ಬಹುಮುಖ ಪ್ರತಿಭೆ ನೃತ್ಯ ವಿದುಷಿ ಶ್ರೀಮತಿ ಬಿ ಸುಮಂಗಲಾ ರತ್ನಾಕರ್ ರಾವ್

Upayuktha
0


ಯಕ್ಷಗಾನ, ತಾಳಮದ್ದಳೆ, ಸಂಗೀತ, ಭರತನಾಟ್ಯ ಹೀಗೆ ಎಲ್ಲಾ ರಂಗದಲ್ಲಿ ಇರುವ ಕಲಾವಿದರು ಬಹಳ ವಿರಳ. ಆದರೆ ಇಂತಹ ಕಲಾವಿದರ ಸಾಲಿನಲ್ಲಿ ಕೇಳಿ ಬರುವ ಕೆಲವೇ ಕೆಲವು ಹೆಸರುಗಳಲ್ಲಿ ಪ್ರಮುಖರು ನೃತ್ಯ ವಿದುಷಿ ಶ್ರೀಮತಿ ಬಿ. ಸುಮಂಗಲಾ ರತ್ನಾಕರ್ ರಾವ್.


ದಿನಾಂಕ 3-8-1976ರಂದು ಶ್ರೀಮತಿ ಹೀರಾ ಶ್ರೀರಾಮ ರಾವ್ (ನಿವೃತ್ತ ಹಿರಿಯ ಅಧೀಕ್ಷಕಿ, ಕೆ.ಆರ್.ಇ.ಸಿ) ಹಾಗೂ ಪ. ಶ್ರೀರಾಮ ರಾವ್ (ನಿವೃತ್ತ ಮುಖ್ಯೋಪಾಧ್ಯಾಯರು) ಇವರ ಮಗಳಾಗಿ ಜನನ. ಬಿಬಿಎಂ., ಎಂ. ಡಾನ್ಸ್ (ಭರತನಾಟ್ಯ), ಎಂ.ಎ (ಕನ್ನಡ) ಇವರ ವಿದ್ಯಾಭ್ಯಾಸ.

ಭರತನಾಟ್ಯ ವಿದ್ವತ್, ಕರ್ನಾಟಕ ಸಂಗೀತ (ಜೂನಿಯರ್), ಮದ್ದಳೆ- ಚಂಡೆ ಮೂಲಭೂತ ಪಾಠ, ಯಕ್ಷಗಾನ, ತಾಳಮದ್ದಳೆ ಅರ್ಥಗಾರಿಕೆ, ಭಾಗವತಿಕೆ (ಮೂಲಭೂತ ಪಾಠ) ತರಬೇತಿಯನ್ನು ಇವರು ಕಲಿತಿರುತ್ತಾರೆ.


'ಬಾಲ್ಯದಲ್ಲಿ ವರ್ಷಕ್ಕೊಮ್ಮೆ ನಮ್ಮ ಮನೆ ಮುಂದೆಯೇ ನಡೆಯುತ್ತಿದ್ದ ಕಟೀಲು ಮೇಳದ ಆಟವೇ ನನಗೆ ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆ' ಎಂದು ಹೇಳುತ್ತಾರೆ.

ಯಕ್ಷಗಾನ ಕಲಾವಿದೆ ಆಗ್ತೇನೆ ಅಂತ ಎಣಿಸಿರಲಿಲ್ಲ. ಅನಿರೀಕ್ಷಿತ ಪ್ರವೇಶ. ಬಳಿಕ ಸಿಕ್ಕಿದ ಪ್ರೋತ್ಸಾಹ ಮುಂದುವರಿಯುವಂತೆ ಮಾಡಿತು. ಯಕ್ಷಗಾನ ರಂಗಕ್ಕೆ ಬಂದ ಮೇಲೆ ಒಂದೊಂದು ಪಾತ್ರಗಳಿಗೆ ಒಬ್ಬೊಬ್ಬರು ಪ್ರೇರಣೆ, ಸೂರಿಕುಮೇರು ಗೋವಿಂದ ಭಟ್ ಮತ್ತು ದೀಪಕ್ ರಾವ್ ಪೇಜಾವರ್ ಅವರ ಪಾತ್ರ ಪ್ರಸ್ತುತಿಯ ಅಚ್ಚುಕಟ್ಟುತನ ಪ್ರೇರಣೆ ನೀಡಿದೆ ಎಂದು ಸುಮಂಗಲಾ ರತ್ನಾಕರ್ ರಾವ್ ಹೇಳುತ್ತಾರೆ.


