ರಂಗ ನಿರ್ದೇಶಕ ಪದ್ಮಶ್ರೀ ಬಿ.ವಿ. ಕಾರಂತ

Upayuktha
0




ಬಾಲ್ಯದಲ್ಲಿ ಬೋಯಣ್ಣನಾಗಿ  ಜನಮೆಚ್ಚುಗೆಗೆ ಪಾತ್ರನಾಗಿ ನಾಟಕ ರಂಗದೆಡೆಗೆ ಸೆಳೆಯಲ್ಪಟ್ಟು ದೇಶದ ರಂಗಭೂಮಿಗೆ ತನ್ನ ಕಾರ್ಯಗಳ ಮೂಲಕ ಮಹತ್ತರ ಕೊಡುಗೆ ನೀಡಿದ ಹಿರಿಯ ನಿರ್ದೇಶಕ ಬಾಬುಕೋಡಿ ವೆಂಕಟ್ರಮಣ ಕಾರಂತ. ವಿವಿಧ ಭಾಷೆಗಳಲ್ಲಿ ನಾಟಕಗಳನ್ನು ನಿರ್ದೇಶಿಸಿ ವಿವಿಧ ಸಂಸ್ಥೆಗಳ ಮುಖ್ಯಸ್ಥರಾಗಿ ಇವರ ಸೇವೆ ದೇಶದ ರಂಗಭೂಮಿ ಸದಾ ಸ್ಮರಿಸುವಂತದ್ದು. ನಾಟಕ ನಿರ್ದೇಶನದ ಜೊತೆಗೆ ಅನೇಕ ಜನಪ್ರಿಯ ಕನ್ನಡ ಚಿತ್ರಗಳನ್ನು  ನಿರ್ದೇಶಿಸಿ ಪ್ರಶಸ್ತಿ ಗಳಿಸಿಕೊಂಡ ಇವರ ಸಾಧನೆ ಮೆಲುಕು ಹಾಕುವಂತದ್ದು.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿಯ ಬಾಬುಕೋಡಿ ನಾರಾಯಣ ಮತ್ತು ಲಕ್ಷ್ಮಮ್ಮ ದಂಪತಿಗಳ 6 ಮಕ್ಕಳಲ್ಲಿ ಹಿರಿಯವ ವೆಂಕಟ್ರಮಣ. ಬೋಯಣ್ಣನೆಂದು ಅಮ್ಮನಿಂದ ಪ್ರೀತಿಯಿಂದ  ಕರೆಸಿಕೊಳ್ಳುತ್ತಿದ್ದ ವೆಂಕಟ್ರಮಣ ಕಾರಂತನಿಗೆ ಆತ ಬೆಳೆದ ಪರಿಸರ ಅಪಾರ ಪ್ರಭಾವ ಬೀರಿತು. ಸಂಪ್ರದಾಯಸ್ಥ ಅಮ್ಮ ಮಗನಿಗೆ ಸಂಪ್ರದಾಯದ ಹಾಡು, ಭಜನೆ ಹೇಳಿಕೊಡುತ್ತಾರೆ. ಆಧುನಿಕತೆ ಇನ್ನು ಸೋಕದ ಕಾಲ ಅದು. ಬಾಲಕನ ಮೇಲೆ ಯಕ್ಷಗಾನ, ಹರಿಕಥೆ, ಭೂತ ಕೋಲ, ಜಾತ್ರೆ, ರಥೋತ್ಸವಗಳು ತನ್ನದೇ ಆದ ಪ್ರಭಾವ ಬೀರುತ್ತವೆ.

