"ವಿಧಾನ ಪರಿಷತ್" ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಪೂರಕವೇ?

Upayuktha
0


ಇದಾಗಲೇ ರಾಜ್ಯದ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಚುನಾವಣೆ ನಡೆಸುವರೇ ರಾಜ್ಯ ಚುನಾವಣಾ ಆಯೇೂಗ ದಿನಾಂಕ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಮೂರು ಪಕ್ಷಗಳು ವಿಧಾನ ಪರಿಷತ್ತಿನಲ್ಲಿ ತಮ್ಮ ಬಲ ಹೆಚ್ಚಿಸಿ ಕೊಳ್ಳುವ ನಿಟ್ಟಿನಲ್ಲಿ ಪೈಪೇೂಟಿ ಶುರು ಮಾಡಿದ್ದಾವೆ. ಇದು ರಾಜಕೀಯ ಪಕ್ಷಗಳ ಮೇಲಾಟದ ಹಿತಾಸಕ್ತಿ. ಆದರೆ ಜನ ಸಾಮಾನ್ಯರಾದ ನಾವು ಈಗ ಗಂಭೀರವಾಗಿ ಚಿಂತಿಸ ಬೇಕಾದ ವಿಚಾರವೆಂದರೆ ಈ ಮೇಲ್ಮನೆ ಅಥಾ೯ತ್ ವಿಧಾನ ಪರಿಷತ್ತಿನ ಅಸ್ತಿತ್ವ; ಚುನಾವಣಾ ವಿಧಾನ ಸ್ಪಧಿ೯ಸುವ ಅಭ್ಯರ್ಥಿಗಳ ಆರ್ಹತೆ ನೇೂಡುವಾಗ ಈ ಸದನ ಪ್ರಜಾಪ್ರಭುತ್ವ ಸಿದ್ದಾಂತಗಳಿಗೆ ಪೂರಕವಾಗಿದಿಯೇ ಅನ್ನುವ ಪ್ರಶ್ನೆ ಮೂಡುವುದು ಸಹಜ ತಾನೇ?


ಕರ್ನಾಟಕದ ವಿಧಾನ ಪರಿಷತ್ತಿನ ಸದಸ್ಯರ ಒಟ್ಟು ಸಂಖ್ಯೆಯೇ 75. ಇದರಲ್ಲಿ ಒಂದಿಷ್ಟು  ಮಂದಿ ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಂದ ಆಯ್ಕೆ ಇನ್ನೊಂದಿಷ್ಟು ಮಂದಿ ಶಿಕ್ಷಕರ ಕ್ಷೇತ್ರಗಳಿಂದ ಆಯ್ಕೆ ಮತ್ತೊಂದಿಷ್ಟು ಮಂದಿ ಪದವಿಧರರ ಕ್ಷೇತ್ರಗಳಿಂದ ಆಯ್ಕೆ. ಇನ್ನೂ ಕೆಲವರು ನಾಮಕರಣಗೊಂಡ ಸದಸ್ಯರು. ಇವರಿಗೂ ಕೂಡಾ ವಿಧಾನ ಸಭೆಯ ಶಾಸಕರಿಗೆ ಕೊಟ್ಟ ಸಂಬಳ ಸಾರಿಗೆ ಇನ್ನಿತರ ಭತ್ಯೆ ಕೊಟ್ಟು ಸಾಕಬೇಕು. ಈ ಸದನಕ್ಕೆ ಹೆಚ್ಚೇನೂ ಅಧಿಕಾರವಿಲ್ಲ. ಆದರೂ ಶಾಸಕರು ಎಂಬ ಹೆಮ್ಮೆ ಗೌರವ ಮರ್ಯಾದೆ ಸಲ್ಲಲೇಬೇಕು. ಇದು ಕೇವಲ ಆರು ರಾಜ್ಯಗಳಲ್ಲಿ ಮಾತ್ರ ಅಸ್ತಿತ್ವದಲ್ಲಿರುವುದು. ಅಂದರೆ ಇದರ ಅಗತ್ಯತೆ ಎಷ್ಟಿದೆ ಅನ್ನುವುದಕ್ಕೆ ಇದೇ ಸಾಕ್ಷಿ.


