|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಡಗುತಿಟ್ಟಿನ ಯುವ ಭಾಗವತರು ಗಣೇಶ್‌ ಆಚಾರ್ಯ ಬಿಲ್ಲಾಡಿ

ಬಡಗುತಿಟ್ಟಿನ ಯುವ ಭಾಗವತರು ಗಣೇಶ್‌ ಆಚಾರ್ಯ ಬಿಲ್ಲಾಡಿ


 

ಬಡಗುತಿಟ್ಟು ಯಕ್ಷಗಾನ ಅನೇಕ ಯುವ ಭಾಗವತರನ್ನು ಯಕ್ಷಗಾನಕ್ಕೆ ಕೊಡುಗೆಯಾಗಿ ನೀಡಿದೆ. ಅಂತಹ ಯುವ ಭಾಗವತರಲ್ಲಿ ನಾವು ಇವತ್ತು ಪರಿಚಯ ಮಾಡುವ ಕಲಾವಿದರು ಶ್ರೀಯುತ ಗಣೇಶ್‌ ಆಚಾರ್ ಬಿಲ್ಲಾಡಿ.


ದಿನಾಂಕ 17.06.1998ರಂದು ಶ್ರೀಮತಿ ಸರೋಜ ಹಾಗೂ ಶ್ರೀಯುತ ರುದ್ರ ಆಚಾರ್ಯ ಇವರ ಪ್ರೀತಿಯ ಮಗನಾಗಿ ಜನನ. ಪಿಯುಸಿ ವರೆಗೆ ವಿದ್ಯಾಭ್ಯಾಸ. ಯಕ್ಷಗಾನದ ಮೇಲೆ ತುಂಬಾನೇ ಆಸಕ್ತಿ ಇದ್ದ ಇವರು ಯಕ್ಷಗಾನದಲ್ಲಿ ಏನು ಆದರೂ ಸಾಧನೆ ಮಾಡಬೇಕು ಎಂಬ ಆಸೆ ತುಂಬಾನೇ ಇತ್ತು ಹಾಗೂ ಇವರು ಯಕ್ಷಗಾನಕ್ಕೆ ಬರಲು ಯಳ್ಳಂಪಳ್ಳಿ ಜಗನ್ನಾಥ್ ಆಚಾರ್ಯ (ಬಡಗು ತಿಟ್ಟಿನ ಹಿರಿಯ ಬಣ್ಣದ ವೇಷಧಾರಿ) ಇವರಿಗೆ ತುಂಬಾನೇ ಪ್ರೇರಣೆ ಆದರು.


ಇವರು ಯಕ್ಷಗಾನ ಕಲಿಕೆಯನ್ನು ಹಂಗಾರಕಟ್ಟೆ ಯಕ್ಷಗಾನ ಕೇಂದ್ರದಲ್ಲಿ ಸೇರಿ ಕಲಿತರು. ಕೇಂದ್ರದಲ್ಲಿ ಇವರನ್ನು ನೋಡಿಕೊಂಡವರು ಐರೋಡಿ ರಾಜಶೇಖರ ಹೆಬ್ಬಾರ್ ಹಾಗೂ ಗುರುಗಳಾಗಿ ಗುಂಡ್ಮಿ ಸದಾನಂದ ಐತಾಳ್, ಹೊಸಾಳ ಉದಯ್ ಕುಮಾರ್, ಬಿದ್ಕಲ್ ಕಟ್ಟೆ ಕೃಷ್ಣಯ್ಯ ಆಚಾರ್ ಹಾಗೂ ಮಹೇಶ್ ಮಂದಾರ್ತಿ. ಪ್ರಸ್ತುತ ಇವರು ಮಂದಾರ್ತಿ ಮೇಳದಲ್ಲಿ ತಿರುಗಾಟ ಮಾಡುತ್ತಿದ್ದಾರೆ ಹಾಗೂ ಯಕ್ಷಗಾನದಲ್ಲಿ ಒಟ್ಟು 5 ವರ್ಷಗಳಿಂದ ಸೇವೆಯನ್ನು ಮಾಡುತ್ತಿದ್ದಾರೆ. "ಕುಶಲವ, ಚಂದ್ರಾವಳಿ ವಿಲಾಸ, ಅಭಿಮನ್ಯು ಕಾಳಗ, ವೃಷಸೇನ ಕಾಳಗ, ಕರ್ಣಾರ್ಜುನ, ಗದಾಯುದ್ದ, ನಾಗನಂದನೆ, ದಕ್ಷಯಜ್ಞ, ಕಾಳಿದಾಸ, ಮಂದಾರ್ತಿ ಕ್ಷೇತ್ರ ಮಹಾತ್ಮೆ, ಶ್ವೇತಕುಮಾರ ಚರಿತ್ರೆ" ಇವರ ನೆಚ್ಚಿನ ಪ್ರಸಂಗಳು. ಇವರಿಗೆ ಯಕ್ಷಗಾನದಲ್ಲಿ ಬರುವ ಎಲ್ಲಾ ರಾಗವು ಇಷ್ಟ. ಅದರಲ್ಲಿಯು "ಹಿಂದೋಳ, ಮದ್ಯಮಾವತಿ, ಕೇದಾರಗೌಳ, ತೋಡಿ, ಬೈರವಿ, ಚಾರುಕೇಶಿ, ಕರಹರಪ್ರೀಯ, ರೇವತಿ, ರೇಗುಪ್ತೀ" ಇವರ ನೆಚ್ಚಿನ ರಾಗಗಳು.