ಕುಕ್ಕಾಜೆ ಶಾಲೆಯಲ್ಲಿ ಅಕ್ಷರ ಕಲಿತ ವೆಂಕಟ್ರಮಣ ಕಾರಂತರ ಗುರುಗಳು ಆಗ ಕುಳದಪಾರೆ ರಾಮರಾಯರು. ನಾಟಕದ ಹುಚ್ಚಿನ ಮೇಸ್ಟ್ರು  ಮಕ್ಕಳನ್ನು ಕಟ್ಟಿಕೊಂಡು ನಾಟಕ  ಕಲಿಸಲು ಆರಂಭಿಸುತ್ತಾರೆ. "ಸುಕ್ರುಂಡೆ ಐತಾಳ" ನಾಟಕದಲ್ಲಿ ಆಗ 3 ನೇ ತರಗತಿಯ ವೆಂಕಟ್ರಮಣನಿಗೆ ಪುರೋಹಿತ ಐತಾಳನ ಪಾತ್ರ. ಪುರೋಹಿತ ಭಾಗವತನಾಗಬೇಕೆಂದು ನೆನೆಸಿದ ಆತ ಆಗ ಸಂಗೀತವನ್ನು ಮಂತ್ರದ ಧಾಟಿಯಲ್ಲಿ ಹೇಳುತ್ತಿದ್ದರು.ಮತ್ತೆರಡು ವರುಷ ಕಳೆಯುತ್ತದೆ. 5ನೇ ತರಗತಿಯಲ್ಲಿದ್ದಾಗ ಮತ್ತೊಬ್ಬ ಅಧ್ಯಾಪಕ ಪಿ.ಕೆ.ನಾರಾಯಣ "ನನ್ನ ಗೋಪಾಲ" ನಾಟಕ ನಿರ್ದೇಶಿಸುತ್ತಾರೆ. ಈ ಬಾರಿ ಗೋಪಾಲನ ಪಾತ್ರ ಕಾರಂತರಿಗೆ. ಬೋಯಣ್ಣ ಊರ ಜನರ ಬಾಯಲ್ಲಿ ಗೋಪಾಲನಾಗಿ ಬದಲಾದ. ಅಂದಿನ ಕಾರಂತರ ಅಭಿನಯ ನೋಡಿದ ಊರಿನ ಪಟೇಲರು 2 ರೂಪಾಯಿ  ಬಹುಮಾನವಾಗಿ ನೀಡಿದ್ದರು.

8 ನೇ ತರಗತಿ ಆದ ಕೂಡಲೇ ಕುಕ್ರಬೈಲು ಕೃಷ್ಣಭಟ್ಟರಲ್ಲಿ ಮನೆ ಪಾಠ ಹೇಳಲು ಸೇರುತ್ತಾರೆ ಕಾರಂತರು. ಮನೆಪಾಠದ ನಡುವೆಯೇ ಪುತ್ತೂರಿನ ತ್ಯಾಗರಾಜ ಸಂಗೀತ ಶಾಲೆ ಮತ್ತು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಂಗೀತ ಕಲಿಯುತ್ತಾರೆ. ಆಗ ಕಾರಂತರ ಬಾಲವನ ಪುತ್ತೂರಲ್ಲಿ ಗರಿಗೆದರಿದ ಸಮಯ. ಬಾಲವನ ಭೇಟಿ ಖಾಯಂ ಆಯಿತು. ಶಿವರಾಮ ಕಾರಂತರ ಪ್ರಯೋಗಗಳಿಗೆ  ಬಿ.ವಿ.ಕಾರಂತ ಸಾಕ್ಷಿಯಾಗುತ್ತಾರೆ. ರಂಗಭೂಮಿಯೆಡೆಗಿನ ಸೆಳೆತ ಮತ್ತಷ್ಟು ತೀವ್ರವಾಗುತ್ತದೆ.ನಾಟಕ ಪ್ರದರ್ಶನವಿದ್ದಲ್ಲಿ ಖಾಯಂ ವೀಕ್ಷಕರಾಗಿದ್ದರು ಆಗ ಕಾರಂತರು. ಒಮ್ಮೆ ಮಂಗಳೂರಿನಲ್ಲಿ ಗುಬ್ಬಿ ಕಂಪೆನಿಯ "ಕೃಷ್ಣಲೀಲಾ" ನಾಟಕದ ಪ್ರದರ್ಶನ ಏರ್ಪಾಟಾಗಿತ್ತು. ವಿಷಯ ತಿಳಿದು ಸೈಕಲ್ ಏರಿ ಮಂಗಳೂರಿಗೆ ಹೊರಟ ಬಿ.ವಿ. ಕಾರಂತರು ಪಾಣೆ ಮಂಗಳೂರು ಬಳಿ ಸೈಕಲ್ಲಿಂದ ಆಯತಪ್ಪಿ ಬಿದ್ದು ಕೆಲದಿನ ಮಲಗಿದ್ದಲ್ಲೆ ಇರುತ್ತಾರೆ.