ಇವರ ಚುನಾವಣೆಗೆ ವಿಧಿಸಿರುವ ಆರ್ಹತೆ ನೇೂಡಿದರೆ ನಮ್ಮಲ್ಲಿನ ಸಹಕಾರಿ ಸಂಘಗಳಿಗಾದರೂ ಸ್ಪರ್ಧಿಸುವ ಅಭ್ಯರ್ಥಿಗಳಾದರೂ ಒಂದು ವೈಜ್ಞಾನಿಕವಾದ ಪ್ರಜಾಸತ್ತಾತ್ಮಕ ಆರ್ಹತೆಗಳಿವೆ. ಸಹಕಾರಿ ಸಂಘಗಳಿಗೆ ಸ್ಪರ್ಧಿಸ ಬೇಕಾದರೆ ಆ ಸಹಕಾರಿ ಸಂಘದ ಸದಸ್ಯನಾಗಿಲೇ ಬೇಕು. ದಿವಾಳಿಕೋರನಿಗೆ ಸ್ಪರ್ಧಿಸುವ ಅವಕಾಶವಿಲ್ಲ. ಇಲ್ಲಿ  ಸದಸ್ಯರು ಬಿಟ್ಟು ದಿವಾಳಿಕೇೂರ ಅನ್ನುವುದೇ ವಿಶೇಷ ಆರ್ಹತೆ!!.


ಉದಾ: ಶಿಕ್ಷಕರ ಕ್ಷೇತ್ರದಿಂದ ಸ್ಪಧಿ೯ಸುವ ಅಭ್ಯರ್ಥಿ ಶಿಕ್ಷಕನಾಗಿರಬೇಕಾಗಿಲ್ಲ. ಮತದಾರರ ಮಾತ್ರ ನೊಂದಾಯಿತ ಶಿಕ್ಷಕನಾಗಿರ ಬೇಕು. ಇದೆಂತಹ ದುರಂತ. ಶಿಕ್ಷಕರ ಕ್ಷೇತ್ರದಲ್ಲಿ ಕೂಡಾ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮತದಾರರಾಗುವ ಅವಕಾಶವಿಲ್ಲ! ಕೇವಲ ಪ್ರೌಢ; ಪದವಿ ಪೂವ೯ ಕಾಲೇಜ್; ಪದವಿ ಮತ್ತು ಸ್ನಾತಕೋತ್ತರ ಕಾಲೇಜಿನ ಶಿಕ್ಷಕರಿಗೆ ಮಾತ್ರ ಮತದಾರರಾಗಿ ನೊಂದಾಯಿಸಿ ಕೊಳ್ಳುವ ಅವಕಾಶ. ಒಂದು ವೇಳೆ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮತದಾನದ ಅವಕಾಶ ಕೊಟ್ಟು ಬಿಟ್ಟರೆ  ಅವರ ಸಂಖ್ಯೆ ಜಾಸ್ತಿ ಇರುವ ಕಾರಣ ಅವರೇ ಸ್ಪರ್ಧಿಸಿ ಗೆಲ್ಲುವ ಸಾಧ್ಯತೆ ಇದೆ. ಹಾಗಾಗಿ ಪಕ್ಕ ರಾಜಕಾರಣಿಗಳ ಅವಕಾಶ ತಪ್ಪಿ ಹೇೂಗಬಹುದು. ಆದುದರಿಂದ ಅವರನ್ನು ದೂರವಿಡುವುದೇ ಲೇಸು ಅನ್ನುವ ಜಾಣತನದ ನಿಧಾ೯ರವನ್ನು ಸರ್ವಪಕ್ಷಗಳ ರಾಜಕಾರಣಿಗಳು ಒಮ್ಮತದ ನಿಧಾ೯ರಕ್ಕೆ ಬಂದಿದ್ದಾರೆ ಅನ್ನುವುದು ಅಷ್ಟೇ ಸತ್ಯ. ಹಾಗಾಗಿ ಶಿಕ್ಷಕರನ್ನು ಆಡಿಸುವ ಕುಣಿಸುವ ಮಾತಿನ ಮೇೂಡಿಗಾರ ರಾಜಕಾರಣಿಗಳೇ ಸುಲಭದಲ್ಲಿ ಗೆದ್ದು ಶಾಸಕರಾಗುತ್ತಿದ್ದಾರೆ. ಇದು ಮಾತ್ರವಲ್ಲ ಪದವಿಧರರ ಮತ್ತು ಸ್ಥಳೀಯ ಆಡಳಿತದ ಪ್ರತಿನಿಧಿಗಳಿಂದ ಚುನಾಯಿತರಾಗಿ ಶಾಸಕರಾಗುವವರ ಹಣೆಬರಹ ಅಷ್ಟೇನೆ.


