಎಂ.ವಿ.ಯವರ ಆತ್ಮೀಯತೆಯ ಸ್ವಾಗತದೊಂದಿಗೆ ಮುಂದುವರಿದು, ಶ್ರೀಮತಿ ದಿವ್ಯ ಇವರ ಧನ್ಯವಾದದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಈ ಕಾರ್ಯಕ್ರಮವನ್ನು ಶ್ರೀಮತಿ ಆಶಾ ನಿರೂಪಿಸಿದರು.