ಮನೆಪಾಠ ಮಾಡುತ್ತಿದ್ದ ಕೃಷ್ಣಭಟ್ಟರ ಬಳಿ ಅಪಾರ ಪುಸ್ತಕಗಳ ಸಂಗ್ರಹವಿತ್ತು. ರಂಗಭೂಮಿಯ ಸೆಳೆತಕ್ಕೊಳಗಾದ  ಕಾರಂತರಿಗೆ ಓದುವ ಹುಚ್ಚೂ ತಗಲಿಕೊಂಡಿತ್ತು. ಓದುವ ಆಸೆ ತಡೆಯಲಾರದೆ ಅವರ ಗ್ರಂಥ ಭಂಡಾರದಿಂದ ಕಾರಂತರ "ಭಾಲ ಪ್ರಪಂಚ" , "ಸಿರಿಗನ್ನಡ ಅರ್ಥಕೋಶ" ಪುಸ್ತಕಗಳನ್ನು ಹೇಳದೆ ತೆಗೆಯುತ್ತಾರೆ. ಇದು ತಿಳಿದ ಕೃಷ್ಣಭಟ್ ಕಾರಂತರಿಗೆ ಬುದ್ಧಿವಾದ ಹೇಳುತ್ತಾರೆ.

ರಂಗಭೂಮಿಯ ಸೆಳೆತ ಹೆಚ್ಚಾದಂತೆ ಕಾರಂತರು ಹೇಳದೆ  ಒಂದು ದಿನ ಮನೆಯಿಂದ ಓಡಿ ಹೋಗಿ ಗುಬ್ಬಿ ವೀರಣ್ಣರ ನಾಟಕ ಕಂಪನಿಗೆ ಸೇರುತ್ತಾರೆ.ಶನಿವಾರ ಕಾರಂತರು ಮನೆ ಬಿಟ್ಟು ಹೋದ್ದರಿಂದ ಊರೂರು ಅಲೆಯುವಂತಾಯಿತು ಎಂದು ಅವರ ತಾಯಿ ಆಮೇಲೆ ಹೇಳುತ್ತಿದ್ದರು. ಕಾರಂತ ಮನೆ ಬಿಟ್ಟು ಹೋದ ಸಂದರ್ಭ "ನನ್ನ ಮಗ ಕಾಣೆಯಾಗಿದ್ದಾನೆ, ಹುಡುಕಿ ಕೊಡಿ" ಎಂದು ಅವರ ತಂದೆ ಸರ್ಕಾರಕ್ಕೆ ಪತ್ರ ಬರೆದಿದ್ದರು. ಅಂದು ಓಡಿ ಹೋದ ಕಾರಂತರು ಮತ್ತೆ ತಮ್ಮ ಹೆತ್ತವರನ್ನು ಭೇಟಿಯಾದದ್ದು 25 ವರ್ಷಗಳ ನಂತರ, ಉಡುಪಿಯ ಎಂ.ಜಿ.ಎಂ ಕಾಲೇಜಲ್ಲಿ ನಡೆದ "ಏವಂ ಇಂದ್ರಜಿತು" ನಾಟಕ ಪ್ರದರ್ಶನದ ಸಂದರ್ಭದಲ್ಲಿ.ಗುಬ್ಬಿ ಕಂಪೆನಿ ಸೇರಿದ ಕಾರಂತರನ್ನು ವೀರಣ್ಣರು ಕಲಾಪ್ರಕಾರದಲ್ಲಿ ಪದವಿ ಮಾಡಲು ಆಗ ಬನಾರಸ್ ವಿಶ್ವ ವಿದ್ಯಾಲಯಕ್ಕೆ ಕಳುಹಿಸುತ್ತಾರೆ.