ಶ್ರೀ ಆನಂದ ಗಾಣಿಗ ಇವರ ಬಡಗುತಿಟ್ಟಿನ ಗುರುಗಳು (ಬಾಲ್ಯದ ಒಂದು ವರ್ಷ ಕಲಿತುರುತ್ತಾರೆ). ಶ್ರೀ ರಾಕೇಶ್ ರೈ ಅಡ್ಕ, ದಿವಾಣ ಶಿವಶಂಕರ ಭಟ್, ಶ್ರೀ ಗೋವಿಂದ ಭಟ್ ಸೂರಿಕುಮೇರು (ಶಿಬಿರದ ಮೂಲಕ) ತೆಂಕುತಿಟ್ಟು ಯಕ್ಷಗಾನ ಗುರುಗಳು ಹಾಗೂ ತಾಳಮದ್ದಳೆ ಅರ್ಥಗಾರಿಕೆಯಲ್ಲಿ ಶ್ರೀ ಹರೀಶ ಬಳಂತಿಮೊಗರು ಇವರ ಗುರುಗಳು.


ಶ್ರೀ ದೇವಿ ಮಹಾತ್ಮ್ಯೆ, ಶ್ರೀಕೃಷ್ಣ ಪಾರಿಜಾತ ನರಕಾಸುರ ಮೋಕ್ಷ, ದಕ್ಷಾಧ್ವರ, ವೀರಮಣಿ ಕಾಳಗ ಇತ್ಯಾದಿ ಇವರ ನೆಚ್ಚಿನ ಪ್ರಸಂಗಗಳು.

ಶ್ರೀದೇವಿ, ಶ್ರೀಕೃಷ್ಣ, ಸತ್ಯಭಾಮೆ, ದಾಕ್ಷಾಯಿಣಿ, ದ್ರೌಪದಿ, ಅಂಬೆ, ಹನೂಮಂತ, ಜಮದಗ್ನಿ ಇತ್ಯಾದಿ ಇವರ ನೆಚ್ಚಿನ ವೇಷಗಳು.


ಹವ್ಯಾಸಿ ಕಲಾವಿದೆಯಾಗಿ ಇವರ ಸಂಸ್ಥೆಯಾದ "ಯಕ್ಷಾರಾಧನಾ ಕಲಾ ಕೇಂದ್ರ (ರಿ.)" ಮೂಲಕ ಕಾರ್ಯಕ್ರಮ ನೀಡುತ್ತಿರುವ ಇವರು, ಅತಿಥಿ ಕಲಾವಿದೆಯಾಗಿ ಗೆಳತಿ ಶ್ರೀಮತಿ ಪೂರ್ಣಿಮಾ ಯತೀಶ್ ರೈಯವರ "ಶ್ರೀ ಮಹಾಗಣಪತಿ ಮಹಿಳಾ ಮತ್ತು ಮಕ್ಕಳ ಯಕ್ಷಗಾನ ಮಂಡಳಿ, ಕಟ್ಲ" ತಂಡದಲ್ಲಿ ಆಗಾಗ ಪಾಲ್ಗೊಳ್ಳುತ್ತಾರೆ. ಶ್ರೀ ರಾಕೇಶ್ ರೈ ಅಡ್ಕರ "ಸನಾತನ ಯಕ್ಷಾಲಯ ಮಂಗಳೂರು", ಶ್ರೀ ರವಿ ಅಲೆವೂರಾಯರ "ಸರಯೂ ಯಕ್ಷವೃಂದ, ಕೋಡಿಕಲ್", ಶ್ರೀ ರಮೇಶ್ ಭಟ್ ರ "ಕದಳಿ ಯಕ್ಷಕಲಾ ಕೇಂದ್ರ, ಕದ್ರಿ" ಮುಂತಾದ ತಂಡಗಳಲ್ಲಿ ಅತಿಥಿ/ಸದಸ್ಯೆಯಾಗಿ ಹಿಂದೆ ಭಾಗವಹಿಸಿದ್ದಾರೆ. ಕಳೆದ 12 ವರ್ಷಗಳಲ್ಲಿ ಒಟ್ಟು  ಸುಮಾರು 200ರಷ್ಟು ಯಕ್ಷಗಾನ ಕಾರ್ಯಕ್ರಮ ನೀಡಿದ ಅನುಭವ ಶ್ರೀಮತಿ ಬಿ. ಸುಮಂಗಲಾ ರತ್ನಾಕರ್ ರಾವ್ ಅವರಿಗೆ ಇದೆ.

