ಕೇಂದ್ರ ಮಂತ್ರಿ ಭಗವಂತ್ ಖೂಬಾ- ಪೇಜಾವರ ಶ್ರೀ ಭೇಟಿ

Upayuktha
0

ಕರಾವಳಿ ಜಿಲ್ಲೆಗಳಿಗೆ ಸೋಲಾರ್ ಪಾರ್ಕ್: ಶ್ರೀಗಳ ಅಪೇಕ್ಷೆ 




ಬೆಂಗಳೂರು: ಕೇಂದ್ರ ಸರ್ಕಾರದ ರಸಗೊಬ್ಬರ ರಾಸಾಯನಿಕ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಮಂತ್ರಿ ಭಗವಂತ್ ಖೂಬಾ ಭಾನುವಾರ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಚಾತುರ್ಮಾಸ್ಯ ವ್ರತದಲ್ಲಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರನ್ನು ಭೇಟಿಯಾಗಿ ಗುರುವಂದನೆ ಸಲ್ಲಿಸಿ ಆಶೀರ್ವಾದ ಪಡೆದರು. 


ಈ ಸಂದರ್ಭ ಸಚಿವರೊಂದಿಗೆ ನವೀಕರಿಸಬಹುದಾದ ಇಂಧನಗಳ ಸಾಧ್ಯತೆಗಳ ಕುರಿತು ಸಮಾಲೋಚನೆ ನಡೆಸಿದರು.‌ ಗೋವಿನ ಸೆಗಣಿಯಿಂದ ವಿದ್ಯುತ್ ತಯಾರಿಸುವ ಬಗ್ಗೆಯೂ ಮಾತಾಡಿದ ಶ್ರೀಗಳು ದೇಶದಲ್ಲಿ ದೊಡ್ಡ ದೊಡ್ಡ ಗೋಶಾಲೆಗಳಲ್ಲಿ ಗೋಮಯದ ಹೇರಳ ಲಭ್ಯತೆಯನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳುವ ಬಗ್ಗೆ ಸರ್ಕಾರ ವ್ಯವಸ್ಥೆ ಮಾಡಿದರೆ ಉತ್ತಮ ಎಂದರು. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಸಚಿವರು ವಿವರಿಸಿದರು.  


ಖೂಬಾರವರು ಇತ್ತೀಚೆಗೆ ಬೀದರ್ ಕೊಪ್ಪಳ ಬಾಗಲಕೋಟೆಗಳಲ್ಲಿ ಸೋಲಾರ್ ಪಾರ್ಕ್ ನಿರ್ಮಿಸುವ ಘೋಷಣೆ ಮಾಡಿದ ವಿಚಾರದ ಬಗ್ಗೆ ಸಂತಸ ವ್ಯಕ್ತಪಡಿಸಿದ ಶ್ರೀಗಳು ಸೂರ್ಯಶಕ್ತಿ ಎಲ್ಲ ರೀತಿಯಿಂದಲೂ ಭವಿಷ್ಯಕ್ಕೆ ಅತ್ಯಂತ ಭರವಸೆಯ ಇಂಧನವಾಗಿದೆ. ಈ ಮೂರು ಜಿಲ್ಲೆಗಳ ಜೊತೆಗೆ ರಾಜ್ಯದ ಕರಾವಳಿ ಭಾಗದ ಉಡುಪಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಗಮನದಲ್ಲಿಟ್ಟುಕೊಂಡು ಈ ಮೂರು ಜಿಲ್ಲೆಗಳಲ್ಲಿ ಯಾವುದಾದರೂ ಒಂದು ಕಡೆ ಸೋಲಾರ್ ಪಾರ್ಕ್ ನಿರ್ಮಿಸಬೇಕೆಂದು ಅಪೇಕ್ಷಿಸಿ ಲಿಖಿತ ಪತ್ರವನ್ನು ಸಚಿವರಿಗೆ ನೀಡಿದರು.‌ ಈ ಕುರಿತು ಮುಖ್ಯಮಂತ್ರಿಗಳು ಮತ್ತು ರಾಜ್ಯ ಸರ್ಕಾರದ ಜೊತೆ ಸಮಾಲೋಚಿಸಿ ತೀರ್ಮಾನಿಸುವುದಾಗಿ ಸಚಿವರು ತಿಳಿಸಿದರು. ಖೂಬಾರನ್ನು ಶ್ರೀಗಳು ಸಂಮಾನಿಸಿ ಆಶೀರ್ವದಿಸಿದರು.  


ಮಂತ್ರಿಗಳನ್ನು ವಿದ್ಯಾಪೀಠದ ಪ್ರಮುಖರ ಸಹಿತ ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಶ್ರೀ ಕೃಷ್ಣ ದರ್ಶನಗೈದು ದೇವರ ಪ್ರಸಾದ ಮತ್ತು ಬಳಿಕ ಬೆಳಗ್ಗಿನ ಉಪಾಹಾರವನ್ನೂ ಅಲ್ಲೇ ಸ್ವೀಕರಿಸಿದರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top