1958ರಲ್ಲಿ ಪ್ರೇಮಾ ಜತೆ ವಿವಾಹವಾಗುವ ಕಾರಂತರು 1962 ರಲ್ಲಿ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಿಂದ ಪದವಿ ಪಡೆದು 1969ರಿಂದ 72 ರವರೆಗೆ 3 ವರ್ಷ ಸರ್ದಾರ್ ಪಟೇಲ್ ವಿದ್ಯಾಲಯದಲ್ಲಿ ನಾಟಕ ಶಿಕ್ಷಕರಾಗಿ ವೃತ್ತಿ ನಿರ್ವಹಿಸುತ್ತಾರೆ.ನಂತರ ಬೆಂಗಳೂರಿಗೆ  ಬರುವ ಕಾರಂತರಿಗೆ ಗಿರೀಶ್ ಕಾರ್ನಾಡ್, ಅನಂತಮೂರ್ತಿ ಮುಂತಾದವರ ಪರಿಚಯವಾಗುತ್ತದೆ. ಕಾರಂತರ ರಂಗಭೂಮಿ ಚಟುವಟಿಕೆಗಳು ಈಗ ಆರಂಭಗೊಳ್ಳುತ್ತವೆ. 1977ರಲ್ಲಿ ಮತ್ತೆ ದೆಹಲಿಗೆ ಮರಳುವ ಕಾರಂತರು ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕರಾಗುತ್ತಾರೆ. ಈ ಅವಧಿಯ  ಅವರ ಕೆಲಸದ ಮೂಲಕ ಅಪಾರ ಹೆಸರು ಸಂಪಾದಿಸುತ್ತಾರೆ. ರಂಗಭೂಮಿ ಯನ್ನು ದೇಶದ ಮೂಲೆ-ಮೂಲೆಗೊಯ್ಯುತ್ತಾರೆ ಕಾರಂತರು. ನಾಟಕ-ಶಿಬಿರ-ಕಮ್ಮಟಗಳನ್ನು ಏರ್ಪಡಿಸುತ್ತಾರೆ. ರಂಗಭೂಮಿಯನ್ನು ಶ್ರೀಸಾಮಾನ್ಯನಲ್ಲಿವರೆಗೆ ತಲುಪಿಸಿದ ಶ್ರೇಯಸ್ಸು ಆಗ ಕಾರಂತರಿಗೆ ಸಲ್ಲುತ್ತದೆ.

1981-86ರವರೆಗೆ ಮಧ್ಯಪ್ರದೇಶ ಸರ್ಕಾರದ ಆಹ್ವಾನದ ಮೇರೆಗೆ ರಂಗಮಂಡಲ ರೆಪರ್ಟರಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಾರೆ. 1989ರಲ್ಲಿ ಕರ್ನಾಟಕ ಸರ್ಕಾರ ಮಧ್ಯಪ್ರದೇಶ ಮಾದರಿಯ ರೆಪರ್ಟರಿಯನ್ನು ಮೈಸೂರಲ್ಲಿ ಸ್ಥಾಪಿಸಲು ಅವರನ್ನು  ಆಹ್ವಾನಿಸುತ್ತದೆ. ಮೈಸೂರಲ್ಲಿ "ರಂಗಾಯಣ" ಸ್ಥಾಪಿಸಿದ ಕಾರಂತರು 1995ರವರೆಗೆ ಅದರ ಮುಖ್ಯಸ್ಥರಾಗಿದ್ದರು. ಇಂದು ಮೈಸೂರಿನ "ರಂಗಾಯಣ" ತನ್ನ  ವಿಭಿನ್ನ  ಪ್ರಯೋಗಗಳ ಮೂಲಕ ದೇಶದ ಗಮನ ಸೆಳೆದಿದೆ. ನಾಟಕ ಪ್ರೇಮಿಗಳ ಮನ ತಣಿಸುತ್ತಿದೆ.

ತಮ್ಮ ನಾಟಕಗಳಲ್ಲಿ ವೈವಿಧ್ಯತೆಯನ್ನು ಬಿಂಬಿಸಿದ ಕಾರಂತರು ನಾಟಕಗಳಿಗೆ ಸಂಗೀತ ಕೂಡ ನಿರ್ದೇಶಿಸಿದರು. ಕರಾವಳಿಯ ಸಂಪ್ರದಾಯಗಳ ಪ್ರಭಾವ ಎದ್ದು ಕಾಣುತ್ತಿದ್ದ ಇವರ ನಾಟಕಗಳಲ್ಲಿ ಜನಪದ ಪದ್ಧತಿಯ-ಆಚರಣೆಗಳ ಮೇಲೆ ಬೆಳಕು ಚೆಲ್ಲುತ್ತಿದ್ದರು.

ಹಯವದನ, ಸತ್ತವರ ನೆರಳು, ಈಡಿಪಸ್, ಸಂಕ್ರಾಂತಿ, ಜೋಕುಮಾರ ಸ್ವಾಮಿ, ಗೋಕುಲ ನಿರ್ಗಮನ ಇವರ ನಿರ್ದೇಶನದ ಪ್ರಸಿದ್ಧ ಕನ್ನಡ ನಾಟಕಗಳು.

ಪಂಜರ ಶಾಲೆ, ಅಳಿಲು ರಾಮಾಯಣ, ನೀಲಿ ಕುದುರೆ, ಹೆಡ್ಡಾಯಣ ಇವರ ಪ್ರಸಿದ್ಧ ಮಕ್ಕಳ ನಾಟಕಗಳು.