ಅನಿರೀಕ್ಷಿತವಾಗಿ ಯಕ್ಷಾಗಾನ ಶಿಕ್ಷಕಿಯೂ ಆಗಿ ಯಕ್ಷಾರಾಧನಾ ಕಲಾ ಕೇಂದ್ರದ ಮೂಲಕ ಕಳೆದ 7 ವರ್ಷಗಳಿಂದ ಆಸಕ್ತ ಮಕ್ಕಳಿಗೆ, ಮಹಿಳೆಯರಿಗೆ  ಉಚಿತವಾಗಿ ಯಕ್ಷಗಾನ ಶಿಕ್ಷಣವನ್ನು ಸುಮಂಗಲಾ ರತ್ನಾಕರ್ ರಾವ್ ನೀಡುತ್ತಿದ್ದಾರೆ.


ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತಿರ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-

ಇಡೀ ಪ್ರಸಂಗ ಹೋಗುವ ಬಗೆ ಹೇಗೆ ಎಂದು ಮೊದಲು  ತಿಳಿದುಕೊಳ್ಳುತ್ತೇನೆ. ಯಾವುದೇ ಪಾತ್ರವನ್ನು ಮೊದಲ ಬಾರಿ ನಿರ್ವಹಿಸುವಾಗ ನನ್ನ ಪಾತ್ರದ ಬಗ್ಗೆ ಸಂಪೂರ್ಣವಾಗಿ  ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತೇನೆ. ಪಾತ್ರ, ಅದರ ಸಂದರ್ಭ, ಸ್ವಭಾವ, ಜತೆ ಪಾತ್ರಗಳೊಂದಿಗೆ ಅದು ಹೋಗಬೇಕಾದ ಕ್ರಮ, ಆಯ್ದ ಪದ್ಯಗಳ ಬಾಯಿಪಾಠ, ಪಾತ್ರಕ್ಕೆ ಬೇಕಾದ ನಾಟ್ಯ, ಅರ್ಥಗಾರಿಕೆಯ ಮಿತಿ ಬಗ್ಗೆ ಆ ಪಾತ್ರಕ್ಕೆ   ತಿಳಿದ/ಹಿರಿಯ ಕಲಾವಿದರಲ್ಲಿ ಪ್ರಶ್ನೆ ಕೇಳಿ ಉತ್ತರ ಪಡೆಯುತ್ತೇನೆ. ಆ ಪ್ರಸಂಗದ ಪಾತ್ರವನ್ನು ಯಾರ್ಯಾರು ಹೇಗೆ ನಿರ್ವಹಿಸಿದ್ದಾರೆ ಎಂದು 3-4 ಕಲಾವಿದರ ಪ್ರಸ್ತುತಿಯನ್ನು  ಯೂ ಟ್ಯೂಬ್/ ವೀಡಿಯೋ  ಮೂಲಕ ನೋಡುತ್ತೇನೆ.

ಅರ್ಥಗಾರಿಕೆ ಸಾಧ್ಯತೆ ಬಗ್ಗೆ ಹರೀಶ ಬಳಂತಿಮೊಗರು ಅಣ್ಣನಲ್ಲಿ ಚರ್ಚೆ ಮಾಡುತ್ತೇನೆ. ಅಂದಿನ ಭಾಗವತರಲ್ಲಿ ಹಿರಿಯರು ಅನುಭವಿಗಳಾದರೆ ಅವರ ದೃಷ್ಟಿಯಲ್ಲಿ ಪಾತ್ರ ಹೋಗಬೇಕಾದ ಬಗೆಯ ಬಗ್ಗೆ ತಿಳಿದುಕೊಳ್ಳುತ್ತೇನೆ. ಸಹ ಕಲಾವಿದರಲ್ಲಿ ಆಟ ಚಂದ ಮಾಡಲು ಹೇಗೆ ಸಾಗುವ ಎಂಬುದಾಗಿ ಚರ್ಚೆ ಮಾಡುತ್ತೇನೆ.

ಭರತನಾಟ್ಯದ ಕಲಾಪ್ರಸ್ತುತಿ‌ ಮತ್ತು ಶಿಕ್ಷಣ ನೀಡಿದ ಅನುಭವ ಇರುವುದರಿಂದ ಪಾತ್ರ ಭಾವಾಭಿವ್ಯಕ್ತಿ ಸುಲಭ ಗ್ರಾಹ್ಯವಾಗುತ್ತದೆ. ನಾನು ನಿರ್ವಹಿಸುವ ಪಾತ್ರ ಪ್ರಸ್ತುತಿ ತಪ್ಪಿಲ್ಲದೆ ಅತ್ಯುತ್ತಮವಾಗಿ ಮೂಡಿ ಬರಬೇಕೆಂಬುದೇ ಆತ್ಯಂತಿಕ ಲಕ್ಷ್ಯ. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತೇನೆ ಎಂದು ಸುಮಂಗಲಾ ರತ್ನಾಕರ್ ರಾವ್ ಹೇಳುತ್ತಾರೆ.


