ನಾಗಾಲೋಟದಲ್ಲಿ ಮುಂದುವರೆಯುತ್ತಿರುವ ಈ ಆಧುನಿಕ ಜಗತ್ತಿನಲ್ಲಿ ನಾವು ಇಂದು ಅವತಾರ ತಾಳಿ ಬದುಕು ಸಾಗಿಸುತ್ತಿದ್ದೇವೆ. ಈ ಭೂಮಿಯು ಮನುಜನಿಗೆ ಜೀವಿಸಲು ಹಿತವಾಗಿರುವುದರಿಂದಲೋ ಅಥವಾ ಇನ್ನಾವುದೋ ಕಾರಣದಿಂದ ‘ಮನುಷ್ಯ’ ಎಂಬ ಪ್ರಬೇಧ ಈ ಸುಂದರವಾದ ವಸುಂಧರೆಯಲ್ಲಿ ಕಾಣಸಿಗುತ್ತಿದೆ!
ಅಖಿಲಾಂಡಕೋಟಿ ಬ್ರಹ್ಮಾಂಡದ ಚರಾಚರ ವಸ್ತು ಜೀವಸಂಕುಲದಲ್ಲಿ ಮನುಷ್ಯ ಒಂದು ಪ್ರಬೇಧ ಮಾತ್ರ. ಈ ರೀತಿಯಾಗಿ ಇತರೆ ಜೀವಿಗಳ ವಿಕಾಸದ ನಂತರ ಅಸ್ತಿತ್ವಕ್ಕೆ ಬಂದರೂ ಮಾನವ ತನ್ನ ದುರಾಸೆಗಳನ್ನು ಪೂರೈಸಿಕೊಳ್ಳಲು ಪ್ರಕೃತಿಯನ್ನು ತನ್ನ ಸ್ವಂತಕ್ಕೆ ಬಳಸಿಕೊಳ್ಳುತ್ತಿದ್ದಾನೆ. ಇಂತಹ ಹುಲುಮಾನವನಿಗೆ ಅರಿವಿಲ್ಲದ ಕಟುಸತ್ಯವೇನೆಂದರೆ, ಪ್ರಕೃತಿಯು ಮನುಷ್ಯನ ಆಸೆಗಳನ್ನು ಪೂರೈಸಬಲ್ಲದೇ ಹೊರತು ದುರಾಸೆಗಳನ್ನಲ್ಲ. ಈ ರೀತಿಯಾಗಿ ಪೂರ್ವನಿಯೋಜಿತ ದುರಾಸೆಗಳನ್ನು ಸಾಕಾರಗೊಳಿಸಿಕೊಳ್ಳಲು ನಿಸರ್ಗವನ್ನು ತನ್ನ ಸ್ವಂತಕ್ಕೆ ಅತಿಯಾಗಿ ಬಳಸಿಕೊಂಡಾಗ, ನೈಸರ್ಗಿಕ ಸಮತೋಲನವು ಏರುಪೇರಾಗಿಬಿಡುತ್ತದೆ.
ಪ್ರಾಕೃತಿಕ ಸಮತೋಲನವನ್ನು ಕಾಪಿಡುವಲ್ಲಿ ಗಿಡ-ಮರಗಳು ಮಹತ್ತರ ಪಾತ್ರವಹಿಸುತ್ತವೆ. ಹಾಗಾಗಿ ಇವುಗಳ ರಕ್ಷಣೆ ನಮ್ಮ ಹೊಣೆ. ‘ರಕ್ಷಣೆ’ ಎಂಬುದು ಧರ್ಮ ಮಾರ್ಗ. ಅದು ನಮ್ಮ ಬದುಕಿನ ಮಾರ್ಗದರ್ಶಿ ಸೂತ್ರ. “ವೃಕ್ಷೋ ರಕ್ಷತಿ ರಕ್ಷಿತಃ” ಎಂದರೆ, ನಾವು ವೃಕ್ಷಗಳನ್ನು ರಕ್ಷಿಸಿದಲ್ಲಿ ಅದು ನಮ್ಮನ್ನು ರಕ್ಷಿಸುತ್ತದೆ. ನಾವು ಇಲ್ಲಿ ಮುಖ್ಯವಾಗಿ ಅವಲಂಬನೆಯ ಸೂತ್ರವನ್ನು ಗಮನಿಸಬೇಕಾಗಿದೆ . ಈ ಪರಿಸರದಲ್ಲಿರುವ ಪ್ರಾಣಿ-ಪಕ್ಷಿಗಳನ್ನೊಳಗೊಂಡಂತೆ, ಬುದ್ಧಿ ಜೀವಿ ಎನಿಸಿಕೊಂಡಿರುವ ನಾವು ನಮ್ಮ ಅಸ್ತಿತ್ವಕ್ಕಾಗಿ ವೃಕ್ಷಗಳನ್ನೇ ಅವಲಂಬಿಸಿಕೊಂಡಿದ್ದೇವೆ. ನಮ್ಮ ಬದುಕಿಗೆ ಪೂರಕವಾದ ಈ ಪರಿಸರದಲ್ಲಿ ಅಲ್ಪ-ಸ್ವಲ್ಪ ಅಂಶಗಳು ಏರುಪೇರಾದಲ್ಲಿ ನಾವು ಹೊಂದಿಕೊಂಡು ಬಾಳುಮೆ ಮಾಡಬಹುದು ಆದರೆ ಪಂಚಭೂತಗಳಿಂದ ಕೂಡಿದ ಈ ಭೂಮಿಯಲ್ಲಿ ಯಾವುದೇ ಒಂದಂಶದಲ್ಲಿ ಮಹತ್ತರವಾದ ಬದಲಾವಣೆಯಾದರೂ ಬದಕಲು ಕಷ್ಟವಾದ ಸಂದರ್ಭಗಳು ಎದುರಾಗುತ್ತವೆ.