ಅಂಧೇರ್ ನಾಗರಿ ಚೌಪಟ್ ರಾಜ, ಕಿಂಗ್ ಲಿಯರ್, ಸ್ಕಂದ ಗುಪ್ತ, ಚಂದ್ರಹಾಸ  ಮುಂತಾದ ಹಿಂದಿ ನಾಟಕಗಳನ್ನು ನಿರ್ದೇಶಿಸಿದ ಕಾರಂತರು ಇಂಗ್ಲಿಷ್, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲು ನಾಟಕಗಳನ್ನು ನಿರ್ದೇಶಿಸಿದರು.

ಚಿತ್ರರಂಗದಲ್ಲು ತಮ್ಮ ಪ್ರತಿಭೆ ಮೆರೆದ ಬಿ.ವಿ.ಕಾರಂತರು ತಬ್ಬಲಿಯು ನೀನಾದೆ ಮಗನೆ,ಚೋಮನ ದುಡಿ, ವಂಶವೃಕ್ಷ ಚಿತ್ರಗಳನ್ನು ನಿರ್ದೇಶಿಸಿದ್ದರು. ಚೋಮನ ದುಡಿ "ಸ್ವರ್ಣ ಕಮಲ" ಪ್ರಶಸ್ತಿಗೆ, ಪಾತ್ರವಾದ ಪ್ರಥಮ ಕನ್ನಡ ಚಿತ್ರವೆನಿಸಿಕೊಂಡಿತು. ಪಣಿಯಮ್ಮ, ಘಟಶ್ರಾದ್ಧ, ಕನ್ನೇಶ್ವರ ರಾಮ, ಚೋಮನ ದುಡಿ, ಕಾಡು, ಋಷ್ಯಶೃಂಗ ಚಿತ್ರಗಳಿಗೆ ಸಂಗೀತ  ನಿರ್ದೇಶಿಸುತ್ತಾರೆ ಬಿ ವಿ.ಕಾರಂತರು.

ಪತ್ನಿ ಪ್ರೇಮಾ ಕಾರಂತ ಜೊತೆ ಸೇರಿಕೊಂಡು ಬೆಂಗಳೂರಿನಲ್ಲಿ "ಬೆನಕ" ನಾಟಕ ತಂಡ ಕೂಡ ಕಟ್ಟುತ್ತಾರೆ.

ತಮ್ಮ ಜೀವಿತಾವಧಿಯಲ್ಲಿ ರಾಷ್ಟ್ರೀಯ ನಾಟಕ ಶಾಲೆ ದೆಹಲಿ, ಮಧ್ಯಪ್ರದೇಶದ ರಂಗಮಂಡಲ ರೆಪರ್ಟರಿ ಹಾಗೂ ಕರ್ನಾಟಕದ ರಂಗಾಯಣ ಹೀಗೆ 3 ಪ್ರಮುಖ ಸಂಸ್ಥೆಗಳ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಇವರದು.

ಭಾರತ ಸರ್ಕಾರದ ಪದ್ಮಶ್ರೀ, ಸಂಗೀತ ನಾಟಕ ಅಕಾಡೆಮಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಕಾಳಿದಾಸ ಸಮ್ಮಾನ್ ಪ್ರಶಸ್ತಿಗೆ ಭಾಜನರಾದ ಬಿ.ವಿ.ಕಾರಂತ ದೇಶದ ರಂಗಭೂಮಿ ಕಂಡ ಬಹುದೊಡ್ಡ ರಂಗಕರ್ಮಿ.  ತನ್ನ ನವೀನ ಕಾರ್ಯಗಳ ಮೂಲಕ ರಂಗಭೂಮಿಗೆ ಹೊಸ ದಿಕ್ಕು ತೋರಿಸಿದ ಹೆಗ್ಗಳಿಕೆಯ ಜೊತೆಗೆ ಅನೇಕ ಪ್ರತಿಭೆಗಳನ್ನು ಬೆಳಕಿಗೆ ತಂದ ಶ್ರೇಯಸ್ಸು ಕೂಡ ಇವರದು.

-ತೇಜಸ್ವಿ. ಕೆ, ಪೈಲಾರು, ಸುಳ್ಯ

(ಉಪಯುಕ್ತ ನ್ಯೂಸ್)

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top