ಪುಸ್ತಕ ಓದುವುದು, ಶಾಸ್ರ್ತ ಗ್ರಂಥಗಳ ಅಧ್ಯಯನ, ಭರತನಾಟ್ಯ- ಯಕ್ಷಗಾನ- ತಾಳಮದ್ದಳೆ- ಪ್ರವಚನ ಕಾರ್ಯಕ್ರಮಗಳ ವೀಕ್ಷಣೆ, ಭರತನಾಟ್ಯ ನೃತ್ಯಬಂಧಗಳ ಸಾಹಿತ್ಯ ರಚನೆ, ಬರಹ ಇತ್ಯಾದಿ ಇವರ ಹವ್ಯಾಸಗಳು.


ಇವರಿಗೆ ಸಿಕ್ಕಿರುವ ಸನ್ಮಾನ ಹಾಗೂ ಪ್ರಶಸ್ತಿಗಳು:-

ಯಕ್ಷಗಾನದ ಯಶಸ್ಸಿನ ಹಿಂದೆ ಭರತನಾಟ್ಯ ಕಲಾ ತಪಸ್ಸಿನ ಕೊಡುಗೆ ಸೇರಿಕೊಂಡಿದೆ ಎನ್ನುವುದು ಸತ್ಯವಾದರೂ ಯಕ್ಷಗಾನ‌ ಕ್ಷೇತ್ರದ ಕಾರ್ಯಚಟುವಟಿಕೆಯನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳು ಗೌರವಿಸಿ ನನ್ನ ಹೊಣೆಗಾರಿಕೆಯನ್ನು ಹೆಚ್ಚಿಸಿದೆ.

● ತುಳು ಕೂಟ (ರಿ.) ಕುವೈಟ್, "ಗೌರವಾಭಿನಂದನೆ".

● ಅಜೆಕಾರು ಕಲಾಭಿಮಾನಿ ಬಳಗ, ಮುಂಬೈಯವರ ಸನ್ಮಾನ.

● ಶ್ರೀ ಗುರುದೇವದತ್ತ ಸಂಸ್ಥಾನಮ್, ಒಡಿಯೂರು ಅವರಿಂದ "ಶ್ರೀ ಗುರುದೇವಾನುಗ್ರಹ ಪ್ರಶಸ್ತಿ".

● ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ‌ ಪ್ರತಿಷ್ಠಾನ, (ರಿ.) ಉಜಿರೆಯವರಿಂದ "ಕಲಾ ಕೈಂಕರ್ಯ ಪುರಸ್ಕಾರ".

● ಆರಾಧನಾ ಚಾರಿಟೇಬಲ್ ಟ್ರಸ್ಟ್, ಮಂಗಳೂರು ಇವರಿಂದ "ಆರಾಧನಾ ಪ್ರಶಸ್ತಿ".

● ಬಿಮ್ಸ್ ಬಿಮಾನಗರ ಉಡುಪಿ ಇವರಿಂದ "ಯಕ್ಷ ಪ್ರತಿಭಾ ಪುರಸ್ಕಾರ".

● ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿ (ರಿ.) ಬೆಳುವಾಯಿ ಇವರಿಂದ ಶ್ರೀಮತಿ ವನಜಾಕ್ಷಿ ಅಮ್ಮ ಸ್ಮಾರಕ  "ಯಕ್ಷದೇವ ಮಿತ್ರ ಪ್ರಶಸ್ತಿ".

● ಶ್ರೀಮತಿ ಚಂದ್ರಮ್ಮ ವಾಸುಭಟ್ಟ ಸ್ಮಾರಕ ಮಹಿಳಾ ಮಂಡಳಿ, ಪಾವಂಜೆ ಇವರಿಂದ "ಶ್ರೀಮತಿ ಚಂದ್ರಮ್ಮ ವಾಸುಭಟ್ಟ ಪುರಸ್ಕಾರ".

● ಯಕ್ಷ ಪ್ರತಿಭೆ ರಿ. ಮಂಗಳೂರು ಇವರಿಂದ

"ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಗೌರವ ಯಕ್ಷ ಸಂಮಾನ".

● ಸರಯೂ ಮಹಿಳಾ ವೃಂದ ಕೋಡಿಕಲ್ ಮತ್ತು ಕರ್ನಾಟಕ ತುಳು ಅಕಾಡೆಮಿ‌ ಕುಡ್ಲ ಇವರಿಂದ

"ತಮ್ಮನ- ಸನ್ಮಾನ".

