ಪುತ್ತೂರು: ಪುತ್ತೂರಿನ ಹೆಸರಾಂತ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಲರ್ಸ್ ಸಂಸ್ಥೆಯಲ್ಲಿ 'ಬೆಳೆಸೋಣ ನಮ್ಮತನ- ಕನ್ನಡ ಬದುಕು ಬಂಗಾರ' ಶೀರ್ಷಿಕೆಯಡಿ ಕನ್ನಡ ರಾಜ್ಯೋತ್ಸವವನ್ನು ವಿನೂತನ ರೀತಿಯಲ್ಲಿ ಆಚರಿಸಲಾಯಿತು. ಕನ್ನಡ ಭಾವಗೀತಾಭಿನಯದ ಖ್ಯಾತಿಯ ಉಡುಪಿ ಕೊಡವೂರಿನ ನೃತ್ಯನಿಕೇತನ ಸಂಸ್ಥೆಯ ಮಾನಸಿ ಸುಧೀರ್ ಅವರಿಂದ ವಿಶೇಷ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಬ್ಬರನ್ನು ಸನ್ಮಾನಿಸಲಾಯಿತು.
ಸಂಸ್ಕೃತಿಯನ್ನು ಬಿಂಬಿಸುವ ಆಭರಣ:
ವಿವಿಧತೆಯಲ್ಲಿ ಏಕತೆಯನ್ನು ಆಭರಣದಲ್ಲೂ ಕಾಣಬಹುದು. ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಂಪ್ರದಾಯಗಳು ಬೇರೆ ಬೇರೆ. ಅವುಗಳನ್ನು ಆಭರಣಗಳಲ್ಲೂ ಕಾಣಬಹುದು. ನಮ್ಮ ಹೆಮ್ಮೆಯ ಆಭರಣ ಸಂಸ್ಕೃತಿಯನ್ನು ಮುಳಿಯ ಜ್ಯುವೆಲ್ಸ್ ಸ್ಪಷ್ಟವಾಗಿ ತೋರಿಸಿಕೊಟ್ಟಿದೆ ಎಂದು ಮಾನಸಿ ಸುಧೀರ್ ನುಡಿದರು.
ಮುಳಿಯದ ಬಂಗಾರ ಮತ್ತು ಬದುಕು ಬಂಗಾರ ಎಂಬ ಪರಿಕಲ್ಪನೆಗಳನ್ನು ಜತೆಗೂಡಿಸಿದ ಕನ್ನಡ ಗೀತೆಗಳನ್ನು ಪ್ರಸ್ತುತಪಡಿಸಿದರು. ಅಪ್ಪನು ಮಾಡಿದ ಚೌತಿಯ ಪ್ರತಿಮೆಗೆ ಆನೆಯ ಸೊಂಡಿಲ ಮೊಗವಿತ್ತು ಎಂಬ ಕನ್ನಡ ಅಕ್ಷರಮಾಲೆಯ ಗೀತೆಯನ್ನು ವಿದ್ಯಾರ್ಥಿಗಳ ಜತೆ ಹಾಡಿ ಅಭಿನಯಿಸಿದರು.
ಕಸಾಪ ತಾಲೂಕು ಘಟಕದ ಮಾಜಿ ಅಧ್ಯಕ್ಷ ಬಿ. ಐತಪ್ಪ ನಾಯ್ಕ್ ಅವರು ಮಾತನಾಡಿ, ನಮ್ಮತನವನ್ನು ಬೆಳೆಸುವುದು ಹೇಗೆ ಎಂಬುದಕ್ಕೆ ಮುಳಿಯ ಸಂಸ್ಥೆಯು ಸಾಕ್ಷಿಯಾಗಿ ನಿಂತಿದೆ. ಹಲವು ತಲೆಮಾರುಗಳಿಂದ ಕನ್ನಡದ ಕಂಪನ್ನು ನಾಡಿಗೆ ಪರಿಚಯಿಸುತ್ತಿರುವ ಮುಳಿಯ ಕುಟುಂಬದವರು ಕನ್ನಡಕ್ಕೆ ಸಂಬಂಧಿಸಿದ ಎಲ್ಲ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ನಿಂತು ಸಹಕಾರ ನೀಡುತ್ತಾರೆ ಎಂದು ಶ್ಲಾಘಿಸಿದರು.
ಮುಳಿಯ ಸಂಸ್ಥೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ಅವರು ಮಾತನಾಡಿ, ನಿತ್ಯದ ಕನ್ನಡ ಕಲಿಕೆಗೆ ಪೂರಕವಾಗಿ ನಿತ್ಯ ಬಳಕೆಯ ಮಾತುಗಳನ್ನು ಆಪ್ ಗೆ ಅಳವಡಿಸುವ ಉದ್ದೇಶವಿದೆ. ಈಗಾಗಲೇ ಬೆಂಗಳೂರಿನ ಸಂಸ್ಥೆಯಲ್ಲಿ ಕನ್ನಡಕ್ಕೆ ಸಂಬಂಧಿಸಿದ ಉತ್ಮ ಕಾರ್ಯಕ್ರಮ ನಡೆದಿದೆ. ಕನ್ನಡದ ನೆಲದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡಿಗರು ಎಂಬ ಭಾವನೆ ನಮ್ಮಲ್ಲಿ ಇರಬೇಕು ಎಂದರು.
ಸಮ್ಮಾನ: ಇದೇ ಸಂದರ್ಭದಲ್ಲಿ ಸಾಧಕರಾದ ಪಾಂಡುರಂಗ ನಾಯಕ್ ಮತ್ತು ರವಿ ರಾಮಕುಂಜ ಅವರನ್ನು ಸಮ್ಮಾನಿಸಲಾಯಿತು. ಮುಳಿಯ ಸಂಸ್ಥೆಯ ಹಿರಿಯರಾದ ಸುಲೋಚನಾ ಶ್ಯಾಮ್ ಭಟ್, ಆಡಳಿತ ನಿರ್ದೇಶಕ ಕೃಷ್ಣ ನಾರಾಯಣ ಮುಳಿಯ, ಕೃಷ್ಣವೇಣಿ ಮತ್ತಿತರರು ಉಪಸ್ಥಿತರಿದ್ದರು.
ಸಂಸ್ಥೆಯ ಮಾರುಕಟ್ಟೆ ವಿಭಾಗದ ನಾಮ್ದೇವ್ ಮಲ್ಯ ಸ್ವಾಗತಿಸಿದರು. ಮಾರುಕಟ್ಟೆ ಸಲಹೆಗಾರ ವೇಣುಶರ್ಮ ಸಮ್ಮಾನಿತರನ್ನು ಪರಿಚಯಿಸಿದರು. ಶಿವಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