"ಬಾಕಾಶಾ ತುರ್ತು ತಿಂಡಿಯಾಗಿ ಜನಪ್ರಿಯವಾಗಬಹುದು"
- ದಾವಣಗೆರೆ ಕೇವೀಕೆ ಮುಖ್ಯಸ್ಥ ಡಾ.ಟಿ.ಎನ್. ದೇವರಾಜ್
"ಬಾಳೆಕಾಯಿಯನ್ನು ಇಷ್ಟೊಂದು ರೂಪಾಂತರಗಳಲ್ಲಿ ನಾವೇ ತಿನ್ನಬಹುದು ಅಂತ ನಾವೆಲ್ಲಾ ಅಚ್ಚರಿ ಪಟ್ವಿ"
ವಾರದ ಹಿಂದೆ ಪ್ರಥಮ ಬಾರಿಗೆ ಬಾಕಾಶಾ (ಬಾಳೆಕಾಯಿ ಶಾವಿಗೆ) ತಯಾರಿಸಿ ಸಹೋದ್ಯೋಗಿಗಳೊಂದಿಗೆ ಸವಿದ ಮೇಲೆ ಡಾ. ಟಿ.ಎನ್ ದೇವರಾಜ್ ಅವರು ಉದ್ಗರಿಸಿದ್ದು ಹೀಗೆ. ಇವರು ದಾವಣಗೆರೆಯ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರು.
"ರುಚಿಯಲ್ಲಿ ಫೆಂಟಾಸ್ಟಿಕ್. ಕರಗಲು ಹೆಚ್ಚು ಸಮಯ ತೆಗೊಂಡಿಲ್ಲ ಅನಿಸಿತು. ಈ ತಿಂಡಿಯ ಸರಳತೆಯೇ ನನಗೆ ಹಿಡಿಸಿತು. ಇಟ್ ಕ್ಯಾನ್ ಬಿ ಆನ್ ಎಮರ್ಜೆನ್ಸಿ ಫುಡ್. ಈ ಕಾರಣದಿಂದಲೇ ಇದು ಜನಪ್ರಿಯ ಆಗಲು ಸಾಧ್ಯ. ನಾವೆಲ್ಲಾ ಇದನ್ನು ಮನೇಲೇ ಸುಲಭದಲ್ಲಿ ಮಾಡ್ಕೊಳ್ಳಬಹುದು, ಮಾಡ್ತೀವಿ ಅಂತ ನನ್ನೆಲ್ಲಾ ಸಹೋದ್ಯೋಗಿಗಳು ಹೇಳುತ್ತಿದ್ದಾರೆ", ವಿವರಿಸುತ್ತಾರೆ ದೇವರಾಜ್.
"ಒಗ್ಗರಣೆ ಹಾಕಿ ಉಪ್ಕರಿಯಾಗಿ, ಕಾಯಿ ಹಾಲಿನೊಂದಿಗೆ ಮತ್ತು ಫ್ರೈ ಮಾಡಿ ಕುರುಕಲು ತಿಂಡಿಯಾಗಿ- ಮೂರು ಥರ ಈ ಶ್ಯಾವಿಗೆಯ ರುಚಿ ನೋಡಿದೆವು. ಹೊಸ ಕಚ್ಚಾವಸ್ತು ಅಂತ ರುಚಿಯಲ್ಲಿ ಗೊತ್ತೇ ಆಗುವುದಿಲ್ಲ" ಕೇವೀಕೆಯ ಗೃಹ ವಿಜ್ಞಾನಿ ಡಾ. ಸುಪ್ರಿಯಾ ಪಾಟೀಲ್ ಹೇಳುತ್ತಾರೆ, "ಹೀಗೊಂದು ಸಾಧ್ಯತೆ ಈ ವರೆಗೆ ಗೊತ್ತೇ ಇರಲಿಲ್ಲ."
ದೇವರಾಜ್ ಬಾಕಾಶಾವನ್ನು ಎಷ್ಟು ಇಷ್ಟಪಟ್ಟರೆಂದರೆ, ಅದೇ ದಿನ ರಾತ್ರಿ ಮನೆಯಲ್ಲಿ ಮಡದಿ ಡಾ.ಗಾಯತ್ರಿ ದೇವರಾಜರ ಜತೆ ಸೇರಿ ಈ ’ತುರ್ತು ಉಪಾಹಾರ’ ತಯಾರಿಸಿ ಮತ್ತೊಮ್ಮೆ ಸವಿದರು.
- ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