● ರೆಡ್ ಎಫ್ ಎಂ. ಮಂಗಳೂರು ಇವರಿಂದ "ಸೂಪರ್ ಸಾಧಕಿ ಪ್ರಶಸ್ತಿ".

ಅಲ್ಲದೆ, ಭರತನಾಟ್ಯ ಕ್ಷೇತ್ರದ ಸಾಧನೆಗೂ ನೂರಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ.


ಯಕ್ಷಗಾನದ ಇಂದಿನ ಸ್ಥಿತಿ ಗತಿ ಕೇಳಿದಾಗ ಹೀಗೆ ಹೇಳುತ್ತಾರೆ:- ಪ್ರತೀ ಪೀಳಿಗೆಯವರೂ ತಮ್ಮ ಕಾಲಕ್ಕಿಂತ ಹಿಂದಿನದ್ದೇ ಚಂದ. ಈಗೆಲ್ಲ ಹಾಳಾಯ್ತು ಅನ್ನುವವರೇ.

ಒಳ್ಳೆಯದ್ದು ಮತ್ತು ಕೆಟ್ಟದ್ದು ಎಲ್ಲಾ ಕಾಲದಲ್ಲೂ ಇರುತ್ತದೆ. ಈಗಲೂ ಅಷ್ಟೇ. ಅಂತಹದ್ದೇ ಬೊಬ್ಬೆ ಕೇಳಿಸುತ್ತಿದೆ.

ಯಕ್ಷಗಾನದಲ್ಲಿ ಒಳ್ಳೆಯದೂ ಆಗಿದೆ. ಹಾಗೆ ಕೆಲವು ವಿಚಾರಗಳಲ್ಲಿ ದಾರಿ ತಪ್ಪುತ್ತಿದೆ. ನಾ ಗಮನಿಸಿದಂತೆ ವರ್ತಮಾನದಲ್ಲಿ ಯಕ್ಷಗಾನ ಕಲಾವಿದನಾದವನಿಗೆ ಹಿಂದೆ ಹೇಳುತ್ತಿದ್ದ "ಆಟದವನು" ಎಂಬ ತಾತ್ಸಾರ ಭಾವದ  ಬದಲು "ಯಕ್ಷಗಾನ ಕಲಾವಿದ" ಎಂಬ ಗೌರವದ ಸ್ಥಾನ ಜನರ ಮನಸ್ಸಿನಲ್ಲಿ ಲಭಿಸಿದೆ. ಈಗ‌ ಯಕ್ಷಗಾನದ  ಸುವರ್ಣಯುಗ ಎನ್ನಬಹುದು. ಉನ್ನತ ವಿದ್ಯಾಭ್ಯಾಸ ಪಡೆದವರು, ಔದ್ಯೊಗಿಕವಾಗಿ ದೊಡ್ಡ ಸ್ಥಾನಮಾನದಲ್ಲಿ ಇರುವ ಅನೇಕರು, ಮಹಿಳೆಯರು, ಮಕ್ಕಳು... ಹೀಗೆ ಎಲ್ಲರೂ ಯಕ್ಷಗಾನ ಕಲೆಯತ್ತ ಆಕರ್ಷಿತರಾಗಿದ್ದಾರೆ. ಅಲ್ಲದೆ ಅನ್ಯ ಕಲಾ ಪ್ರಕಾರವನ್ನು ಕಲಿತು ಬಂದವರು ಅನೇಕರಿರುವ ಕಾರಣ, ಹಲವರು ಹಿರಿಯರಿಂದ ವಿಚಾರ ತಿಳಿದು ಯಕ್ಷಗಾನ ನಾಟ್ಯ ಶಿಕ್ಷಣವನ್ನು ಅಚ್ಚುಕಟ್ಟಾಗಿ ನೀಡುವ ಕಾರಣ ನಾಟ್ಯದಲ್ಲಿ ಇಂದು ಅಂಗಶುದ್ಧಿಯನ್ನು ಅನೇಕರಲ್ಲಿ ಕಾಣುತ್ತೇವೆ. ಆಹಾರ್ಯದಲ್ಲೂ 25 ವರುಷ ಹಿಂದೆ ಇದ್ದುದಕ್ಕೆ ಹೋಲಿಸಿದರೆ ಸ್ತ್ರೀ ವೇಷದ ಆಹಾರ್ಯ ಚಂದ ಆಗಿದೆ.