ಸಸ್ಯಗಳು ತಮ್ಮ ಕಾರ್ಯವನ್ನು ತಮ್ಮ ಪಾಡಿಗೇ ನಿರ್ವಹಿಸುತ್ತಾ, ಮಣ್ಣು, ಅಂತರ್ಜಲ, ಗಾಳಿ, ತೇವಾಂಶ, ಉಷ್ಣತೆ ಮುಂತಾದ ಅಂಶಗಳನ್ನೂ ಅತ್ಯುತ್ತಮ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುತ್ತವೆ. ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ, ಒಂದು ದೇಶದಲ್ಲಿ ಸುಖಮಯವಾದ ಜೀವನ ನಡೆಸಲು ಕನಿಷ್ಟ 33% ಕಾಡಿರಬೇಕು. ಏಕೆಂದರೆ, ಪ್ರಾಣವಾಯು ಆಗಿರುವಂತಹ ಆಕ್ಸಿಜನ್ ಇಲ್ಲದೆ ಬದುಕಲು ನಮ್ಮಿಂದ ಸಾಧ್ಯವೇ ಇಲ್ಲ. ಅದಲ್ಲದೇ ಈ ಪ್ರಾಣವಾಯುವನ್ನು ವೃಕ್ಷಗಳಲ್ಲದೇ ಮತ್ತಾರೂ ಉತ್ಪಾದಿಸಲು ಸಾಧ್ಯವಿಲ್ಲ. ಹಾಗಾಗಿ ವೃಕ್ಷಗಳನ್ನು ಸಹಜ ಪ್ರಕೃತಿಯಲ್ಲಿ ಸಂರಕ್ಷಿಸಲೇ ಬೇಕು.
ಮನುಷ್ಯ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ. ಪ್ರಾಕೃತಿಕ ಮೂಲಗಳನ್ನು ನಮ್ಮ ವೈಭೋಗದ ಸಂಪತ್ತೆಂದು ಭಾವಿಸಿ, ಶೋಷಣೆಮಾಡುತ್ತಾ ಬಂದಾಗ ಪ್ರಕೃತಿಯೂ ನಮಗೆ ವ್ಯತಿರಿಕ್ತವಾಗಿಯೇ ವರ್ತಿಸುತ್ತದೆ. ಮುಖ್ಯವಾದ ವಿಷಯವನ್ನು ಗಮನಿಸುವುದಾದರೆ, ಪ್ರಕೃತಿಯು ಸಹಜವಾಗಿ ಅದರ ಸಮತೋಲನವನ್ನು ಅದೇ ಕಾಯ್ದುಕೊಳ್ಳುತ್ತದೆ. ನಾವು ಅದಕ್ಕೆ ತಡೆಯೊಡ್ಡಬಾರದಷ್ಟೆ. ಗಿಡಮರಗಳನ್ನು ಬೆಳೆಸಲು ಕಷ್ಟವಾದಲ್ಲಿ, ಇರುವುದನ್ನಾದರೂ ಅತಿಯಾಗಿ ಬಳಸದೆ ಉಳಿಸುವ ಪ್ರಯತ್ನವನ್ನಾದರೂ ಮಾಡಬೇಕಿದೆ. ಸಾಧ್ಯವಾದಲ್ಲಿ ಗಿಡಮರಗಳನ್ನು ಬೆಳೆಸಿ, ಪೋಷಿಸಿ ಮುಂಬರುವ ಘೋರ ಅನಾಹುತಗಳಿಂದಲೂ ಪಾರಾಗಬಹುದು. ಆಯ್ಕೆ ನಮ್ಮ ಕೈಯಲ್ಲೇ ಇದೆ!!
ಚಿತ್ರ-ಬರಹ: ಅಭಿಲಾಷ್ ಕೆ.ಎಸ್.
ದ್ವಿತೀಯ ಎಂ.ಎಸ್ಸಿ. ಸಸ್ಯಶಾಸ್ತ್ರ
ಮಾನಸಗಂಗೋತ್ರಿ
ಮೈಸೂರು ವಿಶ್ವವಿದ್ಯಾನಿಲಯ