ಮಂದಾರ್ತಿ ರಾಮಣ್ಣ, ಶಿವಾನಂದ ಕೋಟ, ರಾಕೇಶ್ ಮಲ್ಯ ಹಳ್ಳಾಡಿ, ಶ್ರೀನಿವಾಸ ಪ್ರಭು, ಶ್ರೀಕಾಂತ್ ಶೆಟ್ಟಿ ಯಡಮೋಗೆ ಇವರ ನೆಚ್ಚಿನ ಚೆಂಡೆ ವಾದಕರು. ಮಹೇಶ್ ಮಂದಾರ್ತಿ, ಎನ್ ಜಿ ಹೆಗಡೆ, ರಾಘವೇಂದ್ರ ಹೆಗಡೆ ಯಲ್ಲಾಪುರ, ಅಕ್ಷಯ ಆಚಾರ್ಯ ಬಿದ್ಕಲ್ ಕಟ್ಟೆ, ಶಶಾಂಕ್ ಆಚಾರ್ಯ ಇವರ ನೆಚ್ಚಿನ ಮದ್ದಳೆ ವಾದಕರು. ದಿವಂಗತ ಸುಬ್ರಹ್ಮಣ್ಯ ಆಚಾರ್ ನಗರ, ಜನ್ಸಾಲೆ ರಾಘವೇಂದ್ರ ಆಚಾರ್, ಹೆರೆಂಜಾಲು ಗೊಪಾಲ ಗಾಣಿಗರು, ರಾಘವೇಂದ್ರ ಮಯ್ಯ ಹಾಲಾಡಿ, ಸದಾಶಿವ ಅಮೀನ್ ನೆಚ್ಚಿನ ಭಾಗವತರು. ಇವರಿಗೆ  ಯಕ್ಷಗಾನದಲ್ಲಿ ವೇಷ ಮಾಡುವ ಆಸಕ್ತಿ ಇದೆ. ಆದರೆ ಈಗ ಭಾಗವತಿಕೆಯಲ್ಲಿ ಜಾಸ್ತಿ ಆಸಕ್ತಿ ತೋರಿಸ್ತಾ ಇದ್ದಾರೆ.


ಪ್ರಸಂಗ ಪುಸ್ತಕ ಓದುವುದು, ಮನೆಯಲ್ಲಿ ಯಕ್ಷಗಾನ ಅಭ್ಯಾಸ ಮಾಡುವುದು ಇವರ ಹವ್ಯಾಸಗಳು. ಹಲವಾರು ಸಂಘ ಸಂಸ್ಥೆಗಳಲ್ಲಿ ಸನ್ಮಾನಗಳು ಹಾಗೂ ಕರ್ನಾಟಕ ಯುವರತ್ನ ಪ್ರಶಸ್ತಿ ಇವರಿಗೆ ಸಿಕ್ಕಿರುತ್ತದೆ.


ಯಕ್ಷಗಾನದ ಇಂದಿನ ಸ್ಥಿತಿ ಕೇಳಿದಾಗ ಹೀಗೆ ಹೇಳುತ್ತಾರೆ:  

ಕೊರೋನಾ ಮಹಾಮಾರಿಯಿಂದ ಬೇಸಿಗೆ ತಿರುಗಾಟವು ಸಂಪೂರ್ಣವಾಗಿ ನಡೆಯಲಿಲ್ಲ. ಮಳೆಗಾಲದಲ್ಲಿ ಬೆಂಗಳೂರು ಮಂಬೈ ಆಟಗಳೆಲ್ಲಾ ಸ್ಥಗಿತಗೊಂಡಿದೆ ಹಾಗೂ ಪ್ರೇಕ್ಷಕರಿಲ್ಲದೆ ಯೂಟ್ಯೂಬ್ ಲೈವ್, ಫೇಸ್ಬುಕ್ ಲೈವ್ ನಲ್ಲಿ ಆಟ ಮಾಡುವ ಪರಿಸ್ಥಿತಿ ಒದಗಿದೆ.


ಯಕ್ಷರಂಗದಲ್ಲಿ ಮುಂದಿನ ಯೋಜನೆ ಕೇಳಿದಾಗ ಹೀಗೆ ಹೇಳುತ್ತಾರೆ: 

ಡೇರೆ ಮೇಳಗಳಲ್ಲಿ ತಿರುಗಾಟ ಮಾಡಿ ಹೊಸ ಪ್ರಸಂಗದ ಅನುಭವ ಪಡೆಯುವ ಯೋಜನೆ ಇದೆ.


ಇವರಿಗೆ ಇವರು ನಂಬಿರುವ ಕಲಾಮಾತೆ  ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ.


- ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.


(ಉಪಯುಕ್ತ ನ್ಯೂಸ್)



ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 Comments

Post a Comment

Post a Comment (0)

Previous Post Next Post