ಯಕ್ಷಗಾನ ಕಲೆಯೂ ಬೆಳೆಯುತ್ತಿದೆ. ಯಕ್ಷಗಾನ ಕಲಿಯುವವರ ಸಂಖ್ಯೆ ಹೆಚ್ಚಿದೆ. ಪ್ರೇಕ್ಷಕರ ಸಂಖ್ಯೆಯೂ ಅತ್ಯದ್ಭುತವಾಗಿದೆ. ಅನೇಕ ಸಂಶೋಧನಾ, ವಿಚಾರಪೂರ್ಣ ಗ್ರಂಥಗಳು ಲಭ್ಯ ಇದೆ.

ಇವೆಲ್ಲ ಧನಾತ್ಮಕ ಬೆಳವಣಿಗೆಗಳಾದರೆ...

ಅತಿಯಾದರೆ ಅಮೃತವೂ ವಿಷ ಎಂಬಂತೆ ಯಕ್ಷಗಾನದಲ್ಲಿ  ಕೆಲವರು ಪಾತ್ರೌಚಿತ್ಯ ಮೀರಿ ಮಾಡುವ ನಾಟ್ಯ, ಆಡುವ ಮಾತು, ಧರಿಸುವ ಆಹಾರ್ಯ ಯಕ್ಷಗಾನದ ಸೌಂದರ್ಯ ಕೆಡಿಸುತ್ತಿದೆ.

ಕೆಲವರು ರಂಗಸ್ಥಳ ಏರುವ ಅವಸರದಿಂದಾಗಿ ಸರಿಯಾಗಿ ಅಧ್ಯಯನ ಮಾಡದೇ ವೇಷ ಮಾಡುವ ಮತ್ತು ಮರುಕ್ಷಣವೇ ಆ ವೀಡಿಯೋ ತುಣುಕನ್ನು ಹಲವೆಡೆಗೆ ಹರಿಯಬಿಟ್ಟು ಬೇಗ ಪ್ರಸಿದ್ಧರಾಗಬೇಕೆಂಬ ಹಪಹಪಿ ಇರುವವರನ್ನೂ ಕಾಣ್ತೇವೆ. ಇದು ಕಲೆಗೆ ಮಾರಕ. ಇನ್ನು ಯಕ್ಷಗಾನಕ್ಕೆ ಅನ್ಯಕಲಾ ಪ್ರಕಾರದ ಕಲಬೆರಕೆಯ ತೊಂದರೆ ಅಲ್ಲಲ್ಲಿ ಕಾಣುತ್ತೇವೆ. ಅನ್ಯ ಕಲಾ ಪ್ರಕಾರದ  ನರ್ತನವಾಗಲಿ, ಆಹಾರ್ಯವಾಗಲಿ, ಹಿಮ್ಮೇಳದ ಗಾಯನ  ವಾದನವಾಗಲಿ ಬಂದಲ್ಲಿ ಯಕ್ಷಗಾನದ ಮೂಲ ಸೌಂದರ್ಯಕ್ಕೆ ಧಕ್ಕೆ ಬಂದಂತೆಯೇ ಸರಿ.

ಹೆಸರುಬೇಳೆ ಪಾಯಸ ಮಾಡುವಾಗ ಬೆಲ್ಲದ ಜತೆಗೆ ಸಕ್ಕರೆ ಇರಲಿ, ಜತೆಗೆ ಮೈಸೂರು ಬಾಳೆ ಹಣ್ಣು, ಬಾದಾಮಿ ಪುಡಿ, ಸ್ವಲ್ಪ ಗೋಧಿ ಹಿಟ್ಟು  ಮನೆಲಿ ಇದೆ ಅಂತ ಅದೂ ಇರಲಿ ಅಂತ ಸೇರಿಸಿದ್ರೆ, ಹೆಸರುಬೇಳೆ  ಪಾಯಸದ ಮೂಲ ರುಚಿ ಬದಲಾಗಿಬಿಡುತ್ತದೆ. ಅದಕ್ಕೆ ಬೇರೆ ಹೆಸರು ಕೊಡಬೇಕಾಗ್ತದೆ.

ಪ್ರೇಕ್ಷಕರ ಚಪ್ಪಾಳೆ ವಿಝಿಲ್ ಗೆ ಬೇಕಾಗಿ ತನ್ನ ಕರ್ತವ್ಯದಲ್ಲಿ ವೈಪರೀತ್ಯ ಪ್ರದರ್ಶಿಸುವುದು ಕಲೆಯ ದೃಷ್ಟಿಯಿಂದ ಒಳಿತಲ್ಲ ಎನ್ನುವ ಎಚ್ಚರಿಕೆ ಕಲಾವಿದನಲ್ಲಿ ಜಾಗೃತವಾಗಿ ಇರಬೇಕಾದ್ದು ಸರ್ವಕಾಲಕ್ಕೂ ಸತ್ಯ ಎಂದು ಸುಮಂಗಲಾ ರತ್ನಾಕರ್ ರಾವ್ ಹೇಳುತ್ತಾರೆ.