ಒಟ್ಟಾರೆ ಐದರಿಂದ ಆರು ಸಾವಿರಗ್ಗಿಂತಲೂ ಕಡಿಮೆ ಮತದಾರರು ಇರುವ ಇಂತಹ ಕ್ಷೇತ್ರಗಳಿಂದ ಸುಲಭದಲ್ಲಿ ಗೆಲ್ಲಲು ಸಾಧ್ಯ ಅನ್ನುವುದು ಜಾಹಿರಾಗಿ ಬಿಟ್ಟಿದೆ. ಪಕ್ಷಗಳು ಅತಂತ್ರ ಸ್ಥಿತಿಯಲ್ಲಿ ಇರುವಾಗ ಪ್ರಭಾವಿ ವ್ಯಕ್ತಿಗಳು ಹಣ ಚೆಲ್ಲಿ ಗೆಲ್ಲಲು ಸಾಧ್ಯ ಅನ್ನುವುದು ಕೂಡಾ ಇತ್ತೀಚಿನ ವಿದ್ಯಾಮಾನಗಳಿಂದ ವೇದ್ಯವಾಗುತ್ತಿರುವುದು ಅಷ್ಟೇ ಸತ್ಯ. ಶಿಕ್ಷಕರ ಕ್ಷೇತ್ರಗಳಲ್ಲಿ ಗೆದ್ದು ಬರ ಬೇಕಾದರೆ ಸ್ವಲ್ಪ ಮಟ್ಟಿಗೆ ಶಿಕ್ಷಕರ ಬೇಡಿಕೆಗಳಿಗೆ ಧ್ವನಿ ಎತ್ತಿದರೆ ಸಾಕು. ಅದುವೆ ಪದವಿಧರರ ಕ್ಷೇತ್ರಗಳಿಂದ ಗೆದ್ದ ಜನಪ್ರತಿನಿಧಿಗಳು ಅದನ್ನು ಕೂಡಾ ಮಾಡ ಬೇಕಾಗಿಲ್ಲ ಯಾಕೆಂದರೆ ಅತ್ಯಂತ ಅಸಂಘಟಿತ ವರ್ಗವಿದ್ದರೆ ಅದು ಪದವಿಧರ ಕ್ಷೇತ್ರ. ಹಾಗಾಗಿ ತಮ್ಮ ಮತದಾರರನ್ನು ನೊಂದಾಯಿಸಿಕೊಂಡರೇ ಸಾಕು. ಕೆಲಸ ಮಾಡಬೇಕಾಗಿಲ್ಲ. ಇದೆಲ್ಲವೂ ನಾವು ಕಂಡು ಕೊಂಡ ರಾಜಕೀಯ ವಲಯದ ಸತ್ಯದ ಮಜಲು.


ಅಂದರೆ ಒಟ್ಟಿನಲ್ಲಿ ಮೇಲ್ಮಮನೆ ಅನ್ನುವುದು ಎಲ್ಲೂ ದಾರಿಕಾಣದವರಿಗೆ ವಿಧಾನಸೌಧ ಪ್ರವೇಶಿಸಿ ಸಕಲ ಸವಲತ್ತು ಅನುಭೇೂಗಿಸಲು ಹಾದಿ ಮಾಡಿ ಕೊಡುವ ಸದನವೆಂದೇ ಬಿಂಬಿತವಾಗಿದೆ. ಹಾಗಾಗಿ ಇದರ ಅಸ್ತಿತ್ವ; ಉಪಸ್ಥಿತಿ; ಆರ್ಹತೆ; ಕಾರ್ಯಗಳ ಬಗ್ಗೆ ಗಂಭೀರವಾಗಿ ಚರ್ಚಿಸಬೇಕಾದ ಕಾಲ ಸನ್ನಿಹಿತವಾಗಿದೆ. ಅಲ್ವೇ?

-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top