ಇವತ್ತಿನ ಯಕ್ಷಗಾನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ ಕೇಳಿದಾಗ ಹೀಗೆ ಹೇಳುತ್ತಾರೆ:-

ಇಂದು ಯಕ್ಷಗಾನ ಕಲೆಯ ಪ್ರೇಕ್ಷಕರ ಸಂಖ್ಯೆ ಬಹಳ ಹೆಚ್ಚಾಗಿದೆ. ಈ ಪ್ರೇಕ್ಷಕರಲ್ಲಿ ಮೂರು ವಿಧದವರಿದ್ದಾರೆ. ಯಕ್ಷಗಾನದ ಸರಿಯಾದ ಜ್ಞಾನ ಉಳ್ಳ ಪ್ರಜ್ಞಾವಂತ ಪ್ರೇಕ್ಷಕರು, ಯಾವುದೇ ಜ್ಞಾನ ಇಲ್ಲದವರು, ಕಲಾವಿದ/ಮೇಳದ  ಅಭಿಮಾನಿ ಪ್ರೇಕ್ಷಕರು.


ಆದರೆ ಕಲಾ ಪ್ರೇಕ್ಷಕರಿಗಿಂತ ಕಲಾವಿದಾಭಿಮಾನಿ, ಮೇಳದ ಅಭಿಮಾನಿ ಪ್ರೇಕ್ಷಕರ ಸಂಖ್ಯೆ ಹೆಚ್ಚು ಎಂದರೆ ತಪ್ಪಾಗಲಿಕ್ಕಿಲ್ಲ.


ತಮ್ಮ ನೆಚ್ಚಿನ ಕಲಾವಿದ ರಂಗಕ್ಕೆ  ಬರುವಾಗ ವಿಝಿಲ್, ಬೊಬ್ಬೆ, ಚಪ್ಪಾಳೆ ಹೊಡೆಯುವ ಪ್ರೇಕ್ಷಕರು ಬಹುಮಂದಿ. ತಮ್ಮ ನೆಚ್ಚಿನ ಕಲಾವಿದ ಬರುವವರೆಗೂ ಚೌಕಿಯಲ್ಲೋ, ಮೊಬೈಲ್ ಚಾಟ್ ಲಿ ಬಹುಮಂದಿ ಇರ್ತಾರೆ. ತಮ್ಮ ಕಲಾವಿದನ ವೀಡಿಯೋ ಮಾತ್ರ ಮಾಡುವರು, ಪಕ್ಕದ ಪಾತ್ರದ ಪ್ರಸ್ತುತಿಗೆ ಪ್ರತಿಕ್ರಿಯೆ ಇರುವುದಿಲ್ಲ. ಹೀಗೆ ಮಾಡುವುದು ಎಷ್ಟು ಸರಿ... ಎಂದು ಅಂತಹ ಪ್ರೇಕ್ಷಕರು ಯೋಚಿಸಬೇಕು. ಸಣ್ಣ ಪಾತ್ರವಾದರೂ ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸುವ ಕಲಾವಿದರಿಗೂ ಪ್ರೇಕ್ಷಕ ಗೌರವ ನೀಡಬೇಕು.

ಭಾಗವತರು ಔಚಿತ್ಯಮೀರಿ ರಾಗಾಲಾಪನೆ ಮಾಡಿದಾಗ, ಅನೌಚಿತ್ಯವಾಗಿ  ಕಲಾವಿದ ಕುಣಿದಾಗ, ಪಾತ್ರದ ಸ್ವಭಾವ ಮರೆತು ದಿಗಿಣ ಹಾಕಿದಾಗ, ರಂಗದಲ್ಲಿ ವೈಯಕ್ತಿಕ ಮಾತುಗಳನ್ನಾಡಿದಾಗ ಕೆಲವು  ಪ್ರೇಕ್ಷಕರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸುತ್ತಾರೆ. ಇದರಿಂದ ಕಲಾವಿದನಿಗೆ ತಾನು ಮಾಡಿದ್ದೇ ಸರಿ ಅನಿಸಿ ತಪ್ಪನ್ನೇ ಸರಿ ಅಂತ ಭ್ರಮಿಸಿ ಮುಂದುವರಿಯುತ್ತಾನೆ. ಈ ರೀತಿ ಆಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಪ್ರೇಕ್ಷಕರಿಗೆ ಇದೆ.


ಯಕ್ಷಾಗನದ "ಸಭಾ ಲಕ್ಷಣ"ದಲ್ಲಿ ಸಭೆ ಹೇಗಿರಬೇಕೆಂದು "ಸತ್ಯಾಚಾರ ಸಭಾ ಗುಣೋಜ್ವಲ ಸಭಾ... ವಂದೇ ಸಭಾ ಮಂಡಲಂ" ಎಂಬ ಶ್ಲೋಕದಲ್ಲಿ ತಿಳಿಸಲಾಗಿದೆ.

ಪ್ರಜ್ಞಾವಂತ ಸಹೃದಯಿ ಪ್ರೇಕ್ಷಕರು ಹಲವರು  ಇದ್ದಾರೆ. ಅವರೆಲ್ಲ ಮೌನಿಗಳು. ಕಾರಣ, ತಪ್ಪು ಹೇಳಿದವನೇ ಲೋಕದಲ್ಲಿ ಕೆಟ್ಟವನಾಗುತ್ತಾನಲ್ವ!!.

ಸಹೃದಯಿ ಪ್ರೇಕ್ಷಕ ಕಲಾವಿದನ ತಪ್ಪನ್ನು ತೋರಿಸಿದಾಗ ‌ಎಲ್ಲಿ ಹೇಗೆ ತಪ್ಪಿತೆಂದು ತಿಳಿದು ಸರಿ ಮಾಡಿಕೊಳ್ಳುವ ಕಲಾವಿದರ ಸಂಖ್ಯೆಯೂ ಹೆಚ್ಚಬೇಕಿದೆ.

ಕಲಾವಿದ ಮುಖ್ಯ ಅಲ್ಲ ಕಲೆ ಮುಖ್ಯ ಅಂತ ತಿಳಿದಾಗ ಇದು ಸಾಧ್ಯವಾಗುತ್ತದೆ ಎಂದು ಸುಮಂಗಲಾ ರತ್ನಾಕರ್ ರಾವ್ ಹೇಳುತ್ತಾರೆ.


ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ ಏನು ಆದರು ಇದೆಯಾ ಎಂದು ಕೇಳಿದಾಗ ಹೀಗೆ ಹೇಳುತ್ತಾರೆ:-

ಯಕ್ಷಗಾನ ಅದರಲ್ಲೂ ತೆಂಕು ತಿಟ್ಟು ಬಡಗಿನಂತೆ Spic Macy ಮಾನ್ಯತೆ ಪಡೆಯಬೇಕು ಎಂಬ ಮಹತ್ವಾಕಾಂಕ್ಷೆ ಇದೆ. ಮುಂದಿನ ಮಕ್ಕಳಿಗೆ ಯಕ್ಷಗಾನ ಕಲೆ ಯಕ್ಷಗಾನವಾಗಿಯೇ ಉಳಿಸುವಲ್ಲಿ ನನ್ನ ಪ್ರಯತ್ನ ಮಾಡಬೇಕು. ಆಗಾಗ  ಹಿರಿಯ ತಜ್ಞ ಕಲಾವಿದರಿಂದ ಕಮ್ಮಟಗಳನ್ನು  ಮಾಡಿಸುತ್ತಿರಬೇಕೆಂಬ ಯೋಜನೆ ಇದೆ ಎಂದು ಸುಮಂಗಲಾ ರತ್ನಾಕರ್ ರಾವ್ ಹೇಳುತ್ತಾರೆ.


ದಿನಾಂಕ 13.12.1998 ಶ್ರೀ ರತ್ನಾಕರ್ ರಾವ್.ಬಿ (ಉದ್ಯಮಿ, "ನಂದಾ ಇಲೆಕ್ಟ್ರಿಕಲ್ಸ್"ನ ಮಾಲಕರು) ಅವರನ್ನು ವಿವಾಹವಾಗಿ ಸುಖಿ ಸಂಸಾರವನ್ನು ನಡೆಸುತ್ತಿದ್ದಾರೆ. ಇವರ ಯಕ್ಷಗಾನ ಕಲಾಯಾನಕ್ಕೆ ಸ್ಪೂರ್ತಿ ಮತ್ತು ಬೆನ್ನೆಲುಬು ಎಂದು ಸುಮಂಗಲಾ ರತ್ನಾಕರ್ ರಾವ್ ಹೇಳುತ್ತಾರೆ.


ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.


Photo Click: Sandeep Photography & Kiran Vitla 


-ಶ್ರವಣ್ ಕಾರಂತ್ ಕೆ

ಸುಪ್ರಭಾತ

ಶಕ್ತಿನಗರ ಮಂಗಳೂರು.

+91 8971275651


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top